ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಅಮೆರಿಕಾಗೆ ಆಲ್ ದಿ ಬೆಸ್ಟ್!

By * ನಾಗರಾಜ ಪಾಟೀಲ್, ಧಾರವಾಡ
|
Google Oneindia Kannada News

Yashwant Sardeshpande in All The Best
ಗುರು ಸಂಸ್ಥೆ, ಹುಬ್ಬಳ್ಳಿ ನಾಟಕ ತಂಡವು 'ಆಲ್ ದಿ ಬೆಸ್ಟ್!' ಎಂಬ ನಗೆ ನಾಟಕವನ್ನು ಕಳೆದ ಹತ್ತು ವರ್ಷಗಳಿಂದ ರಾಜ್ಯದ ಹಲವಾರು ಊರುಗಳಲ್ಲಿ ಯಶಸ್ವಿಯಾಗಿ ಪ್ರದರ್ಶಿಸುತ್ತಾ ಬಂದಿದೆ. ಸಾವಿರ ಪ್ರದರ್ಶನದತ್ತ ದಾಪುಗಾಲಿಡುತ್ತಿರುವುದು ಈ ನಾಟಕದ ವಿಶೇಷತೆ. ತುಂಬಿದ ರಂಗ ಮಂದಿರಗಳಿಗೆ ಇಂದಿಗೂ ಪ್ರದರ್ಶನಗೊಳ್ಳುತ್ತಿರುವ ನಾಟಕ ಆಲ್ ದಿ ಬೆಸ್ಟ್. ಇದನ್ನು ಬೆಸ್ಟ್ ಆಫ್ ಆಲ್ ನಾಟಕ ಎಂದು ಹೇಳಿದರೆ ತಪ್ಪಾಗಲಾರದು.

ಮರಾಠಿ ರಂಗಭೂಮಿಯ ಮಟ್ಟಿಗೆ ಇದೊಂದು ದಾಖಲೆಯ ಮತ್ತು ಹೊಸ ಚೈತನ್ಯವನ್ನು ತುಂಬಿದ ಖ್ಯಾತ ನಾಟಕ. ಯುವ ನಾಟಕಕಾರ ದೇವೇಂದ್ರ ಪೇಮರ ಮೊದಲ ಪೂರ್ಣ ಪ್ರಮಾಣದ ನಾಟಕವಿದು. ಭಾರತದ ಹತ್ತಾರು ಭಾಷೆಗೆ ಅನುವಾದಗೊಂಡು ಸಾವಿರಾರು ಪ್ರದರ್ಶನವನ್ನು ಕಂಡ ಅಪರೂಪದ ನಾಟಕ. ಕನ್ನಡಕ್ಕೆ ಇದನ್ನು ಅನುವಾದಿಸಿದವರು ನ್ಯಾಯವಾದಿ ಪ್ರಹ್ಲಾದ ಸರದೇಶಪಾಂಡೆ.

ಮೂವರು ಅಂಗವಿಕಲ ಯುವಕರು ಒಂದೇ ಹುಡುಗಿಯನ್ನು ಪ್ರೀತಿಸಿ, ತಮ್ಮ ಪ್ರೀತಿಯನ್ನು ಅವಳಲ್ಲಿ ತೋಡಿ ಕೊಳ್ಳುವ ಕಥೆಯಿದು. ಆ ಮೂವರು ತಾವು ಎಲ್ಲರಂತೆ ಸಾಮಾನ್ಯರು ಎಂಬುದನ್ನು ಸ್ಪಷ್ಟಪಡಿಸುವದರೊಂದಿಗೆ We dont want sympathy ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ಅಂಗ ವೈಕಲ್ಯತೆಯನ್ನು ಲೇವಡಿ ಮಾಡದೆ ತಿಳಿಯಾದ ಹಾಸ್ಯದೊಂದಿಗೆ ಅರಳುತ್ತದೆ. ಸಮಾಜದ ಎಲ್ಲಾ ವರ್ಗದ ಎಲ್ಲಾ ವಯಸ್ಸಿನ ಜನರನ್ನು ರಂಜಿಸಿ ಜನಪ್ರಿಯವಾಗಿರುವ ಈ ನಾಟಕವನ್ನು ಒಮ್ಮೆಯಾದರೂ ನೀವು ನೋಡಲೇಬೇಕು.

ಮೇಲಿನ ಎಲ್ಲಾ ವಿಶೇಷತೆಗಳನ್ನು ಹೊಂದಿರುವ ನಾಟಕ ಆಲ್ ದಿ ಬೆಸ್ಟ್! ಈ ವರ್ಷ ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ನಡೆಯುವ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಗುರು ಸಂಸ್ಥೆಯ ಈ ನಾಟಕದಲ್ಲಿ ಹಲವಾರು ವರ್ಷಗಳಿಂದ ಅಭಿನಯಿಸುತ್ತಾ ಬಂದಿದ್ದಾರೆ ಕಲಾವಿದರಾದ ಮಾಲತಿ ಸರದೇಶಪಾಂಡೆ, ಗುರುರಾಜ ಛಪ್ಪರದ, ಮತ್ತು ಧರ್ಮಣ್ಣ ಕಡೂರು ಎಚ್.

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತನ್ನ ಅಕ್ಕ ಸಮ್ಮೇಳನದ ಕಲಾವಿದರ ಪಟ್ಟಿಯಲ್ಲಿ ಇವರ ಹೆಸರನ್ನು ಪ್ರಕಟಿಸಿದೆ. ಈ ಕಲಾವಿದರಿಗೆ ಒಂದು ಸುವರ್ಣ ಅವಕಾಶವನ್ನು ಕಲ್ಪಿಸಿ ಕೊಟ್ಟಿದೆ. ಜೊತೆಗೆ ಇದರ ಮೂಲ ರೂವಾರಿ, ನಾಟಕದ ನಿರ್ದೇಶಕ ಹಾಗೂ ನಟರಾದ ಯಶವಂತ ಸರದೇಶಪಾಂಡೆ ಅವರನ್ನು ಅಕ್ಕ ಕೂಟದವರೇ ಕರೆಸಿಕೊಂಡಿರುವುದು ಇನ್ನೊಂದು ವಿಶೇಷ. ಇಂತಹ ಆಲ್ ದಿ ಬೆಸ್ಟ್! ನಾಟಕ ಅಮೆರಿಕಾದ ಕನ್ನಡಿಗರನ್ನು ಮತ್ತು ಅಮೆರಿಕನ್ನರನ್ನು ರಂಜಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಸರದೇಶಪಾಂಡೆಯವರ ಇನ್ನೊಂದು ಸ್ವಾರಸ್ಯಮಯ ಏಕವ್ಯಕ್ತಿ ಪ್ರಯೋಗ ರಾಶಿಚಕ್ರ. ಸುಮಾರು ಎರಡು ತಾಸು ನಲವತ್ತೈದು ನಿಮಿಷಗಳ ಕಾಲ ಎಡಬಿಡದೆ ರಂಜಿಸುವ ಈ ಹಾಸ್ಯಧಾರೆ ನಯಾಗರಾ ಜಲಧಾರೆಯಷ್ಟೇ ಫೇಮಸ್ಸಾಗಿದೆ. ಆಯೋಜಕರು ಸಮಯಾವಕಾಶ ಕಲ್ಪಿಸಿದಲ್ಲಿ ನಿತ್ಯ ನೂತನ 'ರಾಶಿ ಚಕ್ರ'ವನ್ನು ಪ್ರಯೋಗ ಮಾಡುವ ಆಶಾಭಾವನೆಯನ್ನು ಯಶವಂತ ಸರದೇಶಪಾಂಡೆಯವರು ಇಟ್ಟುಕೊಂಡಿದ್ದಾರೆ. ಯಶವಂತರ ಇ ಮೇಲ್ ವಿಳಾಸ : [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X