ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ ಸಮ್ಮೇಳನ : ಅನುಭಾವಿಗಳೊಂದಿಗೆ ಆಧ್ಯಾತ್ಮದ ಅನ್ವೇಷಣೆ

By ಸಂದರ್ಶನ : ದಾಶರಥಿ ಘಟ್ಟು
|
Google Oneindia Kannada News

ಎರಡು ವರ್ಷಗಳಿಗೊಮ್ಮೆ ಅಮೆರಿಕದಲ್ಲಿ ನಡೆಯುವ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನಕ್ಕೆ ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಸೆಪ್ಟೆಂಬರ್ 2ರಿಂದ ನ್ಯೂ ಜೆರ್ಸಿಯ ಸುಂದರಿ ನಗರಿ ಅಟ್ಲಾಂಟಿಕ್ ಸಿಟಿಯಲ್ಲಿ ಕನ್ನಡದ ಜಾತ್ರೆ ಭರ್ಜರಿಯಾಗಿ ಆರಂಭವಾಗಲಿದೆ.

ಮೂರು ದಿನಗಳಲ್ಲಿ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕನ್ನಡ ಪ್ರೇಮಿಗಳಿಗೆ ರಸದೌತಣ ಬಡಿಸಲಿದೆ. ಈ ಸಮ್ಮೇಳನಕ್ಕೆ ಆಧ್ಯಾತ್ಮದ ಸ್ಪರ್ಶವೂ ಸಿಗಲಿದೆ. ಆಧ್ಯಾತ್ಮಲೋಕದ ಅನೇಕ ದಿಗ್ಗಜರನ್ನು ಆಹ್ವಾನಿಸಲಾಗಿದ್ದು, ಮೌಲ್ಯಯುತವಾದ ಕಾರ್ಯಕ್ರಮಗಳನ್ನು ಅವರು ನಡೆಸಿಕೊಡಲಿದ್ದಾರೆ.

ಯುವಜನಾಂಗ ಸೇರಿದಂತೆ ಎಲ್ಲ ವಯೋಮಾನದವರನ್ನು ಸೆಳೆಯಲಿರುವ ಆಧ್ಯಾತ್ಮಿಕ ಕಾರ್ಯಕ್ರಮಗಳ ಕುರಿತು ಸಮಿತಿಯ ಮುಖ್ಯಸ್ಥರಾದ ಜ್ಯೋತಿಶ್ರೀ ಹೊನ್ನವಳ್ಳಿಯವರು ತಮ್ಮ ಅನಿಸಿಕೆಗಳನ್ನು ದಾಶರಥಿ ಘಟ್ಟು ಅವರೊಂದಿಗೆ ಹಂಚಿಕೊಂಡಿದ್ದಾರೆ.

ದಾಶರಥಿ ಘಟ್ಟು : ನಮಸ್ಕಾರ, ಸ್ಪಿರಿಚುಯಾಲಿಟಿ ಎಂದರೆ ನಿವೃತ್ತರು, ವಯಸ್ಸಾದವರು ಆಸಕ್ತಿ ವಹಿಸುವ ಕ್ಷೇತ್ರ ಎಂಬ ಭಾವನೆ ಬಹಳಷ್ಟು ಜನರಲ್ಲಿದೆ. ಸ್ಪಿರಿಚುಯಾಲಿಟಿ ಕಾರ್ಯಕ್ರಮಗಳು ವಿಶ್ವ ಕನ್ನಡ ಸಮ್ಮೇಳನದಲ್ಲಿ ಹೇಗೆ ಪ್ರಸ್ತುತ ಎಂಬುದನ್ನು ವಿವರಿಸುತ್ತೀರಾ? [ಅಕ್ಕ ಚಲನಚಿತ್ರೋತ್ಸವ ಸಮಿತಿ ಮುಖ್ಯಸ್ಥ ಮಲ್ಲಿಕ್ ಮಾತು]

AKKA conference : Spiritual committee - Jyothi Honnavalli interview

ಜ್ಯೋತಿ ಹೊನ್ನವಳ್ಳಿ : ನಮಸ್ಕಾರ ದಾಶರಥಿಯವರೇ. ಸ್ಪಿರಿಚುಯಾಲಿಟಿ ಯಾವುದೋ ಒಂದು ವಯಸ್ಸಿನವರಿಗೆ ಅಥವಾ ಜೀವನದ ಕಾಲಘಟ್ಟಕ್ಕೆ ಪ್ರಸ್ತುತ ಎಂಬುದೇ ತಪ್ಪು ಕಲ್ಪನೆ. ನಮ್ಮ ಎಲ್ಲರ ಜೀವನಕ್ಕೆ 'ಸ್ಪಿರಿಟ್' ಅಥವಾ ಚೈತನ್ಯದ ಅಗತ್ಯವಿರುವುದನ್ನು ನೀವು ಒಪ್ಪುತ್ತೀರಲ್ಲವೇ? ಬದುಕಿಗೆ ಸರಿಯಾದ ರೀತಿಯ ಸ್ಪಿರಿಟ್ ಬೇಕಾದವರೆಲ್ಲರಿಗೂ ಸ್ಪಿರಿಚುಯಾಲಿಟಿಯ ಅಗತ್ಯ ಇದ್ದೇ ಇದೆ.

ಹಾಗೆ ನೋಡಿದರೆ ಒಂದು ಜನಾಂಗದ ಸಂಸ್ಕೃತಿಯೇ spirituality ಅಥವಾ ಆಧ್ಯಾತ್ಮದ ತಳಹದಿಯ ಮೇಲೇ ಬೆಳೆದಿರುವುದನ್ನು ನೋಡುತ್ತೇವೆ. ಉದಾಹರಣೆಗೆ ಕನ್ನಡ ಸಂಸ್ಕೃತಿಯನ್ನೇ ನೋಡಿ. ನಾವು ಆಚರಿಸುವ ಹಬ್ಬ ಹರಿದಿನಗಳು, ಹಾಡುವ ದಾಸರ ಪದಗಳು ಮತ್ತು ವಚನಗಳು, ಓದುವ ವಚನ ಸಾಹಿತ್ಯ ಮತ್ತು ಮಹಾಭಾರತದಂತಹ ಅಮರ ಕೃತಿಗಳು, ಜಾನಪದ ಗೀತೆಗಳು, ಮಲೆಮಾದೇಶ್ವರನನ್ನು ಆರಾಧಿಸುವ ಕಂಸಾಳೆ ಪದಗಳು-ಎಲ್ಲದರ ಮೂಲಧಾತು ಸ್ಪಿರಿಚುಯಾಲಿಟಿಯೇ ಅಲ್ಲವೇ? ನಾನು ನೋಡಿದಂತೆ ನಮ್ಮ ಯುವಜನಾಂಗವನ್ನೂ ಸೇರಿ ಎಲ್ಲಾ ವಯಸ್ಸಿನವರೂ ಯೋಗ ಮತ್ತು ಧ್ಯಾನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವೂ spirituality ಅಂಗಗಳೇ!

ದಾಶರಥಿ ಘಟ್ಟು : ಧನ್ಯವಾದಗಳು ಜ್ಯೋತಿಯವರೇ, Spirituality ಸಮಿತಿಯು ಆಯೋಜಿಸಿರುವ ಕಾರ್ಯಕ್ರಮಗಳ ಕಿರು ಪರಿಚಯ ಮಾಡಿಕೊಡುತ್ತೀರಾ? [ಅಕ್ಕ ಸಮ್ಮೇಳನದ ಸೂತ್ರಧಾರಿ ಶರತ್ ಭಂಡಾರಿ ಸಂದರ್ಶನ]

ಜ್ಯೋತಿ ಹೊನ್ನವಳ್ಳಿ : ಅವಶ್ಯವಾಗಿ ಮಾಡಿಕೊಡುತ್ತೇನೆ. spirituality ಸಮಿತಿಯಿಂದ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಈ ಸಲದ ಸಮ್ಮೇಳನದಲ್ಲಿ ಆಯೋಜಿಸಿದ್ದೇವೆ. ಇವುಗಳನ್ನು ಆಧ್ಯಾತ್ಮಲೋಕದ ಪ್ರಸಿದ್ಧ ಸಾಧಕರು ನಡಿಸಿಕೊಡುತ್ತಿದ್ದಾರೆ. ಕಾರ್ಯಕ್ರಮದ ಪಟ್ಟಿ ಹೀಗಿದೆ:

AKKA conference : Spiritual committee - Jyothi Honnavalli interview

ಆಗಸ್ಟ್ 2, ಶುಕ್ರವಾರ :
ಪ್ಯೂರ್ ಪ್ರೇಯರ್ಸ್ ಅಂಡ್ ಸೈಕಲ್ ಅಗರಬತ್ತಿ ಉದ್ಯೋಗ ಸಮೂಹದವರ ಆಯೋಜನೆಯೊಂದಿಗೆ ಅಮೇರಿಕಾ ಮತ್ತು ಕೆನಡಾದ ನಿವಾಸಿಗಳಿಗಾಗಿ 'ಶ್ಲೋಕ ಹೇಳುವ ಸ್ಪರ್ಧೆ'. 4 ರಿಂದ 18 ವರ್ಷದ ಮಕ್ಕಳು ಇದರಲ್ಲಿ ಭಾಗವಹಿಸಬಹುದು.

ಆಗಸ್ಟ್ 3, ಶನಿವಾರ :
ತಮಸೋಮಾ ಜ್ಯೋತಿರ್ಗಮಯ : ಶ್ರೀ ಜಯೇಂದ್ರ ಪುರಿ ಮಹಾ ಸ್ವಾಮೀಜಿಗಳಿಂದ ಸಂತೃಪ್ತ ಜೀವನಕ್ಕಾಗಿ ಮಾರ್ಗದರ್ಶನ.
ಅಕ್ಕ ಸಾತ್ವಿಕ ಸಮಯ : ಶ್ರೀ ಶ್ರೀ ರವಿಶಂಕರ್ ಅವರ ಸನ್ನಿಧಿಯಲ್ಲಿ ಸಾತ್ವಿಕ ಸಮಯ - ಗಾನ, ಜ್ಞಾನ, ಧ್ಯಾನ, ಮತ್ತು ಆಶೀರ್ವಚನ.

ಆಗಸ್ಟ್ 4, ಭಾನುವಾರ :
ಆವೆ ಮಣ್ಣಿನಿಂದ ಗಣೇಶ ಮಾಡುವ ಕಾರ್ಯಾಗಾರ ಮತ್ತು ಸಾಮೂಹಿಕ ಗೌರಿ ಗಣೇಶ ಪೂಜೆ. ಎಡಿಸನ್ ಕೃಷ್ಣ ಬೃಂದಾವನದ ಮುಖ್ಯ ಅರ್ಚಕರಾದ ಯೋಗಿಂದ್ರ ಭಟ್ಟರು ಇದನ್ನು ನಡೆಸಿಕೊಡುತ್ತಾರೆ. ರಾಮಚಂದ್ರ ಗುರೂಜಿಯವರಿಂದ ಹನುಮಾನ್ ಚಾಲೀಸದ ಪಠಣ, ಮಹತ್ವ ಮತ್ತು ತತ್ವಗಳ ಬಗ್ಗೆ ಮಾರ್ಗದರ್ಶನ. [ವಿದ್ಯಾರ್ಥಿಗಳ ಕಲಾಸ್ಪರ್ಶದ 'ಮರುಹುಟ್ಟು ಗಣೇಶ']

ಆದಿಚುಂಚನಗಿರಿ ಶ್ರೀಮಠದ ಗುರುಗಳೂ ಮತ್ತು ಮುಖ್ಯಸ್ಥರೂ ಆದ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿಯವರಿಂದ ಆಶೀರ್ವಚನ. ವಿಶೇಷವಾಗಿ, ಬೋಧಿ ವೃಕ್ಷ ಎಂಬ ಸಂವಾದ ಕಾರ್ಯಕ್ರಮ. ಆಧ್ಯಾತ್ಮ ಮತ್ತು ಸಾಹಿತ್ಯ ಕ್ಷೇತ್ರದ ದಿಗ್ಗಜರೊಂದಿಗೆ ಜೀವನ, ಆಧ್ಯಾತ್ಮ, ವಿಜ್ಞಾನ ಮತ್ತು ಸಾಹಿತ್ಯಗಳಲ್ಲಿನ ನಮ್ಮ ಸಂದೇಹಗಳನ್ನು ಪರಿಹರಿಸಿಕೊಂಡು, ಪರಿಪೂರ್ಣ ಜೀವನಕ್ಕಾಗಿ ಮಾರ್ಗದರ್ಶನ ಪಡೆದುಕೊಳ್ಳಲು ಇದೊಂದು ಉತ್ತಮ ಅವಕಾಶ.

ಅಲ್ಲದೆ ಜಗದ್ವಿಖ್ಯಾತ ಈಶ ಪ್ರತಿಷ್ಠಾನದ ಮಳಿಗೆ ಶನಿವಾರ ಪೂರ್ತಿ ದಿನ ಲಭ್ಯವಿದ್ದು 'Yoga and Meditation' ಬಗ್ಗೆ ತಿಳಿದುಕೊಳ್ಳಬಹುದು. ಮತ್ತು ಮೇಲೆ ಹೇಳಿದಂತೆ 'Art of Living' ಕಾರ್ಯಾಗಾರ ಕೂಡಾ ಏರ್ಪಡಿಸಲಾಗಿದೆ. [ಪ್ರಪ್ರಥಮ ಬಾರಿಗೆ ಅಕ್ಕ ಸಮ್ಮೇಳನದಲ್ಲಿ ಒಂದು ದಿನದ ನೋಂದಾವಣಿ!]

AKKA conference : Spiritual committee - Jyothi Honnavalli interview

ದಾಶರಥಿ ಘಟ್ಟು : Spirituality ಸಮಿತಿಯ ಅತಿಥಿಗಳಾಗಿ ಯಾರು ಬರುತ್ತಿದ್ದಾರೆ?

ಜ್ಯೋತಿ ಹೊನ್ನವಳ್ಳಿ : ಈ ಸಲದ Spirituality ಸಮಿತಿಯ ಕಾರ್ಯಕ್ರಮಗಳಿಗಾಗಿ ಆಧ್ಯಾತ್ಮಿಕ ಕ್ಷೇತ್ರದ ದಿಗ್ಗಜಗಳೇ ಬರುತ್ತಿದ್ದಾರೆ. ಅವರಲ್ಲಿ ಪ್ರಮುಖರೆಂದರೆ:

ಸುತ್ತೂರು ಮಠದ ಜಗದ್ಗುರು ಶ್ರೀ ಶ್ರೀ ದೇಶಿಕೇಂದ್ರ ಮಹಾಸ್ವಾಮೀಜಿ
ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ
ಶ್ರೀ ಶ್ರೀ ಜಯೇಂದ್ರಈಶ್ವರಾನಂದಪುರಿ ಮಹಾಸ್ವಾಮೀಜಿ
ಡಾ. ಶ್ರೀ ರಾಮಚಂದ್ರ ಗುರೂಜಿ
ಜಗದ್ಗುರು ಶ್ರೀ ಬಸವಜಯ ಮೃತ್ಯೂಂಜಯ ಸ್ವಾಮೀಜಿ
ಶ್ರೀ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮಿ
ಕಾಯಕ ಯೋಗಿ ಪೂಜ್ಯ ಶ್ರೀ ಶಾಂತವೀರ ಮಹಾಸ್ವಾಮೀಜಿ
ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ

ಈ ಮಹನೀಯರುಗಳ ಬಗ್ಗೆ ಎಲ್ಲರಿಗೂ ತಿಳಿದಿರುವುದರಿಂದ, ನಾನೇನೂ ಪರಿಚಯ ಮಾಡಿಕೊಡಬೇಕಾಗಿಲ್ಲ.

ದಾಶರಥಿ ಘಟ್ಟು : ಈ ಸಮ್ಮೇಳನಕ್ಕೆ ಬರುತ್ತಿರುವ ಕನ್ನಡ ಬಂಧುಗಳಿಗೆ ಏನನ್ನಾದರೂ ಹೇಳಲು ಬಯಸುತ್ತೀರಾ?

ಜ್ಯೋತಿ ಹೊನ್ನವಳ್ಳಿ : ಎಲ್ಲಾ ಕನ್ನಡ ಬಂಧುಗಳಿಗೂ ಸಮ್ಮೇಳನಕ್ಕೆ ಸ್ವಾಗತ. ಸಮ್ಮೇಳನದ ಮೂರೂ ದಿನಗಳೂ ಸ್ಪಿರಿಚುಯಾಲಿಟಿ ಸಮಿತಿಯಿಂದ ಅನೇಕ ಮೌಲಿಕ ಕಾರ್ಯಕ್ರಮಗಳನ್ನು ಪ್ರಾಯೋಜಿಸಿದ್ದೇವೆ. ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ನಮ್ಮ ಗೌರವಾನ್ವಿತ ಅತಿಥಿಗಳ ಮಾರ್ಗದರ್ಶನದಿಂದ ನಿಮ್ಮ ಅಲೌಕಿಕ ಸಂದೇಹಗಳನ್ನು ನಿವಾರಿಸಿಕೊಂಡು, ಜ್ಞಾನ ಪರಿಧಿಯನ್ನು ವಿಸ್ತರಿಸಿಕೊಳ್ಳಲು ಇದೊಂದು ಸುವರ್ಣಾವಕಾಶ. ದಯವಿಟ್ಟು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂಬುದೇ ನನ್ನ ಪ್ರಾರ್ಥನೆ.

ಪ್ರಮುಖವಾಗಿ ನಮ್ಮ ಯುವಜನತೆ ಸಮಿತಿಯ ಕಲಾಪ ಮತ್ತು ಕಾರ್ಯಕ್ರಮಗಳಲ್ಲಿ ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಳ್ಳುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಅವರ ಇಂದಿನ ಎಲ್ಲಾ ರೀತಿಯ ಪ್ರಶ್ನೆ ಮತ್ತು ಸಂದೇಹಗಳಿಗೆ ವರ್ತಮಾನದ ಅನುಭಾವಿಗಳಿಂದಲೇ ಪರಿಹಾರ ಮತ್ತು ಉತ್ತರಗಳನ್ನು ಪಡೆಯಬೇಕೆಂಬುದು ನಮ್ಮ ಆಶಯ. ಆದುದರಿಂದ ನಮ್ಮ ಯುವಕ ಮತ್ತು ಯುವತಿಯರನ್ನು ನಾನು ನಮ್ಮ ಈ ಕಾರ್ಯಕ್ರಮಗಳಿಗೆ ವಿಶೇಷವಾಗಿ ಸ್ವಾಗತಿಸುತ್ತೇನೆ.

English summary
AKKA World Kannada Conference spirituality committee chairman Jyothi Honnavalli interview by Dasharathi Ghattu. Many spiritual leaders from Karnataka like Sri Sri Ravishankar, Nirmalananda Swamiji are attending AKKA Sammelana. 9th AKKA WKC will be held in Atlantic City in New Jersey from September 2 to 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X