ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂ ಜೆರ್ಸಿಯ ಬೃಂದಾವನದಲ್ಲಿ ವಸಂತೋತ್ಸವ

By Prasad
|
Google Oneindia Kannada News

Vasantotsava, Brindavana, New Jersey
6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಜವಾಬ್ದಾರಿಯನ್ನು ಹೊತ್ತಿರುವ ನ್ಯೂ ಜೆರ್ಸಿಯ ಬೃಂದಾವನದಲ್ಲಿ ಕಳೆದ ಭಾನುವಾರ ಮೇ 2ರಂದು "ವಸಂತ ಋತು"ವಿನ ಆಗಮನದ ಸಡಗರ. ಪ್ರತಿಬಾರಿಯಂತೆ ಈ ಬಾರಿಯೂ ಕೂಡ "ಸ್ಪೂರ್ತಿ" ತಂಡ ಇನ್ನೊಂದು ಯಶಸ್ವಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು.

ಈಸ್ಟ್ ವಿಂಡ್ಸರ್ ನ ಸುಸಜ್ಜಿತವಾದ ಕ್ರೆಪ್ಸ್ ಮಿಡಲ್ ಸ್ಕೂಲ್ ನಲ್ಲಿ ನಡೆದ ಈ ಸಮಾರಂಭ ಪ್ರಾರಂಭವಾದದ್ದು, "ಜುವೆಲ್ ಆಫ್ ಇಂಡಿಯ" ಒದಗಿಸಿದ್ದ ರುಚಿಕರವಾದ ಹಬ್ಬದೂಟದೊಂದಿಗೆ. ಊಟ ಹಾಗು ಉಭಯಕುಶಲೋಪರಿ ಮುಗಿದ ನಂತರ ಕಾರ್ಯಕ್ರಮ ಪ್ರಾರಂಭವಾಯ್ತು. ಪ್ರಾರ್ಥನೆ, ಸ್ವಾಗತ, ಆಶಯ ಗೀತೆ ಹಾಗು ಪುಟ್ಟ ಮಕ್ಕಳಿಂದ ಅಮೇರಿಕ "ರಾಷ್ಟ್ರಗೀತೆ"ಯಾದ ಮೇಲೆ, ಇತ್ತೀಚಿಗೆ ಅಗಲಿದ ಕರ್ನಾಟಕದ ಕಲಾರತ್ನಗಳಾದ ಸಿ. ಅಶ್ವಥ್, ವಿಷ್ಣುವರ್ಧನ್, ಚಿಂದೋಡಿ ಲೀಲ ಹಾಗು ಕೆ.ಎಸ್. ಅಶ್ವಥ್ ರವರಿಗೆ, ಅವರುಗಳು ನಟಿಸಿದ ಸಿನಿಮ ಹಾಡಿನ ದೃಶ್ಯದ ತುಣುಕನ್ನು ದೊಡ್ಡ ಪರದೆಯ ಮೇಲೆ ತೋರಿಸುವ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯ್ತು.

ಅಸ್ತಮಿಸಿದ ಸೂರ್ಯ ಚಂದ್ರ ನಕ್ಷತ್ರಗಳನ್ನು ನೆನೆಯುತ್ತ ಹೊಸ "ಸೂರ್ಯೋದಯ"ದೊಂದಿಗೆ ಬೃಂದಾವನದ ಮಕ್ಕಳ ಕಾರ್ಯಕ್ರಮ ಪ್ರಾರಂಭ. ಡಾ. ರಾಜು ಮುತ್ತು ವಿಶೇಷವಾಗಿ ತಯಾರಿಸಿದ್ದ ಈ ವಿಶಿಷ್ಟ ಬಗೆಯ ವಿನೂತನ ವೈಶಿಷ್ಟ್ಯವುಳ್ಳ "ಶ್ರದ್ಧಾಂಜಲಿ" ಕಾರ್ಯಕ್ರಮದ ತುಣುಕನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ.

ಬೃಂದಾವನದ ಸದಸ್ಯರಿಂದ "ಯುಗಾದಿ" ಹಾಗು "ವಸಂತ ಋತು"ವಿನ ಬಗ್ಗೆ ಹಾಡು ಹಾಗು ನೃತ್ಯ ಕಾರ್ಯಕ್ರಮಗಳು ಮುಗಿದ ನಂತರ ಡಾ. ಎಮ್.ಜಿ. ಪ್ರಸಾದ್ ನಿರ್ದೇಶನದ "ಪರಿವರ್ತನೆ" ನಾಟಕವನ್ನು ಪ್ರದರ್ಶಿಸಲಾಯ್ತು. 35 ಜನ ಪಾಲ್ಗೊಂಡಿದ್ದ ಈ ನಾಟಕದಲ್ಲಿ "ಕಿಸಾ ಗೌತಮಿ"ಯಾಗಿ ವೀಣಾ ಮೋಹನ್ ಹಾಗು "ಅಂಗುಲಿಮಾಲ"ನಾಗಿ ಅನಂತ್ ಅಂಬುಗ ಅವರ ಅದ್ಭುತವಾದ ನಟನೆ ಎಲ್ಲರ ಮನ ಸೆಳೆಯಿತು. ಸಂಗಿತ, ರಂಗಸಜ್ಜಿಕೆ, ವಸ್ತ್ರವಿನ್ಯಾಸ ಹಾಗು ನಿರೂಪಣೆ ಪ್ರೇಕ್ಷಕರಿಗೆ ಮುದ ನೀಡಿತು.

ಇದೇ ವೇಳೆ "ಭಾರತ್ ಗೌರವ್" ಪ್ರಶಸ್ತಿ ವಿಜೇತರಾದ ಡಾ. ಎಂ.ಜಿ. ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಬೃಂದಾವನದ ಸ್ಥಾಪಕ ಅಧ್ಯಕ್ಷರಾದ ವಿ.ಪ್ರಸನ್ನ ಕುಮಾರ್ ರವರು ಡಾ.ಮಾರೆಹಳ್ಳಿ ಪ್ರಸಾದ್ ಅವರ 25 ವರ್ಷಗಳ ಸಾಧನೆಯ ಬಗ್ಗೆ ಹಾಗು ಅವರ ಸಮಾಜ ಸೇವೆಯ ಬಗ್ಗೆ ಕಿರು ಪರಿಚಯ ಮಾಡಿಕೊಟ್ಟರು. ಬೃಂದಾವನದ ಹಾಲಿ ಉಪಾಧ್ಯಕ್ಷರಾದ ಡಾ. ರಾಮ್ ಬೆಂಗಳೂರ್ ರವರು ಡಾ. ಪ್ರಸಾದ್ ಅವರಿಗೆ ಶಾಲು ಹೊದ್ದಿಸಿ ಸನ್ಮಾನಿಸಿದರೆ, ಸಂಸ್ಥೆಯ ಕಾರ್ಯದರ್ಶಿ ಮಧು ರಂಗಯ್ಯನವರು ಸನ್ಮಾನ ಫಲಕವನ್ನು ಓದಿ ಡಾ. ಪ್ರಸಾದ್ ಅವರಿಗೆ ಸಮರ್ಪಿಸಿದರು.

ಬೃಂದಾವನದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಡಾ. ಎಂ.ಜಿ. ಪ್ರಸಾದ್ ರವರು ಈ ಸಂದರ್ಭದಲ್ಲಿ ಮಾತನಾಡುತ್ತ "ಸುಮಧುರ ಸ್ನೇಹ ಸಮ್ಮಿಲನ"ವನ್ನು ತನ್ನ ಅಡಿಬರಹವನ್ನಾಗಿ ("ಸ್ಲೋಗನ್") ಬಳಸಿರುವ ಈ "ಬೃಂದಾವನ" ಸಂಸ್ಥೆ ಕಳೆದ ಐದು ವರ್ಷಗಳಲ್ಲಿ ಒಂದು ಅತ್ಯುತ್ತಮವಾದ ಸಾಂಸ್ಕೃತಿಕ, ಅದರಲ್ಲೂ ಪುಟ್ಟ ಮಕ್ಕಳಿಗೆ ಆದ್ಯತೆ ಕೊಡುವ ಹಾಗು ದಾನ ಧರ್ಮನಿರತ ಸಂಸ್ಥೆಯಾಗೆ ಬೆಳೆದಿದೆ ಮತ್ತು ಕಳೆದ ಎರಡು ವರ್ಷಗಳಿಂದ ಉಷ ಪ್ರಸನ್ನ ಕುಮಾರ್ ನೇತೃತ್ವದಲ್ಲಿ 10 ಜನರ ಕಾರ್ಯಕಾರಿ ಸಮಿತಿ "ಸ್ಪೂರ್ತಿ" ತಂಡದ ಹೆಸರಿನಲ್ಲಿ ನಡೆಸಿರುವ ಕೈಂಕರ್ಯ ಶ್ಲಾಘನೀಯ ಎಂದು ಪ್ರಶಂಸಿದರು.

ಇದೇ ಸಂದರ್ಭದಲ್ಲಿ "ಬೃಂದಾವನ"ದ ಎಲ್ಲಾ ಕಾರ್ಯಕ್ರಮಗಳಿಗೂ ಸುಸಜ್ಜಿತವಾದ ಶಾಲೆಯ ರಂಗಮಂದಿರ ಹಾಗು ಕೆಫ್ಟೀರಿಯವನ್ನು ನೀಡುತ್ತಿರುವ ಈಸ್ಟ್ ವಿಂಡ್ಸರ್ ಸ್ಕೂಲ್ ಡಿಸ್ಟ್ರಿಕ್ಟ್ ನ ಮಿಶೆಲ್ ಕಾರ್ಬಿಟ್ ಅವರನ್ನೂ ಹಾಗು "ವನವಾಣಿ"ಯನ್ನು ಸುಂದರವಾಗಿ ಮುದ್ರಿಸಿದ "ಆಹಾ ಡಿಸೈನ್ಸ್"ನ ನಿಮಿಷ್ ಕಕಾಡಿಯ ಅವರನ್ನೂ ಕೃತಜ್ಞತೆಯಿಂದ ನೆನೆಯಲಾಯಿತು.

ಬೃಂದಾವನದ ಸ್ಮರಣ ಸಂಚಿಕೆಯಾದ "ವನವಾಣಿ - 5ನೇ ವಾರ್ಷಿಕೋತ್ಸವ"ದ ವಿಶೇಶಾಂಕ ಸಂಚಿಕೆಯನ್ನು ಡಾ. ಎಂ.ಜಿ. ಪ್ರಸಾದ್ ಅವರು ಬಿಡುಗಡೆ ಮಾಡಿದರು. ವನವಾಣಿಯ ಪ್ರಧಾನ ಸಂಪಾದಕರಾದ ಸತೀಶ್ ಹೊಸನಗರ ಮತ್ತು ಅವರ ತಂಡದ ಮೀರಾ ರಾಜಗೋಪಾಲ್, ಶೈಲಾ ಪಾಟಂಕರ್, ದಾಶರಥಿ ಗಟ್ಟು, ಲಕ್ಷ್ಮೀಶ ಸೀಗೆಹಳ್ಳಿ, ಅಶೋಕ್ ಕಟ್ಟಿಮನಿ ಮತ್ತು ರುದ್ರಕುಮಾರ್ ಶಿವಲಿಂಗಯ್ಯ ಅವರ ಅವಿರತ ಶ್ರಮದಿಂದ "ವನವಾಣಿ -5ನೇ ವಾರ್ಷಿಕೋತ್ಸವ" ವಿಶೇಷ ಸಂಚಿಕೆ ಒಳ್ಳೆಯ ಲೇಖನಗಳು ಹಾಗೂ ಕಳೆದ ಐದು ವರ್ಷಗಳ ಚಟುವಟಿಕೆಗಳ ಹಲವಾರು ಚಿತ್ರಗಳನ್ನು ತುಂಬಿಕೊಂಡು ಅತ್ಯಂತ ಸುಂದರವಾಗಿ ಹಾಗೂ ವಿಶೇಷವಾಗಿ ಮೂಡಿ ಬಂದಿದೆ ಎಂದು ಎಲ್ಲಾ ಸದಸ್ಯರು ಕಾರ್ಯಕ್ರಮ ಮುಗಿದ ನಂತರ ಮಾತನಾಡಿಕೊಳ್ಳುತ್ತಿದ್ದರು.

ಅಕ್ಕ ಸಮ್ಮೇಳನಕ್ಕೆ ಸಿದ್ಧತೆ : ಕಾರ್ಯಕ್ರಮಗಳ ನಡುವೆ ಸಿಕ್ಕ ಅಲ್ಪ ಸಮಯದಲ್ಲೇ 6ನೇ "ಅಕ್ಕ" ವಿಶ್ವ ಕನ್ನಡ ಸಮ್ಮೇಳನದ ಕಾರ್ಯಕಾರಿ ಸಮಿತಿಯ ಸದಸ್ಯರು ಸಮ್ಮೇಳನದ ಕಾರ್ಯ ಪ್ರಗತಿಯ ಬಗ್ಗೆ ಚೊಕ್ಕವಾಗಿ ವಿವರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಚಾಲಕರಾದ ಮಧು ರಂಗಯ್ಯ, ವಿ. ಪ್ರಸನ್ನ ಕುಮಾರ್, ಶಂಕರ್ ಶೆಟ್ಟಿ, ಧನ ಸಂಗ್ರಹಣ ಸಮಿತಿಯ ಮುಖ್ಯಸ್ಥರಾದ ಬೆನ್ ಕಾಂತರಾಜು ಹಾಗು ದಾನ ಧರ್ಮ ಸಮತಿಯ ಮುಖ್ಯಸ್ಥರಾದ ರಾಘವೇಂದ್ರ ಮೂರ್ತಿ ನೆರೆದಿದ್ದ ಎಲ್ಲ ಸದಸ್ಯರನ್ನು ಸಮ್ಮೇಳನದ ಯಶಸ್ವಿಗಾಗಿ, ನಾಟಕ, ನೃತ್ಯ, ಸಂಗೀತ ಹಾಗು ಎಲ್ಲ ಸ್ಪರ್ಧಾತ್ಮಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ವಿನಂತಿಸಿದರು.

ಇನ್ನು ನಾಲ್ಕು ತಿಂಗಳು ಅವಿರತವಾಗಿ ತಮ್ಮ ತನು ಮನ ಧನಗಳನ್ನು ಸಮ್ಮೇಳನ ಕಾರ್ಯ ಸಿದ್ಧತೆಗೆ ಅರ್ಪಿಸಬೇಕೆಂದು ಕನ್ನಡಿಗ ಬಂಧುಗಳನ್ನು ಕೋರಿಕೊಂಡರು. ಕರ್ನಾಟಕದಿಂದ ಆಗಮಿಸುವ ಕಲಾವಿದರ ಮೊದಲ ಪಟ್ಟಿಯನ್ನು ಮೇ 19ರಂದು ದಟ್ಸ್ ಕನ್ನಡದಲ್ಲಿ ಪ್ರಕಟಿಸಲಾಗುವುದು ಹಾಗು ಈ ಬಾರಿ ಜಾನಪದ ಸಂಗೀತ ನೃತ್ಯಕ್ಕೆ ಹೆಚ್ಚು ಆದ್ಯತೆ ನೀಡಲಾಗಿದ್ದು ಕರ್ನಾಟಕದ ಹಲವಾರು ಜಿಲ್ಲೆಗಳಿಂದ ಕಲಾವಿದರನ್ನು ಹೆಕ್ಕಿ ತೆಗೆದು ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಲಾಗಿದೆ ಎಂದು ಸಂಚಾಲಕರು ತಿಳಿಸಿದರು.

ನಾಟಕ ಪ್ರದರ್ಶನ : ಸಮಾರಂಭದ ಕೊನೆಯ ಕಾರ್ಯಕ್ರಮವಾಗಿ ಬೆಂಗಳೂರಿನ ಕ್ರಿಯೇಟಿವ್ ಸಂಸ್ಥೆಯಿಂದ ಲಕ್ಷ್ಮಿ ಚಂದ್ರಶೇಖರ್ ಹಾಗು ತಂಡದವರಿಂದ ಟಿ. ಸುನಂದಮ್ಮ ವಿರಚಿತ "ಹೀಗಾದ್ರೆ ಹೇಗೆ" ಹಾಗು ಜಿ.ಪಿ. ರಾಜರತ್ನಂ ರವರ "ಕಂಬಳಿ ಸೇವೆ" ನಾಟಕಗಳನ್ನು ಪ್ರದರ್ಶಿಸಲಾಯ್ತು. ನಾಟಕದ ಹಲವಾರು ಪಾತ್ರಧಾರಿಗಳಾಗಿದ್ದ ಲಕ್ಷ್ಮಿ ಚಂದ್ರಶೇಖರ್ ಹಾಗು ಸುಂದರ್ ತಮ್ಮ ಅಭಿನಯ ವೈವಿಧ್ಯತೆ ಹಾಕು ಚುರುಕುತನದ ದೃಶ್ಯ ಬದಲಾವಣೆಯಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. "ಕಂಬಳಿ ಸೇವೆ"ಯಲ್ಲಿ ಪೊರಕೆ ಸೇವೆ ಮಾಡಿಸಿಕೊಂಡ ಸುಂದರ್ ಹಾಗು ರಾಮಕೃಷ್ಣ ಅವರ ಅಭಿನಯ ಹಾಗು ಈ ಎರಡೂ ನಾಟಕಗಳಿಗೆ ಸಂಗೀತ ನೀಡಿದ ಗಜಾನನ್ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಸ್ಪೂರ್ತಿ ತಂಡದ ಸಿಂಹಾದ್ರಿ ಸಂತೆಬೆನ್ನುರ್, ಸಾಧನ ಶಂಕರ್, ಮರ್ಲಿನ್ ಮೆಂಡೋಂಕ ಹಾಗು ಉಷ ಪ್ರಸನ್ನ ಕರ್ನಾಟಕದ ಕಲಾವಿದರಿಗೆ ಪ್ರಶಂಸಾ ಫಲಕವನ್ನು ನೀಡಿ ಗೌರವಿಸಿದರು. ಭಾರತದ ರಾಷ್ಟ್ರಗೀತೆಯೊಂದಿಗೆ "ವಸಂತೋತ್ಸವ" ಮುಗಿದಾಗ ಎಂಟು ಗಂಟೆಗಳು ಹೇಗೆ ಕಳೆಯಿತು ಎಂಬುದೇ ಗೊತ್ತಾಗಲಿಲ್ಲ. ನೊಂದಾವಣೆ, ಅಡುಗೆ ಮನೆ, ಊಟ ವಿತರಣೆ, ಬೆಳಕು ಹಾಗು ಸಂಗೀತ, "ಎಮ್.ಸಿ" ಈ ಎಲ್ಲ ಕಡೆ ಬೃಂದಾವನದ ಸ್ವಯಂಸೇವಕರು ಮಾಡಿದ ಚೊಕ್ಕವಾದ ಕೆಲಸದಿಂದ ಸಮಾರಂಭ ಸಾಂಗವಾಗಿ ನೆರವೇರಿತು.

ವಸಂತೋತ್ಸವ ಒಳಗೊಂಡು "ಸ್ಪೂರ್ತಿ" ತಂಡ ಕಳೆದೆರಡು ವರ್ಷಗಳಲ್ಲಿ ನಡೆಸಿದ ಎಲ್ಲಾ ಕಾರ್ಯಕ್ರಮಗಳ ಚಿತ್ರಗಳನ್ನ ನೋಡಲು ಇಲ್ಲಿ ಕ್ಲಿಕ್ಕಿಸಿ.

ವರದಿ : ಪ್ರವಾಸ (ಪ್ರಚಾರ, ವಾರ್ತ, ಸಂಪರ್ಕ ಸಮಿತಿ-ಬೃಂದಾವನ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X