ಕ್ಯಾನ್ಸರ್ ಪತ್ತೆಗೆ 'ಅಕ್ಕ'ನಿಂದ ಮೊಬೈಲ್ ಮ್ಯಾಮೋಗ್ರಫಿ ಬಸ್ ಕೊಡುಗೆ
ಆಗಸ್ಟ್ 31ರಿಂದ ಸೆಪ್ಟೆಂಬರ್ 2ರವರೆಗೆ ಡಲ್ಲಾಸ್ ನಲ್ಲಿ ನಡೆಯಲಿರುವ 10ನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನದ ತಯಾರಿಯಲ್ಲಿ ತೊಡಗಿರುವಾಗಲೇ, ಒಂದು ವಿಶಿಷ್ಟವಾದ ಸಾಮಾಜಿಕ ಕಳಕಳಿಯ ಕಾರ್ಯಕ್ರಮಕ್ಕೆ ಅಕ್ಕ ಸಂಸ್ಥೆ ಬೆಂಗಳೂರಿನಲ್ಲಿ ಭಾನುವಾರ ಚಾಲನೆ ನೀಡಿದೆ.
ಸ್ತನ ಕ್ಯಾನ್ಸರ್ ಅನ್ನು ಆರಂಭದ ಹಂತದಲ್ಲಿಯೇ ಪತ್ತೆ ಮಾಡಲು ಅನುಕೂಲವಾಗುವಂಥ ಮೊಬೈಲ್ ಮ್ಯಾಮೋಗ್ರಫಿ ಬಸ್ಸನ್ನು ಕರ್ನಾಟಕ ಸರಕಾರಕ್ಕೆ ಕಾಣಿಕೆಯಾಗಿ ನೀಡಿದ್ದು, ಕ್ಯಾನ್ಸರ್ ಕುರಿತಂತೆ ಜಾಗೃತಿ ಮೂಡಿಸಲು ವಾಕಥಾನ್ ಕೂಡ ಏರ್ಪಡಿಸಿತ್ತು.
ಅಕ್ಕ ಸಂಸ್ಥೆಗೆ ನೂತನ ಪದಾಧಿಕಾರಿಗಳ ಆಯ್ಕೆ, ಕೀಲಾರ ಅಧ್ಯಕ್ಷ
ಈ ಕಾರ್ಯಕ್ರಮದಲ್ಲಿ ಅಕ್ಕ ಸಮ್ಮೇಳನದ ಅಧ್ಯಕ್ಷತೆ ವಹಿಸಿರುವ ಶಿವಮೂರ್ತಿ ಕೀಲಾರ ಮತ್ತಿತರ ಪದಾಧಿಕಾರಿಗಳು ಭಾಗವಹಿಸಿದ್ದರು. ನಮ್ಮ ಆಶಯ ಜನರನ್ನು ತಲುಪುವಲ್ಲಿ ಯಶಸ್ವಿಯಾದರೆ, ಒಂದೇಕೆ ನೂರು ಮೊಬೈಲ್ ಮ್ಯಾಮೋಗ್ರಫಿ ಬಸ್ಸನ್ನು ನೀಡಲು ಸಿದ್ಧ ಎಂದು ಕೀಲಾರ ಅವರು ತಿಳಿಸಿದರು.
ಕಬ್ಬನ್ ಪಾರ್ಕಿನಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕನ್ನಡ ಚಲನಚಿತ್ರ ನಟನಟಿಯರ ದಂಡೇ ಹರಿದುಬಂದಿತ್ತು. ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್, ಬಿಗ್ ಬಾಸ್ ವಿಜಯಿ ಪ್ರಥಮ್, ವಿಕ್ರಂ ಸೂರಿ ನೃತ್ಯ ದಂಪತಿಗಳು ಭಾಗವಹಿಸಿ ಅಕ್ಕನ ಈ ಕಳಕಳಿಗೆ ಶುಭ ಕೋರಿದರು.
ಹಳ್ಳಿಗಳಲ್ಲಿ ಮತ್ತು ತಾಲೂಕು ಕೇಂದ್ರಗಳಲ್ಲಿ ಇಂಥ ಕಾರ್ಯಕ್ರಮಗಳಿಂದ ಅನುಕೂಲವಾಗಬೇಕು. ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡಲಾಗದಿದ್ದರೂ ಅವರಿಗೆ ನೈತಿಕ ಬೆಂಬಲ ನೀಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಸಂಚಾರಿ ವಿಜಯ್ ಅವರು ಎರಡು ಮಾತುಗಳನ್ನಾಡಿದರು.
ಅಮೆರಿಕದ 'ಅಕ್ಕ' ನವರ ಅಕ್ಕರೆಗೆ ಮನಸೋತ ಅಂಬರೀಷ
ಈ ನಡುವೆ, ಎರಡು ವರ್ಷಗಳಿಗೊಮ್ಮೆ ನಡೆಯುವ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಭರ್ಜರಿ ತಯಾರಿ ನಡೆದಿದೆ. ಡಲ್ಲಾಸ್ ನಲ್ಲಿರುವ ಶೆರಾಟನ್ ಕನ್ವೆನ್ಷನ್ ಸೆಂಟರ್ ನಲ್ಲಿ ಮೂರು ದಿನಗಳ ಕನ್ನಡೋತ್ಸವ ಜರುಗಲಿದ್ದು, ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಭಾಗವಹಿಸುವ ನಿರೀಕ್ಷೆಯಿದೆ.
ಅತಿಥಿಗಳ ಪಟ್ಟಿ ದೊಡ್ಡದು : 'ಭಾರತ ರತ್ನ' ಖ್ಯಾತ ವಿಜ್ಞಾನಿ ಪ್ರೊ. ಸಿಎನ್ಆರ್ ರಾವ್, ಮೈಸೂರು ಮಹಾರಾಜರ ಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ವೊಡೆಯರ್, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೆಂದ್ರ ಹೆಗ್ಗಡೆ ಮುಂತಾದ ಗಣ್ಯರು ಅಮೆರಿಕದ ಈ ಕನ್ನಡದ ಹಬ್ಬಕ್ಕೆ ಮೆರುಗು ತರಲಿದ್ದಾರೆ.
ಕನ್ನಡ ಚಿತ್ರರಂಗದಿಂದ : ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಉಪೇಂದ್ರ ಮತ್ತು ಪ್ರಿಯಾಂಕಾ, ಮುಂಗಾರು ಮಳೆಯ ಸಂಗೀತ ಮಾಂತ್ರಿಕ ಮನೋಮೂರ್ತಿ, ಕನ್ನಡದ ಜಾನಪದ ಮತ್ತು ರಾಕ್ ಹಾಡುಗಾರ ನವೀನ್ ಸಜ್ಜು, ಪ್ರಣಯರಾಜ ಶ್ರೀನಾಥ್, ಕಿರಿಕ್ ಪಾರ್ಟಿಯ ಜೋಡಿ ಮತ್ತು ನಿಜಜೀವನದಲ್ಲೂ ಜೋಡಿಯಾಗಲಿರುವ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಮುಂತಾದವರು ಅಮೆರಿಕನ್ನಡಿಗರನ್ನು ರಂಜಿಸಲು ಡಲ್ಲಾಸ್ ವಿಮಾನವೇರಲಿದ್ದಾರೆ.
ಜೊತೆಗೆ ಹತ್ತುಹಲವು ಮನರಂಜನಾ ಕಾರ್ಯಕ್ರಮಗಳು, ಫಿಲ್ಮ್ ಫೆಸ್ಟಿವಲ್, ಅಧ್ಯಾತ್ಮಿಕ ಕಾರ್ಯಕ್ರಮ, ಮಹಿಳಾ ವೇದಿಕೆ, ವಧು ವರಾನ್ವೇಷಣಾ ಕಾರ್ಯಕ್ರಮ, ಶ್ರೀನಾಥ್ ಅವರಿಂದ ಆದರ್ಶ ದಂಪತಿಗಳು, ಸಾಹಿತ್ಯ ಗೋಷ್ಠಿಗಳು, ಕ್ರೀಡೆ, ಆರೋಗ್ಯ ಮತ್ತು ಫಿಟ್ನೆಸ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮೊದಲ ಭಾರತೀಯ ಅಮೆರಿಕ ಎಫ್ಬಿಐ ಏಜೆಂಟ್, ಟಿವಿ ಕಾಮೆಂಟೇಟರ್, ಯೇಲ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರೊಫೆರಸ್ ಆಗಿರುವ ಆಶಾ ರಂಗಪ್ಪ ಅವರು ತಮ್ಮ ಅನುಭವಗಳನ್ನು ವಿಶ್ವ ಕನ್ನಡಿಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಕನ್ನಡ ಉತ್ಸವದಲ್ಲಿ ಭಾಗವಹಿಸುವವರಿಗೆ ಇದೊಂದು ವಿಶಿಷ್ಟ ಅನುಭವ ನೀಡಲಿದೆ.
ನೋಂದಣಿ : ವಿಶೇಷ ಕೊಡುಗೆಯ ನೋಂದಣಿಯ ದಿನಾಂಕ ಜುಲೈ 15ಕ್ಕೆ ಮುಗಿದಿದ್ದು, ರೆಗ್ಯುಲರ್ ಶುಲ್ಕ ನೀಡಿ ಭಾಗವಹಿಸುವವರು ನೋಂದಾಯಿಸಿಕೊಳ್ಳಬಹುದು. ಜೊತೆಗೆ ದಾನಿಗಳ ಪ್ಯಾಕೇಜ್ ಗಳು ಕೂಡ ಲಭ್ಯವಿವೆ.