'ನಾವಿಕ' ಕನ್ನಡ ಹಬ್ಬಕ್ಕೆ ಮುಖ್ಯ ಅತಿಥಿಯಾಗಿ ಸಿದ್ದರಾಮಯ್ಯ
ನಾರ್ತ್ ಅಮೆರಿಕ ವಿಶ್ವ ಕನ್ನಡ ಅಗರ (ನಾವಿಕ) ಕನ್ನಡ ನಾಡು-ನುಡಿ, ಸಂಸ್ಕೃತಿ, ಭಾಷೆ, ಸಾಹಿತ್ಯ, ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡು ಅದನ್ನು ಮುಂದಿನ ಪೀಳಿಗೆಗೂ ಮುಂದುವರೆಸಿಕೊಂಡು ಹೋಗುವ ಪ್ರಯತ್ನಗಳಲ್ಲಿ ನಾವಿಕ ವಿಶ್ವ ಕನ್ನಡ ಸಮಾವೇಶವೂ ಒಂದು.
ದಶಕದ ಇತಿಹಾಸವಿರುವ ನಾವಿಕ ಈಗ ಪ್ರಸ್ತುತ ನಾಲ್ಕನೆಯ ವಿಶ್ವ ಕನ್ನಡ ಸಮಾವೇಶವನ್ನು ಡಲ್ಲಾಸ್ ನಲ್ಲಿ ಆಯೋಜಿಸುತ್ತಿದೆ. ಇಲ್ಲಿಯವರೆಗೆ 3 ವಿಶ್ವ ಕನ್ನಡೋತ್ಸವವನ್ನು ಉತ್ತರ ಅಮೆರಿಕಾದಲ್ಲಿ ಹಾಗೂ 3 ಅಮೆರಿಕನ್ನಡೋತ್ಸವವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಹು ಯಶಸ್ವಿಯಾಗಿ ಆಚರಿಸಿರುವ ಈ ಸಂಸ್ಥೆ, ನಾಲ್ಕನೇ ವಿಶ್ವ ಕನ್ನಡ ಸಮಾವೇಶವನ್ನು ಸೆಪ್ಟೆಂಬರ್ 1, 2 ಮತ್ತು 3ರಂದು ಡಲ್ಲಾಸ್, ಟೆಕ್ಸಾಸ್, ಯುಎಸ್ಎ ನಲ್ಲಿ ಹಮ್ಮಿಕೊಳ್ಳುತ್ತಿದೆ. ಈಗಾಗಲೇ ಈ ಸಮಾವೇಶಕ್ಕೆ ಸಾಕಷ್ಟು ನೋಂದಣಿಗಳು ಆಗಿವೆ.
ಮೊದಲ ಬಾರಿಗೆ ಅಮೆರಿಕದಲ್ಲಿ ಜಡಭರತರ 'ಸತ್ತವರ ನೆರಳು'
ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನಾವಿಕ ಸಮಾವೇಶದ ಮುಖ್ಯ ಅತಿಥಿಯಾಗಿ ಆಗಮಿಸಲು ಒಪ್ಪಿಗೆ ನೀಡಿದ್ದಾರೆ ಹಾಗು ಮಾಹಿತಿ ತಂತ್ರಜ್ಞಾನ ಹಾಗು ಕರ್ನಾಟಕ ಪ್ರವಾಸೋದ್ಯಮ ಮಂತ್ರಿ ಪ್ರಿಯಾಂಕ್ ಎಂ. ಖರ್ಗೆ ಅವರೂ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮನು ಬಾಳಿಗಾರ್, ನಿರ್ದೇಶಕರು ಹಾಗು ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಚಲನಚಿತ್ರ ನಿರ್ದೇಶಕರಾದ ಟಿ.ಎಸ್.ನಾಗಾಭರಣ, ನಟರಾದ ಶ್ರೀನಾಥ್ ವಸಿಷ್ಠ, ಖ್ಯಾತ ನಟರಾದ 'ಮುಖ್ಯಮಂತ್ರಿ' ಚಂದ್ರು, ಹಿನ್ನೆಲೆ ಗಾಯಕರಾದ ವಿಜಯ ಪ್ರಕಾಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್, ಗಾಯಕಿಯರಾದ ಎಂ.ಡಿ ಪಲ್ಲವಿ, ರತ್ನಮಾಲಾ ಪ್ರಕಾಶ್, ಗಾಯಕ ನಟ ಸುಚೇತನ್ ರಂಗಸ್ವಾಮಿ ಭಾಗವಹಿಸುತ್ತಿದ್ದಾರೆ.
ಮಲೇಷ್ಯಾದಲ್ಲಿಯೂ ಕನ್ನಡಿಗರನ್ನು ರಂಜಿಸಿದ 'ಮುಖ್ಯಮಂತ್ರಿ'
ಸರೆಗಮಪ ವಿಜೇತರಾದ ಐಶ್ವರ್ಯ ರಂಗರಾಜನ್, ಶ್ರೀರಾಮ್ ಕಾಸರ್, ಸಿತಾರ್ ವಾದಕರಾದ ಉಸ್ತಾದ್ ರೈಈಸ್ ಬಾಲೆ ಖಾನ್, ಉಸ್ತಾದ್ ಹಫೀಜ಼್ ಬಾಲೆ ಖಾನ್, ಸಂಗೀತ ನಿರ್ದೇಶಕರಾದ ಶ್ರೀಧರ್ ವಿ. ಸಂಭ್ರಮ್, ಡ್ರಮ್ಮರ್ ಅರುಣ್ ಸುಕುಮಾರ್, ಘಟಮ್ ವಾದಕರಾದ ಘಟಮ್ ಉಡುಪ, ವೇಣು ವಾದಕರಾದ ರವಿಚಂದ್ರ ಕುಲೂರ್ ಹಾಗು ಸಮೀರ್ ರಾವ್, ತಬಲ ವಾದಕರಾದ ಆದರ್ಶ್ ಶೆಣೈ, ಕನ್ನಡ ಪಂಡಿತರು ಹಾಗು ಪುರೋಹಿತರಾದ ಹಿರೇಮಗಳೂರ್ ಕಣ್ಣನ್, ಸ್ಟ್ಯಾಂಡ್ ಅಪ್ ಹಾಸ್ಯನಟ ರಿಚರ್ಡ್ ಲೂಯಿಸ್ ಮುಂತಾದ ಕಲಾವಿದರೂ ಭಾಗವಹಿಸಲಿದ್ದಾರೆ.
ಈ ವರ್ಷದ ವಿಶೇಷ ಕಾರ್ಯಕ್ರಮಗಳಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಲಾಗಿದೆ, ಅಲ್ಲದೆ ರಾಜೇಶ್ ಕೃಷ್ಣನ್ ಅವರು ಪ್ರಥಮ ಬಾರಿಗೆ ಸೆಪ್ಟೆಂಬರ್ 3ರಂದು ಮ್ಯೂಸಿಕಲ್ ನೈಟ್ ನಲ್ಲಿ ಚಲನಚಿತ್ರ ಹಾಡುಗಳನ್ನು ಹಾಡಲಿದ್ದಾರೆ. ಇದಲ್ಲದೆ ಮತ್ತೊಂದು ವಿಶೇಷ ಎಂದರೆ, ಕರ್ನಾಟಕ ರಾಜ್ಯ ವೈದ್ಯಕೀಯ ಹಾಗು ದಂತ ಸಂಘ, ಅಮೆರಿಕ (ಕೆ.ಎಸ್.ಎಂ.ಡಿ) ಅವರೂ ನಾವಿಕ ಅವರೊಂದಿಗೆ ಜೊತೆಗೂಡಿ ಕಾರ್ಯಕ್ರಮಗಳನ್ನು ಅದೇ ವೇದಿಕೆಯಲ್ಲೇ ಡಲ್ಲಾಸ್ ನಲ್ಲಿ ಸೆಪ್ಟೆಂಬರ್ 1ರಿಂದ 3 ರ ವೆರೆಗೆ ನಡೆಸಲಿದ್ದಾರೆ.
"ಕೆ.ಎ.ಎಂ.ಡಿ ಯ ಆಜೀವ ಸದಸ್ಯರಾದ ಹಾಗು ನಾವಿಕ ಸಂಸ್ಥೆಯ ಅಧ್ಯಕ್ಷರಾದ ರೇಣುಕಾ ರಾಮಪ್ಪ ಅವರು ಈ ಜಂಟಿ ಸಮಾವೇಶಕ್ಕೆ ಸಮ್ಮತಿ ನೀಡಿದ್ದು, ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿಯನ್ನು ನಮ್ಮ ಕಾರ್ಯಕ್ರಮಗಳ ಮೂಲಕ ನಮ್ಮ ಕರುನಾಡಿಗೆ ಒಂದು ಸಣ್ಣ ಉಡುಗೊರೆಯನ್ನು ನೀಡುವ ಪ್ರಯತ್ನ ಮಾದುತ್ತಿದ್ದೇವೆ" ಎನ್ನುತ್ತಾರೆ ಶಿಕಾಗೋದಲ್ಲಿರುವ ಕಾರ್ಡಿಯಾಲಜಿ ತಜ್ಞರಾದ ಹಾಗು ಕೆ.ಎಸ್.ಎಂ.ಡಿ ಅಧ್ಯಕ್ಷರಾದ ದಾವೆಣಗಿ ಶ್ರೀಕಂಠ ಅವರು.
ಇದಲ್ಲದೆ ಪ್ರಭಾತ್ ಕಲಾವಿದರು ಪ್ರಥಮ ಬಾರಿಗೆ ನಾವಿಕದಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕದ ಇತಿಹಾಸವನ್ನು ಒಂದೂವರೆ ಘಂಟೆ ಕಾಲದ ಅವಧಿಯಲ್ಲಿ ತಮ್ಮ ನೃತ್ಯ ನಾಟಕದ (ಡ್ಯಾನ್ಸ್ ಬ್ಯಾಲೆ) ಮೂಲಕ ಪ್ರದರ್ಶಿಸಲಿರುವ ಈ ತಂಡ, ಹೋಯ್ಸಳ ಸಾಮ್ರಾಜ್ಯದ ಇತಿಹಾಸ, ಶಿಲಾಬಾಲಿಕೆ, ಭರತ ಬಾಹುಬಲಿಯ ಯುದ್ಧ, ವಿಜಯನಗರ ಸಾಮ್ರಾಜ್ಯ, ಕಿತ್ತೂರ್ ರಾಣಿ ಚೆನ್ನಮ್ಮನ ಕಥೆ, ಮೈಸೂರು ಸಂಸ್ಥಾನದ ಕಥೆ (ಅಣೆಕಟ್ಟು ಕಟ್ಟಲು ಹಣವಿಲ್ಲದಿದ್ದಾಗ ಆಗಿನ ಮೈಸೂರು ಮಹಾರಾಣಿ ತಮ್ಮ ಒಡವೆಗಳನ್ನು ಮಾರಿ ಹಣ ಒದಗಿಸಿದ್ದು), ಜನಪದ ಪ್ರದರ್ಶನಗಳು (ಪುಣ್ಯಕೋಟಿ ಕಥೆ), ಕೊನೆಯ ಭಾಗದಲ್ಲಿ ಯಕ್ಷಗಾನ, ಕನ್ನಡ ಚಲನಚಿತ್ರ ಗೀತೆಗಳು, ಕಂಸಾಲೆ, ಡೋಲು ಕುಣಿತ ಮುಂತಾದ ನೃತ್ಯ ರೂಪಗಳನ್ನು ಪ್ರದರ್ಶಿಸಲಿದ್ದಾರೆ.
ಹಾಸ್ಯೋತ್ಸವದಲ್ಲಿ ರಿಚರ್ಡ್ ಲೂಯಿಸ್ ಹಾಗು ಹಿರೇಮಗಳೂರು ಕಣ್ಣನ್ ಅವರು ತಮ್ಮ ಹಾಸ್ಯ ಮಾತುಗಳ ಮೂಲಕ ರಂಜಿಸಲಿದ್ದಾರೆ, ಖಾನ್ ಬ್ರದರ್ಸ್ ಅವರ ಸಿತಾರ್ ಸಂಜೆ, ಜಡಭರತರ 'ಸತ್ತವರ ನೆರಳು' ನಾಟಕ ಪ್ರದರ್ಶಿಸಲಾಗುತ್ತಿದೆ. ಮೂಲ ನಿರ್ದೇಶನವನ್ನು ಬಿವಿ ಕಾರಂತ್ ಮಾಡಿದ್ದರೆ, ವಲ್ಲೀಶ್ ಶಾಸ್ತ್ರಿ (ನಾವಿಕ ಟ್ರಸ್ಟೀ) ಅವರು ಅಮೆರಿಕದಲ್ಲಿ ನಿರ್ದೇಶಿಸಿದ್ದಾರೆ. ಖ್ಯಾತ ನಟರಾದ ಸುಂದರ್ ರಾಜ್ ಹಾಗು ನಿರ್ದೇಶಕ ಟಿ.ಎಸ್.ನಾಗಭರಣ ಅವರು ನಾಟಕದಲ್ಲಿ ನಟಿಸುತ್ತಿರುವುದು ವಿಶೇಷ.
ಈಗಾಗಲೇ ಹಲವು ದೇಶಗಳಲ್ಲಿ ಪ್ರದರ್ಶನಗಳನ್ನು ನೀಡಿರುವ ಪಂಡಿತ್ ಹರಿಪ್ರಸಾದ್ ಚೌರಾಸಿಯ ಅವರ ಶಿಷ್ಯರು ಹಾಗು ಕೊಳಲು ವಾದಕರಾದ ಸಮೀರ್ ರಾವ್ ಹಾಗು ಆದರ್ಶ್ ಶೆಣೈ ಅವರು ಶಾಸ್ತ್ರೀಯ ಸಂಗೀತ ಪ್ರದರ್ಶನ ನಾವಿಕ ಸಮಾವೇಶದಲ್ಲಿ ನೀಡಲಿದ್ದಾರೆ.
ಪ್ರಖ್ಯಾತ ಚಲನಚಿತ್ರ ಹಾಡುಗಳನ್ನು ಐಶ್ವರ್ಯ ರಂಗರಾಜನ್, ಶ್ರೀರಾಮ್ ಕಾಸರ್ ಹಾಗು ಸಾಯಿ ಶರನ್ ಅವರು ಹಾಡಿದರೆ, ಭಾವಗೀತೆಗಳನ್ನು ರತ್ನಮಾಲ ಪ್ರಕಾಶ್ ಅವರು ಹಾಡಲಿದ್ದಾರೆ ಹಾಗು ಶಾಸ್ತ್ರೀಯ, ಭಕ್ತಿ ಗೀತೆಗಳನ್ನು ಸುಚೇತನ್ ಅವರು ಹಾಡಲಿದ್ದಾರೆ. ಇದಲ್ಲದೆ ಸುಚೇತನ್ ಅವರು ಧ್ವನಿ ಸಂಸ್ಕರಣೆ ಕಾರ್ಯಗಾರವನ್ನು ನಡೆಸಲಿದ್ದಾರೆ.
ನಾವಿಕದಲ್ಲಿ ಸೆಪ್ಟೆಂಬರ್ 1ರಿಂದ 3ರವರೆಗೆ ನಡೆಯುವ ಕಾರ್ಯಕ್ರಮಗಳ ವಿವರ ಹೀಗಿದೆ. ಮೆರವಣಿಗೆ, ಸೌಂದರ್ಯ ಸ್ಪರ್ಧೆ (ಅಪ್ಸರೆ), ಆಟದ ಕಾರ್ಯಕ್ರಮ (ಚಾಣಕ್ಯ), ಕಲೆ (ಕಲಾ ಶಿಬಿರ), ಪ್ರತಿಭೆಯ ಪ್ರದರ್ಶನ (ನಕ್ಷತ್ರ), ಹಾಸ್ಯ (ನಾರದ), ನೃತ್ಯ (ನಟರಾಜ), ಸಂಗೀತ, ಫ್ಯಾಷನ್ (ಶೃಂಗಾರ), ನಾಟಕ (ನವರಸ).
ನಾವಿಕ ಸಮಾವೇಶದಲ್ಲಿ ಭಾಗವಹಿಸಲು ಈ ವೆಬ್ಸೈಟ್ ನಲ್ಲಿ ನೋಂದಾಯಿಸಿಕೊಳ್ಳಬಹುದು.
ನಾವಿಕದ ಕಾರ್ಯಕಾರಿ ಸಮಿತಿ ಹೀಗಿದೆ : ಅಧ್ಯಕ್ಷೆ ರೇಣುಕಾ ರಾಮಪ್ಪ, ಉಪಾಧ್ಯಕ್ಷ ಹರ್ಷ ಗೋಪಾಲ್, ಜಂಟಿ ಕಾರ್ಯದರ್ಶಿ ಗಿರಿ ನಿಂಬೆಕಾಯಿ, ಖಜಾಂಚಿ ಡಾ. ವೀಣಾ ರಾಜ್, ಸುರೇಶ್ ರಾಮಚಂದ್ರಪ್ಪ ಹಾಗು ಡಾ. ಶರಣಬಸವ ರಾಜೂರ್. ಟ್ರಸ್ಟೀಗಳಾಗಿ ವಲ್ಲೀಶ ಶಾಸ್ತ್ರಿ, ಡಾ. ಕೇಶವ ಬಾಬು, ಡಾ. ಕೃಪಾ ರಾಜೂರ್, ಡಾ. ಜಿ.ಎಂ. ರಾಮಪ್ಪ, ಎಂ. ಕೃಷ್ಣಮೂರ್ತಿ, ರವಿಶಂಕರ್ ಭೂಪ್ಲಾಪುರ್ ಹಾಗು ವಿಜಯ್ ಕೊಟ್ರಪ್ಪ. ನಿರ್ದೇಶಕರಾಗಿ ಇಂದಿರಾ ರೆಡ್ಡಿ, ವಿಜಯ ಪ್ರಕಾಶ್, ಪ್ರಕಾಶ್ ಬಾಣಾವರ, ವಾಸು ಮೂರ್ತಿ, ಸತೀಶ್ ನಂಜಪ್ಪ, ಡಾ. ಕೃಷ್ಣಮೂರ್ತಿ ಜೋಯಿಸ್, ಗುರು ಸಮಗ, ಅನು ಬೆನಕಟ್ಟಿ, ಬಸವರಾಜ ಬೆಂಕಿ, ಗುರುದತ್ತ ಲಿಂಗಶಾಸ್ತ್ರಿ, ಚಂದ್ರಶೇಖರ್, ಅರುಣ್ ಕುಮಾರ್ ಸಿ.ಎನ್.
ನಾವಿಕ ಬಗ್ಗೆ
ನಾರ್ತ್ ಅಮೇರಿಕ ವಿಶ್ವ ಕನ್ನಡ ಅಗರ (ನಾವಿಕ) ಸಂಸ್ಥೆ 2009ರಲ್ಲಿ ಸ್ಥಾಪನೆಯಾಗಿದ್ದು ಕನ್ನಡ ಸಂಸ್ಕೃತಿಯನ್ನು ತಮ್ಮ ವಿಶೇಷ ಕಾರ್ಯಕ್ರಮಗಳ ಮೂಲಕ, ಅಲ್ಲಿನ ಕನ್ನಡಿಗರಿಗೆ ಸಹಾಯ ಆಗುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.
ಪ್ರತಿ ವರ್ಷ ನಾವಿಕ ಕಲೆ, ಸಾಹಿತ್ಯ, ಸಂಗೀತ ಹಾಗು ಇತರ ಕಲೆಯ ಆಯಾಮಗಳಲ್ಲಿ ಕರ್ನಾಟಕದಲ್ಲಿರುವ ಪ್ರತಿಭಾವಂತ ಕಲಾವಿದರನ್ನು ಕರೆಸಿ ಅವರಿಗೆ ಅಲ್ಲಿ ಒಂದು ವೇದಿಕೆಯನ್ನು ಕಲ್ಪಿಸಿಕೊಡುತ್ತಾ ಕರುನಾಡಿಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಿದೆ.
ಕಲೆಗಷ್ಟೇ ಅಲ್ಲದೆ, ವಾಣಿಜ್ಯ, ಉದ್ದಿಮೆ ಮುಂತಾದ ಪ್ರಮುಖ ಕ್ಷೇತ್ರಗಳಿಗೆ ಒಂದು ವೇದಿಕೆಯನ್ನು ಸ್ಥಾಪಿಸಿಕೊಡುತ್ತದೆ. 2009ರಿಂದ ಲಾಸ್ ಏಂಜಲಿಸ್, ಬಾಸ್ಟನ್, ರಾಲೆ, ಬೆಂಗಳೂರು (ಭಾರತ) ಮುಂತಾದ ಸ್ಥಳಗಳಲ್ಲಿ ನಾವಿಕ ಸಮ್ಮೇಳನ ಮಾಡಿರುವ ಈ ಸಂಘ ಈ ಬಾರಿ ಟೆಕ್ಸಸ್ ನ ಡಲ್ಲಾಸ್ ನಲ್ಲಿ ಉತ್ಸವ ಹಮ್ಮಿಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ dallas.navika.org ವೆಬ್ಸೈಟ್ ಗೆ ಭೇಟಿ ಕೊಡಿ.