ಪೊಲೀಸರ ಕೇಸುಗಳಿಂದಲೇ 'ವಕೀಲ್ ಸಾಬ್' ಆದ ಜಗದೀಶ್
ಬೆಂಗಳೂರು, ಮಾರ್ಚ್ 31 : ಕಳೆದ 25 ದಿನಗಳಿಂದ ರಾಜ್ಯದಲ್ಲಿ ಸುದ್ದಿಯಲ್ಲಿರುವ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸದ್ಯ ಕೇಳಿ ಬರುತ್ತಿರುವ ಹೆಸರು ವಕೀಲ ಕೆ. ಎನ್. ಜಗದೀಶ್ ಕುಮಾರ್. 'ಸಿಡಿಲೇಡಿ' ಎಂದು ಹೆಸರುವಾಸಿಯಾಗಿರುವ ಯುವತಿಯ ಕಾನೂನು ನೆರವಿಗೆ ನಿಂತಿರುವ ಜಗದೀಶ್ ಕುಮಾರ್ ಯಾರು ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಂಡಿದೆ. ಮೊದಲ ಹಂತದಲ್ಲಿ ಯುವತಿ ಪರವಾಗಿ ದೂರು ಕೊಟ್ಟು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸುವಲ್ಲಿ ಯಶಸ್ವಿಯಾದರು.
ಇದಾದ ಬಳಿಕ ಯುವತಿಯ ಪ್ರತಿ ಹೆಜ್ಜೆ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡುವ ಮೂಲಕ ರಾಜ್ಯ ಮಟ್ಟದಲ್ಲಿ ದೊಡ್ಡ ಸುದ್ದಿಯಾದರು. ಇದೀಗ ಭ್ರಷ್ಟ ಪೊಲೀಸ್ ಅಧಿಕಾರಿಗಳ ವಿರುದ್ದ ದನಿ ಎತ್ತುವ ಮೂಲಕ ತಮ್ಮ ಹೋರಾಟದ ಹಿಂದಿರುವ ತಾತ್ವಿಕತೆಯನ್ನು ಬಿಚ್ಚಿಟ್ಟಿದ್ದಾರೆ. ಎರಡು ದಶಕಗಳ ಹಿಂದೆ ಕಾಮನ್ ಮ್ಯಾನ್, ನಂತರದ ದಶಕದಲ್ಲಿ ಬೆಳೆಯುತ್ತಿದ್ದ ಬೆಂಗಳೂರಿನ ಹೊರವಲಯದಲ್ಲಿ ಆರ್ಟಿಐ ಕಾರ್ಯಕರ್ತ, ಇದೀಗ ಕಪ್ಪು ಕೋಟು ತೊಟ್ಟು ಇಲಾಖೆ ವಿರುದ್ಧ ಗುಟುರು ಹಾಕುತ್ತಿರುವ ಜಗದೀಶ್ ಬೆಳೆದು ಬಂದ ಹಾದಿ ಸಿನೆಮಾ ಕತೆಯಂತಿದೆ.
ಇಷ್ಟಕ್ಕೂ ಜಗದೀಶ್ ಹಿನ್ನೆಲೆಯ ಕುರಿತು ಹುಡುಕಾಟಕ್ಕೂ ಈ ಹೊತ್ತಿನಲ್ಲಿ ಒಂದು ಕಾರಣವಿದೆ. ಯಾವಾಗ ಸಿಡಿ ಪ್ರಕರಣ ರಾಜಕೀಯ ಬಣ್ಣ ಬಳಿದುಕೊಂಡಿತೋ ಜನ ಕೂಡ ಪ್ರಕರಣದ ಪಾತ್ರಗಳ ಪರ- ವಿರೋಧದ ನೆಲೆಯಲ್ಲಿ ನಿಲುವುಗಳನ್ನು ತೆಗೆದುಕೊಂಡರು. ಈ ಹಿನ್ನೆಲೆಯಲ್ಲಿ ಸಂತ್ರಸ್ತ್ ಯುವತಿಯ ಪರ ವಕಾಲತ್ತು ವಹಿಸಿ, ಮೀಡಿಯಾಗಳನ್ನು ನಿಭಾಯಿಸಿದ ಜಗದೀಶ್ ಯಾರು ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಯಿತು. ಈ ಸಮಯದಲ್ಲಿ ಹೊರಬಿದ್ದಿದ್ದು ಮತ್ತದೇ ಆರ್ಟಿಐ ಅಡಿಯಲ್ಲಿ ಪಡೆದ, ಜಗದೀಶ್ ಹೆಸರಿನಲ್ಲಿ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಸಾಲು ಸಾಲು ದೂರುಗಳ ಬಗೆಗಿನ ಮಾಹಿತಿ. 2011ರಲ್ಲಿ ಒಂದೇ ದಿನ ಜಗದೀಶ್ ಹೆಸರಿನಲ್ಲಿ ಸಾಲು ಸಾಲು ಪ್ರಕರಣಗಳು ದಾಖಲಾಗುತ್ತವೆ. ಹಿಂದೆಯೇ ರೌಡಿ ಶೀಟರ್ ಕೂಡ ತೆರೆಯಲಾಗುತ್ತದೆ. ಯಾಕೆ ಎಂದು ಹುಡುಕಿಕೊಂಡು ಹೊರಟರೆ, ರೋಚಕ ಅನ್ನಿಸುವ ವ್ಯವಸ್ಥೆಯ ವಿರುದ್ಧ ಸಾಮಾನ್ಯ ಮನುಷ್ಯನೊಬ್ಬನ ನ್ಯಾಯಾಂಗ ಹೋರಾಟದ ಕಥನಕ್ಕೆ ಕೊಂಡೊಯ್ಯುತ್ತವೆ ಲಭ್ಯ ಮಾಹಿತಿ.
ಭೂ ಅಕ್ರಮ, ಬದುಕು ಅಯೋಮಯ
ಕೆ. ಎನ್. ಜಗದೀಶ್ ಕುಮಾರ್, ಬೆಂಗಳೂರಿನ ಕೊಡಿಗೇಹಳ್ಳಿ ನಿವಾಸಿ. ಆರಂಭದಲ್ಲಿ ಆರ್ಟಿಐ ಕಾರ್ಯಕರ್ತ. ಸದ್ಯ ತಾಯಿ ಇಲ್ಲ, ಹೆಂಡತಿ ಮಗ ದೂರ ಆಗಿದ್ದಾರೆ. ಪತ್ನಿ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿ ದೂರು ನೀಡಿದ್ದರು. ಇದೇ ಪ್ರಕರಣದಲ್ಲಿ ದಂಪತಿ ದೂರವಾಗಿದ್ದರು. ಇನ್ನೂ ಕ್ಯಾನ್ಸರ್ನಿಂದ ತಾಯಿ ನಿಧನರಾಗಿದ್ದಾರೆ.
ಇದಕ್ಕೂ ಮುನ್ನ ಆರ್.ಟಿ.ಐ ಕಾರ್ಯಕರ್ತನಾಗಿ ಕೆ.ಎನ್. ಜಗದೀಶ್ ಕುಮಾರ್ ಸುದ್ದಿಯಾಗಿದ್ದರು. 2010ರಲ್ಲಿ ಇವರ ಹೆಸರಿನಲ್ಲಿ ಮಾಹಿತಿ ಹಕ್ಕು ಅಧಿನಿಯಮದಡಿ ತೆಗೆದ ದಾಖಲೆಗಳು ಪತ್ರಿಕಾ ಕಚೇರಿಗಳು ಸೇರುತ್ತಿದ್ದವು ಎಂಬುದನ್ನು ಇವತ್ತಿಗೆ ಕೆಲವು ವರದಿಗಾರರ ಸ್ಮರಿಸಿಕೊಳ್ಳುತ್ತಾರೆ. ಹೀಗೆ ಜಗದೀಶ್ ಮೂಲಕ ಮೊದಲು ಸುದ್ದಿಮನೆಗಳಿಗೆ ತಲುಪಿದ್ದು ಅವತ್ತು ಗೃಹ ಸಚಿವರಾಗಿದ್ದ ಆರ್. ಅಶೋಕ್ ಅವರ ಸಂಬಂಧಿಗಳಿಗೆ ಸೇರಿದ ಕೊಡಿಗೇಹಳ್ಳಿ ಭೂ ಅಕ್ರಮ. ಇದೇ ಪ್ರಕರಣದಲ್ಲಿ ಆರ್. ಅಶೋಕ್ ಸಂಬಂಧಿಯ ವಿರುದ್ಧ ಲೋಕಾಯುಕ್ತ ಸಂಸ್ಥೆಗೆ ದೂರು ಸಲ್ಲಿಸಿದ್ದರು ಜಗದೀಶ್.
ದೂರು ಸಲ್ಲಿಕೆಯಾದ ಬಳಿಕ ಇದ್ದಕ್ಕಿದ್ದಂತೆ ಕೆ.ಎನ್. ಜಗದೀಶ್ ಕುಮಾರ್ ವಿರುದ್ಧ ಹಲವು ಕ್ರಿಮಿನಲ್ ದಾವೆಗಳು ದಾಖಲಾದವು. ಇದಕ್ಕೆ ಪ್ರತಿಯಾಗಿ ಜಗದೀಶ್ ಮಾಹಿತಿ ಹಕ್ಕು ಅಸ್ತ್ರವನ್ನು ಪೊಲೀಸ್ ಅಧಿಕಾರಿಗಳ ವಿರುದ್ಧವೇ ಪ್ರಯೋಗಿಸಿದರು. ಅಧಿಕಾರಿಗಳು ಕಡ್ಡಾಯವಾಗಿ ವರ್ಷಕ್ಕೊಮ್ಮೆ ತಮ್ಮ ಆಸ್ತಿಪಾಸ್ತಿಗಳ ವಿವರವನ್ನು ಸರಕಾರಕ್ಕೆ ಸಲ್ಲಿಸಬೇಕು. ಇದನ್ನು ಪಡೆಯಲು ಜಗದೀಶ್ ಕೈ ಇಡುತ್ತಿದ್ದಂತೆ ಪೊಲೀಸ್ ಇಲಾಖೆ ಕಣ್ಣಿಗೆ ರೌಡಿ ಶೀಟರ್ ಆಗಿ ಬದಲಾದರು. ಅವರ ವೈಯಕ್ತಿಕ ಬದುಕು ಬೀದಿಗೆ ಬಂದು ನಿಂತಿತು.
ಹೋರಾಟ ಕಾಲೇಜಿಗೆ ತಂದು ನಿಲ್ಲಿಸಿತು
ಕೆಲವು ಹಿರಿಯ ಐಪಿಎಸ್ ಅಧಿಕಾರಿಗಳು ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಿಲ್ಲ ಎಂಬ ದಾಖಲೆಗಳನ್ನು ಮಾಹಿತಿ ಹಕ್ಕು ಅಧಿನಿಯಮದಡಿ ಕೆ.ಎನ್. ಜಗದೀಶ್ ಕುಮಾರ್ ಬಹಿರಂಗಪಡಿಸಿದ್ದರು. ಇದು ಮಾಧ್ಯಮಗಳಲ್ಲಿ ಬಹುದೊಡ್ಡ ಸುದ್ದಿಯಾಗಿತ್ತು. ಅದಾದ ಬಳಿಕ ಜಗದೀಶ್ ವಿರುದ್ಧ ಸರಣಿ ಕೇಸುಗಳು ದಾಖಲಾಗತೊಡಗಿದವು. ಮೂರು ಬಾರಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ಎರಡು ಸಲ ಜೈಲಿಗೆ ಸೇರಿದ್ದರು. ಆನಂತರ ಕೆ.ಎನ್. ಜಗದೀಶ್ ಎಂಬ ಆರ್ಟಿಐ ಕಾರ್ಯಕರ್ತನಿದ್ದ ಎಂಬ ಸುಳಿವೂ ಇರಲಿಲ್ಲ. ಮೀಡಿಯಾಗಳೂ ಕೂಡ ಮರೆತು ಹೋದವು.
ಈ ಸಮಯದಲ್ಲಿ ಜಗದೀಸ್ ಸಾಕಷ್ಟು ಪರಿಶ್ರಮದಿಂದ ಕಾನೂನು ಕಲಿತರು. ತಮ್ಮ ಮೇಲಿನ ಕೇಸುಗಳ ವಿರುದ್ಧ ತಾವೇ ನ್ಯಾಯಾಲಯದಲ್ಲಿ ಹೋರಾಟ ನಡೆಸಿ ಖುಲಾಸೆಗೊಳಿಸಿಕೊಂಡರು. ರೌಡಿ ಶೀಟರ್ ಎಂಬ ಇಲಾಖೆ ಹೊರಿಸಿದ ಕಳಂಕವನ್ನು ತೊಳೆದುಕೊಂಡರು. ಇವೆಲ್ಲಕ್ಕೂ ಅವರು ತೆಗೆದುಕೊಂಡಿದ್ದು ತಾಳ್ಮೆಯ ಸುದೀರ್ಘ ಒಂದು ದಶಕ.
ಜನಸಾಮಾನ್ಯರಿಗೆ ಕಾನೂನು ಅರಿವು
ಇತ್ತೀಚೆಗೆ ಫೇಸ್ ಬುಕ್ ಲೈವ್ ಮೂಲಕ ಕೆಲವು ಸಾರ್ವಜನಿಕ ಹಿತಾಸಕ್ತಿ ವಿಚಾರಗಳ ಬಗ್ಗೆ ಮಾತನಾಡುವ ಮೂಲಕ ಕೆ.ಎನ್. ಜಗದೀಶ್ ಮತ್ತೆ ಮುಖ್ಯ ಭೂಮಿಕೆಯ ಪ್ರವೇಶ ಪಡೆದುಕೊಂಡರು. ವಕೀಲರಾಗಿ ಜನರಿಗೆ ಅಗತ್ಯವಾಗಿರುವ ಕಾನೂನು ಮಾಹಿತಿ ನೀಡತೊಡಗಿದರು. ಸಾಮಾಜಿಕ ಜಾಲತಾಣ ಇವರಿಗೊಂದು ದೊಡ್ಡ ಅಭಿಮಾನಿ ಬಳಗ ಕಟ್ಟಿಕೊಟ್ಟಿತು. ಸರ್ಕಾರದ ಅವೈಜ್ಞಾನಿಕ ಪಾಲಿಸಿಗಳ ಬಗ್ಗೆ ಕೂಡ ಸಾಮಾನ್ಯ ವ್ಯಕ್ತಿ ಪರ ಧ್ವನಿಯೆತ್ತುವ ಮೂಲಕ ವೈರಲ್ ಕಂಟೆಂಟ್ ಕೊಡತೊಡಗಿದರು.
ಹೀಗಿರುವಾಗಲೇ ಜಾರಕಿಹೊಳಿ ಸಿಡಿ ಪ್ರಕರಣ ಹೊರಬಿತ್ತು. ಸಂತ್ರಸ್ತೆ ಪರವಾಗಿ ವಕಾಲತ್ತುವಹಿಸಿದರು. ಮೀಡಿಯಾಗಳು ಬೆನ್ನು ಬಿದ್ದವು. ಜನ ಜಗದೀಶ್ ಹಿನ್ನೆಲೆಯನ್ನು ಕೆದಕಿ ನೋಡುವ ಪ್ರಯತ್ನ ಮಾಡಿದರು. ಇವೆಲ್ಲಕ್ಕೂ ಫೇಸ್ಬುಕ್ ಮೂಲಕವೇ ಉತ್ತರ ನೀಡಿದ ಜಗದೀಶ್, "ಇಪ್ಪತ್ತೈದು ಪೈಸೆ ಮೌಲ್ಯದ ಇಂಕು, ಒಂದು ರೂಪಾಯಿ ಮೌಲ್ಯದ ಕಾಗದ ಖರ್ಚು ಮಾಡಿದರೆ ಖಾಕಿ ಸಮವಸ್ತ್ರವನ್ನೇ ಕಳಚಬಲ್ಲೆ,'' ಎಂದು ಅಬ್ಬರಿಸಿದ್ದಾರೆ. ಹಿಂದೊಮ್ಮೆ ತಾವು ಅನುಭವಿಸಿದ ದೌರ್ಜನ್ಯದ ವಿರುದ್ಧ ಕಾನೂನು ಎಂಬ ಜ್ಞಾನದ ಕತ್ತಿಯನ್ನು ಝಳಪಿಸಿದ್ದಾರೆ. ಅವರ ಈ ಕಾಳಜಿ, ಪ್ರತಿರೋಧ ವೈಯಕ್ತಿಕ ನೆಲೆಯನ್ನು ಸಾಮಾಜಿಕ ಸ್ಥರಕ್ಕೆ ವಿಸ್ತಾರಗೊಳ್ಳುವ ದಿನಗಳು ಮುಂದಿವೆ ಎಂಬುದನ್ನು ಅವರ ಮಾತುಗಳು ಸ್ಪಷ್ಟಪಡಿಸುತ್ತಿವೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ