ಫೈಟ್ ಆರ್ ಫ್ಲೈಟ್: ಅಫ್ಘಾನಿನಲ್ಲಿ ವಿಮಾನ ಚಕ್ರ ಹತ್ತಿದವರ ಪರಿಸ್ಥಿತಿ, ಮನಸ್ಥಿತಿಗಳು...
ಅಫ್ಘಾನಿಸ್ತಾನದ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಕೇವಲ ಒಂದು ದೇಶದ ರಾಷ್ಟ್ರೀಯತೆ, ಸಾರ್ವಭೌಮತ್ವ ಮತ್ತು ನೆಲದ ಇತಿಹಾಸಕಷ್ಟೇ ಸೀಮಿತವಾಗಿಲ್ಲ. ಮನುಷ್ಯ ಕುಲದ ಕವಲುಗಳು ಭಯ, ಹಿಂಸೆ, ದಬ್ಬಾಳಿಕೆಯ ಪ್ರವೃತ್ತಿಯಿಂದ ಬಿಡುಗಡೆ ಹೊಂದುವಂತಹ ಪ್ರಯತ್ನಗಳನ್ನು ಮಾಡುತ್ತಿಲ್ಲ ಎನ್ನುವುದರ ಸಂಕೇತವೂ ಹೌದು. ದಬ್ಬಾಳಿಕೆ, ಆಕ್ರಮಣಕಾರಿ ವರ್ತನೆಗಳು ಕೆಲ ಮನುಷ್ಯರ ಮಿದುಳಿನ ಬಲವಾಗಿಯೇ ಉಳಿದಿದೆ ಎನ್ನುವುದರ ದುರಂತ ದೃಷ್ಟಾಂತ.
Recommended Video
ಹಾಗೆಯೇ ಜನತೆಯ ಮಾನಸಿಕ ಸ್ಥಿತಿಗತಿಗಳ ಮೇಲೆ ಕ್ಷಣಕ್ಷಣಕ್ಕೂ ಉಂಟಾಗುವಂತಹ ಒತ್ತಡಗಳ ಪ್ರಭಾವ, ಪರಿಣಾಮಗಳ ಸೂಚಿಯೂ ಆಗಿರುತ್ತದೆ. ಇದನ್ನು ಮತ್ತಷ್ಟು ಸ್ಪಷ್ಟಪಡಿಸಿದೆ ಕಾಬೂಲಿನ ವಿಮಾನ ನಿಲ್ದಾಣದಲ್ಲಿ ಕಂಡು ಬರುತ್ತಿರುವ ದೃಶ್ಯಚಿತ್ರಗಳು. ದೇಶ ತೊರೆಯುವ ಅವಸರವು ಜೀವಕ್ಕೆ ಆಗಬಹುದಾದ ಅಪಾಯವನ್ನು ಸಹ ಗಣನೆಗೆ ತರುವುದಿಲ್ಲ ಎನ್ನುವದನಿದು ತಿಳಿಪಡಿಸುತ್ತದೆ. ಚಲಿಸಲು ಸಿದ್ಧವಿರುವ ವಿಮಾನಕ್ಕೂ ಮುಗಿಬೀಳಲು ಸಿದ್ಧರಿರುವಂತೆ ಕಂಡುಬರುವ ದೃಶ್ಯಗಳು ಭಯಭೀತಿಯ ಮನದಸ್ಥಿತಿಯು ಸತತವಾಗಿ ಅಭ್ಯಾಸವಾಗಿರುವ ಮಾನಸಿಕ ಸ್ವರೂಪದ ಸಹಜ ಎಚ್ಚರಿಕೆಗಳನ್ನು ಬದಿಗಿರಿಸಬಲ್ಲದು ಎನ್ನುವುದರ ಸಂಕೇತ. ಹಾಗೆಯೇ ಸ್ವತಂತ್ರವಾಗಿ ಬದುಕಲು ಸಾಧ್ಯವಿಲ್ಲ ಎನ್ನುವುದರ ಸಂಕೇತವೂ ಹೌದು.
ಫೈಟ್ ಆರ್ ಫ್ಲೈಟ್ ಪ್ರತಿಕ್ರಿಯೆ
ಇದನ್ನು ಮನೋವಿಜ್ಞಾನದ ಮಾತುಗಳಲ್ಲಿ ಹೇಳುವುದಾದರೇ ಫೈಟ್ ಆರ್ ಫ್ಲೈಟ್ ಪ್ರತಿಕ್ರಿಯೆ ಎನ್ನಬಹುದು. ಈ ಮಾದರಿಯ ಪ್ರತಿಕ್ರಿಯೆಯಲ್ಲಿ ಮಿದುಳಿನ ಪಾತ್ರವೇ ದೊಡ್ಡದು. ವ್ಯಕ್ತಿಯ ಜೀವ ಉಳಿಯುವುದಕ್ಕೆ ಬೇಕೆಬೇಕಾದಂತಹ ಸಂಚನ್ನು ಅದು ತಕ್ಷಣದಲ್ಲಿ ಒದಗಿಸುವಂತಹ ಜರೂರಿನ ತಯಾರಿ ಮಾಡಿಬಿಡುತ್ತದೆ. ಹೀಗಾಗಿ ಜೀವದ ರಕ್ಷಣೆಯತ್ತವೇ ಗಮನವೆಲ್ಲಾ ಇರುವುದರಿಂದ ತಪ್ಪಿಸಿಕೊಳ್ಳುವುದೇ ರಕ್ಷಣಾ ತಂತ್ರವಾಗಿ ಮುಂದುವರೆಯುತ್ತದೆ. ಅಂದರೆ, ಶರೀರದಲ್ಲಿ ಆ ಕ್ಷಣದಲಿ ಕಷ್ಟದ ಸನ್ನಿವೇಶವನ್ನು ಎದುರಿಸುವಂತಹ ಮತ್ತು ಅಧಿಕ ಶಕ್ತಿಯುಳ್ಳ ಪ್ರತಿಕ್ರಿಯೆಯೊಂದು ಕಾಣಿಸಿಕೊಳ್ಳುತ್ತದೆ. ಈ ಶಕ್ತಿದಾಯಕ ಸ್ಥಿತಿಯೇ ಓಡೋಡಿ ತಪ್ಪಿಸಿಕೋ ಅಥವಾ ಕಾದಾಡಿ ಕಳಚಿಕೋ ಎನ್ನುವಂತಹ ವರ್ತನಾವಳಿಗಳ ಮೂಲಕ ನಾನಾ ವಿಧದ ತಪ್ಪಿಸಿಕೊಳ್ಳುವ ಪ್ರಯತ್ನಗಳಾಗಿ ಪ್ರಕಟಗೊಳ್ಳುತ್ತಲೇ (ತಪ್ಪಿಸಿಕೊಳ್ಳುವ ತನಕ) ಇರುವುದು. ಈ ಒಂದು ಸ್ಥಿತಿಯಲ್ಲಿ ದೇಹದ ಅನೇಕ ಅಂಗಾಂಗಗಳು ಮತ್ತು ಸ್ರವಿಕೆಗಳ ಪಾತ್ರ ಹಿರಿದಾಗಿಯೇ ಇರುತ್ತದೆ. ಒಂದು ರೀತಿಯಲ್ಲಿ ದೇಹದೊಳಗಿನ ಅತಿ ತುರ್ತುಕಾರ್ಯಚರಣೆ ಸ್ಥಿತಿ ಎನ್ನಲೂಬಹುದು.
ಸಾವಿರಾರು ಕೋಟಿ ರೂ. ಖರ್ಚು ಮಾಡಿ ಅಫ್ಘನ್ ಸೇನೆ ತರಬೇತಿ: ಅಮೆರಿಕದ ಪ್ರಯತ್ನ ನೀರಲ್ಲಿ ಹೋಮ
ಹೀಗೊಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ
ಉದಾಹರಣೆಗೆ ಹೀಗೊಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ: ತಣ್ಣನೆಯ ಗಾಳಿಯನ್ನು ಸವಿಯುತ್ತಾ ನೆಮ್ಮದಿಯಿಂದ ಪಾರ್ಕಿನಲ್ಲಿ ಜನರು ವಿಶ್ರಮಿಸಿಕೊಳ್ಳುತ್ತಿದ್ದಾರೆ . ಆಗ ದಿಢೀರನೆ ಎಲ್ಲಿಂದಲೋ ದುಂಬಿಯ ಹಿಂಡೊಂದು ಸುಯ್ಯನೆ ಜನರತ್ತ ಹಾರಿ ಬರುತ್ತದೆ. ಈ ಕ್ಷಣದಲ್ಲಿ ಜನ ದಿಕ್ಕಾಪಾಲಾಗಿ ಓಡುವುದು , ತಲೆ, ಕಣ್ಣು ಕಿವಿ, ಮುಖ ಮುಚ್ಚಿಕೊಳ್ಳುವುದು ಸಹಜ. ಮತ್ತೇ ಹಿಂದುಮುಂದು ನೋಡದೆ ಒಬ್ಬರಮೇಲೆ ಒಬ್ಬರೂ ಬಿದ್ದಾದರೂ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಯುತ್ತಿರುತ್ತದೆ. ಹಾಗೆಯೇ ಒಬ್ಬಿಬ್ಬರು ದುಂಬಿಯ ಮೇಲೆ ಆಕ್ರಮಣ ಮಾಡುವ ಪ್ರಯತ್ನ ಸಹ ಮಾಡಿಯಾರು.
ಪ್ರತಿಕ್ರಿಯೆಗಳು ಜೀವ ರಕ್ಷಣೆಯ ಕ್ರಮವಾಗಿದೆ
ಇಂತಂಹ ಪ್ರತಿಕ್ರಿಯೆಗಳು ಜೀವ ರಕ್ಷಣೆಯ ಕ್ರಮವಾಗಿದ್ದು ಜೀವಿಯ ಹುಟ್ಟಿನೊಂದಿಗೆಯೇ ಕಾಣಿಸಿಕೊಳ್ಳುವಂತಹದ್ದು. ಮನುಷ್ಯನಲ್ಲಿ ಇದು ನಾನಾ ರೀತಿಯ ಸಮೂಹ ಸಂರಕ್ಷಣ ತಂತ್ರವಾಗಿಯೂ ಬೆಳೆದಿರುವುದು ಇಂದು ಕಾಣಸಿಗುತ್ತದೆ. ವಿಜ್ಞಾನ, ತಂತ್ರಜ್ಞಾನದ ನೆರವಿನ ಮೂಲಕ ಜೀವರಕ್ಷಣೆಯ ಕ್ರಮಗಳು ಮತ್ತು ಆಕ್ರಮಣದ ಕ್ರಮಗಳ ತಯಾರಿಕೆಯಲ್ಲಿ ಮನುಷ್ಯನ ಸಾಮರ್ಥ್ಯಗಳು ನೆರವಿಗೆ ಬಂದಿರುವುದು ಸ್ಪಷ್ಟ. ಆದರೆ ಮನುಷ್ಯನ ಈ ಪ್ರಯತ್ನಗಳು ಸದಾ ಹಿತಕಾರಿ ಎನ್ನುವಂತೆ ಜರುಗುವುದಿಲ್ಲ ಎನ್ನುವುದೂ ಕೂಡ ಅಷ್ಟೇ ಸ್ಪಷ್ಟ. ಇವುಗಳೇ ಹಿಂಸೆ, ನೋವು, ಹತಾಶೆ, ತೀವ್ರ ಭೀತಿಭಯ, ತಲ್ಲಣ ಆವೇಶ ಭಾವಗಳ ಮೂಲಕ ಕಾಣಿಸಿಕೊಂಡು ವ್ಯಕ್ತಿ ಮನಸಿನ ಮೇಲೂ ಸಮಾಜದ ಮನಸಿನ ಮೇಲೂ ಪರಿಣಾಮ ಬೀರುತ್ತದೆ. ಕಾಬೂಲಿನ ಪರಿಸ್ಥಿತಿಯು ಇಂತಹದೊಂದು ವಿಷಮತೆಯನ್ನು ಸೂಚಿಸುವಂತಹದ್ದೇ ಆಗಿರುತ್ತದೆ. ಮನುಷ್ಯನ ಅಸಹಾಯಕತೆಗೆ ಮನುಷ್ಯರೇ ಕಾರಣವಾದಾಗ ಸಮಸ್ಯೆಗಳನ್ನುಎದುರಿಸುವುದು ಮತ್ತಷ್ಟು ಕಷ್ಟ.
Video: ಕಾಬೂಲ್ನಲ್ಲಿ ಆಕಾಶಕ್ಕೆ ಹಾರಿತು ವಿಮಾನದಿಂದ ಜಾರಿದವರ ಪ್ರಾಣಪಕ್ಷಿ!
ಮಿದುಳಿನ ಶಕ್ತಿ ಮತ್ತು ಮನಸು ಬಯಸುವ ಸ್ವಾತಂತ್ರ್ಯ
ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಬದುಕುವ ಛಲಗಿಂತಲೂ ಬದುಕು ಸ್ವತಂತ್ರವಾಗಿ ಸಹಜವಾಗಿ ಇರಬೇಕು ಎನ್ನುವಂತಹ ಪ್ರವೃತ್ತಿ ಗಟ್ಟಿಯಾಗಿರುತ್ತದೆ. ಹೀಗೆ ಗಟ್ಟಿಯಾಗುವುದಕ್ಕೆ ಮನುಷ್ಯ ಪರಿಸರವೇ ಕಾರಣ. ಇಲ್ಲಿ ಎಲ್ಲರಿಗೂ ಬದುಕುವ ಹಂಬಲ ಮತ್ತು ಈ ಹಂಬಲವನ್ನು ಬಲಗೊಳಿಸುವಂತಹ ಮನುಷ್ಯ ಗುಣಗಳು ಚಿಗುರಿಕೊಳ್ಳುತ್ತವೆ. ದಮನ ದಬ್ಬಾಳಿಕೆಯಂತಹ ಪ್ರಿಮಿಟಿವ್ ಬಲಗಳು ಮನುಷ್ಯನ ನಾಗರೀಕತೆಯನ್ನು ಹಿಂದೆ ತಳ್ಳುವಂತಹ ಪ್ರಯತ್ನವನ್ನು ಸಾಕಷ್ಟು ಯಶಸ್ವಿಯಾಗಿ ಮಾಡಿರುವುದರ ನಿದರ್ಶನಗಳು ನೂರಾರು. ಆದರೆ, ದಬ್ಬಾಳಿಕೆಯ ಪ್ರವೃತ್ತಿಯ ಮನಸು ಸದಾಕಾಲ ಯಶಸ್ವಿಯಾಗದು ಎನ್ನುವುದಕ್ಕೆ ಹಿಟ್ಲರನ ಬದುಕು ಉತ್ತಮ ಉದಾಹರಣೆ.
ವಿವೇಚನೆಯ ಬಲವನ್ನು ಈ ಸಮಯದಲ್ಲಿ ಬಳಸಿಕೊಳ್ಳುತ್ತಾನೆ
ಬಹುಮುಖ್ಯವಾಗಿ ಫೈಟ್ ಅಥವಾ ಫ್ರಯ್ಟ್ ಪ್ರತಿಕ್ರಿಯೆಗಳಲ್ಲಿ ಯಾವುದು ಮೊದಲು ಬರುತ್ತದೆ, ಯಾವುದು ನಂತರ ಬರುತ್ತದೆ ಎನ್ನುವುದು ಸುಲಭವಲ್ಲ. ಸನ್ನಿವೇಶಗಳ ಬಲ, ವ್ಯಕ್ತಿಯ ಆಸಕ್ತಿ, ಆಕ್ರಮಣಕಾರಿ ಶಕ್ತಿಯ ಹಿಡಿತವೂ ಇಂತಹ ನಿರ್ಧಾರಗಳ ಹಿಂದೆ ಇರುತ್ತವೆ.ಆದರೆ ಈ ಎರಡು ಸ್ಥಿತಿಗಳಲ್ಲಿ ಯಾವುದೊಂದು ತಕ್ಷಣದಲ್ಲಿ ಉಗ್ರವಾಗಿ ಬರುದು ಎನ್ನುತ್ತವೆ ಆಧುನಿಕ ಮನೋವಿಜ್ಞಾನದ ಪ್ರಯೋಗಗಳು. ಇವೆರಡು ಬರುವುದಕ್ಕೆ ಮುಂಚಿತವಾಗಿ ಮಿದುಳು ಕ್ಷಣ ಕಾಲ ಸ್ತಬ್ದವಾಗಿದ್ದು ನಂತರದಲ್ಲಿ ಪ್ರತಿಕ್ರಿಯೆ ತೋರ್ಪಡಿಸುತ್ತದೆ. ಈ ಮಧ್ಯಂತರದ ಸ್ಥಿತಿಯನ್ನು ಫ್ರೀಜ್ ಎನ್ನುತ್ತಾರೆ. ಈ ಸಮಯದಲ್ಲಿ ವಿವೇಚನೆ, ಮುಂದಿನ ಆಗುಹೋಗುಗಳ ಸೂಕ್ಷ್ಮ ತಿಳಿವಳಿಕೆ ಹುಟ್ಟಿಕೊಳ್ಳುತ್ತದೆ. ಹೀಗಾಗಿ ಮನುಷ್ಯ ವಿವೇಚನೆಯ ಬಲವನ್ನು ಈ ಸಮಯದಲ್ಲಿ ಬಳಸಿಕೊಳ್ಳುತ್ತಾನೆ. ಕಾಬೂಲಿನಿಂದ ತಪ್ಪಿಸಿಕೊಂಡು ಹೋಗುವ ಜನರ ಗುಂಪುಗಳಲ್ಲಿ ಸ್ವಾತಂತ್ರ್ಯ, ಭವಿಷ್ಯದ ಬದುಕು, ಹಿಂಸೆ, ದಬ್ಬಾಳಿಕೆಯ ಬಗ್ಗೆ ಹೆಚ್ಚು ಗಮನಕೊಟ್ಟುವರು ಸೇರಿರುವ ಸಾಧ್ಯತೆಗಳು ಹೆಚ್ಚು.