ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಣ್ಣ ಈಗ "ಸಿಂಗಾರ ಕಲಾ ಪುರುಷೋತ್ತಮ"

By Rajendra
|
Google Oneindia Kannada News

Singara Kala Purushottama Shivanna
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಇದೀಗ 25ರ ಹೊಸ್ತಿಲಲ್ಲಿ ನಿಂತಿದ್ದಾರೆ. ಸದ್ಯದಲ್ಲೆ ಬಿಡುಗಡೆ ಆಗಲಿರುವ "ಜೋಗಯ್ಯ" ಇವರ ನೂರನೆ ಚಿತ್ರ. ಶತಕ ಬಾರಿಸಿದ ಸಂದರ್ಭದಲ್ಲಿ, ನವೆಂಬರ್ 28ರಂದು ಕನ್ನಡ ಸಂಘ ಸಿಂಗಪುರ ಹಾಗೂ ಹೃದಯವಾಹಿನಿ ಪತ್ರಿಕೆ, ಮಂಗಳೂರು ಇವರ ನೇತೃತ್ವದಲ್ಲಿ ನಡೆದ 7ನೆಯ ವಿಶ್ವಕನ್ನಡ ಸಾಂಸ್ಕೃತಿಕ ಸಮ್ಮೇಳನದಲ್ಲಿ ಕನ್ನಡ ಸಂಘ (ಸಿಂಗಪುರ)ವು ಶಿವಣ್ಣನವರ ಆಜೀವ ಸಾಧನೆಗಾಗಿ ಪುರಸ್ಕಾರ ಹಾಗೂ "ಸಿಂಗಾರ ಕಲಾ ಪುರುಷೋತ್ತಮ" ಬಿರುದು ನೀಡಿ ಗೌರವಿಸಿತು.

ಎರಡನೆಯ ತಲೆಮಾರಿನ ಪ್ರತಿಷ್ಠಿತ ನಾಯಕ ಶಿವಣ್ಣ 50ರತ್ತ ಕಾಲಿಡುತ್ತಿರುವ ಹರೆಯದ ಯುವಕ. ಇವರು ಚಿತ್ರರಂಗಕ್ಕೆ ಕಾಲಿಟ್ಟಾಗ 23 ರ ವಯಸ್ಸು. ಸಿನಿಮಾ ರಂಗದ ಧೀಮಂತರೆನಿಸಿದ್ದ ಡಾ.ರಾಜ್, ವಿಷ್ಣು ನಮ್ಮೊಂದಿಗಿಲ್ಲ. ಅಂಬರೀಶ್, ಅನಂತ್‍ನಾಗ್‌ಗೆ ಹಿರಿಯ ಪಾತ್ರಗಳ ವಯಸ್ಸು. ಇತ್ತೀಚಿನ ಯುವ ಹೀರೋಗಳು- ಹಾಗೂ ಹಿರಿಯ ಹೀರೋಗಳ ನಡುವಿನ ಸೇತುವೆಯ ಕೊಂಡಿ ಎರಡು ದಶಕಗಳ ಹಿಂದೆ ಬೆಳ್ಳಿ ತೆರೆಗೆ ಬಂದ ನಮ್ಮ ಶಿವರಾಜ್‍ಕುಮಾರ್.

1962ರಲ್ಲಿ ಶಿವರಾಜ್‍ಕುಮಾರ್ ಜನನ. ಅದಾಗಲೇ ಡಾ.ರಾಜ್ ಅವರ ಸುವರ್ಣಯುಗ ಪ್ರಾರಂಭವಾಗಿತ್ತು. ಚಿಕ್ಕಂದಿನಲ್ಲಿ ಇವರಿಗೆ ನಟನಾಗಬೇಕೆಂಬ ಹಂಬಲವೇನೂ ಇರಲಿಲ್ಲ. ಓದು ಮುಗಿದಂತೆ "ಮುಂದೇನು?" ಎಂಬ ಪ್ರಶ್ನೆ ಬಂದಾಗ ಆರಿಸಿಕೊಂಡದ್ದು ಸಿನಿಮಾ ರಂಗ. ಸಿನಿಮಾ ರಂಗದಲ್ಲಿ ಕಾಲಿಟ್ಟಂತೆ ಸಿಕ್ಕ ಯಶಸ್ಸು ಕನ್ನಡ ಚಲನಚಿತ್ರ ರಂಗದಲ್ಲಿ ಅವರಿಗೆ ಭದ್ರಬುನಾದಿ ನೀಡಿತು.

ಡಾ.ರಾಜ್ ಪುತ್ರರಾಗಿಯೂ ಸಿನಿಮಾ ರಂಗದಲ್ಲಿ ಏಳು-ಬೀಳು ಕಂಡಿರುವ ಶಿವರಾಜ್‍ಕುಮಾರ್ ಅವರನ್ನು ಈ ಸಮ್ಮೇಳನದಲ್ಲಿ ಎದುರು ಕಂಡು, ಒಂದೆರಡು ಮಾತುಗಳು ಆಡುವ ಸದವಕಾಶ ನಮಗೆಲ್ಲಾ ಸಿಕ್ಕಿತು. ಶಿವರಾಜ್ ಅವರ ಕೆಲವು ಹಾವ ಭಾವದಲ್ಲಿ, ಹಿರಿಯರಿಗೆ ನೀಡುವ ಗೌರವ-ಮುಖಭಂಗಿ -ಮಾತಿನ ಜೋಡಣೆಯಲ್ಲಿ ರಾಜ್ ಅವರ ಛಾಪು ಕಂಡಿತು.

ಇದರಲ್ಲಿ ಅಚ್ಚರಿ ಪಡುವಂತಹುದು ಏನಿಲ್ಲ. ವಿನಯ, ಸರಳತೆ ಹಾಗೂ ಮತ್ತೋರ್ವರಿಗೆ ನೀಡುವ ಗೌರವ ಇವರಿಗೆ ಅಪ್ಪಾಜಿಯಿಂದ ಬಂದ ಕೊಡುಗೆ. ಈ ಕೊಡುಗೆಯ ಗುಣಗಳೊಂದಿಗೆ ತಮ್ಮದೇ ನಟನೆಯ ಕಲೆ ಸೇರಿಸಿ, ತಮ್ಮದೇ ವ್ಯಕ್ತಿತ್ವ, ಸರಳತೆ, ಸಜ್ಜನಿಕೆಯಿಂದ ಕರ್ನಾಟಕದಲಿ ಇಂದಿನ ಯುವ ಪೀಳಿಗೆಯ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ, ಈ ಹ್ಯಾಟ್ರಿಕ್ ಹೀರೋ ಶಿವರಾಜ್‍ ಕುಮಾರ್. ಹೀಗೆಯೇ ದ್ವಿಶತಕ ಬಾರಿಸಲಿ, ಚೆನ್ನಾಗಿ ಬಾಳಲಿ ಎಂದು ನೆರೆದಿದ್ದ ಅಭಿಮಾನಿಗಳೆಲ್ಲರೂ ಮನದಲ್ಲೇ ಆಶಿಸಿದರು!

ಕನ್ನಡ ಸಂಘ ಸಿಂಗಪುರದ ಅಧ್ಯಕ್ಷರಾದ ಡಾ.ವಿಜಯ‍ಕುಮಾರ್, ಸಮ್ಮೇಳನದ ಅಧ್ಯಕ್ಷರಾದ ಸಾಹಿತಿ ಡಾ. ಬರಗೂರಪ್ಪನವರಿಂದ ಶಾಲು, ಹಾರ, ನೆನಪಿನ ಕಾಣಿಕೆ, ಪ್ರಶಸ್ತಿ, ಪ್ರಮಾಣ ಪತ್ರ ಸ್ವೀಕರಿಸಿದ ಶಿವರಾಜ್‍ಕುಮಾರ್ ಅವರು "ಎಲ್ಲರಿಗೂ ನಮಸ್ಕಾರ, ಕನ್ನಡ ಚಿತ್ರರಂಗದಲಿ 25ನೇ ವರುಷಕ್ಕೆ ಕಾಲಿಟ್ಟಿದ್ದೇನೆ. ನಿಮ್ಮ ಪ್ರೀತಿ ಇಂದು ಈ ಶಿವಣ್ಣನನ್ನು 100 ಸಿನಿಮಾ ಮುಗಿಸುವಂತೆ ಮಾಡಿದೆ. ನಮ್ಮನ್ನು ಬೆಳೆಸುತ್ತಿರುವ ನಿಮ್ಮಂತಹ ಕಲಾಭಿಮಾನಿಗಳಿಗೆ ನಮಸ್ಕಾರ. ನನ್ನ ಈ ಯಶಸ್ಸಿಗೆ ತಂದೆ-ತಾಯಿ, ಒಡಹುಟ್ಟಿದವರು, ಹೆಂಡತಿ - ಮಕ್ಕಳು, ಬಂಧು-ಬಾಂಧವರು, ಸ್ನೇಹಿತರು, ನಿರ್ದೇಶಕರು, ಸಹ ನಟ-ನಟಿಯರು, ಚಿತ್ರೋದ್ಯಮದಲ್ಲಿರುವ ಎಲ್ಲರೂ ಕಾರಣರು. ಎಲ್ಲರಿಗೂ ನನ್ನ ವಂದನೆ ಹಾಗೂ ಧನ್ಯವಾದಗಳು" ಎಂದರು.

ಚಪ್ಪಾಳೆ ಸುರಿಮಳೆ, ಹಾಡು, ಸ್ಟೆಪ್ಸ್ ಹಾಕಿ, ಡ್ಯಾನ್, ಡ್ಯಾನ್ಸ್ ಎಂಬ ಕೂಗು, ಶಿಳ್ಳೆಗೆ ಕೊನೆ ಮೊದಲಿರಲಿಲ್ಲ. ಕಾರ್ಯಕ್ರಮದ ಈ ಭಾಗವನ್ನು ನೋಡುವುದಕ್ಕಾಗಿಯೇ ಬಂದವರನೇಕರು ಈ ಅನುಭವವನ್ನು, ಸುಮಧುರ ಕ್ಷಣಗಳನ್ನು ಸದಾ ತಮ್ಮೊಂದಿಗೆ ಕೊಂಡೊಯ್ಯುವುದಂತೂ ಖಂಡಿತ.

ವರದಿ: ಸುದ್ದಿವಾಹಿನಿ ತಂಡ (ಗಿರೀಶ್ ಜಮದಗ್ನಿ, ವೆಂಕಟ್, ಸುರೇಶ್, ವಸಂತ ಕುಲಕರ್ಣಿ ಹಾಗೂ ವಾಣಿ ರಾಮದಾಸ್)

English summary
Hat Trick hero ShivarajKumar is now "Singara Kala Purushottama". This title was given to Shivanna by Singapore Kannada Sangha. He is the one of the chief guest in 7th Singapore Kannada Convention 2010.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X