ಉಷಕ್ಕನ ಕಣ್ಣು ಮಂಜಾದ ಕ್ಷಣಗಳು
ಕಳೆದ ಭಾನುವಾರ ಸೆ. 12 ಮಧ್ಯಾಹ್ನ ನ್ಯೂ ಜೆರ್ಸಿಯ ಹೈಟ್ಸ್ ಟೌನ್ ಹೈಸ್ಕೂಲ್ನಲ್ಲಿ ಅಕ್ಕ ಸಮ್ಮೇಳನದ ಯಶಸ್ಸಿಗಾಗಿ ಹಗಲಿರುಳು ದುಡಿದ ಕಾರ್ಯಕರ್ತರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಬೃಂದಾವನ ಕನ್ನಡ ಕೂಟ ಹಮ್ಮಿಕೊಂಡಿತ್ತು. ಇದರ ಜೊತೆಜೊತೆಗೆ ಗಣೇಶೋತ್ಸವ ಮತ್ತು ಸಮ್ಮೇಳನದಲ್ಲಿ ಕೆಲಸದ ತುರಾತುರಿಯಲ್ಲಿ ಕಾರ್ಯಕ್ರಮಗಳ ವೀಕ್ಷಣೆಯಿಂದ ವಂಚಿತರಾದ ಕಾರ್ಯಕರ್ತರಿಗೋಸ್ಕರ ಕರ್ನಾಟಕದಿಂದ ಬಂದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ರಸಗವಳದ ಸರಮಾಲೆ ಹೆಣೆಯಲಾಗಿತ್ತು.
ಇದಕ್ಕೆ ಅನುಗುಣವಾಗಿ ಕಾರ್ಯಕರ್ತರು ಕೂಡ ಕುಂತ ಜಾಗ ಬಿಟ್ಟು ಮಿಸುಕಾಡದೆ ಪ್ರೋಗ್ರಾ೦ ಮಿಸ್ ಮಾಡ್ಕೊಳ್ಳೋ ಮಾತೇ ಇಲ್ಲ ಎಂಬ ಸಂಕಲ್ಪ ಮಾಡಿ ಬಂದು ಕುಂತಂತೆ ಕಾಣುತ್ತಿತ್ತು. ಪ್ರಸನ್ನಕುಮಾರ್ ಕಾರ್ಯಕರ್ತರ ಬಳಗವನ್ನು ಸ್ವಾಗತಿಸಿದರೆ, ಉಷಾ ಪ್ರಸನ್ನ ಕಾರ್ಯಕರ್ತರ ನಿಷ್ಕಲ್ಮಷ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ವಿಶಾಲವಾಗಿರುವ ಒಂದು ಖಾಲಿ ಉಗ್ರಾಣವನ್ನು ಸ್ವರ್ಗದಂತೆ ಸಿಂಗಾರ ಮಾಡಿದ ಪರಿ ಒಂದು ದಂತಕತೆಯೆಂದು ಬಣ್ಣಿಸಿದರು. ಜತೆಜತೆಯಾಗಿ ದುಡಿದ ಕನ್ನಡ ಒಡನಾಡಿಗಳಿಗೆ ವಂದನೆ ಹೇಳುತ್ತಾ ಹೇಳುತ್ತಾ ಉಷಾ ಭಾವೋದ್ವೇಗಕ್ಕೆ ಒಳಗಾದರು. ಧೈರ್ಯದಿಂದ ಮುನ್ನುಗ್ಗಿ ಒಂದು ಜಾಗತಿಕ ಮಟ್ಟದ ಕಾರ್ಯಕ್ರಮದ ಹೊಣೆಹೊತ್ತ ಈ ಹೆಣ್ಣು ಮಗಳ ಕಣ್ಣಂಚಿನಲ್ಲಿ ನೀರು ಹನಿದದ್ದ ಕಂಡು ಕರುಳು ಚುರ್ರೆಂದಿತು. 'ಒಂದು ಹನಿ ಕಣ್ಣೀರಿನಲ್ಲಿ ನನ್ನ ಪಾಪಗಳನ್ನೆಲ್ಲ ತೊಳೆದು ಬಿಡು' ಎಂಬ ಕವಿ ವಾಣಿ ನೆನಪಾಯಿತು.
ಮಗಳ ಮದುವೆ ಮಾಡಿ ಉಸ್ಸಪ್ಪಾ ಎಂದು ಧನ್ಯತೆಯ ಮುಗುಳು ನಗೆ ಸೂಸಿ ಸುಸ್ತಾದ ಹೆತ್ತ ಅಪ್ಪ ಅಮ್ಮಂದಿರಂತೆ, ಐದು ಸಾವಿರ ಜನರನ್ನು ಕೂಡಿ ಹಾಕಿ ಅಮೆರಿಕದ ಅಕ್ಕನ ಮದುವೆಯನ್ನು ಸಂಭ್ರಮದಿಂದ ಮಾಡಿ ಮುಗಿಸಿದ ಸಂತೋಷ ಉಷಾ ಮತ್ತು ಪ್ರಸನ್ನಕುಮಾರ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ನೋವು ನಲಿವುಗಳೇನೇ ಇರಲಿ, ಅವರ ಕನ್ನಡ ಪ್ರೀತಿಗೆ ನನ್ನ ಒಂದು ಸೆಲ್ಯೂಟ್. ಶ್ರೀನಿವಾಸ ಕಪ್ಪಣ್ಣ ಅವರು ಸಮ್ಮೇಳನಕ್ಕಾಗಿ ದುಡಿದ ಪರಿಯನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಕಷ್ಟ ಸಾದ್ಯ. ಹಳ್ಳಿಯ ಕಲಾವಿದರನ್ನು ಕರೆತಂದು ಅವರ ಜಾನಪದ ಕಾರ್ಯಕ್ರಮಗಳನ್ನು ಅಮೆರಿಕನ್ನಡಿಗರಿಗೆ ಉಣಬಡಿಸಿದ್ದಕ್ಕೆ ಅವರಿಗೆ ಅಮೆರಿಕನ್ನಡಗರ ಪರವಾಗಿ ನಮೋನ್ನಮಃ.
ಸಾಂಸ್ಕೃತಿಕ ಕಾರ್ಯಕ್ರಮಗಳು : ಕಾರ್ಯಕ್ರಮದ ಪ್ರಾರಂಭವಾಗಿದ್ದು ಎಮ್.ಡಿ. ಕೌಶಿಕ್ ಅವರ ಮ್ಯಾಜಿಕ್ ಶೋನಿಂದ. ಕೈಯಿಂದ ಮಾಡಿದ ಹಗ್ಗದ ಮ್ಯಾಜಿಕ್ಕ್ಕಿಂತ, ಬಾಯಿಯಿಂದ ಮಾಡಿದ ಡಿ.ವಿ.ಜಿಯವರ ಕಗ್ಗದ ಮ್ಯಾಜಿಕ್ ಬಲೇ ಮಜಾ ನೀಡಿತು. ಕೌಶಿಕ್ರವರ ಪ್ರದರ್ಶನಕ್ಕೆ ಚಪ್ಪಾಳೆ ಸುರಿಮಳೆಯಾಯಿತು. ನಂತರ ಪ್ರಭಾತ್ ಕಲಾವಿದರ ಪಂಚವಟಿ ನೃತ್ಯರೂಪಕ, ಪ್ರೇಕ್ಷಕರನ್ನು ದಿಢೀರ್ ಅಂತ ಬೃಂದಾವನದಿಂದ ಪಂಚವಟಿಗೆ ಸೆಳೆದುಕೊಂಡು ಹೋಯಿತು. ರಾಮ-ಲಕ್ಷ್ಮಣರು ಜಿಂಕೆ ಹಿಡಿಯಲು ಹೋದರು, ಆರ್ಭಟದಿಂದ ರಾವಣ ಬಂದು ಸೀತೆಯನ್ನು ದರದರನೆ ಎಳೆದುಕೊಂಡು ಹೋದ, ಇದೆಲ್ಲಾ ನೋಡುತ್ತಾ ನೆರೆದ ಪ್ರೇಕ್ಷಕರು ಪಂಚವಟಿಯಲ್ಲಿ ಕಳೆದುಹೋದರು. ಆದರೆ ರಾಮ ಮರಳಿ ಬರಲಿಲ್ಲ, ಸೀತೆ ಹೊರಳಾಡಿ ಅಳಲಿಲ್ಲಾ, ರಾವಣ ಬಿಲ್ಲು ಎತ್ತಿ ಹೋರಾಡಲಿಲ್ಲ, ಸಮಯದ ಅಭಾವದಿಂದಲೋ ಏನೋ ಪಂಚವಟಿ ನೃತ್ಯರೂಪಕ ಅಷ್ಟಕ್ಕೇ ಮೊಟಕುಗೊಳಿಸಲಾಗಿತ್ತು. ಆದರೆ ಪ್ರಭಾತ್ ಕಲಾವಿದರ ಪೌರಾಣಿಕ ನೃತ್ಯನಾಟಕಗಳು ಅತ್ಯುತ್ತಮ ಅನ್ನೋ ಮಾತು ನೂರಕ್ಕೆ ನೂರು ಸತ್ಯವಾಯಿತು. ಇದರೊಟ್ಟಿಗೆ ಪ್ರಭಾತ್ ಕಲಾವಿದರ ಇನ್ನೆರಡು ಕಾರ್ಯಕ್ರಮಗಳಾದ ಬೊಮ್ಮನಹಳ್ಳಿ ಕಿಂದರಿಜೋಗಿ, ಮಹಿಷಾಸುರ ಮರ್ಧಿನಿ ಪ್ರೇಕ್ಷಕರ ಮನ ಸೂರೆಗೊಂಡವು.
ಭ್ರಮರಿ ಡಾನ್ಸ್ ತಂಡದವರ ಕರಗ ಮತ್ತು ಶರಣು ಜನಪದಕ್ಕೆ ತುಂಬಾನೇ ಚೆನ್ನಾಗಿ ಮೂಡಿಬಂದವು. ಕರ್ನಾಟಕ ಕಲಾದರ್ಶಿನಿಯವರ ಯಕ್ಷಗಾನದಲ್ಲಿ ಅಭಿನಯಿಸಿದ ಪುಟಾಣಿ ಮಕ್ಕಳ ಅಭಿನಯ ಮತ್ತು ಕುಣಿತದ ಗತ್ತು ನೋಡಿದ ಪ್ರೇಕ್ಷಕನ ಮುಖದಲ್ಲಿ ಮಸ್ತ್ ಮಂದಹಾಸ. ಕಾರ್ಯಕ್ರಮಗಳ ಮಧ್ಯ ಕಾರ್ಯಕರ್ತರನ್ನು ಅಭಿನಂದಿಸುವ ಕಾರ್ಯ ನಿಯಮಿತವಾಗಿ ಸಾಗಿತ್ತು. ಸಮ್ಮೇಳನಕ್ಕಾಗಿ ಸುಮಾರು ಒಂದು ವರ್ಷದಿಂದ ಹಗಲುರಾತ್ರಿ ಕೆಲಸಮಾಡಿ ಸಮ್ಮೇಳನದ ಸಂಚಾಲಕರಲ್ಲಿ ಒಬ್ಬರಾದ ಮಧು ರಂಗಯ್ಯನವರು ವಿಪರೀತ ಜ್ವರದಿಂದ ಬಳಲುತ್ತಿದ್ದರೂ ಕೂಡ ಕಾರ್ಯಕರ್ತರ ಅಭಿನಂದನೆಗೆ ಬಂದು ನಿಂತಿದ್ದು ಅವರ ಶ್ರದ್ದೆಗೆ ಹಿಡಿದ ಕನ್ನಡಿ. ಇಂಥ ಕನ್ನಡ ಸೇವಕರು ಈ ಕಾಲದಲ್ಲಿ ಕಂಡುಬರುವುದು ಅಪರೂಪ.
ಸಮ್ಮೇಳನದ ಪ್ರೋಗ್ರಾಮ್ ಕಮಿಟಿಯಲ್ಲಿದ್ದ, ಅಪಾರ ಶ್ರಮವಹಿಸಿ ಕೆಲಸಮಾಡಿದ ನಂದು ಮತ್ತು ವೇದಾ ಗುಂಡಣ್ಣ ಅವರನ್ನು ಮೊದಲ ಸಾಲಿನಲ್ಲಿ ಕುಳಿತು ಕಾರ್ಯಕ್ರಮಗಳನ್ನು ಸವಿಯುವ ಕ್ಷಣವನ್ನು ಕಂಡಾಗ, ಅಕ್ಕ ಸ್ವಯ೦ಸೇವಕರ ಧನ್ಯತಾ ಕಾರ್ಯಕ್ರಮದ ಚಿತ್ರಾವಳಿಗೆ ಈ ದೃಶ್ಯ ಪರ್ಫೆಕ್ಟ್ ಫ್ರೇಮ್ ನಂತೆ ಗೋಚರಿಸುತ್ತಿತ್ತು. ಸರಿ ಸುಮಾರು 5 ಗಂಟೆಗಳ ಕಾಲ ಭರ್ಜರಿ ಕಾರ್ಯಕ್ರಮದ ಆನಂದ ಸವಿದ ಕಾರ್ಯಕರ್ತರನ್ನು ರಾತ್ರಿ ಊಟಕ್ಕೆ ಗಣೇಶೊತ್ಸವದ ನೆಪದಲ್ಲಿ ಕಡುಬು ಹೋಳಿಗೆ ಊಟ ಕೈಬಿಸಿ ಕರೆಯುತ್ತಿತ್ತು. ಅಕ್ಕದಲ್ಲಿ ಕೆಲಸ ಮಾಡಿದ ಸ್ವಯ೦ಸೇವಕರಿಗೆ ನಿಜವಾದ ಗೌರವ ದೊರಕಿದ್ದು ನಮಗೆಲ್ಲ ತೃಪ್ತಿ ನೀಡುವ ವಿಷಯ.
ಈಗ ಅಕ್ಕ ಸಮ್ಮೇಳನದ ಆಶಯ ಗೀತೆಯನ್ನು ಮತ್ತೆ ಆಲಿಸುವಾ...
ಚಿತ್ರಗಳಲ್ಲಿ ಅಕ್ಕ ಸಂಭ್ರಮ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಪ್ರೀತಿಪಾತ್ರರಿಗೆ ಹೂಗುಚ್ಛ ಕಳಿಸಿ