ಪಂಜಾಬ್ನಲ್ಲಿ ಹೊಸ ಪಕ್ಷ ಘೋಷಿಸಿದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದೇನು?
ಚಂಡೀಗಢ, ಅಕ್ಟೋಬರ್ 27: ಪಂಜಾಬ್ನಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲೇ ಹೊಸ ಪಕ್ಷವನ್ನು ಸ್ಥಾಪಿಸುವುದಾಗಿ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅಧಿಕೃತವಾಗಿ ಘೋಷಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ನಮ್ಮೊಂದಿಗೆ ಹಲವು ನಾಯಕರು ಇದ್ದಾರೆ. ಹೊಸ ಪಕ್ಷ ಘೋಷಣೆಯಾದ ನಂತರದಲ್ಲಿ ನಮ್ಮ ಬಳಿ ಯಾರೆಲ್ಲಾ ನಾಯಕರಿದ್ದಾರೆ ಎಂಬುದು ಸ್ಪಷ್ಟವಾಗಲಿದೆ," ಎಂದು ಹೇಳಿದರು.
ಪಂಜಾಬ್ನಲ್ಲಿ ಕಾಂಗ್ರೆಸ್ ಪ್ರಯೋಗಿಸಿದ ಐಎಸ್ಐ ಅಸ್ತ್ರಕ್ಕೆ ಕ್ಯಾಪ್ಟನ್ ಉತ್ತರ ರೋಚಕ!
ಪಂಜಾಬ್ನ ಎಲ್ಲಾ 117 ವಿಧಾನಸಭಾ ಕ್ಷೇತ್ರಗಳಲ್ಲೂ ಹೊಸ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಪಕ್ಷದ ಹೆಸರು ಮತ್ತು ಚಿಹ್ನೆಗಾಗಿ ಅರ್ಜಿ ಸಲ್ಲಿಸಿದ್ದು, ಚುನಾವಣಾ ಆಯೋಗದ ಅನುಮೋದನೆಯ ನಂತರ ಘೋಷಣೆ ಮಾಡಲಾಗುವುದು ಎಂದು ಅಮರೀಂದರ್ ಸಿಂಗ್ ಹೇಳಿದ್ದಾರೆ.
ಬಿಜೆಪಿಯೊಂದಿಗಿನ ಮೈತ್ರಿ ಬಗ್ಗೆ ಕ್ಯಾಪ್ಟನ್ ಮಾತು:
ಭಾರತೀಯ ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆಗೆ ಅಮರೀಂದರ್ ಸಿಂಗ್ ಉತ್ತರ ನೀಡಿದರು. ನಾವು ವಿಷಯ ಅಥವಾ ಸಮಸ್ಯೆ ಆಧಾರದ ಮೇಲೆ ಬೆಂಬಲ ನೀಡಬೇಕೇ ಬೇಡವೇ ಎಂಬುದನ್ನು ತೀರ್ಮಾನಿಸುತ್ತೇವೆ. ಬಿಜೆಪಿಯೊಂದಿಗೆ ಸೀಟು ಹಂಚಿಕೆ ಬಗ್ಗೆ ನಿರ್ಧರಿಸುವುದಕ್ಕೂ ಮೊದಲು ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸೂಕ್ತ ಪರಿಹಾರ ನೀಡಬೇಕಿದೆ. ರೈತರ ಸಮಸ್ಯೆಗೆ ಸೂಕ್ತ ಪರಿಹಾರವನ್ನು ನೀಡಿದ ನಂತರವಷ್ಟೇ ಮೈತ್ರಿ ಬಗ್ಗೆ ಚಿಂತಿಸಲಾಗುವುದು ಎಂದು ಹೇಳಿದ್ದಾರೆ.
ಸೀಟು ಹಂಚಿಕೆ ಬಗ್ಗೆ ಮಾತ್ರ ಉಲ್ಲೇಖ:
"ನಾನು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತೇನೆ ಎಂದು ಯಾವತ್ತೂ ಹೇಳಿಲ್ಲ, ನನ್ನ ಪಕ್ಷವು ಸೀಟು ಹಂಚಿಕೆ ಒಪ್ಪಂದ ಮಾಡಿಕೊಳ್ಳುವುದಾಗಿ ಹೇಳಿದ್ದೆ ಅಷ್ಟೇ. ಸಮಾನ ಮನಸ್ಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. "ಶಿರೋಮಣಿ ಅಕಾಲಿ ದಳ, ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್" ಪಕ್ಷಗಳನ್ನು ಸೋಲಿಸಲು ಮೈತ್ರಿ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
ಬಿಎಸ್ಎಫ್ ಅಧಿಕಾರ ವ್ಯಾಪ್ತಿ ವಿಸ್ತರಣೆಗೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಬೆಂಬಲ!
ಸಾಧನೆ ಪಟ್ಟಿಯೇ ಕ್ಯಾಪ್ಟನ್ ಸಿಂಗ್ ಪ್ರಣಾಳಿಕೆ:
ಪಂಜಾಬ್ನಲ್ಲಿ ಕಳೆದ 4.5 ವರ್ಷಗಳಿಂದ ಮುಖ್ಯಮಂತ್ರಿಯಾಗಿ ನೀಡಿದ ಆಡಳಿತ ಮತ್ತು ಸಾಧನೆಗಳನ್ನು ಪಟ್ಟಿ ಮಾಡುವ ಪ್ರಣಾಳಿಕೆಯನ್ನು ಕ್ಯಾಪ್ಟನ್ ಅಮರೀಂದರ್ ಸಿಂಗ್ ಪ್ರಸ್ತುತಪಡಿಸಿದರು. 2017ರ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ನೀಡಿದ್ದ ಭರವಸೆಗಳ ಪೈಕಿ ಶೇ 92ರಷ್ಟನ್ನು ಈಡೇರಿಸಿದ್ದೇನೆ. ನಾವು ನಿಗದಿಪಡಿಸಿದ 18 ಅಂಶಗಳ ಕಾರ್ಯಸೂಚಿಯನ್ನು ನಾವು ಪೂರ್ಣಗೊಳಿಸಿದ್ದೇವೆ ಎಂದು ಸಿಂಗ್ ಹೇಳಿದ್ದಾರೆ. ಅಲ್ಲದೇ ನಾನು ಯಾವುದೇ ಸಚಿವರ ಹೆಸರನ್ನು ಹೇಳಲು ಬಯಸುವುದಿಲ್ಲ, ಆದರೆ ಅವರು ಏನು ಮಾತನಾಡುತ್ತಿದ್ದಾರೆ ಎಂಬುದು ಗೊತ್ತಿರಲಿ ಎನ್ನುವುದರ ಮೂಲಕ ತಮ್ಮ ವಿರೋಧಿಗಳಿಗೆ ತಿರುಗೇಟು ನೀಡಿದರು.
ಅಮರೀಂದರ್ ಸಿಂಗ್ ವಿರುದ್ಧ ಸಿಧು ಟ್ವೀಟ್:
ಪಂಜಾಬ್ನಲ್ಲಿ ಹೊಸ ಪಕ್ಷ ಸ್ಥಾಪಿಸುವುದಾಗಿ ಅಮರೀಂದರ್ ಸಿಂಗ್ ಘೋಷಿಸಿದ ಬೆನ್ನಲ್ಲೇ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಟ್ವೀಟ್ ಪ್ರಹಾರ ನಡೆಸಿದ್ದಾರೆ. "ಕಾಂಗ್ರೆಸ್ 78 ಶಾಸಕರನ್ನು ಹೊಂದಿದೆ, ಮುಂಬರುವ ದಿನಗಳಲ್ಲಿ ಏನೆಲ್ಲ ಬದಲಾವಣೆ ಆಗಬಹುದು ಎಂಬುದನ್ನು ನಾವು ಊಹಿಸುವುದಕ್ಕೂ ಸಾಧ್ಯವಿಲ್ಲ. ಇಡಿ ಮೇಲೆ ನಿಯಂತ್ರಣ ಹೊಂದಿರುವ ಬಿಜೆಪಿಗೆ ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ನಿಷ್ಠಾವಂತರಾಗಿದ್ದು, ತಮ್ಮನ್ನು ಉಳಿಸಿಕೊಳ್ಳುವುದಕ್ಕಾಗಿ ಪಂಜಾಬ್ ಹಿತಾಸಕ್ತಿಯನ್ನು ಮಾರಾಟ ಮಾಡಿದ್ದಾರೆ. ಪಂಜಾಬ್ ನ್ಯಾಯ ಮತ್ತು ಅಭಿವೃದ್ಧಿ ಪಾಲಿಗೆ ನೀವು ನಕಾರಾತ್ಮಕ ಶಕ್ತಿಯಾಗಿದ್ದೀರಿ," ಎಂದು ನವಜೋತ್ ಸಿಂಗ್ ಸಿಧು ಟ್ವೀಟ್ ಮಾಡಿದ್ದಾರೆ.
"ಪಂಜಾಬ್ ಹಿತಾಸಕ್ತಿಯೊಂದಿಗೆ ಕ್ಯಾಪ್ಟನ್ ರಾಜಿ":
"ಜನರ ಪರವಾಗಿ ಧ್ವನಿ ಎತ್ತಿದ್ದಕ್ಕೆ ಹಾಗೂ ಅಧಿಕಾರದ ಅಸಲಿ ಸತ್ಯವನ್ನು ಪ್ರಶ್ನಿಸಿದ್ದಕ್ಕಾಗಿ ನನ್ನನ್ನು ಪಕ್ಷದಿಂದ ಹೊರಗಟ್ಟುವ ಹುನ್ನಾರ ನಡೆಯುತ್ತಿತ್ತು ಎಂದು ನವಜೋತ್ ಸಿಂಗ್ ಸಿಧು ಆರೋಪಿಸಿದ್ದಾರೆ. ಅಲ್ಲದೇ ಪಂಜಾಬ್ ಹಿತಾಸಕ್ತಿ ರಕ್ಷಿಸುವಲ್ಲಿ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜಿ ಮಾಡಿಕೊಂಡಿದ್ದಾರೆ. ರಾಜ್ಯದ ಜನರು ಅವರ ತಪ್ಪಿಗೆ ತಕ್ಕ ಶಿಕ್ಷೆ ನೀಡುತ್ತಾರೆ," ಎಂದು ಸಿಧು ಟ್ವೀಟ್ ಮಾಡಿದ್ದಾರೆ.
ಬಿಎಸ್ಎಫ್ ಅಧಿಕಾರ ವ್ಯಾಪ್ತಿ ವಿಸ್ತರಣೆಗೆ ಬೆಂಬಲ:
ಮಾಜಿ ಮುಖ್ಯಮಂತ್ರಿ ಪಂಜಾಬ್ನಲ್ಲಿ ಗಡಿ ಭದ್ರತಾ ಪಡೆಗಳ (ಬಿಎಸ್ಎಫ್) ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಅಮರೀಂದರ್ ಸಿಂಗ್ ಬೆಂಬಲಿಸಿದ್ದು, ಫೆಡರಲಿಸಂ ಮತ್ತು ರಾಜ್ಯ ಸ್ವಾಯತ್ತತೆಯ ಬಗ್ಗೆ ಚರ್ಚೆ ಹುಟ್ಟುಹಾಕಿತ್ತು. ನಾನು ಮೂಲ ತರಬೇತಿ ಪಡೆದ ಸೈನಿಕನಾಗಿದ್ದೆನು, ಅಲ್ಲದೇ 9.5 ವರ್ಷಗಳಿಂದ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ "ಸುರಕ್ಷತೆ ಮತ್ತು ಗುಪ್ತಚರ ವಿಷಯಗಳಲ್ಲಿ" ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ ಎಂದು ಹೇಳಿದ್ದರು.
"ಭದ್ರತಾ ಪಡೆಗಳು ವೃತ್ತಿಪರವಾಗಿದ್ದು ನಮ್ಮ ಭದ್ರತೆಗಾಗಿಯೇ ಇವೆ. ಅವರು ಸರ್ಕಾರಕ್ಕೆ ಯಾವುದೇ ರೀತಿಯಲ್ಲಿ ಬೆದರಿಕೆ ಹಾಕುವುದಿಲ್ಲ, ಅಥವಾ ಪಂಜಾಬ್ನಲ್ಲಿ ಸರ್ಕಾರವನ್ನು ಸ್ವಾಧೀನಪಡಿಸಿಕೊಳ್ಳುತ್ತಿಲ್ಲ, ಆದ್ದರಿಂದ ಅವರು ತಮ್ಮ ಕರ್ತವ್ಯವನ್ನು ಮಾಡಲಿ. ಭಾರತ, ರಾಜ್ಯ ಮತ್ತು ನಾಗರಿಕರನ್ನು ರಕ್ಷಿಸಲಿ," ಎಂದು ಸಿಂಗ್ ಹೇಳಿದ್ದರು.
ಬಿಎಸ್ಎಫ್ ಗಡಿ ವಿಸ್ತರಣೆ ಬಗ್ಗೆ ಸ್ಪಷ್ಟನೆ:
ಅಂತಾರಾಷ್ಟ್ರೀಯ ಗಡಿಗಳಲ್ಲಿ ಅಧಿಕಾರ ವ್ಯಾಪ್ತಿಯ ವಿಸ್ತರಣೆಯ ಟೀಕೆಗಳಿಗೆ ಬಿಎಸ್ಎಫ್ ಈಗಾಗಲೇ ಪ್ರತಿಕ್ರಿಯೆ ನೀಡಿದೆ. ಹೊಸ ತಿದ್ದುಪಡಿಯಿಂದ ಗಡಿ ರಾಜ್ಯಗಳಾದ ಪಂಜಾಬ್, ಪಶ್ಚಿಮ ಬಂಗಾಳ, ಗುಜರಾತ್, ರಾಜಸ್ಥಾನ ಮತ್ತು ಅಸ್ಸಾಂನಲ್ಲಿ ತನ್ನ ಕಾರ್ಯಾಚರಣೆಗೆ ಏಕರೂಪತೆಯನ್ನು ತರುತ್ತದೆ. ಈಗ ಅದು ಗಡಿಯಿಂದ 50 ಕಿಮೀ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಬಹುದು ಎಂದು ಬಿಎಸ್ಎಫ್ ಹೇಳಿದೆ. ಈ ಹಿಂದೆ "ಅಕ್ಟೋಬರ್ 11 ರಂದು ಜಾರಿಗೆ ಬಂದ ತಿದ್ದುಪಡಿಯು ಬಿಎಸ್ಎಫ್ ತನ್ನ ಕರ್ತವ್ಯಗಳ ಚಾರ್ಟರ್ ಪ್ರಕಾರ ಕಾರ್ಯನಿರ್ವಹಿಸಬಹುದಾದ ಪ್ರದೇಶವನ್ನು ವ್ಯಾಖ್ಯಾನಿಸುವಲ್ಲಿ ಏಕರೂಪತೆಯನ್ನು ಸ್ಥಾಪಿಸುತ್ತದೆ ಮತ್ತು ಅದರ ಪ್ರದೇಶಗಳಲ್ಲಿ ಗಡಿ ಭದ್ರತಾ ಕಾರ್ಯವನ್ನು ನಿರ್ವಹಿಸುತ್ತದೆ," ಎಂದು ಗೃಹ ವ್ಯವಹಾರಗಳ ಸಚಿವಾಲಯವು ಸೂಚನೆ ನೀಡಿತ್ತು.