ಅಕ್ಕ ಸಮ್ಮೇಳನದಲ್ಲಿ ಅಡಿಗಾಸ್ ಅಡುಗೆ
ಬೆಂಗಳೂರಿನ ಏಟ್ರಿಯಾ ಹೋಟೆಲಿನಲ್ಲಿ ಗುರುವಾರ ಮುಸ್ಸಂಜೆ ಕರೆಯಲಾಗಿದ್ದ ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಅಕ್ಕ ಸಂಸ್ಥೆಯ ಮುಖ್ಯಸ್ಥ ಅಮರನಾಥ್ ಗೌಡ ಈ ವಿಷಯ ಪ್ರಕಟಿಸಿದರು. ಆರನೇ ಅಕ್ಕ ಸಮ್ಮೇಳನ ಹಲವು ಪ್ರಥಮಗಳಿಗೆ ಮುನ್ನುಡಿ ಬರೆಯಲು ಉದ್ದೇಶಿಸಿದ್ದು ಅವುಗಳಲ್ಲಿ ಕರ್ನಾಟಕದಿಂದಲೇ ಪಾಕಪ್ರವೀಣರನ್ನು ಆಮಂತ್ರಿಸಿ ಆರೇಳು ಸಾವಿರ ಕನ್ನಡಿಗರಿಗೆ ಅಡುಗೆ ಮಾಡಿಸುವುದು ಒಂದು ಐತಿಹಾಸಿಕ ಪ್ರಯತ್ನವಾಗಲಿದೆ ಎಂದು ಅವರು ಹೇಳಿದರು.
ಈ ಮುಂಚೆ ನಡೆದ ಸಮ್ಮೇಳನಗಳಲ್ಲಿ ಅಮೆರಿಕಾದಲ್ಲಿ ಹೋಟೆಲ್ ಉದ್ಯಮ ಇಟ್ಟುಕೊಂಡಿರುವ ಭಾರತೀಯ ಕೆಟರಿಂಗ್ ಕಲಾವಿದರಿಂದ ಅಡುಗೆ ಮಾಡಿಸಲಾಗುತ್ತಿತ್ತು. ಈ ಹೊಟೇಲುಗಳ ಅಡುಗೆ ಭಟ್ಟರು ತಯಾರಿಸುವ ತಿಂಡಿ ತಿನಿಸುಗಳು ಕರ್ನಾಟಕ ಶೈಲಿಯದ್ದೇ ಆಗಿರುತ್ತದಾದರೂ, ಎಲ್ಲೋ ಒಂದು ಕಡೆ ಊಟದ ಗಮ್ಮತ್ತು ಮಿಸ್ ಆಗುತ್ತಿತ್ತು. ಅಲ್ಲಿನ ಅಡುಗೆ ಭಟ್ಟರಿಗೆ ಚಪಾತಿ ಹಿಟ್ಟು ಲಟ್ಟಿಸುವುದು ಮತ್ತು ಹದವಾಗಿ ಬೇಯಿಸುವ ಕಲೆ ಕರಗತವಾಗಿರುವುದಿಲ್ಲ. ಅಮೆರಿಕಾದ ಬಣ್ಣಗೆಟ್ಟ ಚಪಾತಿಗಳು ಬರಿಟೋಸ್ ಅಥವಾ ಸಬ್ ವೇಗಿಂತ ರುಚಿಹೀನವಾಗಿರುವುದು ಸಮ್ಮೇಳನಗಳಲ್ಲಿ ಊಟ ಮಾಡಿದವರಿಗೇ ಗೊತ್ತಿರುತ್ತದೆ.
ಅದು ಹೇಗೂ ಇರಲಿ, ಸಮ್ಮೇಳನದ ಪ್ರಮುಖ ಆಕರ್ಷಣೆಗಳಲ್ಲಿ ರುಚಿಯಾದ ಊಟ ತಿಂಡಿ ತಿನಿಸುಗಳಿಗೆ ಅಗ್ರಸ್ಥಾನ. ಎರಡು ತಿಂಡಿ, ಐದು ಊಟ, ಮೂರು ಲಘು ಉಪಾಹಾರ, ಮತ್ತು ಬೇಕೆನಿಸಿದಾಗ ಫಿಲ್ಟರ್ ಕಾಫಿ ಸಿಕ್ಕರೆ ಸ್ವರ್ಗಕ್ಕೆ ಕಿಚ್ಚು ಹಚ್ಚು ಎಂದು ಕನ್ನಡ ನಾಲಗೆಗಳು ಹೇಳುತ್ತವೆ. ಬೇಡಿಕೆ ಇಂತಿರುವಾಗ ಸಮ್ಮೇಳನ ಸಮಿತಿಯವರು ಕರ್ನಾಟಕ ನಳಪಾಕ ನಿರ್ಮಿತಿಗೆ ಕಾಳಜಿವಹಿಸುವುದು ಅತ್ಯಗತ್ಯ. ಈ ದಿಸೆಯಲ್ಲಿ ಅಕ್ಕ ಇಟ್ಟಿರುವ ದಿಟ್ಟ ಹೆಜ್ಜೆ 'ಸಮ್ಮೇಳನಾರ್ಥಿಗಳಿಗೆ ಅಡಿಗರ ಅಡುಗೆ'.
ಹೆಮ್ಮೆಯ ಕನ್ನಡಿಗ ವಾಸುದೇವ ಅಡಿಗ ಬಗ್ಗೆ »