ಅಕ್ಕ ನೆನಪಿಗಾಗಿ ಲಹರಿ ಸಂಗೀತ ಸುಧೆ
ಅಕ್ಕ ನೆನಪಿಗಾಗಿ ಲಹರಿ ರೆಕಾರ್ಡಿಂಗ್ ಕಂಪನಿ ಕನ್ನಡ ಸುಮಧುರ ಗೀತೆಗಳ ಗುಚ್ಛವನ್ನು ಹೊರತರುತ್ತಿದೆ. ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಮೊದಲ ದಿನವೇ ಅಂದರೆ ಸೆಪ್ಟೆಂಬರ್ 3ರಂದು ನ್ಯೂಜೆರ್ಸಿಯಲ್ಲಿ ಈ ಗೀತಗುಚ್ಛ ಬಿಡುಗಡೆಯಾಗಲಿದೆ. ಪ್ರಖ್ಯಾತ ಗಾಯಕ-ಗಾಯಕಿಯರು ಹಾಡಿರುವ 300 ಹಾಡುಗಳನ್ನು ಒಟ್ಟು ಮಾಡಿ ಹೊರತರುತ್ತಿರುವುದು ಈ ಗೀತಗುಚ್ಛದ ವಿಶೇಷ.
ಈ ಗೀತಗುಚ್ಛದಲ್ಲಿ ಒಟ್ಟು ಐದು ಸಿಡಿಗಳಿದ್ದು ಒಂದೊಂದು ಸಿಡಿಗೂ ಒಂದೊಂದು ಹೆಸರನ್ನು ನೀಡಲಾಗಿದೆ. ನನ್ನ ಹೃದಯವ ನಿನಗೆ ನೀಡಿದೆ, ಬೃಂದಾವನಕೆ ಹಾಲನು ಮಾರಲು, ಕರುಣಾಳು ಬಾ ಬೆಳಕೆ, ಆಡು ಬಾ ನವಿಲೆ ಎಂದು ಬಿಡಿಬಿಡಿಯಾಗಿ ಹೆಸರುಗಳನ್ನು ನೀಡಲಾಗಿದೆ. ಗೀತಗುಚ್ಛದ ಬೆಲೆ 15 ಡಾಲರ್ ಗಳು.
ಪಿ ಕಾಳಿಂಗರಾಯ, ಮೈಸೂರು ಅನಂತಸ್ವಾಮಿ, ರತ್ನಮಾಲ ಪ್ರಕಾಶ್, ಸಿ ಅಶ್ವತ್ಥ್ ಹೀಗೆ ಪ್ರಖ್ಯಾತ ಗಾಯಕರು ಹಾಡಿರುವ ಹಾಡುಗಳು ಕೇಳುಗರ ಮನಸೂರೆಗೊಳ್ಳುತ್ತವೆ. ಹೂವು ಹೊರಳುವವು, ಯಾವ ಮೋಹನ ಮುರಳಿ, ಒಂದೇ ಒಂದೇ ನಾವೆಲ್ಲರು ಒಂದೆ, ನೀನು ಮುಗಿಲು ನಾನು ನೆಲ....ಹೀಗೆ ವೈವಿಧ್ಯಮಯ ಸಂಗೀತ, ಸಾಹಿತ್ಯವನ್ನು ಉಣಬಡಿಸುತ್ತದೆ. ಸಿಡಿಯನ್ನು ಸೆಪ್ಟೆಂಬರ್ 3ರಂದೇ ರಾಜ್ಯದಲ್ಲೂ ಬಿಡುಗಡೆ ಮಾಡುವುದಾಗಿ ಲಹರಿ ವೇಲು ದಟ್ಸ್ ಕನ್ನಡಕ್ಕೆ ತಿಳಿಸಿದರು.