9ನೇ ಅಕ್ಕ ಸಮ್ಮೇಳನದಲ್ಲಿ ಮನರಂಜನೆಯೇ ಮೂಲಮಂತ್ರ
ಶ್ರಾವಣ ಮತ್ತು ಭಾದ್ರಪದ ಮಾಸಗಳಲ್ಲಿ ಹಬ್ಬಗಳಿಗೇನು ಕೊರತೆ? ನಾಗರಪಂಚಮಿ, ವರಮಹಾಲಕ್ಷ್ಮಿ ಮುಗಿಯುತ್ತಿದ್ದಂತೆ ಗಣೇಶ ಆಗಮಿಸಿರುತ್ತಾನೆ. ಇನ್ನು ಈ ಹಬ್ಬಗಳಿಗೆ ಬಂಧಗಳು, ಸ್ನೇಹಿತರು ಬಂದರೆ ಆಚರಣೆಯ ಸಂತಸ ನೂರ್ಮಡಿಯಾಗುತ್ತದೆ.
ಈ ಸಮಯದಲ್ಲಿ ಅಮೆರಿಕಾದಲ್ಲಿ ಕೆಲ ರಾಜ್ಯಗಳಲ್ಲಿ ಮಕ್ಕಳು ಶಾಲೆಗೆ ಮರಳಲು ಸಿದ್ಧತೆ ನಡೆಸಿರುತ್ತಾರೆ. ಈ ಸುದೀರ್ಘ ವಾರಾಂತ್ಯದಲ್ಲಿ ಹಲವರು ಇದರ ತಯಾರಿಯಲ್ಲಿ ತೊಡಗಿದ್ದರೆ, ಅಮೆರಿಕದಲ್ಲಿನ ಕನ್ನಡಿಗರು ವಿಶಿಷ್ಟ ಹಬ್ಬದ ಭರ್ಜರಿ ತಯಾರಿಯಲ್ಲಿ ತೊಡಗಿದ್ದಾರೆ.
ಅದುವೇ 9ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ. ಇದೇ ಶುಕ್ರವಾರ, ಸೆಪ್ಟೆಂಬರ್ 2ರಂದು ವಿಧ್ಯುಕ್ತವಾಗಿ ನ್ಯೂ ಜೆರ್ಸಿ ರಾಜ್ಯದ ಅಟ್ಲಾಂಟಿಕ್ ಸಿಟಿಯಲ್ಲಿ ಅಕ್ಕ ಸಮ್ಮೇಳನ ಆರಂಭವಾಗಲಿದೆ. ಕೊನೆ ಕ್ಷಣಗಳ ಸಿದ್ಧತೆಯಾಗಿ ಕನ್ನಡಿಗರನೇಕರು ಹಗಲಿರುಳೂ ದುಡಿಯುತ್ತಿದ್ದಾರೆ, ಕನ್ನಡ ಮಾತೆಯ ಸೇವೆಗಾಗಿ. [ಅಕ್ಕ ಸಮ್ಮೇಳನ : ಅನುಭಾವಿಗಳೊಂದಿಗೆ ಆಧ್ಯಾತ್ಮದ ಅನ್ವೇಷಣೆ]
ಹಬ್ಬದೂಟದಲ್ಲಿ ಪಾಯಸ ಎಷ್ಟು ಮಹತ್ವದ್ದೋ, ಈ ಕನ್ನಡದ ಹಬ್ಬದಲ್ಲಿ ಮನರಂಜನಾ ಕಾರ್ಯಕ್ರಮಗಳಿಗೂ ಅಷ್ಟೇ ಮಹತ್ವ ನೀಡಲಾಗಿದೆ. ಉತ್ಕೃಷ್ಟ ಕಾರ್ಯಕ್ರಮಗಳ ಸಾಲುಸಾಲೇ ಚಿತ್ರರಸಿಕರ ಮನವನ್ನು ಗೆಲ್ಲಲು ಸಿದ್ಧವಾಗಿ ನಿಂತಿವೆ. ಮನರಂಜನಾ ಸಮಿತಿ ಕಳೆದ 5 ತಿಂಗಳಿನಿಂದ ಇದರ ತಯಾರಿಯಲ್ಲಿ ನಿರತವಾಗಿದೆ.
ನಾದೋಪಾಸಕರಿಗೆ ಸಂಗೀತವನ್ನು ಉಣಬಡಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗಿರುವ ಡಾ. ವಿದ್ಯಾಭೂಷಣ, ಜಯತೀರ್ಥ್ ಮೇವುಂಡಿ, ಕೆ.ವಿ. ಕೃಷ್ಣಪ್ರಸಾದ್, ಬಾಲಚಂದ್ರ ಗುರು, ರತ್ನಮಾಲಾ ಪ್ರಕಾಶ್, ಕಿಕ್ಕೇರಿ ಕೃಷ್ಣಮೂರ್ತಿ, ಮೃತ್ಯುಂಜಯ ಶೆಟ್ಟರ್ ಮತ್ತು ಸತೀಶ ಹಂಪಿಹೊಳಿ ಮುಂತಾದವರು ಬರಲಿದ್ದಾರೆ. ಚಂದದ ಚಿತ್ರ ಬಿಡಿಸುವ ಪ್ರಖ್ಯಾತ ವರ್ಣಚಿತ್ರಕಾರ ವಿಲಾಸ್ ನಾಯಕ್ ಕೂಡ ಬರಲಿದ್ದಾರೆ.
ಶುಕ್ರವಾರದ ವಿಶೇಷ ಕಾರ್ಯಕ್ರಮ - "ಅತೀಥಮ್" ತಂಡದವರಿಂದ ಒಂದು ಫ್ಯೂಶನ್ ಬ್ಯಾಂಡ್ ... [ಪ್ರಪ್ರಥಮ ಬಾರಿಗೆ ಅಕ್ಕ ಸಮ್ಮೇಳನದಲ್ಲಿ ಒಂದು ದಿನದ ನೋಂದಾವಣಿ!]
ಶನಿವಾರ ಬೆಳಿಗ್ಗೆ 7 ಗಂಟೆಗೆ "ಅಕ್ಕ ಮೆರವಣಿಗೆ" : ಭಾಗವಹಿಸುವ ಪ್ರತಿಯೊಂದು ಕನ್ನಡ ಕೂಟವು, ಕರ್ನಾಟಕದ ಒಂದು ಜಿಲ್ಲೆಯನ್ನಾರಿಸಿಕೊಂಡು ವಿಶೇಷವಾದ ವೇಷ ಭೂಷಣಗಳನ್ನು ತೊಟ್ಟುಕೊಂಡು ಮೆರವಣಿಗೆಗೆ ಸೊಬಗನ್ನು ತರಲಿದ್ದಾರೆ. ಬಣ್ಣ ಬಣ್ಣದ ಉಡುಗೆಗಳಿಂದ, ವಿಧ ವಿಧವಾದ ಪುಷ್ಪಗಳಿಂದ ಸಿಂಗರಿಸಲ್ಪಟ್ಟ ಕುದುರೆ ಸಾರೋಟು ತಾಯಿ ಭುವನೇಶ್ವರಿಯನ್ನು ಹೊತ್ತು ಮೆರವಣಿಗೆಗೆ ಮೆರುಗನ್ನು ತರಲಿದೆ.
ಜೀ ಸರಿಗಮಪ : ಸುಮಾರು 20 ಕನ್ನಡ ಕೂಟಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ, ಪ್ರತಿ ದಿನ 7ರಿಂದ 8 ಕನ್ನಡ ಕೂಟಗಳೊಡಗೂಡಿ ಪ್ರಾರಂಭಿಕ ನೃತ್ಯರೂಪಕವನ್ನು ನಡೆಸಿಕೊಡಲಿವೆ. ಇದೆ ಮೊದಲ ಬಾರಿಗೆ ಜೀ ತಂಡದವರ ಸಹಭಾಗಿತ್ವದೊಂದಿಗೆ "ZEE ಸರಿಗಮಪ" ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈಗಾಗಲೆ ಮೊದಲ ಎರಡು ಸುತ್ತಿನ ಸ್ಪರ್ಧೆ ಮುಗಿದಿದ್ದು, ಅಂತಿಮ ಹಂತಕ್ಕೆ 16 ಸ್ಪರ್ಧಿಗಳನ್ನು ಆರಿಸಲಾಗಿದೆ. ಅಂತಿಮ ಹಂತದಲ್ಲಿ ಯಾರಿಗೆ ಜಯ ಲಭಿಸಲಿದೆ ಎಂದು ನೋಡಲು ಸೆಪ್ಟೆಂಬರ್ 3 ಶನಿವಾರ ಸಂಜೆವರೆಗೆ ಕಾಯಲೇಬೇಕು. [ಅಕ್ಕ ಸಮ್ಮೇಳನದ ಸೂತ್ರಧಾರಿ ಶರತ್ ಭಂಡಾರಿ ಸಂದರ್ಶನ]
ಭಾನುವಾರ ಗೌರಿ ಗಣೇಶ ಹಬ್ಬ : ಸಾಮೂಹಿಕವಾಗಿ ಹಬ್ಬವನ್ನಾಚರಿಸಲು ಎನ್ ಆರ್ ಆರ್ ಸಂಸ್ಥೆಯವರು ಪ್ರಾಯೋಜಿಸಿರುವ ವಿಶೇಷವಾದ ಪೂಜಾ ಡಬ್ಬಿಯಲ್ಲಿ, ಪೂಜೆಗೆ ಬೇಕಾಗುವ, ಗಣಪತಿ, ಗೌರಿ ಮಣ್ಣಿನ ಪ್ರತಿಮೆಗಳು, ಅರಿಶಿಣ, ಕುಂಕುಮ, ಮುಂತಾದ ಸಾಮಗ್ರಿಗಳು ಇರಲಿವೆ. ಪೂಜೆಗಾಗಿಯೇ ವಿಶೇಷವಾದ ಮಂಟಪ, ಅಲಂಕಾರ, ಪ್ರಸಾದ ಎಲ್ಲವು ಸಿದ್ಧವಾಗಿದೆ.. [ಸ್ವರ್ಣಗೌರೀವ್ರತದ ಹಿನ್ನೆಲೆ, ವಿಶೇಷತೆ ಮತ್ತು ಸಿದ್ಧತೆ]
ಸಂಡೆ ಅಂಬಿ ನೈಟ್ : ಭಾನುವಾರ ಸಂಜೆ ಕನ್ನಡ ಚಲನಚಿತ್ರ ತಾರೆಗಳಿಂದ ವಿಶೇಷವಾದ ವಿಭಿನ್ನ ಕಾರ್ಯಕ್ರಮ "ಅಂಬಿ ನೈಟ್". ಮಂಡ್ಯದ ಗಂಡು, ಅಜಾತ ಶತ್ರು, ದಾನಶೂರ ಕರ್ಣ ಇನ್ನೂ ಮುಂತಾದ ಬಿರುದಾಂಕಿತರಾದ ಡಾ. ಅ0ಬರೀಶ್ ರವರಿಗೆ ಸನ್ಮಾನ ಸಮಾರಂಭ ಕೂಡ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ, ಪುನೀತ್ ರಾಜಕುಮಾರ್, ರಾಧಿಕಾ ಪಂಡಿತ್, ಯಶ್, ಶಿವರಾಜ್ ಕುಮಾರ್, ರವಿಚಂದ್ರನ್, ಗಣೇಶ್, ಜಗ್ಗೇಶ್, ಸುಮಲತಾ, ಸಾಧು ಕೋಕಿಲ, ದೊಡ್ಡಣ್ಣ, ಭಾಗವಹಿಸುವ ನಿರೀಕ್ಷೆ ಇದೆ. [ಅಕ್ಕ ಚಲನಚಿತ್ರೋತ್ಸವ ಸಮಿತಿ ಮುಖ್ಯಸ್ಥ ಮಲ್ಲಿಕ್ ಮಾತು]
ಇನ್ನಷ್ಟು ಮತ್ತಷ್ಟು : ಇಷ್ಟೇ ಅಲ್ಲ.. ಪ್ರತಿಯೊಬ್ಬರ ಇಚ್ಛೆಗನುಗುಣವಾಗಿ ವೈದ್ಯಕೀಯ, ಸಾಹಿತ್ಯ, ಯುವಜನ, ಮಹಿಳಾ, ವ್ಯಾವಹಾರಿಕ, ಕ್ರೀಡೆ, ಆರೋಗ್ಯ, ಆಧ್ಯಾತ್ಮ, ಕ್ಷೇತ್ರಗಳಿಗಾಗಿಯೇ ಪ್ರತ್ಯೇಕ ಕೋಣೆಗಳಲ್ಲಿ ವೇದಿಕೆ ಸಿದ್ಧವಾಗಿದೆ. ಈ ಬಾರಿ ಅಕ್ಕ - ಅಡುಗೆಮನೆ, ಅಕ್ಕ ವಾಕ್ಪಟುಗಳು, ಶ್ರೀಮಾನ್ / ಶ್ರೀಮತಿ, ಅಕ್ಕ Pageant, ಇನ್ನು ಹಲವಾರು ಸ್ಪರ್ಧೆಗಳನ್ನು ಕೂಡ ಆಯೋಜಿಸಲಾಗಿದೆ.
ತಮ್ಮ ಕಾಲೇಜು ದಿನಗಳನ್ನು ನೆನೆಸಿಕೊಳ್ಳಲು ಮತ್ತು ಸ್ನೇಹಿತರೊಡನೆ ಹರಟೆ ಹೊಡೆಯಲು ನೋಂದಾಯಿತ ಕಾಲೇಜು / ವಿಶ್ವವಿದ್ಯಾನಿಲಯಗಳಿಗೆ ಪ್ರತ್ಯೇಕ ಕೋಣೆಗಳಲ್ಲಿ ಅವಕಾಶ ಮಾಡಿಕೊಡಲಾಗಿದೆ. ಶತಮಾನೋತ್ಸವ ಆಚರಿಸುತ್ತಿರುವ ಮೈಸೂರು ವಿಶ್ವವಿದ್ಯಾನಿಲಯಕ್ಕಾಗಿಯೇ, ಪ್ರತ್ಯೇಕ ಕೋಣೆಯಲ್ಲಿ ವಿಶೇಷವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇದಲ್ಲದೆ ದೇಶೀಯ ಮತ್ತು ಅಂತಾರಾಷ್ಟ್ರೀಯ ತಂಡಗಳಿಂದ ನಾಟಕಗಳು, ನೃತ್ಯರೂಪಕಗಳು, ಸಮೂಹ ಗಾಯನ, ಕಥಕ್ ನೃತ್ಯ, ಹಾಸ್ಯೋತ್ಸವ ಹಾಗು ಇನ್ನೂ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳ ಜಾತ್ರೆಯೇ ನಡೆಯಲಿದೆ. ಸೆಪ್ಟೆಂಬರ್ 2ರ ಸಂಜೆ 6ಕ್ಕೆ ಈ ಎಲ್ಲಾ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ.. ಬನ್ನಿ ಇನ್ನೇಕೆ ತಡ...