Psychology: ಒಂಟಿತನವಾ? ನಿಮ್ಮ ಕೆಲಸ ಹೋದೀತು ಹುಷಾರ್
ಲಂಡನ್, ಏ. 28: ಕೆಲಸ ಇಲ್ಲದಿದ್ದರೆ ಖಿನ್ನತೆ, ಒಂಟಿತನ ಕಾಡುವುದು ಸಹಜ. ಆದರೆ, ಉದ್ಯೋಗಸ್ಥರಿಗೆ ಒಂಟಿತನ ಕಾಡತೊಡಗಿದರೆ? ನೀವು ಉದ್ಯೋಗಿಗಳಾಗಿದ್ದು, ನಿಮಗೆ ಒಂಟಿತನದ ಭಾವನೆ ಕಾಡುತ್ತಿದೆಯಾದರೆ ಅದೊಂದು ಖಿನ್ನತೆಯ ಸಣ್ಣ ಹಂತ ಎಂದು ನಿರ್ಲಕ್ಷಿಸದಿರಿ. ಅದು ನಿಮ್ಮ ವೃತ್ತಿಗೆ ಸಂಚಕಾರ ತರಬಹುದು. ಬ್ರಿಟನ್ ದೇಶದ ಸಂಶೋಧನೆಯೊಂದು ಈ ಬಗ್ಗೆ ಎಚ್ಚರಿಸುವ ವಿಚಾರವನ್ನು ಹೊರಗೆಡವಿದೆ. ನನಗೆ ಆಗಾಗ ಒಂಟಿತನ ಕಾಡುತ್ತೆ ಎಂದು ಹೇಳುವ ಜನರು ಮುಂದಿನ ದಿನಗಳಲ್ಲಿ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಎಕ್ಸೆಟರ್ ವಿವಿಯ ಸಂಶೋಧಕರು ಹೇಳಿದ್ದಾರೆ. ಈ ರಿಸರ್ಚ್ ಟೀಮ್ ಮಾಡಿರುವ ವರದಿಯನ್ನು 'ಬಿಎಂಸಿ ಪಬ್ಲಿಕ್ ಹೆಲ್ತ್' ಎಂಬ ಜರ್ನಲ್ ಪ್ರಕಟಿಸಿದೆ.
ಇನ್ನು, ನಿರುದ್ಯೋಗಿಳಾದವರು ಒಂಟಿತನದ ಭಾವನೆಗೆ ಸಿಕ್ಕಿಕೊಳ್ಳುವ ಸಾಧ್ಯತೆ ಹೆಚ್ಚು ಎಂಬ ವಿಚಾರವನ್ನೂ ಸಂಶೋಧಕರು ಒತ್ತಿಹೇಳಿದ್ದಾರೆ.
Psychology: ಅವರಿವರ ಲಾಭಕ್ಕೆ, ನಿಮ್ಮ ಮನಸ್ಸು ಮಾರಾಟಕ್ಕೆ!
"ಒಂಟಿತನ ಮತ್ತು ನಿರುದ್ಯೋಗವು ಆರೋಗ್ಯ ಮತ್ತು ಆರ್ಥಿಕ ಸ್ಥಿತಿ ಮೇಲೆ ಗಂಭೀರ ಪರಿಣಾಮ ಬೀರುವುದನ್ನು ಗಮನದಲ್ಲಿಟ್ಟುಕೊಂಡು ಆ ಎರಡಕ್ಕೂ ಅವಕಾಶ ಕೊಡದಂತೆ ನೋಡಿಕೊಳ್ಳುವುದು ಉತ್ತಮ. ಒಂಟಿತನದ ಭಾವನೆಯಿಂದ ಮುಕ್ತವಾದರೆ ನೀವು ನಿರುದ್ಯೋಗದ ಅಪಾಯ ತಪ್ಪಿಸಬಹುದು. ಉದ್ಯೋಗದಿಂದ ಒಂಟಿತನ ಕಡಿಮೆ ಆಗುತ್ತದೆ. ಪರಿಣಾಮವಾಗಿ ಆರೋಗ್ಯ ಹಾಗೂ ಜೀವನದ ಗುಣಮಟ್ಟ ಉತ್ತಮಗೊಳ್ಳುತ್ತದೆ" ಎಂದು ಎಕ್ಸೆಟರ್ ವಿಶ್ವವಿದ್ಯಾಲಯದ ಸಂಶೋಧಕರ ತಂಡದ ಸದಸ್ಯೆ ನಿಯಾ ಮಾರಿಶ್ ಹೇಳುತ್ತಾರೆ.
ಅಂದಹಾಗೆ ಈ ಸಂಶೋಧನೆ ಮತ್ತು ಅಧ್ಯಯನವನ್ನು ಕೋವಿಡ್ ಸಾಂಕ್ರಾಮಿಕ ರೋಗ ವಕ್ಕರಿಸುವ ಮುಂಚೆ ಮಾಡಿದ್ದಂತೆ. ಈಗಿನ ಪರಿಸ್ಥಿತಿಯಲ್ಲಿ ಬಹಳ ಸಂಖ್ಯೆಯ ಜನರಿಗೆ ಹೆಚ್ಚು ಒಂಟಿತನ ಕಾಡುತ್ತಿರಬಹುದು. ಇದರ ಪರಿಣಾಮವಾಗಿ ಬಹಳ ಮಂದಿ ಉದ್ಯೋಗ ಕಳೆದುಕೊಂಡಿದ್ದಿರಲೂ ಬಹುದು ಎಂಬುದು ಈ ಸಂಶೋಧಕರ ಅನಿಸಿಕೆ.
Psychology: ಸಂತೋಷ - ಮನಸ್ಥಿತಿ- ಆದ್ಯತೆ
ಸಂಶೋಧಕರು 2017-19 ಮತ್ತು 2018-2020 ಈ ಎರಡು ಅವಧಿಯಲ್ಲಿ 15 ಸಾವಿರಕ್ಕೂ ಹೆಚ್ಚು ಜನರ ಮೇಲೆ ಅಧ್ಯಯನ ನಡೆಸಿದ್ದಾರೆ. ಪ್ರದೇಶ, ವಯಸ್ಸು, ಲಿಂಗ, ಶಿಕ್ಷಣ, ವಿವಾಹಸ್ಥಿತಿ, ಕುಟುಂಬದ ಗಾತ್ರ, ಮಕ್ಕಳು ಹೀಗೆ ವಿವಿಧ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ಅಧ್ಯಯನಕ್ಕಾಗಿ ಜನರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದು ಈ ತಂಡ ಮಾಹಿತಿ ನೀಡಿದೆ.
"ಒಂಟಿತನವು ಬಹಳ ಪ್ರಮುಖವಾದ ಸಾಮಾಜಿಕ ಸಮಸ್ಯೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಈ ಒಂಟಿತನದಿಂದ ಬಹಳ ವ್ಯಾಪಕ ಪರಿಣಾಮಗಳು ಆಗಬಹುದು. ವೈಯಕ್ತಿಕವಾಗಿ ಮತ್ತು ಆರ್ಥಿಕವಾಗಿ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು ಎಂಬುದನ್ನು ನಮ್ಮ ಅಧ್ಯಯನದ ಅಂಶಗಳ ಸೂಚಿಸುತ್ತವೆ. ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆ ಮಾಡಬೇಕಿದೆ. ಇದು ಉದ್ಯೋಗ ಒದಗಿಸುವ ಸಂಸ್ಥೆಗಳು, ನೀತಿರೂಪಕರಿಗೆ ಸಹಾಯಕವಾಗಬಹುದು. ಒಂಟಿತನದಿಂದ ಬಳಲುವ ಉದ್ಯೋಗಿಗಳನ್ನ ಗುರುತಿಸಿ ಅವರ ಕಾರ್ಯಕ್ಷತೆ ಹೆಚ್ಚಿಸಲು ಅನುಕೂಲವಾಗಬಹುದು" ಎಂದು ಸಂಶೋಧಕರಾದ ಆಂಟೋನೀಟಾ ಮೆಡೆಇನಾ-ಲಾರಾ ತಿಳಿಸುತ್ತಾರೆ.
(ಒನ್ಇಂಡಿಯಾ ಸುದ್ದಿ)