ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಮೂವತ್ತು ಮಳೆಗಾಲ’ದ ಕವಿ ಎಚ್.ಎಸ್.ವಿ

By * ತ್ರಿವೇಣಿ
|
Google Oneindia Kannada News

Dr. HS Venketesh Murthy
ಡಾ|| ಎಚ್.ಎಸ್. ವೆಂಕಟೇಶಮೂರ್ತಿಯವರು ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರು. ಅವರು ದಾವಣಗೆರೆ ಜಿಲ್ಲೆ, ಚೆನ್ನಗಿರಿ ತಾಲ್ಲೂಕಿನಲ್ಲಿರುವ ಹೋದಿಗ್ಗೆರೆ ಗ್ರಾಮದಲ್ಲಿ 1944ರ ಜೂನ್ ತಿಂಗಳು 23ರಂದು ಜನ್ಮತಾಳಿದರು. ತಂದೆ ನಾರಾಯಣಭಟ್ಟ ಮತ್ತು ತಾಯಿ ನಾಗರತ್ನಮ್ಮನವರು. ಪ್ರಾಥಮಿಕ ವಿದ್ಯಾಭ್ಯಾಸ ಹೋದಿಗ್ಗೆರೆಯಲ್ಲೂ, ಹೈಸ್ಕೂಲು ವಿದ್ಯಾಭ್ಯಾಸ ಹೊಳಲ್ಕೆರೆಯಲ್ಲೂ ನಡೆದವು. ಭದ್ರಾವತಿಯ ಪಾಲಿಟೆಕ್ನಿಕ್‌ನಲ್ಲಿ ಮೆಕ್ಯಾನಿಕಲ್ ಇಂಜಿನಿರಿಂಗ್ ಡಿಪ್ಲೊಮಾ ಪಡೆದು, ಭದ್ರಾವತಿಯಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು.

ಆದರೆ, ಅವರ ಹೃದಯದಲ್ಲಿದ್ದ ಕನ್ನಡ ಭಾಷೆಯನ್ನು ಅಧ್ಯಯನ ಮಾಡುವ ಮತ್ತು ಬರಹಗಾರನಾಗುವ ಉತ್ಕಟಾಕಾಂಕ್ಷೆ ಅವರನ್ನು ಸುಮ್ಮನಿರಗೊಡಲಿಲ್ಲ. ಧಾರವಾಡ ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಬಿ.ಎ. ಪದವಿ ಪಡೆದು, ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿ ಬೆಂಗಳೂರು ವಿಶ್ವವಿದ್ಯಾಲಯದ ಎಂ.ಎ. ಪದವಿಯನ್ನು ಪಡೆದರು. 1973ರಲ್ಲಿ ಪ್ರೊ|| ಜಿ.ಎಸ್.ಶಿವರುದ್ರಪ್ಪನವರ ನೇತೃತ್ವದಲ್ಲಿ ಕಥನ ಕವನಗಳು ಎಂಬ ವಿಷಯ ಕುರಿತು ಥೀಸಿಸ್ ಬರೆದು ಬೆಂಗಳೂರು ವಿಶ್ವವಿದ್ಯಾಲಯದ ಪಿ.ಎಚ್.ಡಿ. ಪದವಿಯನ್ನೂ ಗಳಿಸಿದರು. ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ 27 ವರ್ಷ ಸೇವೆ ಸಲ್ಲಿಸಿ, 2000ರಲ್ಲಿ ನಿವೃತ್ತರಾಗಿರುವ ಎಚ್ಚೆಸ್ವಿಯವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಕೃತಿಗಳು : ವೆಂಕಟೇಶಮೂರ್ತಿಯವರು ಕವನಗಳು, ನಾಟಕಗಳು, ಸಣ್ಣ ಕಥೆಗಳು, ಕಾದಂಬರಿಗಳ ಜೊತೆಗೆ ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೂ ತಮ್ಮ ಕೊಡುಗೆ ಸಲ್ಲಿಸಿದ್ದಾರೆ. ಅವರ ಕೆಲವು ಕೃತಿಗಳೆಂದರೆ : 'ಪರಿವೃತ್ತ"(ಕವಿತೆ), 'ಬಾಗಿಲು ಬಡಿವ ಜನ"(ಕವಿತೆ), 'ಸಿಂದಾಬಾದನ ಆತ್ಮಕಥೆ"(ಕವಿತೆ), 'ಕ್ರಿಯಾಪರ್ವ"(ಕವಿತೆ), ಉತ್ತರಾಯಣ (ಕವಿತೆ), 'ಅಮೆರಿಕದಲ್ಲಿ ಬಿಲ್ಲುಹಬ್ಬ"(ಕವಿತೆ)", 'ತಾಪಿ"(ಕಾದಂಬರಿ), 'ಬಾನಸವಾಡಿಯ ಬೆಂಕಿ"(ಕಥಾ ಸಂಕಲನ), ಹೆಜ್ಜೆಗಳು (ನಾಟಕ), 'ಹಕ್ಕಿಸಾಲು (ಮಕ್ಕಳ ಕವಿತೆ), 'ಅಮಾನುಷರು"(ಮಕ್ಕಳ ಕಾದಂಬರಿ), 'ಸಿಂಗಾರಿ" (ಪ್ರವಾಸ ಕಥನ).... ಇತ್ಯಾದಿಯಾಗಿ ಭಾಷಾಂತರ, ವಿಮರ್ಶೆಗಳನ್ನೊಳಗೊಂಡಂತೆ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. 'ಚಿನ್ನಾರಿ ಮುತ್ತ", 'ಕ್ರೌರ್ಯ", 'ಮತದಾನ" ಚಿತ್ರಗಳಿಗೆ ಸಾಹಿತ್ಯ ಒದಗಿಸಿರುವುದಲ್ಲದೆ ಕಿರುತೆರೆ ಧಾರಾವಾಹಿಗಳಿಗೂ ಗೀತೆಗಳನ್ನು ರಚಿಸಿದ್ದಾರೆ. ಇವರ ಹಲವಾರು ಭಾವಗೀತೆಗಳು ಧ್ವನಿಸುರುಳಿಗಳಾಗಿ ಕನ್ನಡಿಗರ ಮನ ಸೂರೆಗೊಂಡಿವೆ.

ಪ್ರಶಸ್ತಿಗಳು : ಕನ್ನಡ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ದೇವರಾಜ್ ಬಹಾದ್ದೂರ್ ಪ್ರಶಸ್ತಿ, ಡಿವಿಜಿ ಪ್ರಶಸ್ತಿ, ಮೈಸೂರು ಅನಂತಸ್ವಾಮಿ ಪ್ರಶಸ್ತಿ ಮುಂತಾದ ನಾಡಿನ ಹಲವಾರು ಗೌರವಗಳು ಎಚ್ಚೆಸ್ವಿಯವರನ್ನು ಅರಸಿ ಬಂದಿವೆ. ಎಚ್ಎಸ್ವಿ ಅವರು 2010ರ ಸೆಪ್ಟೆಂಬರ್ ನಲ್ಲಿ ನ್ಯೂ ಜೆರ್ಸಿಯಲ್ಲಿ ಜರಗಲಿರುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಸಾಹಿತ್ಯ ವೇದಿಕೆಯಲ್ಲಿ ಮುಖ್ಯ ಅತಿಥಿಗಳಲ್ಲೊಬ್ಬರಾಗಿ ಭಾಗವಹಿಸುತ್ತಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X