ನಾವಿಕ ಸಮ್ಮೇಳನದಲ್ಲಿ ಬಿವಿ ಜಗದೀಶ್ ಆಶಯ ಭಾಷಣ
'ಜಾಗತೀಕರಣ, ಅವಕಾಶಗಳು ಮತ್ತು ಸವಾಲುಗಳು' ಎಂಬ ವಿಷಯದ ಕುರಿತು 3 ಲೀಫ್ ಸಿಸ್ಟಂಸ್ ಸಿಇಓ ಮತ್ತು ಅಧ್ಯಕ್ಷರಾಗಿರುವ ಬಿವಿ ಜಗದೀಶ್ ಅವರು ಉಪನ್ಯಾಸ ನೀಡಲಿದ್ದಾರೆ. ಕನ್ನಡ, ಕರ್ನಾಟಕದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಜಗದೀಶ್ ಅವರು ಪ್ರಥಮ ಬಾರಿಗೆ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಷಣ ಮಾಡಲಿದ್ದಾರೆ.
ಕನ್ನಡ ಸಮ್ಮೇಳನಗಳಲ್ಲಿ ಸಾಮಾನ್ಯವಾಗಿ ಕವಿಗಳು, ಲೇಖಕರು, ಸಾಹಿತಿಗಳು, ಚಿಂತಕರು, ರಾಜಕಾರಣಿಗಳೇ ಮುಂತಾದವರು ಆಶಯ ಭಾಷಣ ಮಾಡುವುದು ವಾಡಿಕೆ. ಆದರೆ, ತಂತ್ರಜ್ಞ ಮತ್ತು ವಾಣಿಜ್ಯೋದ್ಯಮಿಯೊಬ್ಬರಿಗೆ ಈ ಅವಕಾಶ ಕಲ್ಪಿಸಿರುವುದು ನಾವಿಕ ಸಮ್ಮೇಳನ ಸಮಿತಿಯ ಹೆಚ್ಚುಗಾರಿಕೆ ಆಗಿದೆ.
ಜಗದೀಶ್ ಕುರಿತು : ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿದ ಜಗದೀಶ್, ಸ್ನಾತಕೋತ್ತರ ಪದವಿಯನ್ನು ಮುಂಬೈ ವಿಶ್ವವಿದ್ಯಾಲಯದಲ್ಲಿ ಪಡೆದಿದ್ದಾರೆ.
3 ಲೀಫ್ ಸಿಸ್ಟಂಸ್ ಸೇರುವ ಮೊದಲು ಜಗದೀಶ್ ಅವರು, ಸಿಟ್ರಿಕ್ ಸಿಸ್ಟಂಸ್ ನ ಉಪಾಧ್ಯಕ್ಷ ಮತ್ತು ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದರು. ಸಿಟ್ರಿಕ್ ಸಿಸ್ಟಂಸ್ ನೆಟ್ ಸ್ಕೇಲರ್ ವಶಪಡಿಸಿಕೊಳ್ಳುವ ಮೊದಲು ನೆಟ್ ಸ್ಕೇಲರ್ ನ ಸಿಇಓ ಮತ್ತು ಅಧ್ಯಕ್ಷರಾಗಿದ್ದರು. 2005ರಲ್ಲಿ ಸಿಟ್ರಿಕ್ ಸಿಸ್ಟಂಸ್ ಪಾಲಾಗುವ ಮೊದಲು ನೆಟ್ ಸ್ಕೇಲರ್ ಕಂಪನಿಯನ್ನು ಅಪ್ಲಿಕೇಷನ್ ಡೆಲಿವರಿ ಸಿಸ್ಟಂಸ್ ಕ್ಷೇತ್ರದಲ್ಲಿ ಮಾರುಕಟ್ಟೆಯ ದೊಡ್ಡಣ್ಣನಾಗಿ ಮಾಡಿದ ಹೆಗ್ಗಳಿಕೆ ಬಿವಿ ಜಗದೀಶ್ ಅವರದು. ಇದಕ್ಕೂ ಮೊದಲು ಎಕ್ಸೋಡಸ್ ಕಮ್ಯುನಿಕ್ಷನ್ಸ್ ಕಂಪನಿಯ ಸಹಸ್ಥಾಪಿಸಿದ್ದರು. ಜಗದೀಶ್ ಅವರು ನಾವೆಲ್ ಮತ್ತು ತ್ರಿಕಾಂ ಕಂಪನಿಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದ್ದರು.