ಮಾಜಿ ಸಚಿವ ರೋಷನ್ ಬೇಗ್, ಶಾಸಕ ಜಮೀರ್ ನಿವಾಸಗಳ ಇಡಿ ದಾಳಿ ಮುಕ್ತಾಯ
ಬೆಂಗಳೂರು, ಆ. 06: ಮಾಜಿ ಸಚಿವರಾದ ರೋಷನ್ ಬೇಗ್ ಮತ್ತು ಬಿ. ಝಡ್ ಜಮೀರ್ ಅಹಮದ್ ಖಾನ್ ನಿವಾಸಗಳ ಮೇಲೆ ಇಡಿ ಅಧಿಕಾರಿಗಳು ನಡೆಸಿದ ದಾಳಿ ಪೂರ್ಣಗೊಂಡಿದೆ. ಇಡಿ ದಾಳಿ ಕುರಿತು ಇಬ್ಬರು ಜನ ಪ್ರತಿನಿಧಿಗಳು ಸಂತಸಗೊಂಡಿದ್ದಾರೆ. ಆದರೆ ದಾಳಿಯ ಶೈಲಿ ನೋಡಿದರೆ ನಿಜವಾಗಿಯೂ ಇಬ್ಬರು ನಾಯಕರಿಗೂ ಮುಂದಿನ ನಾಯಕರಿಗೆ ಸಂಕಷ್ಟ ಎದುರಾಗಲಿದೆ ಎಂದೇ ಹೇಳಲಾಗುತ್ತಿದೆ. ಇಡಿ ದಾಳಿ ಅಂತ್ಯ ಬಳಿಕ ನಡೆದ ಬೆಳವಣಿಗೆ, ಮುಂದೆ ಏನಾಗುತ್ತದೆ ಎಂಬುದಕ್ಕೆ ಉತ್ತರ ಇಲ್ಲಿದೆ.
ನನ್ನ ಐಷಾರಾಮಿ ಮನೆ ನಿರ್ಮಾಣ ಸಂಬಂಧ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಇದರಿಂದ ನನಗೆ ಸಮಾಧಾನ ತಂದಿದೆ ಎಂದು ಚಾಮರಾಜಪೇಟೆ ಶಾಸಕ ಬಿ.ಝಡ್ ಜಮೀರ್ ಅಹಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ. ಸತತ 24 ತಾಸು ಮನೆ ಶೋಧ ಮಾಡಿ ಕೆಲವು ಮಹತ್ವದ ದಾಖಲೆಗಳನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇಡಿ ಅಧಿಕಾರಿಗಳ ಶೋಧ ಕಾರ್ಯ ಮುಗಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಜಮೀರ್ ಅಹಮದ್ ಖಾನ್, ನನ್ನ ವಿರುದ್ಧ ಯಾರೋ ಮೂರು ದೂರುಗಳನ್ನು ನೀಡಿದ್ದಾರಂತೆ.
ಜಮೀರ್ ಮನೆ ಮೇಲೆ ಇಡಿ ದಾಳಿ ಹಿಂದಿನ ರೂವಾರಿ ಯಾರು? ಬಿಜೆಪಿ ಸ್ಪೋಟಕ ಹೇಳಿಕೆ
ಮನೆಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಎಲ್ಲಾ ಸಹಕಾರ ನೀಡಿದ್ದೇನೆ. 2006 ರಲ್ಲಿ ನಿವೇಶನ ಖರೀದಿ ಮಾಡಿದ ಬಗ್ಗೆ ನಾನು ಇಡಿ ಅಧಿಕಾರಿಗಳಿಗೆ ದಾಖಲೆ ನೀಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಜಮೀರ್ ವಿಚಾರಣೆಗೆ ಇಡಿ ಸಿದ್ಧತೆ
ಈ ಮನೆ ಕಟ್ಟಲು ನನಗೆ ಏಳು ವರ್ಷ ಆಗಿದೆ. ಎಲ್ಲವನ್ನು ನಾನು ವೈಟ್ನಲ್ಲಿ ಪಾವತಿ ಮಾಡಿದ್ದೇನೆ. ನನ್ನ ಅಕೌಂಟೆಂಟ್ ಬಾಲಾಜಿ ಎಲ್ಲಾ ದಾಖಲೆಗಳನ್ನು ನೀಡಿ ಸ್ಪಷ್ಟನೆ ಕೊಟ್ಟಿದ್ದಾರೆ. ನಾನೂ ಕೂಡ ಅಗತ್ಯ ಮಾಹಿತಿ ಕೊಟ್ಟಿದ್ದೇನೆ. ನನ್ನ ಹಾಗೂ ನನ್ನ ಸಹೋದರ ಮನೆ ಶೋಧ ನಡೆಸಿದ್ದಾರೆ. ಅವರಿಗೆ ಬೆಕಾದ ಎಲ್ಲಾ ಮಾಹಿತಿ ನೀಡಿದ ಬಳಿಕ ಇಡಿ ಅಧಿಕಾರಿಗಳು ತೆರಳಿದ್ದಾರೆ. ನನಗೆ ಯಾವುದೇ ನೋಟಿಸ್ ನೀಡಿರಲಿಲ್ಲ. ಅವಶ್ಯಕತೆ ಇದ್ದರೆ ವಿಚಾರಣೆ ನಡೆಸುವುದಾಗಿ ತಿಳಿಸಿ ತೆರಳಿದ್ದಾರೆ. ಅವರು ಕರೆದ್ರೆ ಯಾವಾಗ ಬೇಕಾದ್ರೂ ಹೋಗುತ್ತೇನೆ ಎಂದು ಹೇಳಿದರು. ನನ್ನ ರಾಜಕೀಯ ವಿರೋಧಿಗಳು ಈ ದೂರು ನೀಡಿರಬಹುದು. ಆದರೆ ಅವರು ದೂರು ನೀಡಿದ ನಂತರ ಇವಾಗ ಎಲ್ಲವೂ ಕ್ಲಿಯರ್ ಆಗಿದೆ. ನನಗೂ ಈ ದಾಳಿ ಸಮಾಧಾನ ತಂದಿದೆ ಎಂದು ಸ್ಪಷ್ಟನೆ ನೀಡಿದರು.
ಜಮೀರ್ ಮನೆ ಮೇಲಿ ದಾಳಿ ಅಂತ್ಯ
ಗುರುವಾರ ಬೆಳಗ್ಗೆ ಬಂಬೂ ಬಜಾರ್ ಬಳಿ ಇರುವ ಜಮೀರ್ ಆವರ ರಾಜ ವಿಲಾಸಿ ಬಂಗಲೆ ಮೇಲೆ ದಾಳಿ ಮಾಡಿದ್ದ ಇಡಿ ಅಧಿಕಾರಿಗಳು ರಾತ್ರಿ ಪೂರ್ತಿ ಶೋಧ ಕಾರ್ಯ ನಡೆಸಿದ್ದರು. ಜಮೀರ್ ಸಹೋದರ ಹಾಗೂ ಇಬ್ಬರು ಆಪ್ತರನ್ನು ವಿಚಾರಣೆಗೆ ಒಳಪಡಿಸಿದ್ದರು. ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ರಿಚ್ಮಂಟ್ ಟೌನ್ ನಲ್ಲಿರುವ ಮನೆಯನ್ನು ಕೂಡ ಶೋಧ ನಡಿಸಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಐಎಂಎ ವಂಚನೆ ಪ್ರಕರಣದಲ್ಲಿ ಕೂಡ ಜಮೀರ್ ಅಹಮದ್ ಖಾನ್ ಹೆಸರು ಪ್ರಸ್ತಾಪವಾಗಿತ್ತು. ಐಎಂಎ ಕಂಪನಿ ಜಮೀರ್ ಅವರಿಗೆ ಸೇರಿದ್ದ ಭೂಮಿಯನ್ನು ಖರೀದಿ ಮಾಡಿತ್ತು. ಐಎಂಎ ವಂಚನೆ ಪ್ರಕರಣ ಬೆಳಕಿಗೆ ಬಂದಾಗಲೂ ನನ್ನದು ಕಾನೂನು ಬದ್ಧ ವ್ಯವಹಾರ ಎಂದು ಜಮೀರ್ ಸ್ಪಷ್ಟನೆ ನೀಡಿದ್ದರು.
2 ವಿಡಿಯೋ ಪ್ಲೇಯರ್ನಿಂದ ಹಿಡಿದು ರಾಜವಿಲಾಸಿ ಬಂಗಲೆ ತನಕ
ಜಮೀರ್ ದಾಖಲೆಗಳ ಪರಿಶೀಲನೆ
ಶಾಸಕ ಜಮೀರ್ ಅಹಮದ್ ಖಾನ್ ಅವರ ರಾಜವಿಲಾಸಿ ಬಂಗಲೆ ಹಾಗೂ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಮಹತ್ವದ ದಾಖಲೆಗಳು ಸಂಗ್ರಹಿಸಿದ್ದಾರೆ ಎಂದೇ ಹೇಳಲಾಗುತ್ತಿದೆ. ಐಎಂಎ ವಂಚನೆ ಸಂಬಂಧ ಮನ್ಸೂರ್ ಖಾನ್ ನೀಡಿರುವ ಹೇಳಿಕೆ ಜಮೀರ್ ಅಹಮದ್ ಗೆ ಸಂಕಷ್ಟ ತಂದೊಡ್ಡಲಿದೆ ಎಂದೇ ಹೇಳಲಾಗುತ್ತಿದೆ. ಹಣದ ಅಕ್ರಮ ವಹಿವಾಟು ಮಾಡಿರುವುದು ಕಂಡು ಬಂದಲ್ಲಿ ಜಮೀರ್ ಅವರನ್ನು ವಶಕ್ಕೆ ಪಡೆದು ಇಡಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಇನ್ನು ರಾಜ ವಿಲಾಸಿ ಬಂಗಲೆ ವಹಿವಾಟಿನ ನಡೆಯೇ ಹಲವು ಅನುಮಾನಗಳು ಮೂಡಿಸುವಂತಿದ್ದು, ಇಡಿ ದಾಳಿ ಜಮೀರ್ ಅಹಮದ್ ಖಾನ್ ಅವರಿಗೆ ಕಂಟಕ ಎದುರಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.
ರೋಷನ್ ಬೇಗ್ ಮಗಳ ಮನೆ ಬಿಡದ ಇಡಿ
ಇನ್ನು ಮಾಜಿ ಸಚಿವ ರೋಷನ್ ಬೇಗ್ ಹಾಗೂ ಮಗಳ ಮನೆ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಐಎಂಎ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ರೋಷನ್ ಬೇಗ್ ಜಾಮೀನು ಪಡೆದು ಹೊರ ಬಂದಿದ್ದರು. ಇನ್ನು ಐಎಂಎ ವಂಚನೆ ಪ್ರಕರಣ ಸಂಬಂಧ ರೋಷನ್ ಬೇಗ್ ಅವರ ಆಸ್ತಿಯನ್ನು ಐಎಎಸ್ ಅಧಿಕಾರಿ ಡಾ. ಹರ್ಷ ಗುಪ್ತಾ ಅಧ್ಯಕ್ಷತೆಯ ಐಎಂಎ ವಂಚನೆ ಪ್ರಕರಣ ಸಕ್ಷಮ ಪ್ರಾಧಿಕಾರ ಮುಟ್ಟುಗೋಲು ಹಾಕಿಕೊಂಡಿದೆ.
ಶಾಸಕ ಜಮೀರ್ ಅಹಮದ್ ರಾಜ ವಿಲಾಸಿ ಬಂಗಲೆ ರಹಸ್ಯ ಸ್ಟೋರಿ!
ಇನ್ನೂ ಹಲವು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಇದೇ ಸಂದರ್ಭದಲ್ಲಿ ಪುನಃ ಇಡಿ ಅಧಿಕಾರಿಗಳು ದಾಳಿ ಮಾಡಿ ಸತತ 24 ತಾಸು ಶೋಧ ಮುಂದುವರೆಸಿದರು. ರೋಷನ್ ಬೇಗ್ ಅವರ ಪುತ್ರಿಯ ಇಂದಿರಾನಗರದ ಮನೆ ಮೇಲೂ ದಾಳಿ ನಡೆದಿದೆ. ಇನ್ನು ಇಡಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ರೋಷನ್ ಬೇಗ್, ನನ್ನ ಮನೆ ಮೆಲೂ ಇಡಿ ದಾಳಿ ಅಂತ್ಯವಾಗಿದೆ. ಅವರು ಕೇಳಿದ ದಾಖಲೆಗಳನ್ನು ಕೊಟ್ಟಿದ್ದೇನೆ.
ಸಾವಿರಾರು ಕೋಟಿ ಜಾಗ ನನ್ನ ಬಳಿ ಇಲ್ಲ ಎಂಬುದನ್ನು ಸ್ಪಷ್ಟನೆ ನೀಡಿದ್ದೇನೆ. ನಾನು ಯಾವ ಮನಿಲಾಂಡ್ರಿಂಗ್ ಮಾಡಿಲ್ಲ. ಬೇಕಾದ ದಾಖಲೆ ನೀಡಿದ್ದೇನೆ. ನಾನು ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಕ್ಷಣದಿಂದ ಪ್ರತಿಯೊಂದು ದಾಖಲೆಯನ್ನು ಇಡಿಗೆ ಒದಗಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇಡಿ ವಿಚಾರಣೆಗೆ ತಯಾರಿ
ಇನ್ನು ಐಎಂಎ ವಂಚನೆ ಪ್ರಕರಣದಲ್ಲಿ ರೋಷನ್ ಬೇಗ್ ಬಂಧನಕ್ಕೆ ಒಳಗಾಗಿದ್ದಾರೆ. ಅಕ್ರಮದಲ್ಲಿ ಏನಾದರೂ ಬೇನಾಮಿ ಹಣಕಾಸು ವಹಿವಾಟು ನಡೆಸಿರುವುದು ಕಂಡು ಬಂದಲ್ಲಿ ಪ್ರತ್ಯೇಕ ಇಸಿಆರ್ ದಾಖಲಿಸದೆ. ಅದೇ ರೀತಿ ಶಾಸಕ ಜಮೀರ್ ಅಹಮದ್ ಖಾನ್ ಅವರ ಮನೆ ಮೇಲಿನ ದಾಳಿಗೂ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲನೆ ನಡೆಸಲಿದ್ದಾರೆ. ಹಣದ ವಹಿವಾಟಿನ ವಿವರಗಳನ್ನು ಪಡೆದಿದ್ದಾರೆ. ಎಲ್ಲವನ್ನು ಪರಿಶೀಲಿಸಿದ ಬಳಿಕ ಜಮೀರ್ ಅವರನ್ನು ವಿಚಾರಣೆಗೆ ಒಳಪಡಿಸಬಹುದು. ವಿಚಾರಣೆ ವೇಳೆ ಮಹತ್ವದ ದಾಖಲೆಗಳು ಸಿಕ್ಕಿದ್ದಲ್ಲಿ ಜಮೀರ್ ಅಹಮದ್ ಖಾನ್ ಅವರನ್ನು ಬಂಧಿಸಿದರೂ ಅಚ್ಚರಿ ಪಡಬೇಕಿಲ್ಲ.