Psychology: ಅವರಿವರ ಲಾಭಕ್ಕೆ, ನಿಮ್ಮ ಮನಸ್ಸು ಮಾರಾಟಕ್ಕೆ!
ಹೊಸ ತಂತ್ರಜ್ಞಾನ ಎಷ್ಟು ಸಲೀಸಾಗಿ ಕೈಗೆಟಕ್ಕುತ್ತಿರುವುದೋ ಅಷ್ಟೇ ಭಯಾನಕ ಪರಿಣಾಮಗಳನ್ನು ಉಂಟು ಮಾಡಬಲ್ಲದೆನ್ನುವುದೀಗ ನುರಿತ ಕಂಪ್ಯೂಟರ್ ತಂತ್ರಜ್ಞಾನಿಗಳ ಅಭಿಪ್ರಾಯವಾಗಿದೆ. ಕೇವಲ ಅಭಿಪ್ರಾಯವಾಗಿ ಮಾತ್ರವಲ್ಲ ತಮ್ಮ ಬದುಕನ್ನು ಹಸನಾಗಿಸುತ್ತಿದ್ದ ತಂತ್ರಜ್ಞಾನದ ವೃತ್ತಿಯಿಂದಲೇ ಹೊರಬರುವಂತಹ ನಿರ್ಧಾರಕ್ಕೂ ಪ್ರೇರಣೆಯಾಗಿರುವ ನಿದರ್ಶನಗಳಿವೆ. ವಿಶೇಷವಾಗಿ ಸಾಮಾಜಿಕ ಜಾಲತಾಣಗಳ ವಿನ್ಯಾಸ, ನಿರೂಪಣೆ, ನಿರ್ವಹಣೆ ಮಾಡುತ್ತಿದ್ದ ತಜ್ಞರನೇಕರು ಸಾಮಾಜಿಕ ಜಾಲತಾಣಗಳು ತಕ್ಷಣದಲ್ಲಿ ಒದಗಿಸುವ ಸುಖವೂ ಕೇವಲ ಭ್ರಮೆಯಷ್ಟೇ ಎನ್ನುತ್ತಾರೆ. ಅದರಲ್ಲಿಯೂ ಫೇಸ್ಬುಕ್, ಯುಟ್ಯೂಬ್, ವಾಟ್ಸಾಪ್ ಮುಂತಾದವುಗಳು ಒಂದಿಲ್ಲವೊಂದು ರೀತಿಯ ಚಟವನ್ನು ಉತ್ತೇಜಿಸುತ್ತದೆ.
ಈ ಜಾಲತಾಣಗಳಾವುವು ಲಾಭವಿಲ್ಲದೆಯೇ ಕಾರ್ಯ ನಿರ್ವಹಿಸುವುದಿಲ್ಲ. ಇವುಗಳಿಗೆ ವರಮಾನ ಎಲ್ಲಿಂದ ಬರುತ್ತದೆ? ಹೇಗೆ ಬರುತ್ತದೆ ಎನ್ನುವುದು ಅತಿ ಸೂಕ್ಷ್ಮದ ಆರ್ಥಿಕ ಸೂತ್ರಗಳಲ್ಲಿ ಅಡಗಿರುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೇ ನಾನು ಒಮ್ಮೆ ಫೇಸ್ಬುಕ್ಕಿನಲ್ಲಿ ಖಾತೆಯನ್ನು ತೆರೆದರೆ ನನ್ನ ಮನಸನ್ನು ಅವರಿಗೆ ಧಾರೆಯೆರೆದಂತೆ. ಹಲವಾರು ವಾರಗಳು ಸಾಕು ನನ್ನ ಮನಸಿನ ಬಯಕೆಗಳನ್ನು ಜಾಲಾಡಿಸಿ ಅದರ ಇತಿಮಿತಿಗಳನ್ನು ಗುರುತಿಸಿ ಆ ಮಾಹಿತಿಗಳನ್ನು ಸಂಗ್ರಹಿಸಿಡುವುದಕ್ಕೆ. ನನ್ನ ಚಲನವಲನ, ಬಯಕೆ, ಭಯ, ಆತಂಕ, ಆಸೆ, ಆಕಾಂಕ್ಷೆಗಳ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ದಾಖಲಿಸಿಡುವಂತಹ ಅಪ್ರತಿಮ ಕೃತಿಮ ಸರ್ವರ್ ವ್ಯವಸ್ಥೆಯಿದಾಗಿರುತ್ತವೆ.
ಬಹುಶಃ ಇದೊಂದು ವಿಡಿಯೋ ನಿಮ್ಮನ್ನು ವ್ಯಸನಗಳಿಂದ ದೂರ ಮಾಡಬಹುದು
ಇವೆಲ್ಲವು ನಿರುಪಯುಕ್ತವಾದುದಲ್ಲ
ಇವುಗಳ ಮೂಲಕ ನನ್ನ ನಡೆನುಡಿಗಳೆಲ್ಲದರ ರೂಪುರೇಷೆ ಜಾಲತಾಣದ ವ್ಯವಸ್ಥೆಯೊಳಗೆ ಸೇರುತ್ತದೆ .ಕಂಪ್ಯೂಟರ್ ಕೃತಕಬುದ್ಧಿಶಕ್ತಿಯ ತಂತ್ರಾಂಶಗಳ ಕಾರ್ಯನಿರ್ವಹಣೆ ಇದಾಗಿರುವುದರಿಂದ ಹೇಗೆ? ಏಕೆ? ಯಾರಿಗೆ? ಯಾವಾಗ? ಎನ್ನುವಂತಹದ್ದು ಕಾರ್ಯನಿರ್ವಹಿಸಿದ ಯಂತ್ರಕ್ಕೂ , ಬಹುಶಃ, ಅರ್ಥವಾಗದು. ಆದರೆ ಇವೆಲ್ಲವು ನಿರುಪಯುಕ್ತವಾದುದಲ್ಲ. ಈ ಮಾಹಿತಿಗಳು ಅತಿ ಲಾಭತರುವಂತಹ ಅಗೋಚರ ಸರಕುಗಳು. ನೀವು ಬಯಸುವ ಬಣ್ಣ, ಕುಡಿಯುವ ನೀರು, ತಿನ್ನುವ ಅನ್ನ, ಕಾಣುವ ನಿದ್ದೆಯ ಕನಸುಗಳು. ಹಗಲುಗನಸುಗಳೆಲ್ಲದರ ಮೇಲೆ ಇದರ ಹಿಡಿತ ಬಲವಾಗಿಯೇ ಇರುತ್ತದೆ. ಹಾಗೆಯೆ ದ್ವೇಷ, ಅಸೂಯೆ, ಗೆಳತನ, ಸಾಂಗತ್ಯದ ಭಾವ-ಭಾವನೆಗಳನ್ನೂ ಈ ಯಂತ್ರಗಳೇ ರೂಪಿಸುವುದು.
Psychology: ಸಂತೋಷ - ಮನಸ್ಥಿತಿ- ಆದ್ಯತೆ
ಚಟವೊಂದಕ್ಕೆ ದಾಸನಾಗುವುದು ಸುಲಭ
ಫೇಸ್ಬುಕಿನ ಮುಖ್ಯಸ್ಥ ಮಾರ್ಕ್ ಜುಕರ್ಬರ್ಗ್ ಒಮ್ಮೆ ತಮ್ಮ ಸಂಸ್ಥೆಯ ವ್ಯವಹಾರದ ನೀತಿಯನ್ನು ಬಣ್ಣಿಸಿದ್ದು ಹೀಗೆ: ಫೇಸ್ಬಕ್ ಉದ್ದೇಶ ಮೂಲತಃ ಸಾಂಸ್ಕೃತಿಕವಾಗಿದ್ದು ಮನೋವಿಜ್ಞಾನ ಮತ್ತು ತಂತ್ರಜ್ಞಾನದ ಸಂಗಮವಾಗಿರುವುದರಿಂದ ಇದೊಂದು ಅತಿ ವೈಯಕ್ತಿಕ ಸಂಗತಿ. ಈ ಮಾತಿನ ಅರ್ಥವೆಂದರೆ ನಿಮ್ಮ ಮಾನಸಿಕತೆಯನ್ನು ನಿಯಂತ್ರಿಸಬಲ್ಲ ಚತುರತೆ ಇರುವ ತಂತ್ರಜ್ಞಾನದ ಆವಿಷ್ಕಾರವಿದೆನ್ನುವುದು. ವ್ಯಕ್ತಿಯ ಮನದಾಳದ ಬಗ್ಗೆ ಅಪಾರ ಅರಿವು ಹೊಂದಿರುವ ಮನೋವಿಜ್ಞಾನಿಗಳ ಕಾರ್ಯವನ್ನು ಕಂಪ್ಯೂಟರ್ ತಂತ್ರಜ್ಞಾನಿಗಳು ಹಗಲಿರಳೆನ್ನದೇ ಮಾಡುತ್ತಿರುತ್ತಾರೆ. ಕ್ಷಣಮಾತ್ರದಲ್ಲಿ ವ್ಯಕ್ತಿಯ ಮನಸಿನ ಪದರಗಳನ್ನು ಕತ್ತರಿಸಿ ಚೂರುಚೂರು ಮಾಡುವಷ್ಟು ಬಲ ಅವರ ತಾಂತ್ರಿಕತೆಯಲ್ಲಡಗಿರುತ್ತದೆ.
ಮನಸನ್ನು ಕತ್ತರಿಸಿದಾಗ ಆಗುವ ನೋವು ಕಾಣಿಸಬಲ್ಲದೆ? ಖಂಡಿತವಾಗಿಯೂ ಇಲ್ಲ. ಚಟವೊಂದಕ್ಕೆ ದಾಸನಾಗುವುದು ಸುಲಭ, ಅದರಿಂದ ಹೊರಬರುವುದು ಅಷ್ಟೇನು ಸುಲಭವಲ್ಲ. ಇನ್ನು ಅನುಭವಿಸುವುದು? ಹತ್ತಾರು ಜನರು ತನ್ನೊಂದಿಗೆ ಹಿಂಸೆ,ಯಾತನೆ ಅನುಭವಿಸುವಂತಹ ಗುಣವಡಿಗಿರುತ್ತದೆ ಈ ಚಟಗಳಲ್ಲಿ. ಧೂಮಪಾನದ ಚಟ, ಮದ್ಯವ್ಯಸನ, ಮಾದಕವಸ್ತುಗಳ ವ್ಯಸನ, ಕಾಮೋನ್ಮಾದದ ವ್ಯಸನಗಳು ಇದ್ದಂತೆಯೇ ಸಾಮಾಜಿಕ ಜಾಲಾತಾಣಗಳು ಹೊಸ ಪೀಳಿಗೆಯ ವ್ಯಸನವನ್ನು 1990 ದಶಕದ ಮಧ್ಯದಲ್ಲಿ ಹುಟ್ಟಿದವರಿಗೆ( Gen-z) ಅಂಟಿಸುವುದರಲ್ಲಿ ಯಶಸ್ವಿಯಾಗಿದೆ.
ಅತಿವೇಗದ ತಂತ್ರಜ್ಞಾನದ ಮಾಧ್ಯಮಗಳು
ಕ್ಷಣಕ್ಷಣಕ್ಕೂ ಮೊಬೈಲು ನೋಡುವುದು, ಯಾವ ನೋಟಿಫಿಕೇಷನ್ ಬಂದಿದೆ, ಅಥವಾ ಮೊಬೈಲು ಅಳ್ಳಾಡುವುದರತ್ತವೆ ಸದಾ ಗಮನ. ದಿನವೊಂದರಲ್ಲಿ ಈ ತರಹದ ಮಾನಸಿಕ ಕ್ಷಣಗಳು ಏರುತ್ತಲೇ ಇದ್ದಾಗ ಮಾನಸಿಕ ಸ್ವಾಸ್ಥ್ಯ ಸಾಧ್ಯವೆ? ಖಂಡಿತವಾಗಿಯೂ ಇರದು. ಚಡಪಡಿಸುವ ಮನಸು ಬಹಳ ವೇಗವಾಗಿ ಸ್ವಭಾವವಾಗಿ ನಿಂತುಬಿಡುತ್ತದೆ. ಇದರಿಂದಾಗಿ ಸಾಮಾಜಿಕ ಹೊಂದಾಣಿಕೆಗಳು ಉತ್ತಮವಾಗಲು ಸಾಧ್ಯವೆ? ಸಂಯಮ, ಸಾವಧಾನದ ಮನದ ಸ್ಥಿತಿ ಮನುಷ್ಯ ನಾಗರೀಕತೆಯೊಂದಿಗೆ ಹುಟ್ಟಿಬಂದಿರುವಂತಹದ್ದು. ಆದರೀಗ ಅತಿವೇಗದ ತಂತ್ರಜ್ಞಾನದ ಮಾಧ್ಯಮಗಳು ಮಿದುಳಿನಾಳದ ಕಾರ್ಯವನ್ನು ಕ್ಷಣದಲ್ಲಿ ಸಂಗ್ರಹಿಸಿಟ್ಟು ಮಾನಸಿಕ ಆರೋಗ್ಯಕ್ಕೆ ಅತ್ಯಗತ್ಯವಾಗಿರುವ ಮಾನಸಿಕತೆಯನ್ನು ವಿರೂಪಗೊಳಿಸಬಲ್ಲದ್ದಾಗಿರುತ್ತದೆ.
ಉದಾಹರಣೆಗೆ ಕೆಟ್ಟ ಸುದ್ಧಿ- ಹಿತಕರ ಸುದ್ಧಿಗಳು ಯಾವ ರೀತಿಯ ಪರಿಣಾಮಗಳನ್ನು ಬೀರಬಲ್ಲದು ಎನ್ನುವುದನ್ನು ತಿಳಿಯಲು ತನ್ನ ಖಾತೆದಾರರಿಗೆ(ಗೊತ್ತಿಲ್ಲದಂತೆ) ನೀಡಿ ಅವರಿಂದ ಬಂದ ಪ್ರತಿಕ್ರಿಯೆಗಳನ್ನು ಲಾಭಕ್ಕಾಗಿ ಮಾರಿದ ವಿಷಯ ಅನೇಕರಿಗೆ ತಿಳಿಯದು. ಇಂತಹ ಮಾಹಿತಿಗಳು, ರಾಜಕೀಯ,ಅರ್ಥಿಕ, ಸಾಂಸ್ಕೃತಿಕ, ಮಿಲಿಟರಿ ಕ್ಷೇತ್ರಗಳ ಮೇಲೆ ಅಪಾರ ದುಷ್ಪರಿಣಾಮ ಬೀರಬಲ್ಲದ್ದಾಗಿರುವುದು. ಸರಳವಾಗಿ ಹೇಳುವುದಾದರೇ ಜನಾಭಿಪ್ರಾಯಗಳನ್ನು ಜನತೆಗೆ ತಿಳಿಯದಂತೆಯೇ ಮಾಡುವಂತಹ ಕುತಂತ್ರ ಸೂತ್ರ ಸಾಮಾಜಿಕ ಜಾಲತಾಣಗಳಲ್ಲಿ ಅಡಗಿರುತ್ತದೆ. ಒಂದು ರೀತಿಯಲ್ಲಿ ಗಾದೆಯ ಮಾತಿದ್ದಂತೆ " ಕೊಟ್ಟವ ಕೆಟ್ಟ, ಇಸ್ಕೊಂಡೋನು ಈರ್ಭದ್ರ " .
Psychology: ಚಲನಚಿತ್ರಗಳು ಬಿಂಬಿಸುವ ನೈತಿಕ ಸಂಘರ್ಷಗಳು
ಮಾಹಿತಿಗಳಿಗೆ ಭಾರಿ ಬೇಡಿಕೆ ಸದಾ ಕಾಲ ಇರುತ್ತದೆ
ಮುಖ್ಯವಾಗಿ ಸಾಮಾಜಿಕ ಜಾಲತಾಣಗಳು ಚಟದಂತಹ ತೀರಾ ವೈಯಕ್ತಿಕ ಅಭ್ಯಾಸ ಮಾಡಿಸಲು ಹೇಗೆತಾನೇ ಸಾಧ್ಯ ಎನ್ನುವುದು. ಅದು ಸಾಧ್ಯವಿದೆ ಎನ್ನುವುದಕ್ಕೆ ಬಹು ಮುಖ್ಯವಾದ ಕಾರಣ ಕಂಪನಿಗಳಿಗೆ ದೊರಕುವ ದೊಡ್ಡ ಲಾಭ. ಅಂದರೇ ಸಾಮಾಜಿಕ ಜಾಲತಾಣಗಳ ಸಾಫ್ಟ್ವೆರ್ ಕಂಪನಿಗಳಿಗೆ ನಾನು, ನೀವೇ ಸರಕು. ಮೊಬೈಲು ನನ್ನದು, ಅಂತರ್ಜಾಲಕ್ಕೆ ಕೊಡುವ ಹಣ ನನ್ನದು, ಆದರೆ ನನ್ನ ಮನಸಿಗೆ, ಅಗತ್ಯಕ್ಕೆ ತಕ್ಕಂತಹ ಸರಂಜಾಮಗಳನ್ನು ಜಾಹಿರಾತಿನ ರೀತಿಯಲ್ಲಿ ಒದಗಿಸುವ ನೆಪ. ಆದರೇ ನನ್ನ ಬಯಕೆಗಳೆಲ್ಲವು ಲಾಭತರುವಂತಹ ಮಾಹಿತಿಗಳಾಗಿರುವುದರಿಂದ ಅವುಗಳನ್ನು ಶೇಖರಿಸಿಟ್ಟು ಸೂಕ್ತ ಸಮಯದಲ್ಲಿ ಅಪಾರ ಲಾಭಕ್ಕಾಗಿ ಮಾರುವುದು. ಬಳಕೆದಾರ ಬಯಕೆಗಳನ್ನು ಸಂಗ್ರಹಿಸಿ, ಲಾಭಕ್ಕಾಗಿ ವಿತರಣೆ ಮಾಡುವುದು ಕಷ್ಟದ ಕೆಲಸವಲ್ಲ.ಇಂತಹ ಮಾಹಿತಿಗಳಿಗೆ ಭಾರಿ ಬೇಡಿಕೆ ಸದಾ ಕಾಲ ಇರುತ್ತದೆ.
ಇವುಗಳಿಂದ ದೇಶ, ಕೋಶಗಳನ್ನು ಕಟ್ಟುವುದಕ್ಕೆ, ಕೆಡುವುವುದಕ್ಕೆ ಹಾತೊರಿಯುತ್ತಿರುವ ಮಂದಿಗೇನು ಕಡಿಮೆಯೇ? ಅಂತೆಯೇ ನಮ್ಮ,ನಿಮ್ಮ ಸ್ವಭಾವಗಳನ್ನು, ಸಿಟ್ಟು ತಾಪಗಳನ್ನು ಬರಿಸುವ, ಬದಲಿಸುವ ಗುಣವೂ ಸಹ ಈ ಮಾಹಿತಿಗಳ ಮೂಲಕವೇ ಸಾಧ್ಯವಿದೆ. ಏಕೆಂದರೆ ಮನುಷ್ಯರು ಹುಟ್ಟಿದಾಗಿನಿಂದಲೂ ಸಾಮಾಜಿಕ ಜೀವಿಗಳಾಗಿ ಇರಲು ಬಯಸುತ್ತಾರೆ. ನಾನು, ನನ್ನದು, ನನಗಾಗಿ, ಅವರಿಗಾಗಿ ಎನ್ನುವಂತಹ ವಿಷಯಗಳನ್ನು ಮಾರ್ಪಡಿಸುವುದಕ್ಕೆ ಕಳೆದ 30 ವರ್ಷಗಳ ಹಿಂದೆ ಸುಲಭವಾಗಿಲಿಲ್ಲ. ಆದರೀಗದು ಕೆಲವೇ ವಾರಗಳಲಿ ಬದಲಾಯಿಸಲ ಸಾಧ್ಯವಿದೆ. ನಿಮ್ಮ ಕೋಪವನ್ನು ಯಾರ ಮೇಲೆ,ಯಾವಾಗ ಹರಿಸಬೇಕು ಎನ್ನುವುದನ್ನು ಸಹ, ನಿಮ್ಮ ಅರಿವಿಗೆ ಬಾರದ ರೀತಿಯಲ್ಲಿ, ಮಾಡಲು ಸಾಧ್ಯವಿದೆ. ಮನುಷ್ಯನ ಸ್ವಭಾವಗಳಲ್ಲಿ ಮಾನ್ಯತೆಯ ಪ್ರಜ್ಞೆ ಸದಾ ಚುರುಕಾಗಿರುವುದು.
ಸ್ವಂತಿಕೆ, ಸಾಮರ್ಥ್ಯಗಳನ್ನು ಕಳೆದುಕೊಂಡಿದ್ದಾರೆ
ಇದನ್ನು ಬಳಿಸಿಕೊಂಡು ಎಷ್ಟು ಜನ ನನ್ನತ್ತ ಹೆಬ್ಬೆಟ್ಟೆತ್ತುತ್ತಾರೆ, ಇಳಿಸುತ್ತಾರೆ ಎನ್ನುವುದನ್ನು ಮಾಡುವ ಚಾಕಚಕ್ಯತೆ ಈ ಜಾಲತಾಣಗಳಲ್ಲಿ ಅಡಿಗಿರುತ್ತದೆ. ಸಾವಿರ ಸಂಖ್ಯೆಯಲ್ಲಿ ಏರಿದ ಹೆಬ್ಬೆಟ್ಟು ನಿಮ್ಮ ಖುಷಿಯನ್ನು ಹೆಚ್ಚಿಸಿ ಮತ್ತುಷ್ಟು ಬಯಕೆಗಳನ್ನು ಹೆಚ್ಚಿಸುತ್ತದೆ. ಹಾಗೆಯೇ ಇಳಿಸಿದ ಹೆಬ್ಬೆಟ್ಟು ನಿಮ್ಮ ಮನಸಿನಲ್ಲಿ ನಿಮ್ಮ ಬಗ್ಗೆಯೇ ಅನುಕಂಪ, ಅಸಹ್ಯದ ಭಾವಗಳನ್ನು ಹೆಚ್ಚಿಸಿ ನಿಮ್ಮ ಮನಸನ್ನು ಕೆಡಿಸಬಲ್ಲದ್ದಾಗಿರುವುದು. ಸಾಮಾಜಿಕ ಜಾಲಾತಾಣಗಳು ಅಹಂ ತೃಪ್ತಿಯನ್ನು ಹೇರಳವಾಗಿ ಒದಗಿಸುತ್ತದೆ ಮತ್ತು ಅದರ ಸರ್ವನಾಶಕ್ಕೂ ಕಾರಣ. ಇದರಿಂದಾಗಿಯೇ ಅದೆಷ್ಟು ಸೆಲಬ್ರಟಿಗಳು ತಮ್ಮ ಸ್ವಂತಿಕೆ, ಸಾಮರ್ಥ್ಯಗಳನ್ನು ಕಳೆದುಕೊಂಡಿದ್ದಾರೆ ಎನ್ನುವುದರ ಪುರಾವೆಗಳು ನಿಮ್ಮ ಬಳಿಯೇ ಇರಬಲ್ಲದು.
ಇನ್ನು ಸಾಮಾಜಿಕ ಜಾಲತಾಣಗಳು ನಿಮ್ಮಿಂದ ದೂರವಿದ್ದರೂ ಸಲಕರಣೆಗಳ ಮೂಲಕ ಹರಿದುಬರುವ ಮಾಹಿತಿಗಳತ್ತ ನಿಮ್ಮ ಮಿದುಳು ಸದಾ ಜಾಗೃತವಾಗಿರುತ್ತದೆ. ಈ ಜಾಗೃತಿಯನ್ನು ದುರುಪಯೋಗಪಡಿಸಿಕೊಳ್ಳುವುದು ಕಂಪ್ಯೂಟರ್ ತಂತ್ರಜ್ಞಾನದ ವಿಶಿಷ್ಟವಲಯಗಳಲ್ಲಿ ಅಡಗಿರುತ್ತದೆ.
ಮೊಬೈಲ್ ಸುಪ್ರಭಾತಮ್: ನೆಟ್ಟು ಉಚಿತಮ್ ಹುಚ್ಚು ಖಚಿತಮ್|
ನಿಮ್ಮ ಮನಸನ್ನು ಮಾರಟಕ್ಕಿಡಬೇಡಿ
ಹೀಗಾಗಿ ನಿಮ್ಮ ಮನಸನ್ನು ಕ್ಷಣಮಾತ್ರದಲ್ಲಿ ಬದಲಿಸುವ ಚಾಕಚಕ್ಯತೆಯಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ. ಆದರೇ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿದೆ. ಕೊಂಚ ಶ್ರಮ, ಕೊಂಚ ಸಾವಧಾನ, ಕೊಂಚ ವಿಚಾರ ಮಾಡುವ ಶಕ್ತಿ ನಿಮ್ಮನ್ನು ಮಾನಸಿಕ ದುರ್ಬಲತೆಯತ್ತ ಹೋಗದಂತೆ ಮಾಡುತ್ತದೆ. ಅತಿ ಮುಖ್ಯವಾಗಿ ಪಾಲಿಸಬೇಕಿರುವ ಸೂತ್ರವೆಂದರೇ, ಸಾಮಾಜಿಕ ಜಾಲತಾಣಗಳಿಂದ ನಿಮಗೆ ಸಿಗುವ ಲಾಭ ಯಾವುದು ಎನ್ನುವುದನ್ನು ತಿಳಿದುಕೊಳ್ಳಿ. ಹಾಗೆಯೇ ನಿಮ್ಮ ಸಲಕರಣೆಯಲ್ಲಿ ನೋಟಿಫಿಕೆಷನ್ ನಿಷ್ಕ್ರಿಯಗೊಳಿಸಿ. ಇವು ಮಾಡಿದ ಕೆಲವೇ ವಾರಗಳಲಿ ನಿಮ್ಮ ಮಾನಸಿಕ ಬಲ ಉತ್ತಮವಾಗದಿದ್ದರೇ ತಿಳಿಸಿ. ಅಂತೆಯೇ ಜಾಲಾತಾಣಗಳ ಕಂಪನಿಗಳು ಮನುಷ್ಯರ ಸ್ವಭಾವಗಳನ್ನು ಸರಕು ಮಾಡಿಕೊಳ್ಳದಂತೆ ಆಗ್ರಹಪಡಿಸುವುದು ನಿಮ್ಮ ಕರ್ತವ್ಯ ಎನ್ನುವುದನ್ನು ಮರೆಯದಿರಿ. ನಿಮ್ಮ ಮನಸನ್ನು ಮಾರಿ ಅವರಿವರೇಕೆ ಲಾಭ ಮಾಡಿಕೊಳ್ಳಬೇಕು? ಯೋಚಿಸಿ.