ರಮ್ಯಾ ಐಂದ್ರಿತಾ ಪಂದ್ಯಕ್ಕೆ ಪುನೀತ್ ಅಂಪೈರ್
ಕರ್ನಾಟಕದ ಮುಖ್ಯಮಂತ್ರಿಯವರ ಸಂದರ್ಶನವನ್ನೂ ಹದಿನೈದು ನಿಮಿಷಗಳಲ್ಲೇ ಪಡೆಯಬಲ್ಲಂಥ ವರ್ಚಸ್ಸುಳ್ಳ ಅಕ್ಕ ಧುರೀಣ ಅಮರನಾಥ ಗೌಡರಿಗೂ ಇದರ ಬಿಸಿ ತಟ್ಟದೇ ಬಿಡಲಿಲ್ಲ. ರಮ್ಯಾ ಅವರನ್ನು ಭೇಟಿ ಮಾಡಿ ಮಾತನಾಡಿಸುವುದಕ್ಕೆ ಅಮರನಾಥ ಗೌಡರು ರೆನೈಸಾನ್ಸ್ ಹೋಟೆಲ್ನ ಲಾಬಿಯಲ್ಲಿ ಕನಿಷ್ಠ ನಲವತ್ತೈದು ನಿಮಿಷ ಕಾಯಬೇಕಾಯಿತು. ಸಮ್ಮೇಳನದ ಸಾಂಸ್ಕೃತಿಕ ಸಮಿತಿಯವರು ರಮ್ಯಾ ಮನವೊಲಿಸಲು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗಿ ಅಂತಿಮವಾಗಿ ರಮ್ಯಾ ನ್ಯೂಯಾರ್ಕ್ಗೆ ಹಾರಿದರೆ ಇತ್ತ ಐಂದ್ರಿತಾ ರೇ ಹಳೇಕಬ್ಬಿಣ ಹಳೇಪೇಪರ್... ಹಾಡಿಗೆ ಮುಖ್ಯವೇದಿಕೆಯಲ್ಲಿ ಸೊಂಟ ಬಳುಕಿಸುತ್ತಿದ್ದರು.
ಈ ರಂಪಾಟವನ್ನು ಖುದ್ದಾಗಿ ಕಂಡ ಪುನೀತ್ ರಾಜಕುಮಾರ್ ಅವರಿಗೆ ಬಲುಬೇಸರವಾಯಿತಂತೆ. "ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಬೆಂಗಳೂರಿನಲ್ಲಿ ಬಗೆಹರಿಸಿಕೊಳ್ಳಬೇಕು. ಅಮೆರಿಕದ ಕನ್ನಡ ಸಮ್ಮೇಳನದಲ್ಲಿ ಅಲ್ಲ" ಎಂದು ಅವರು ಕಡ್ಡಿ ಮುರಿದಂತೆ ಹೇಳಿದರು. ಪುನೀತ್ ಅವರ ಸಮಯಪ್ರಜ್ಞೆ ಮತ್ತು ಸಂತುಲನಭರಿತ ನಿಲುವನ್ನು ಕಂಡ ಅಕ್ಕ ಅಧಿಕಾರಿಗಳು ಬೆರಗಾದರು ಎಂದು ಅಲ್ಲಿ ಉಪಸ್ಥಿತರಿದ್ದ ನಮ್ಮ ಸ್ವಂತ ಸುದ್ದಿಗಾರರು ದೂರವಾಣಿ ಮುಖೇನ ತಿಳಿಸಿದರು.
ಸಮ್ಮೇಳನದ ಕೊನೆಯ ದಿನ ರಾತ್ರಿ ಜರುಗಿದ ರಸಮಂಜರಿ ಕಾರ್ಯಕ್ರಮದಲ್ಲಿ ವಿಜಯ ರಾಘವೇಂದ್ರ ಮತ್ತು ಶ್ರೀಮುರಳಿಯವರ ನೃತ್ಯಕ್ಕೆ ಇಡೀ ಸಭೆ ಆಗಾಗ ಎದ್ದು ಕುಣಿಯಿತು. ನವರಸನಾಯಕ ಜಗ್ಗೇಶ್ ಮಾತನಾಡಲು ವೇದಿಕೆಗೆ ಬಂದಾಗ ಸಭೆ ಅವರನ್ನು ಶಿಳ್ಳೆಚಪ್ಪಾಳೆಗಳಿಂದ ಸ್ವಾಗತಿಸಿತು. ಕನ್ನಡಿಗರು ಕನ್ನಡ ಸಿನೆಮಾ ನೋಡುವ ಸಂಕಲ್ಪ ತೊಡಬೇಕೆಂದು ತಮ್ಮ ಎಂದಿನ ನಗೆಚಟಾಕಿಗಳಿಂದ ಜಗ್ಗೇಶ್ ಅನಿವಾಸಿ ಕನ್ನಡಿಗರಿಗೆ ಕರೆಕೊಟ್ಟರೆ ಅವರ ಶಿಷ್ಯ ಸಾಧುಕೋಕಿಲ ಸಿಡಿಸಿದ ಚಿಲ್ಲರೆ ಜೋಕು ನಾಲ್ಕುಸಾವಿರ ಮಂದಿ ತುಂಬಿದ ಸಭೆಯನ್ನು ಅಣಕಿಸಿತು.
ಸಮ್ಮೇಳನದ ಫಲಶ್ರುತಿಯನ್ನು ಅರಿಯಲು ನಮ್ಮ ವಾರ್ತಾವಾಹಿನಿ ಕೈಗೊಂಡ ಸಮೀಕ್ಷೆಯ ಇನ್ನಿತರ ಫಲಿತಾಂಶಗಳು ಇಂತಿವೆ.
ಮುಂದೆ ಓದಿ : ವಾರ್ತಾವಾಹಿನಿ ಸಮೀಕ್ಷೆಯ ಇನ್ನಿತರ ಫಲಿತಾಂಶ »