ನಾವಿಕ ಸಮ್ಮೇಳನ : ಆಗಸ್ಟ್ 31ಕ್ಕೆ ವಿಶೇಷ ಕೊಡುಗೆ ಅಂತ್ಯ
ಬೆಂಗಳೂರು, ಆಗಸ್ಟ್ 27 : ಕನ್ನಡಿಗರ ಸಂಗಮ, ಕನ್ನಡದ ಸಂಭ್ರಮ, ಕರುನಾಡ ಕಲಾ ಸಂಸ್ಕೃತಿಗಳ ಸಮಾಗಮಕ್ಕೆ ಅಮೆರಿಕದ ಉತ್ತರ ಕೆರೊಲಿನಾದಲ್ಲಿರುವ ರಾಲೆ ನಗರ ಸಜ್ಜಾಗಿದೆ. ನಾವಿಕ (ನಾರ್ತ್ ಅಮೆರಿಕ ವಿಶ್ವಕ ಕನ್ನಡಿಗರ ಆಗರ) ಸಂಸ್ಥೆಯ ಮೂರನೇ ದ್ವೈವಾರ್ಷಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ.
ಹಚ್ಚ ಹಸಿರಿನ ನಿಸರ್ಗ ಸೌಂದರ್ಯದ ಬೀಡು, ಸಂಶೋಧನಾ ತ್ರಿಭುಜ (Research Triangle) ಕೇಂದ್ರಬಿಂದುವಾದ ರಾಲೆ (Raleigh) ನಗರದಲ್ಲಿ - ಸಂಪಿಗೆ, Triad ಕನ್ನಡ ಕೂಟ ಮತ್ತು ಕೆರೊಲಿನಾ ಕನ್ನಡ ಬಳಗದ ಸಂಗಮದಲ್ಲಿ 2015ರ ಸೆಪ್ಟೆಂಬರ್ 4ರಿಂದ 6ರವರೆಗೆ ಕನ್ನಡ ಸಂಸ್ಕೃತಿ ಅನಾವರಣಗೊಳ್ಳಲಿದೆ.
ಸಮ್ಮೇಳನಕ್ಕೆ ಸುಮಾರು ಮೂರು ಸಾವಿರ ಕನ್ನಡಿಗರು ವಿಶ್ವದ ಎಲ್ಲೆಡೆಯಿಂದ ಬರುವ ನಿರೀಕ್ಷೆಯಿದ್ದು, ನೋಂದಾವಣಿ ಭರದಿಂದ ಸಾಗಿದೆ. ನೋಂದಾವಣಿ ಮಾಡಿಸಿರದಿದ್ದರೆ ತ್ವರೆ ಮಾಡಿ. ವಿಶೇಷ ಕೊಡುಗೆ ಆಗಸ್ಟ್ 31ರವರೆಗೆ ಮಾತ್ರ ದಕ್ಕಲಿದ್ದು, ನಂತರ ಸಾಮಾನ್ಯ ದರಗಳು ಅನ್ವಯವಾಗಲಿವೆ ಎಂದು ಆಯೋಜಕರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ. [ಕೆರೊಲಿನ ನಾವಿಕ ಕನ್ನಡ ಸಮ್ಮೇಳನಕ್ಕೆ ದಾರಿ ಯಾವುದಯ್ಯ?]
ವಿಶೇಷ ಕೊಡುಗೆಯೇನೆಂದರೆ, ವಯಸ್ಕರಿಗೆ ಕೇವಲ 200 ಡಾಲರ್ ಮತ್ತು ಮಕ್ಕಳಿಗೆ ಕೇವಲ 125 ಡಾಲರ್. ಇದು ಪುಷ್ಕಳವಾದ ಭೋಜನ, ಮನರಂಜನೆ, ಸೋಷಿಯಲ್ ಫೋರಂಗಳಿಗೆ ಪ್ರವೇಶ ಒಳಗೊಂಡಿರುತ್ತದೆ. ಕೇವಲ ಕೆಲವೇ ಟಿಕೆಟ್ ಗಳು ಮಾತ್ರ ಲಭ್ಯವಿದ್ದು, ಆಸಕ್ತರು ಶೀಘ್ರವಾಗಿ ನೋಂದಣಿ ಮಾಡಿಸಬಹುದು. ಇದನ್ನು ಮಿಸ್ ಮಾಡಿಕೊಂಡರೆ, 250 ಡಾಲರ್ ತೆತ್ತಬೇಕಾಗುತ್ತದೆ.
ಮತ್ತೊಂದು ಸಂತಸದ ಸಂಗತಿಯೆಂದರೆ, ಮೂರು ದಿನಗಳ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾಧ್ಯವಿಲ್ಲದಿದ್ದರೆ ಒಂದು ದಿನದ ಟಿಕೆಟ್ ಮಾತ್ರ ಖರೀದಿಸಿ, ಕನ್ನಡ ಸಂಸ್ಕೃತಿಯಲ್ಲಿ ಸಮಾಗಮಿಸಿ, ಕನ್ನಡಿಗರೊಂದಿಗೆ ಸಂಭ್ರಮಿಸಬಹುದಾಗಿದೆ. ರಿಜಿಸ್ಟರ್ ಮಾಡಿಸಿಕೊಳ್ಳಲು ಬಾಗಿಲು ತೆರೆಯಲಾಗಿದ್ದು, 125 ಡಾಲರ್ ಕೊಟ್ಟು ಸಮ್ಮೇಳನದ ಆನಂದ ಅನುಭವಿಸಬಹುದು.
ಈ ಸಮ್ಮೇಳನವನ್ನು ತಪ್ಪಿಸಿಕೊಳ್ಳದಿರಲು ಹಲವಾರು ಕಾರಣಗಳು ಕೂಡ ಇವೆ. ಉಪ್ಪಿ 2 ಚಿತ್ರ ನಿರ್ದೇಶಿಸಿ ಕರ್ನಾಟಕದಲ್ಲಿ ಸಂಚಲನವೆಬ್ಬಿಸಿರುವ ರಿಯಲ್ ಸ್ಟಾರ್ ಉಪೇಂದ್ರ, ಮಿಸ್ಟರ್ ಅಂಡ್ ಮಿಸಸ್ ಬ್ರಹ್ಮಚಾರಿಯ ಪ್ರಣಯ ಪಕ್ಷಿಗಳಾದ ಯಶ್ ಮತ್ತು ರಾಧಿಕಾ, ಪ್ರಣಯರಾಜ ಶ್ರೀನಾಥ್, ಶತಾವಧಾನಿ ಗಣೇಶ್, ಕಾಮಿಡಿಗೆ ಮೈಸೂರು ಆನಂದ್, ಸಿಹಿಕಹಿ ಚಂದ್ರು ಮುಂತಾದವರು ಭಾಗಿಯಾಗುತ್ತಿರುವುದು. [ಎಲ್ಲಾರೂ ಒಟ್ಟಾಗಿ ಸೇರಿ ಕನ್ನಡದ ದೀಪವನ್ನು ಹಚ್ಚೋಣ]