Explainer: ರಾಜ್ಯಸಭೆ ಚುನಾವಣೆ ಹೇಗಾಯ್ತು, ಫಲಿತಾಂಶ ಏನಾಯ್ತು?
ನವದೆಹಲಿ, ಜೂನ್ 11: ದೇಶದಲ್ಲಿ ರಾಜಕೀಯ ನಾಯಕರ ನಡುವಿನ ಪ್ರತಿಷ್ಠೆಗೆ ಸಾಕ್ಷಿಯಾಗಿದ್ದ ರಾಜ್ಯಸಭೆ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಬಿಜೆಪಿ-ಕಾಂಗ್ರೆಸ್ ಜಿದ್ದಾಜಿದ್ದಿನ ಪೈಪೋಟಿಯ ನಡುವೆ ಕೇಸರಿ ಪಡೆಯು ಮುನ್ನಡೆ ಸಾಧಿಸಿದೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ತನ್ನ ಗತ್ತು ಉಳಿಸಿಕೊಂಡಿದ್ದರೆ, ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಗಾಧಿ ಮೈತ್ರಿಕೂಟವು ಭಾರತೀಯ ಜನತಾ ಪಾರ್ಟಿಯ ತಂತ್ರಗಾರಿಕೆ ಎದುರು ಕೊಂಚ ಮಂಕಾಗಿದೆ.
ರಾಜ್ಯಸಭೆ ಚುನಾವಣೆ: ಮಹಾರಾಷ್ಟ್ರದಲ್ಲಿ ಮೂರೂ ಸ್ಥಾನ ಬಾಚಿಕೊಂಡ ಬಿಜೆಪಿ
ಭಾರತದ 15 ರಾಜ್ಯಗಳ 57 ರಾಜ್ಯಸಭಾ ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆದಿದ್ದು, ಅದೇ ದಿನ ಫಲಿತಾಂಶ ಹೊರ ಬಿದ್ದಿದೆ. ಮತದಾನಕ್ಕೂ ಪೂರ್ವದಲ್ಲಿಯೇ 11 ರಾಜ್ಯಗಳ 41 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿದೆ. ಅದಾಗ್ಯೂ, ಬಾಕಿ ಉಳಿದ 4 ರಾಜ್ಯಗಳ 16 ಸದಸ್ಯರ ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಹಾಗೂ ರಾಜಕೀಯ ಹಾವು-ಏಣಿ ಆಟದಲ್ಲಿ ಏನಲ್ಲಾ ನಡೆಯಿತು. ಅಂತಿಮವಾಗಿ ಗೆಲುವಿನ ಏಣಿ ಏರಿದ್ದು ಯಾರು, ಸೋಲಿನ ಹಾವು ಕಚ್ಚಿಸಿಕೊಂಡು ಕುಸಿದಿದ್ದು ಯಾರು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
ರಾಜ್ಯಸಭೆ ಚುನಾವಣೆ ವೇಳೆ ಏನೆಲ್ಲ ಆಯಿತು ಗೊತ್ತಾ?:
* ಕರ್ನಾಟಕದಲ್ಲಿ ಬಿಜೆಪಿ ಮೂರು ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದುಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಎಚ್ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷ ಮತ್ತೊಮ್ಮೆ ಹಿನ್ನಡೆ ಅನುಭವಿಸಿದೆ. ನಾಲ್ಕು ಸ್ಥಾನಗಳ ಪೈಕಿ ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಮತ್ತು ಲೆಹರ್ ಸಿಂಗ್ ಸಿರೋಯಾ ಮೂರು ಸ್ಥಾನಗಳನ್ನು ಪಡೆದುಕೊಂಡರೆ, ಕಾಂಗ್ರೆಸ್ನ ಜೈರಾಮ್ ರಮೇಶ್ ಉಳಿದ ಒಂದು ಸ್ಥಾನದಲ್ಲಿ ಗೆಲುವಿನ ನಗೆ ಬೀರಿದ್ದಾರೆ.
* ಮಹಾರಾಷ್ಟ್ರ, ಕರ್ನಾಟಕ, ರಾಜಸ್ಥಾನ ಮತ್ತು ಹರ್ಯಾಣದಲ್ಲಿ ತೀವ್ರ ಪೈಪೋಟಿ ನಡೆದಿದ್ದು, ಮೂರು ರಾಜ್ಯಗಳಲ್ಲಿ ಅಡ್ಡ ಮತದಾನ ನಡೆದಿರುವ ಬಗ್ಗೆಯೂ ವರದಿ ಆಯಿತು.
* ಅಡ್ಡ ಮತದಾನ ಮತ್ತು ನಿಯಮಗಳ ಉಲ್ಲಂಘನೆಯ ದೂರುಗಳ ನಡುವೆ ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಬರೋಬ್ಬರಿ ಎಂಟು ಗಂಟೆಗಳ ಕಾಲ ಮತ ಎಣಿಕೆ ಪ್ರಕ್ರಿಯೆಯನ್ನು ನಡೆಸಲಾಯಿತು.
* ಮಹಾರಾಷ್ಟ್ರದಲ್ಲಿ ಮತ ಎಣಿಕೆ ಭಾರಿ ವಿಳಂಬವಾಗಿದ್ದು, ಶಿವಸೇನೆ, ಶರದ್ ಪವಾರ್ ನೇತೃತ್ವದ ಎನ್ಸಿಪಿ ಮತ್ತು ಕಾಂಗ್ರೆಸ್ನ ಆಡಳಿತಾರೂಢ ಮೈತ್ರಿಕೂಟವು ಬಿಜೆಪಿ ವಿರುದ್ಧ ಮೂರು ಸ್ಥಾನಗಳನ್ನು ಗೆದ್ದುಕೊಳ್ಳುವುದರಲ್ಲಿ ಯಶಸ್ವಿ ಆಯಿತು. ಅದಾಗ್ಯೂ, ಬಿಜೆಪಿಯು ಬಾಕಿ ಮೂರು ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಮೈತ್ರಿಕೂಟಕ್ಕೆ ಸೆಡ್ಡು ಹೊಡೆಯಿತು.
* ಬಿಜೆಪಿ ಮತ್ತು ಶಿವಸೇನೆ ಎರಡೂ ಪಕ್ಷಗಳು ಚುನಾವಣಾ ಆಯೋಗವನ್ನು ಭೇಟಿ ಮಾಡಿ, ಅಡ್ಡ ಮತದಾನದ ಆರೋಪ ಮತ್ತು ಮತಗಳನ್ನು ಅನರ್ಹಗೊಳಿಸುವಂತೆ ಕೋರಿದ್ದವು. ಆಡಳಿತಾರೂಢ ಮೈತ್ರಿಕೂಟದ ಮೂವರು ಶಾಸಕರು ಚಲಾಯಿಸಿದ ಮತಗಳ ಸಿಂಧುತ್ವವನ್ನು ಬಿಜೆಪಿ ಪ್ರಶ್ನಿಸಿದೆ. ಮಹಾ ವಿಕಾಸ್ ಅಗಾಧಿ ಕೂಡ ಒಂದು ಬಿಜೆಪಿ ಶಾಸಕ ಮತ್ತು ಇನ್ನೊಂದು ಸ್ವತಂತ್ರ ಮತ ಸೇರಿದಂತೆ ಎರಡು ಮತಗಳನ್ನು ಅಸಿಂಧುಗೊಳಿಸಲು ಪ್ರಯತ್ನಿಸಿತು.
* ಹರ್ಯಾಣದ ಎರಡು ರಾಜ್ಯಸಭೆ ಸ್ಥಾನಗಳ ಪೈಕಿ ಒಂದು ಸ್ಥಾನವನ್ನು ಬಿಜೆಪಿ ಗೆದ್ದುಕೊಂಡಿತು. ಇನ್ನೊಂದು ಸ್ಥಾನಕ್ಕಾಗಿ ಸ್ಪರ್ಧಿಸಿದ ಸ್ವತಂತ್ರ್ಯ ಅಭ್ಯರ್ಥಿ ಹಾಗೂ ಉದ್ಯಮಿ ಕಾರ್ತಿಕೇಯ ಶರ್ಮಾ ಅನ್ನು ಬೆಂಬಲಿಸಿದರು. ಇನ್ನೊಂದು ದಿಕ್ಕಿನಲ್ಲಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿದ್ದ ಅಜಯ್ ಮಾಕೇನ್ ಮುಖಭಂಗ ಅನುಭವಿಸಿದರು.
* ಇಬ್ಬರು ಕಾಂಗ್ರೆಸ್ ಶಾಸಕರು ತಮ್ಮ ಮತಪತ್ರಗಳನ್ನು ಅನಧಿಕೃತ ವ್ಯಕ್ತಿಗಳಿಗೆ ತೋರಿಸಿದ್ದಾರೆ ಎಂದು ಆರೋಪಿಸಿ ಹರ್ಯಾಣದ ಆಡಳಿತಾರೂಢ ಬಿಜೆಪಿ ಆರಂಭದಲ್ಲಿ ಇಬ್ಬರು ಕಾಂಗ್ರೆಸ್ ಸದಸ್ಯರ ಮತಗಳನ್ನು ರದ್ದುಪಡಿಸುವಂತೆ ಕೋರಿತ್ತು. ಬಿಜೆಪಿಯ ಆಕ್ಷೇಪಣೆ "ಸುಳ್ಳು ಮತ್ತು ಕ್ಷುಲ್ಲಕ" ಎಂದು ಆರೋಪಿಸಿ ಅಜಯ್ ಮಾಕನ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
* ರಾಜಸ್ಥಾನದಲ್ಲಿ ಬಿಜೆಪಿ ಸದಸ್ಯರು ಅಡ್ಡ ಮತದಾನ ಮಾಡುವುದರೊಂದಿಗೆ ನಾಲ್ಕು ರಾಜ್ಯಸಭಾ ಸ್ಥಾನಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಗೆದ್ದಿದೆ. ಒಂದು ಸ್ಥಾನ ಬಿಜೆಪಿ ಪಾಲಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಮುಕುಲ್ ವಾಸ್ನಿಕ್ ಮತ್ತು ರಣದೀಪ್ ಸುರ್ಜೇವಾಲಾ ಹೆಚ್ಚುವರಿ ಮತಗಳನ್ನು ಪಡೆದರು. ಬಿಜೆಪಿ ಅಭ್ಯರ್ಥಿ ಘನಶ್ಯಾಮ್ ತಿವಾರಿ ಕೂಡ ಹಾಗೆ ಹೆಚ್ಚುವರಿ ಮತ ಪಡೆದರು. ಬಿಜೆಪಿ ಬೆಂಬಲಿತ ಝೀ ಚೇರ್ಮನ್ ಸುಭಾಷ್ ಚಂದ್ರ ಸೋಲು ಕಂಡಿದ್ದು, ಒಂದು ಮತವನ್ನು ಅಸಿಂಧುಗೊಳಿಸಲಾಯಿತು.
* ರಾಜ್ಯಸಭೆಯಲ್ಲಿ 15 ರಾಜ್ಯಗಳ 57 ಸ್ಥಾನಗಳು ತೆರವಾಗಿದ್ದವು. ಉತ್ತರ ಪ್ರದೇಶದಲ್ಲಿನ 11 ಸ್ಥಾನಗಳು ಗರಿಷ್ಠ ಎನಿಸಿವೆ. ಮಹಾರಾಷ್ಟ್ರ ಮತ್ತು ತಮಿಳುನಾಡು ತಲಾ 6, ಬಿಹಾರ 5, ಕರ್ನಾಟಕ, ರಾಜಸ್ಥಾನ ಮತ್ತು ಆಂಧ್ರಪ್ರದೇಶ ತಲಾ 4, ಮಧ್ಯಪ್ರದೇಶ ಮತ್ತು ಒಡಿಶಾ ತಲಾ 3 ಪಂಜಾಬ್, ಜಾರ್ಖಂಡ್, ಹರಿಯಾಣ, ಛತ್ತೀಸ್ಗಢ ಮತ್ತು ತೆಲಂಗಾಣ ತಲಾ 2 ಮತ್ತು ಉತ್ತರಾಖಂಡದಿಂದ ಒಂದು ಸ್ಥಾನಗಳಿಗೆ ಚುನಾವಣೆ ನಡೆಯಿತು. ಈ ಪೈಕಿ 41 ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.