ಸಿಂಗಪುರ ಸಾಂಸ್ಕೃತಿಕ ಹಬ್ಬದ ಮೊದಲನೇ ದಿನ!
ಇಂದು ಬೆಳಗ್ಗೆ 9 ಘಂಟೆಗೆ ವಾಣಿಜ್ಯ ವೇದಿಕೆ ಮತ್ತು ಸಮಾವೇಶದೊಂದಿಗೆ ಪ್ರಾರಂಭವಾಗುವ ಭರ್ಜರಿ ಸಮ್ಮೇಳನವು ಇಲ್ಲಿನ ಕನ್ನಡಿಗರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಕಾರ್ಯಕ್ರಮ ಪದ್ಮಶ್ರೀ ಕದ್ರಿ ಗೋಪಾಲನಾಥ್ ಅವರ ಸ್ಯಾಕ್ಸೋಫೋನ್ ಮಂಗಳ ಧ್ವನಿಯೊಂದಿಗೆ ಮಧ್ಯಾನ್ಹ ಉದ್ಘಾಟಣೆಗೊಂಡು ರಾತ್ರಿ ಬದ್ರಿ ಪ್ರಸಾದ್ ಮತ್ತು ಅನುರಾಧ ಭಟ್ ಅವರ ಚಿತ್ರ ಮಂಜರಿಯೊಂದಿಗೆ ಮೊದಲನೇ ದಿನದ ಕಾರ್ಯಕ್ರಮಗಳು ಅಂತ್ಯಗೊಳ್ಳಲಿವೆ. ಇಂದಿನ ಇನ್ನೂ ಕೆಲವು ವಿಶೇಷಗಳು - ಪುತ್ತೂರ್ ನರಸಿಂಹ ನಾಯಕ್ ಅವರಿಂದ ದಾಸಮಂಜರಿ, ಪ್ರಯೋಗ ರಂಗ ಅವರ ನಾಟಕ, ಕವಿಗೋಷ್ಠಿ, ಜನಪದ ಮತ್ತು ಇತರ ನೃತ್ಯಗಳು ಹಾಗು ವಿಶ್ವಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿತರಣೆ.
ಹೊರದೇಶದಲ್ಲಿ ಕಾರ್ಯನಿಮಿತ್ತ ವಲಸೆ ಹೋಗಿ ತಾಯ್ನಾಡಿನಿಂದ ದೂರವಾಗಿ ವಾಸಿಸುತ್ತಿರುವ ಕನ್ನಡಿಗರಿಗೆ ಕರ್ನಾಟಕದ ಕಲೆ, ಸಾಹಿತ್ಯವನ್ನು ಪುನರ್ ಪರಿಚಯಿಸುವ ಮತ್ತು ಹೊರದೇಶದಲ್ಲೇ ಹುಟ್ಟಿ ಬೆಳೆದಿರುವ ಯುವ ಜನಾಂಗಕ್ಕೆ ಕರ್ನಾಟಕದ ಹಿರಿಮೆಯನ್ನು ತೋರುವ ಸದುದ್ದೇಶವನ್ನು ಹೊಂದಿರುವ ಈ ವಿಶ್ವ ಕನ್ನಡ ಸಮ್ಮೇಳನವು, ಈ ಹಿಂದೆ 2004 (ಅಬುಧಾಭಿ), 2005 (ಸಿಂಗಪುರ), 2006 (ಬಹಮಿಯನ್), 2007 (ಕುವೈತ್), 2008 (ಕತಾರ್) ಮತ್ತು 2009 (ದುಬೈ)ನಲ್ಲಿ ಯಶಸ್ವಿಯಾಗಿ ನಡೆದಿದೆ.
ಸಮ್ಮೇಳನದ ಎರಡು ದಿನವೂ ಕರ್ನಾಟಕದ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ವಸ್ತು ಪ್ರದರ್ಶನ ಮಳಿಗೆಗಳಿರುತ್ತವೆ. ಇಲ್ಲಿ ಕರ್ನಾಟಕದ ಗ್ರಾಮೀಣ ಆಟಗಳನ್ನು ಆಡಬಹುದು, ಕನ್ನಡದ ಹಳೆಯ ದಿನಪತ್ರಿಕೆಗಳನ್ನು ಓದಬಹುದು ಮತ್ತು ವಿಶ್ವ ವಿಖ್ಯಾತ ಮೈಸೂರು ಶೈಲಿಯ ತೈಲವರ್ಣಗಳನ್ನು ನೋಡಬಹುದು!
ಬನ್ನಿ ಈ ಸಾಂಸ್ಕೃತಿಕ ಹಬ್ಬದಲ್ಲಿ ಇಂದು ಮತ್ತು ನಾಳೆ ಪಾಲ್ಗೊಳ್ಳಿ. ಕನ್ನಡಮ್ಮನ ರಥವನೆಳೆಯಲು ನೀವು ಕೈ ನೀಡಿ. ಸಮ್ಮೇಳನದಲ್ಲಿ ನಡೆಯುತ್ತಿರುವ ಕಾರ್ಯಕಲಾಪಗಳ ಮಿಂಚಿನ ವರದಿಗಳಿಗೆ ದಟ್ಸ್ ಕನ್ನಡಕ್ಕೆ ನಿರಂತರವಾಗಿ ಭೇಟಿ ನೀಡುತ್ತಿರಿ.