ಕಲಾವಿದರ ಆಹ್ವಾನಕ್ಕಾಗಿ ಬೆಂಗಳೂರಿನಲ್ಲಿ ನಾವಿಕ
ಸಮ್ಮೇಳನದ ಸಂಚಾಲಕರಾದ ಡಾ.ಶರಣ ಬಸವ ರಾಜೂರ, ಸಾಂಸ್ಕೃತಿಕ ತಂಡದ ಸಲಹೆಗಾರರಾದ ವಲ್ಲೀಶ ಶಾಸ್ತ್ರೀ, ಕರ್ನಾಟಕ ಸಂಚಾಲಕರಾದ ಗಜಲಕ್ಷ್ಮೀ ಕೃಷ್ಣಮೂರ್ತಿ, ಕೃಷ್ಣಮೂರ್ತಿ ಆನೇಕಲ್, ಸದಸ್ಯ ಶ್ರೀನಾಥ್ ವಸಿಷ್ಠ ನೇತೃತ್ವದ ಈ ತಂಡ ಮುಂದಿನ ಒಂದು ವಾರಗಳ ಕಾಲ ಕನ್ನಡದ ಹಿರಿಯ ಸಾಹಿತಿಗಳು, ಕಲಾವಿದರನ್ನು ಭೇಟಿಯಾಗಿ ಐತಿಹಾಸಿಕ ಸಮ್ಮೇಳನಕ್ಕೆ ಅಮೆರಿಕಕ್ಕೆ ಬರುವಂತೆ ಆಹ್ವಾನಿಸಲಿದೆ.
ಇದೇ ತಿಂಗಳು ಆಗಸ್ಟ್ 30, 31 ಹಾಗೂ ಸೆಪ್ಟೆಂಬರ್ 1ರಂದು ಸಮ್ಮೇಳನವು ಅದ್ದೂರಿಯಾಗಿ ನಡೆಯಲಿದೆ. ಉತ್ತರ ಅಮೆರಿಕದಲ್ಲಿ ಕಳೆದ 40 ವರ್ಷಗಳಿಂದ ಸುಮಾರು 1 ಲಕ್ಷಕ್ಕೂ ಹೆಚ್ಚು ಕನ್ನಡಿಗರು ನೆಲೆಸಿದ್ದು, ಕನ್ನಡ ಭಾಷೆ-ಸಂಸ್ಕೃತಿ ಉಳಿಸಿ ಪೋಷಿಸುತ್ತಾ ಬಂದಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರು ಒಂದಾಗಿ ಪ್ರತಿ ಎರಡು ವರ್ಷಗಳಿಗೊಮ್ಮೆ ಒಂದೇ ಸೂರಿನಡಿ ಸೇರಿ ಕನ್ನಡ ಭಾಷೆ ಹಾಗೂ ಸಂಸ್ಕೃತಿ, ಕಲಾ ಪ್ರತಿಭೆಗಳನ್ನೊಳಗೊಂಡ ಕಾರ್ಯಕ್ರಮಗಳನ್ನು ಆಯೋಜಿಸಿ ತಮ್ಮ ಮುಂದಿನ ಪೀಳಿಗೆಗೆ ಧಾರೆ ಎರೆಯುತ್ತಾ ಬಂದಿದ್ದಾರೆ.
ಈ ನಿಟ್ಟಿನಲ್ಲಿ ನಾವಿಕ ಸಂಸ್ಥೆ ತನ್ನ ಎರಡನೆಯ ವಿಶ್ವ ಕನ್ನಡಿಗರ ಸಮಾವೇಶಕ್ಕೆ ಸಿದ್ಧತೆ ನಡೆಸುತ್ತಿದ್ದು ಸುಮಾರು 3,000ಕ್ಕೂ ಹೆಚ್ಚು ವಿಶ್ವ ಕನ್ನಡಿಗರು ಭಾಗವಹಿಸುವ ನಿರೀಕ್ಷೆಯಿದೆ. ವಿಶೇಷವಾಗಿ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಲಿದ್ದು, ಸಚಿವ ಸಂಪುಟದ ಸಚಿವರು, ಕನ್ನಡ ಚಲನಚಿತ್ರ ನಟ, ನಟಿಯರನ್ನೂ ಆಹ್ವಾನಿಸಲಾಗಿದೆ.
ಮಂದಾರ ನ್ಯೂ ಇಂಗ್ಲೆಂಡ್ ಕನ್ನಡ ಕೂಟ, ಬೋಸ್ಟನ್ ಮತ್ತು ಹೊಯ್ಸಳ ಕನ್ನಡ ಕೂಟ, ಕನೆಕ್ಟಿಕಟ್ ಸಹಭಾಗಿತ್ವದಲ್ಲಿ ಮೂರು ದಿನಗಳ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ. ಗಾಯಕಿ ಶಮಿತಾ ಮಲ್ನಾಡ್, ಗಾಯಕ ವಿಜಯ್ ಪ್ರಕಾಶ್, ವೇಣುವಾದಕ ಪ್ರವೀಣ್ ಗೋಡ್ಖಿಂಡಿ, ಗಾಯಕಿ ಪಲ್ಲವಿ ಅರುಣ್ ಮುಂತಾದವರು ಸಂಗೀತ ಸುಧೆ ಹರಿಸಲಿದ್ದಾರೆ. ಗಂಗಾವತಿ ಪ್ರಾಣೇಶ್, ಶ್ರೀನಾಥ್ ವಸಿಷ್ಠ, ಯಶವಂತ್ ಸರದೇಶಪಾಂಡೆಯವರ ಹಾಸ್ಯ ಲಹರಿಯೂ ಇದರಲ್ಲಿ ಭಾಗಿಯಾಗಿದೆ. [ನೊಂದಾವಣೆ ಮತ್ತು ಹೆಚ್ಚಿನ ವಿವರ]