ಅಶ್ಲೀಲ ಸಿಡಿ ಕೇಸಿನಿಂದ ಹೊರ ಬೀಳುತ್ತಿರುವ ಸುಳ್ಳುಗಳಿಂದ ಆಗುವ ಅನಾಹುತ ಎಂಥದ್ದು ಗೊತ್ತಾ ?
ಬೆಂಗಳೂರು, ಮಾರ್ಚ್ 21: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಸ್ಫೋಟಗೊಂಡು ಹತ್ತೊಂಭತ್ತು ದಿನ ಕಳೆದಿವೆ. ಒಂದಡೆ ತಾನು ತಪ್ಪೇ ಮಾಡಿಲ್ಲ, ಅದು ನಕಲಿ ಸಿಡಿ ಎಂಬ ಮಾತನ್ನು ಸಾಬೀತು ಮಾಡಿಕೊಳ್ಳಬೇಕಾದ ಅನಿವಾರ್ಯತೆ ರಮೇಶ್ ಜಾರಕಿಹೊಳಿ ಅವರದ್ದು. ಜತೆಗೆ ಇಡೀ ರಾಜಕೀಯ ಭವಿಷ್ಯ ಮುಗಿಸಿದವರಿಗೆ ತಕ್ಕ ಶಾಸ್ತಿ ಮಾಡಲೇಬೇಕು ಎಂಬ ಅಗತ್ಯತೆ. ಇತ್ತ ಬ್ಲಾಕ್ ಮೇಲ್ ಮಾಡಿಲ್ಲ ಎಂಬ ಆರೋಪ ಮುಕ್ತವಾಗಬೇಕು, ಇದಾಗಬೇಕಾದರೆ ರಮೇಶ್ ಜಾರಕಿಹೊಳಿ ಮೇಲೆ ಯುವತಿ ದೂರು ಕೊಡಬೇಕು. ಒಬ್ಬೊಬ್ಬರದ್ದು ಒಂದೊಂದು ಐಡಿಯಾ, ನಾನಾ ಹಾದಿ. ಈ ತಂತ್ರ ಮತ್ತು ಪ್ರತಿ ತಂತ್ರಗಳ ನಡುವೆ ಹುಟ್ಟುತ್ತಿರುವ ಸುಳ್ಳುಗಳು ಎಸ್ಐಟಿ ಅಧಿಕಾರಿಗಳಿಗೆ ತಲೆ ಬಿಸಿಯುಂಟು ಮಾಡಿದೆ.
ಅಶ್ಲೀಲ ಸಿಡಿ ಸ್ಫೋಟಗೊಂಡು ಹದಿನೆಂಟು ದಿನ ಕಳೆದಿವೆ. ರಮೇಶ್ ಜಾರಕಿಹೊಳಿ ಲಿಖಿತ ದೂರು ನೀಡಿ ಎಫ್ಐಆರ್ ದಾಖಲಿಸಿದ್ದಾರೆ. ಎರಡು ಸಲ ಎಸ್ಐಟಿ ವಿಚಾರಣೆಗೆ ಹಾಜರಾಗಿದ್ದಾರೆ. ಇನ್ನೊಂದಡೆ ಸಂತ್ರಸ್ತೆ ಎನ್ನಲಾದ ಸಿಡಿ ಗರ್ಲ್ ಕೂಡ ನನಗೆ ರಮೇಶ್ ಜಾರಕಿಹೊಳಿ ಮೋಸ ಮಾಡಿದ್ದಾರೆ, ಕೆಲಸ ಕೊಡಿಸುವುದಾಗಿ ನಂಬಿಸಿ ಅನ್ಯಾಯ ಮಾಡಿದ್ದಾರೆ ಎಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾಳೆ. ಇದರ ಬೆನ್ನಲ್ಲೇ ಸಿಡಿ ಗರ್ಲ್ ವಿರುದ್ಧ ಪೋಷಕರು ದಾಖಲಿಸಿದ್ದ ಅಪರಹಣ ದೂರು ಎಸ್ಐಟಿ ಬಾಗಿಲಿಗೆ ಬಂತು ನಿಂತಿದೆ.
"ಕೈಲಾಸ" ಸ್ವಾಮಿ ನಿತ್ಯಾನಂದ ಪ್ರಕರಣದ ಹಾದಿ ಹಿಡಿಯುತ್ತಾ ಜಾರಕಿಹೊಳಿ ರಾಸಲೀಲೆ ಕೇಸ್ !
ಶಂಕಿತರು ಎನ್ನಲಾದವರು ಕೂಡ ವಿಡಿಯೂ ಬಿಡುಗಡೆ ಮಾಡಿ ಜಾರಕಿಹೊಳಿ ವಿರುದ್ಧವೇ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗಳ ಹಿಂದೆ ಬೀಳುತ್ತಿರುವ ಸುಳ್ಳುಗಳೇ ಬಹು ಚರ್ಚೆಗೆ ನಾಂದಿ ಹಾಡಿವೆ. ಇದರ ನಡುವೆ ಯಾವುದು ಸತ್ಯ ಯಾವುದು ಸುಳ್ಳು ಎಂಬುದನ್ನು ಎಸ್ಐಟಿ ಅಧಿಕಾರಿಗಳೇ ತನಿಖೆ ನಡೆಸಿ ಉತ್ತರ ಕಂಡುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಜಾರಕಿಹೊಳಿ ಹೇಳಿದ್ದೇನು ?
ಕಳೆದ ಶುಕ್ರವಾರ ಸಂಜೆ ರಮೇಶ್ ಜಾರಕೊಹೊಳಿಯನ್ನು ಅಡಿಗೋಡಿಯಲ್ಲಿರುವ ಟೆಕ್ನಿಕಲ್ ಸೆಂಟರ್ನಲ್ಲಿ ನಾಲ್ಕು ತಾಸು ವಿಚಾರಣೆಗೆ ಒಳಪಡಿಸಿದ್ದಾರೆ. ಮಾಜಿ ಶಾಸಕ ನಾಗರಾಜ್ ಜತೆಗೆ ತೆರಳಿ ಇಡೀ ಪ್ರಕರಣದ ಬಗ್ಗೆ ವಿವರ ನೀಡಿದ್ದಾರೆ. ಬರೋಬ್ಬರಿ 65 ಪ್ರಶ್ನೆಗಳಗೆ ಹತ್ತು ಪುಟಗಳ ಹೇಳಿಕೆ ದಾಖಲಿಸಿದ್ದು, ಐಪಿಎಸ್ ಅಧಿಕಾರಿ ಅನುಚೇತ್ ನೇತೃತ್ವದಲ್ಲಿ ವಿಚಾರಣೆ ನಡೆದಿದೆ.
ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಕೊನೆ ಟ್ವಿಸ್ಟ್ ಕೊಡ್ತಾಳಾ ಸಿಡಿ ಗರ್ಲ್ ?
ಸಿಡಿಯಲ್ಲಿರುವ ಯುವತಿ ಗೊತ್ತಿಲ್ಲ, ತಲೆಮರೆಸಿಕೊಂಡಿರುವ ಶಂಕಿತರ ಬಗ್ಗೆಯೂ ಏನೂ ಗೊತ್ತಿಲ್ಲ. ದಿನೇಶ್ ಕಲ್ಲಹಳ್ಳಿ ಕೂಡ ಯಾರೆಂದು ಗೊತ್ತಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಸಿಡಿ ಗ್ಯಾಂಗ್ ನನ್ನನ್ನು ಯಾರೂ ಭೇಟಿ ಮಾಡಿಲ್ಲ. ನಾನು ಯಾರಿಗೂ ದುಡ್ಡು ನೀಡಿಲ್ಲ. ಮಹಾನಾಯಕ ಯಾರು ಎಂಬುದಕ್ಕೂ ರಮೇಶ್ ಜಾರಕಿಹೊಳಿ ಉತ್ತರ ಕೊಟ್ಟಿಲ್ಲ. ಆದರೆ ಇದೊಂದು ನಕಲಿ ಸಿಡಿ, ರಾಜಕೀಯ ಷಡ್ಯಂತ್ರದಿಂದ ನನ್ನ ವಿರುದ್ಧ ನಕಲಿ ಸಿಡಿ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸತ್ಯವೇ ರಕ್ಷಣೆ:
ಜಾರಕಿಹೊಳಿ ಜತೆ ಅಶ್ಲೀಲವಾಗಿ ಕಾಣಿಸಿಕೊಂಡಿರುವ ಸಿಡಿ ಗರ್ಲ್ ಸ್ವತಃ ಹೇಳಿಕೆ ನೀಡಿದ್ದಾಳೆ ಜಾರಕಿಹೊಳಿ ಮೊಸ ಮಾಡಿದರು ಅಂತ. ಮಿಗಿಲಾಗಿ ವಿಡಿಯೋ ಎಡಿಟ್ ಆಗಿರುವುದರಲ್ಲಿ ಅನುಮಾನವೇ ಇಲ್ಲ, ಆದರೆ ಅದು ಪೂರ್ಣ ನಕಲಿ ಎಂಬುದು ವಾಸ್ತವಕ್ಕೆ ಹತ್ತಿರವಿಲ್ಲ ಎಂಬುದು ಈಗಾಗಲೇ ಬಹಳಷ್ಟು ಮಂದಿ ಚರ್ಚೆ ಮಾಡಿದ್ದಾರೆ.
ಸಿಡಿ ಕೇಸ್: ನ್ಯಾಯಾಧೀಶರ ಮುಂದೆ ಸಿಡಿ ಗರ್ಲ್ ಬಾಯ್ಫ್ರೆಂಡ್ ಶಾಕಿಂಗ್ ಸ್ಟೇಟ್ಮೆಂಟ್ !
ನನ್ನ ವಿರುದ್ಧ ಯುವತಿಯನ್ನು ಬಿಟ್ಟು ಷಡ್ಯಂತ್ರ ಮಾಡಿದ್ದಾರೆ. ನಾನು ಟ್ರ್ಯಾಪ್ಗೆ ಒಳಗಾಗಿದ್ದೇನೆ ಎಂಬ ಸಂಪೂರ್ಣ ಸತ್ಯವನ್ನು ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡುವುದು ಬೇರೆ. ತನ್ನ ವರ್ಚಸ್ಸು, ಮೊದಲಿನಿಂದಲೂ ಹೇಳಿಕೊಂಡು ಬಂದಿರುವ ಮಾತಿಗೆ ಬದ್ಧನಾಗಿರಬೇಕೆಂಬ ಕಾರಣಕ್ಕೆ ಇದೊಂದು ನಕಲಿ ಸಿಡಿ. ಅದರಲ್ಲಿ ನಾನಲ್ಲ, ನನ್ನ ತರ ಚಿತ್ರ ಎಡಿಟ್ ಮಾಡಿದ್ದಾರೆ ಎಂಬ ವಾದಕ್ಕೆ ರಮೇಶ್ ಜಾರಕಿಹೊಳಿ ಸೀಮಿತವಾದರೆ ಕಾನೂನು ಪ್ರಕಾರ ತಪ್ಪಿತಸ್ಥರನ್ನು ಶಿಕ್ಷಿಸುವುದು ಇರಲಿ, ಅವರ ರಕ್ಷಣೆ ಮಾಡಿದಂತೆ ಆಗುತ್ತದೆ. ಒಬ್ಬ ದೂರುದಾರ, ಆರೋಪಿ ಹೇಳುವ ಸುಳ್ಳಿಗೆ ಎಸ್ಐಟಿ ಅಧಿಕಾರಿಗಳು ಸಾಕ್ಷ ಸೃಷ್ಟಿಸಲು ಸಾಧ್ಯವೇ ಇಲ್ಲ. ಹೀಗಾಗಿ ಪ್ರಕರಣದ ತನಿಖೆಗೆ ಮಾತ್ರವಲ್ಲ, ವಿಚಾರಣೆಗೂ ಕೂಡ ಸುಳ್ಳು ಬಹುದೊಡ್ಡ ಪೆಟ್ಟು ನೀಡಲಿದೆ.
ಸುಳ್ಳೇ ರಕ್ಷಣೆ:
ನಾನು ಉದ್ಯೋಗ ಕೇಳಿಕೊಂಡು ಹೋಗಿದ್ದೆ. ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ರಮೇಶ್ ಜಾರಕಿಹೊಳಿ ನನಗೆ ಮೋಸ ಮಾಡಿದ್ದಾರೆ ಎಂದು ಸಿಡಿ ಗರ್ಲ್ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾಳೆ. ಪೊಲೀಸರು ರಕ್ಷಣೆ ಕೊಡ್ತೀವಿ ಎಂದರೂ ದೂರು ನೀಡಿಲ್ಲ. ನನಗೆ ಕೊಡಿಸುತ್ತೇನೆ ಎಂದು ಹೇಳಿದ ಸಿಡಿ ಗರ್ಲ್ ಖಾಸಗಿ ಕಂಪನಿಯಲ್ಲಿ ಮಾಸಿಕ 40 ಸಾವಿರ ಸಂಬಳ ಪಡೆಯುತ್ತಿದ್ದಳು ಎಂಬ ಸತ್ಯವನ್ನು ಬಯಲಿಗೆ ಎಳೆದಿದ್ದಾರೆ. ಹೆಜ್ಜೆ ಹೆಜ್ಜೆಗೂ ಸಿಡಿ ಲೇಡಿ ಸುಳ್ಳು ಹೇಳಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದೀಗ ಅದೇ ರೀತಿ ಕೆಲವು ಸುಳ್ಳು ಹೇಳಿ ರಮೇಶ್ ಜಾರಕಿಹೊಳಿ ಪ್ರಕರಣವನ್ನು ತನ್ನ ಮೈಮೇಲೆ ಎಳೆದುಕೊಳ್ಳಲು ಹೊರಟರೇ ಎಂಬ ಅನುಮಾನ ಕಾಡುತ್ತಿದೆ.
ಪ್ರಕರಣ ವರದಿಯಾದ ದಿನದಿಂದ ಈವರೆಗೂ ನೋಡಿದರೆ, ಎರಡು ಕಡೆ ತಪ್ಪುಗಳು ನಡೆದು ಹೋಗಿವೆ. ಒಂದೆಡೆ ರಾಜಕೀಯ ಷಡ್ಯಂತ್ರ ಮಾಡಿ ಖೆಡ್ಡಾಗೆ ಬೀಳಿಸಿರಬಹುದು. ಒಬ್ಬ ಪ್ರಬುದ್ಧ ವಿವಾಹಿತ ಪುರುಷನಾಗಿ ಮತ್ತೊಬ್ಬ ಮಹಿಳೆ ಜತೆ ಏಕಾಂತ ಕ್ಷಣ ಕಳೆಯುವುದು ತಪ್ಪು. ಅದರಲ್ಲೂ ಸಾರ್ವಜನಿಕ ಜೀವನದಲ್ಲಿರುವ ರಾಜಕಾರಣಿ ಭ್ರಷ್ಟಾಚಾರ ಆರೋಪ ಎದುರಿಸಬಹುದು. ಲೈಂಗಿಕ ಹಗರಣದಲ್ಲಿ ಸಿಲುಕಬಾರದು ಎಂಬುದು ಅನೇಕ ಹಿಂದಿನ ಪ್ರಕರಣಗಳು ಸಂದೇಶ ಸಾರಿವೆ.
ಈ ಪ್ರಕರಣದಲ್ಲಿ ಸಂತ್ರಸ್ತೆ ಎನ್ನಲಾದ ಯುವತಿ ಸುಳ್ಳುಗಳು ಆರಂಭದಲ್ಲಿ ಜಾರಕಿಹೊಳಿಗೆ ವರದಾನವಾಗಿತ್ತು. ಹೀಗಾಗಿಯೇ ಅವರು ದೂರು ಕೊಡುವ ಹಂತಕ್ಕೆ ಕೊಂಡೊಯ್ದಿತ್ತು. ಇದೀಗ ಜಾರಕಿಹೊಳಿಯೇ ನಕಲಿ ಸಿಡಿ ವಾದ ಇಟ್ಟುಕೊಂಡು ಸುಳ್ಳು ಹೇಳಿದರೇ ? ಒಂದು ವೇಳೆ ಸಿಡಿ ಅಸಲಿ ಎಡಿಟ್ ಆಗಿದೆ ಎಂಬ ಸತ್ಯ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಬಂದರೆ, ರಮೇಶ್ ಜಾರಕಿಹೊಳಿ ಹೋರಾಟಕ್ಕೆ ಹಿನ್ನೆಡೆ ಉಂಟಾಗಬಹುದು. ಮಿಗಿಲಾಗಿ ಎಸ್ಐಟಿ ಪೊಲೀಸರಿಗೆ ಈ ಪ್ರಕರಣ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದರೂ ಅಚ್ಚರಿ ಪಡಬೇಕಿಲ್ಲ.
ಸಿಡಿ ಸ್ಫೋಟ ಪ್ರಕರಣದ ಸರಣಿ ವಿಡಿಯೋಗಳ ಬಿಡುಗಡೆ ರಹಸ್ಯ ಬಯಲು!
ಯಾಕೆಂದರೆ ಸತ್ಯಕ್ಕೆ ಸಾಕ್ಷಿ ಸಂಗ್ರಹಿಸಬಹುದು. ಸುಳ್ಳುಗಳಿಗೆ ಸಾಕ್ಷಿ ಸೃಷ್ಟಿ ಮಾಡಲು ಸಾಧ್ಯವಿಲ್ಲ ಅಲ್ಲವೇ ? ಸತ್ಯದ ಮೇಲೆ ಸಾಮ್ರಾಜ್ಯ ಕಟ್ಟಬಹುದು, ಸುಳ್ಳಿನ ಮೇಲೆ ಸಮಾಧಿ ಕೂಡ ಕಟ್ಟಲಾಗಲ್ಲ ಎಂಬ ವಾಸ್ತವ ಜಾರಕಿಹೊಳಿ ಹಾಗೂ ಸಿಡಿಗರ್ಲ್ ಇಬ್ಬರೂ ಮರೆತಂದಿದೆ.