ಕಡಲಾಚೆ ಲೇಖಕರಿಗೆ ಎಸ್ಎಲ್ ಭೈರಪ್ಪ ಕಿವಿಮಾತು
ಸ್ಯಾನ್ ಹೋಸೆ, ಆ. 30 : "ಮಾತೃ ಭಾಷೆ ಬಳಸುವವರ ನಡುವೆ ಬದುಕುವ ಲೇಖಕ ತಾನೂ ಬೆಳೆಯುತ್ತಾನೆ, ಭಾಷೆಯನ್ನೂ ಬೆಳೆಸುತ್ತಾನೆ. ಸಂತೆಗಳಲ್ಲಿ, ಜಾತ್ರೆಗಳಲ್ಲಿ ಕಿವಿಗೆ ಬೀಳುವ ಶಬ್ದಗಳು, ಬರಹಗಾರನ ಭಾಷಾ ಸಂಪತ್ತನ್ನು ವೃದ್ಧಿಸುತ್ತದೆ ಮತ್ತು ಹದವಾಗಿಸುತ್ತದೆ, ಸತ್ವಯುತ ಬರವಣಿಗೆಗೆ ಇದೇ ದಾರಿ".
ಅಮೆರಿಕಾದಲ್ಲಿ ಶುಕ್ರವಾರ ಆರಂಭವಾದ ಮೂರು ದಿನಗಳ ಅಕ್ಕವಿಶ್ವ ಕನ್ನಡ ಸಮ್ಮೇಳನದ ಸಾಹಿತ್ಯ ಸಮಾರಂಭದಲ್ಲಿ ಹೀಗೆ ಹೇಳಿದವರು ಸಾಹಿತಿ ಡಾ. ಎಸ್ ಎಲ್ ಭೈರಪ್ಪ. ಬೇ ಏರಿಯಾದ ಸಾಹಿತ್ಯ ವೇದಿಕೆ ಸಂಪಾದಿಸಿರುವ ಕಥಾ ಸಂಭ್ರಮ ಮತ್ತು ಹರಟೆಕಟ್ಟೆ ಕೃತಿಗಳನ್ನು - ಮಲ್ಲಿಗೆ ಸಭಾಂಗಣದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
ಕಳೆದ ಒಂದು ವರ್ಷದಲ್ಲಿ ಬಿಡುಗಡೆಯಾಗಿರುವ ಅಮೆರಿಕನ್ನಡಿಗರು ರಚಿಸಿದ ಇತರ ಕೃತಿಗಳನ್ನೂ ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಿದ ನಂತರ 'ಕಡಲಾಚೆಯ ಕನ್ನಡ ಲೇಖಕರು ಎದುರಿಸುವ ಸಮಸ್ಯೆಗಳು' ವಿಷಯ ಕುರಿತು ಭೈರಪ್ಪ ಅವರು ದೀರ್ಘ ಭಾಷಣ ಮಾಡಿದರು.
ಅಹಮದಾಬಾದ್, ದೆಹಲಿ ಸೇರಿದಂತೆ 12 ವರ್ಷಗಳ ಕಾಲ ಉತ್ತರ ಭಾರತದ ಹಿಂದಿ ಪರಿಸರದಲ್ಲಿ ನೌಕರಿ ಮಾಡಿಕೊಂಡಿದ್ದಾಗ ತಾವು ಅನುಭವಿಸಿದ ಭಾಷಾ ಸಂಕಟಗಳನ್ನು ನೆನೆದರು. ಅಲ್ಲಿಂದ ಮೈಸೂರಿಗೆ ವರ್ಗವಾಗಿ ಬಂದನಂತರ 'ಕನ್ನಡ ಭಾಷೆಯ ಜತೆಗೆ ಪುನಃ ಒಗ್ಗಿಕೊಂಡ' ದಿನಗಳನ್ನು ಮೆಲಕು ಹಾಕಿದರು. ಆನಂತರ ಬಂದದ್ದು ದಾಟು, ಪರ್ವ ಮುಂತಾದ ಕೃತಿಗಳು ಎಂದರು ಭೈರಪ್ಪ. ಮೊದಲನೆ ತಲೆಮಾರಿನವರು ಕನ್ನಡದಲ್ಲಿ ಬರೆಯಬೇಕು, ಎರಡನೇ ತಲೆಮಾರಿನವರು ಅವರ ಇಷ್ಟಬಂದ ಹಾಗೆ ಬರೆಯಬಹುದು ಎಂದ್ರು.
ಅಮೆರಿಕದಲ್ಲಿ ಕನ್ನಡ ಭಾಷಿಕ ಸಮುದಾಯವನ್ನು 2 ವರ್ಷಕ್ಕೊಮ್ಮೆ ನಡೆಯುವ ಸಮ್ಮೇಳನಗಳ ಮೂಲಕ ಒಂದೆಡೆ ಕಲೆಹಾಕುವ ಮೂಲಕ ಭಾಷಾ ಪ್ರಜ್ಞೆಯನ್ನು ಜೀವಂತವಾಗಿರುತ್ತಿರುವ ಅಕ್ಕ ಸಂಸ್ಥೆಯ ಕನ್ನಡ ಕಾಯಕವನ್ನು ಭೈರಪ್ಪ ಪ್ರಶಂಶಿಸಿದರು. [ಎಸ್ಎಲ್ ಭೈರಪ್ಪ ಕಿರುಪರಿಚಯ]
ವಿದೇಶಗಳಲ್ಲಿ ಬದುಕು ಸಾಗಿಸುತ್ತಿರುವ ಕನ್ನಡ ಬರಹಗಾರರ ಸಾಹಿತ್ಯ ವ್ಯವಸಾಯದ ವಿಶ್ಲೇಷಣೆ ಮಾಡಿದ ಅವರು, ಬಾಲ್ಯಜೀವನದ ಅನುಭವ ಮತ್ತು ಹೊಸ ಪರಿಸರದ ಅನುಭವಗಳನ್ನು ಹೋಲಿಕೆ ಮಾಡಿ ಬರೆಯುವುದು ಸಾಕೆನಿಸುತ್ತದೆ. ಇದು ಮೊನಾಟನಿಯನ್ನು ಸೃಷ್ಟಿಸಿದೆ. ಆದ್ದರಿಂದ ನಮ್ಮ ಲೇಖಕರು ಹೊಸ ಟಾಪಿಕ್ಕುಗಳನ್ನು ಅರಸಬೇಕು ಎಂದು ಸಲಹೆ ಮಾಡಿದರು.
ಮದುವೆ ಸಮಾರಂಭಗಳ ರೀತಿಯಲ್ಲಿ ಕನ್ನಡ ಸಮ್ಮೇಳನಗಳು ಸೋಷಿಯಲ್ ಗ್ಯಾದರಿಂಗ್ ಆಗಿವೆ, ನಿಜ. ಆದರೆ ಬಾಂಧವ್ಯ ವೃದ್ಧಿಗೆ ಇಂಥ ಸಮ್ಮೇಳನಗಳು ತೀರ ಅಗತ್ಯ ಎಂದು ಬಣ್ಣಿಸಿದರು ಭೈರಪ್ಪ, ಅಮೆರಿಕಾದ ವಿವಿಧ ರಾಜ್ಯಗಳಲ್ಲಿ ಕನ್ನಡ ಕೂಟಗಳು ಇವೆ. ಆ ಕೂಟಗಳು ತಮ್ಮ ನಿಲಯದ ಬರಹಗಾರರನ್ನು ಪ್ರೋತ್ಸಾಹಿಸಬೇಕೆಂದು ಕರೆ ನೀಡಿದರು.
ಅಷ್ಟೇ ಅಲ್ಲ, ವಿದೇಶಿ ಕನ್ನಡಿಗರ ಬರಹಗಳನ್ನು ತವರಿನ ಕನ್ನಡ ಪತ್ರಿಕೆಗಳು ಗುರುತಿಸಬೇಕು ಮತ್ತು ಪ್ರೋತ್ಸಾಹಿಸಬೇಕು ಎಂದು ಕಿವಿಮಾತು ಹೇಳಿದರು. ಸಾಹಿತ್ಯ ವೇದಿಕೆಯ ಅಧ್ಯಕ್ಷ ವಿಶ್ವನಾಥ್ ಹುಲಿಕಲ್ ಕಾರ್ಯಕ್ರಮ ನಿರೂಪಿಸಿದರು.