ಆ. 23 ರಿಂದ 9 ಮತ್ತು 10ನೇ ಕ್ಲಾಸ್ ಭೌತಿಕ ತರಗತಿ ಆರಂಭ ನಿಶ್ಚಿತ: ಬಿ.ಸಿ. ನಾಗೇಶ್
ಬೆಂಗಳೂರು, ಆ. 13: ಈಗಾಗಲೇ ಕೈಗೊಂಡಿರುವ ತೀರ್ಮಾನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿಗಳ ತೀರ್ಮಾನದಂತೆ ರಾಜ್ಯದಲ್ಲಿ ಆ. 23 ರಿಂದ 10 ರಿಂದ ದ್ವಿತೀಯ ಪಿಯುಸಿ ವರೆಗಿನ ಭೌತಿಕ ತರಗತಿಗಳನ್ನು ಪ್ರಾರಂಭಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಒಂದೆಡೆ ಕೊರೊನಾ ಸೋಂಕು ಏರಿಕೆ ಮತ್ತೊಂದಡೆ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿರುವ ಶಾಲೆಗಳ ಸಮಸ್ಯೆ ಕುರಿತು "ಒನ್ಇಂಡಿಯಾ ಕನ್ನಡ"ಕ್ಕೆ ಶಿಕ್ಷಣ ಸಚಿವರು ಸ್ಪಷ್ಟನೆ ನೀಡಿದರು. ರಾಜ್ಯದಲ್ಲಿ ಒಂದೂವರೆ ವರ್ಷದಿಂದ ಶಾಲೆಗಳನ್ನು ತೆರೆದಿಲ್ಲ. ಭೌತಿಕ ತರಗತಿಗಳನ್ನು ತೆರೆಯುವ ಬಗ್ಗೆ ಈಗಾಗಲೇ ಪೋಷಕರು ಹಾಗೂ ಶಿಕ್ಷಣ ತಜ್ಞರು, ಶಾಲಾ ಆಡಳಿತ ಮಂಡಳಿ ಸದಸ್ಯರು ಹಾಗೂ ಅಧಿಕಾರಿಗಳು ಒಳಗೊಂಡ ಸಮಿತಿ ವರದಿ ನೀಡಿದೆ. ಅಲ್ಲದೇ ಅನೇಕ ತಜ್ಞ ವೈದ್ಯರ ಸಮಿತಿಗಳು ನೀಡಿರುವ ವರದಿಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು.
ಇಂದೇ ಶಿಕ್ಷಣ ಇಲಾಖೆ ಆದೇಶ
ಇವತ್ತು ಅಥವಾ ನಾಳೆ ಈ ಕುರಿತು ಶಿಕ್ಷಣ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗುವುದು. ರಾಜ್ಯದಲ್ಲಿ ಮೊದಲ ಹಂತದಲ್ಲಿ ಪ್ರೌಢ ಶಿಕ್ಷಣ ಭೌತಿಕ ತರಗತಿಗಳನ್ನು ಪ್ರಾರಂಭಿಸಲಾಗುವುದು. ಹಂತ ಹಂತವಾಗಿ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಲಾಗುವುದು. ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿ ಭೌತಿಕ ತರಗತಿಗಳನ್ನು ಪ್ರಾರಂಭಿಸಲು ಸೂಚಿಸಲಾಗುವುದು, ಎಲ್ಲಾ ಶಾಲೆಗಳು ಕಡ್ಡಾಯವಾಗಿ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಬೇಕು. ಮಾಸ್ಕ್ ಧರಿಸುವ ಜತೆಗೆ ವಿದ್ಯಾರ್ಥಿಗಳನ್ನು ಸಾಮಾಜಿಕ ಅಂತರ ಕಾಪಾಡುವಂತೆ ಸೂಚಿಸಲಾಗುವುದು. ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಕಡ್ಡಾಯವಾಗಿ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸಚಿವರು ತಿಳಿಸಿದ್ದಾರೆ.
ಸೆ. 1 ರಿಂದ ಪ್ರಾಥಮಿಕ ಶಾಲೆ ಆರಂಭ
ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಬಹುತೇಕರು ಲಸಿಕೆ ತೆಗೆದುಕೊಂಡಿದ್ದಾರೆ. ಹೀಗಾಗಿ ಒಂದನೇ ತರಗತಿಯಿಂದ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳನ್ನು ಸೆ. 1ರಿಂದ ತೆರೆಯಲು ಈಗಾಗಲೇ ತೀರ್ಮಾನಿಸಿದ್ದೇವೆ. ಅದರಂತೆ ತೆಗೆಯಲು ನಿರ್ಧರಿಸಿದ್ದೇವೆ. ಮುಖ್ಯಮಂತ್ರಿಗಳ ಬಳಿ ಮತ್ತೊಂದು ಸುತ್ತು ಚರ್ಚೆ ನಡೆಸಿ ಮುಖ್ಯಮಂತ್ರಿಗಳು ಹಾಗೂ ತಜ್ಞರು ನೀಡುವ ಸಲಹೆ ಆಧಾರದ ಮೇಲೆ ಸೆ. 1 ರಿಂದ ಶಾಲೆಗಳನ್ನು ತೆರೆಯಲು ಚಿಂತನೆ ನಡೆಸಿದ್ದೇವೆ ಎಂದು ಅವರು ಹೇಳಿದರು.
ಕೊರೊನಾ ಆತಂಕ
ಕೇರಳ ಸೇರಿದಂತೆ ನೆರೆ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾತ್ತಿದೆ. ರಾಜ್ಯದಲ್ಲಿ 168 ಮಕ್ಕಳು ಕೊರೊನಾ ಸೋಂಕು ತಗುಲಿದೆ ಎಂಬ ವರದಿಗಳು ಬಂದಿವೆ. ಈ ನಡುವೆ ರಾಜ್ಯದಲ್ಲಿ ಮತ್ತೆ ಶಾಲೆಗಳನ್ನು ತೆರೆಯುವ ಬಗ್ಗೆ ಗೊಂದಲ ಏರ್ಪಟ್ಟಿದೆ. ಕೊರೊನಾ ಮೂರನೇ ಅಲೆ ತಡೆಯುವ ಸಂಬಂಧ ಸರ್ಕಾರ ನೈಟ್ ಕರ್ಫೂ ಸೇರಿದಂತೆ ಹಲವು ನಿರ್ಬಂಧಗಳನ್ನು ವಿಧಿಸಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಶಾಲೆಗಳನ್ನು ತೆರೆಯುವ ಸಂಬಂಧ ಸರ್ಕಾರ ತನ್ನ ತೀರ್ಮಾನ ಮುಂದಿನ ದಿನಗಳಲ್ಲಿ ತೀರ್ಮಾನ ಬದಲಾಗಲೂ ಬಹುದು. ಈಗಿನ ತೀರ್ಮಾನದಂತೆ ರಾಜ್ಯದಲ್ಲಿ ಸೆ. 1 ರಿಂದ ಪ್ರಾಥಮಿಕ ಶಾಲೆ ತೆರೆಯಲು ತೀರ್ಮಾನಿಸಿದ್ದೇವೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕ್ಯಾಮ್ಸ್ ಪ್ರತಿಕ್ರಿಯೆ
ರಾಜ್ಯದಲ್ಲಿ ಪ್ರೌಢ ಶಾಲೆಯ ಭೌತಿಕ ತರಗತಿಗಳನ್ನು ತೆಗೆಯುತ್ತಿರುವ ಶಿಕ್ಷಣ ಸಚಿವರ ತೀರ್ಮಾನ ಸ್ವಾಗತಾರ್ಹ. ಒಂದೂವರೆ ವರ್ಷದಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಶಾಲೆಗಳನ್ನು ತೆರೆಯುವ ಸಂಬಂಧ ತಜ್ಞರ ಸಮಿತಿ ಈಗಾಗಲೇ ವರದಿ ನೀಡಿ ಶಾಲೆ ತೆರೆಯಲು ಶಿಫಾರಸು ಮಾಡಲಾಗಿದೆ. ಡಾ. ದೇವಿಶೆಟ್ಟಿ ನೇತೃತ್ವದ ತಜ್ಞರ ತಂಡ ಕೂಡ ಶಾಲೆ ತೆರೆಯಲು ಒಲವು ತೋರಿದೆ. ಕೇವಲ ಪ್ರೌಢ ಶಾಲೆ ಅಲ್ಲದೇ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ತಿಳಿಸಿದ್ದಾರೆ.