ನಾವಿಕ ಸಮ್ಮೇಳನ ಮುಖಪುಟ ವಿನ್ಯಾಸ ಸ್ಪರ್ಧೆ
ಕನ್ನಡ ಜಗತ್ತಿನ ನಾನಾ ಲೇಖಕರು, ಚಿತ್ರಕಾರರು, ಕವಿಗಳು ಮತ್ತು ಚಿಂತಕರ ಸೃಜನಶೀಲ ಕಾಣಿಕೆಗಳಿಂದ ಕಂಗೊಳಿಸಲಿರುವ 'ಅಲೆವಾಣಿ' ಒಂದು ಮಹೋನ್ನತ ಮತ್ತು ಸಂಗ್ರಹಯೋಗ್ಯ ಸಂಪುಟವಾಗಬೇಕೆಂಬ ಮಹತ್ವಾಕಾಂಕ್ಷೆಯನ್ನು ಸಮಿತಿ ಹೊಂದಿದೆ. 'ಅಲೆವಾಣಿ' ಸಾರುವ ಮುಖ್ಯ ಸಂದೇಶವಾಣಿ “ವಿಶ್ವವ್ಯಾಪ್ತಿ ಕನ್ನಡ : ಅಂದು, ಇಂದು,ಮುಂದು."
ಕನ್ನಡ ನಾಡಿನ ಶ್ರೀಮಂತ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಈ ಸಂಚಿಕೆಗೆ ಸೂಕ್ತವಾದ ಮುಖಪುಟ ವಿನ್ಯಾಸ ಬೇಕಾಗಿರುತ್ತದೆ. ಕನ್ನಡ ಕೃತಿಗಳಿಗೆ ಮುಖಪುಟ ವಿನ್ಯಾಸ ಮಾಡುವ ನುರಿತ ಕಲಾವಿದರು ಅಲೆವಾಣಿಯ ಧ್ಯೇಯವಾಕ್ಯಕ್ಕೆ ಅನುಗುಣವಾದ ವಿನ್ಯಾಸ ರೂಪಿಸಿ ಸ್ಮರಣ ಸಂಚಿಕೆಯ ಸಂಪಾದಕರಿಗೆ ಕಳಿಸಬೇಕೆಂದು ಕೋರಲಾಗಿದೆ. ಸಂಪಾದಕರು, ಶ್ರೀಕಾಂತ್ ಬಾಬು.
ವಿಶ್ವಕನ್ನಡಿಗರ ಸೃಜನಶೀಲತೆಯ ಅಭಿವ್ಯಕ್ತಿಗೆ ಇದೊಂದು ಸದವಕಾಶವೆಂದು ನಾವಿಕ ಸಾಹಿತ್ಯ ಸಮಿತಿ ವಿಶ್ವಾಸವಿರಿಸುತ್ತದೆ. ಆಯ್ಕೆಯಾದ ಮುಖಪುಟ ವಿನ್ಯಾಸವನ್ನು ಅಲೆವಾಣಿ ಸಂಚಿಕೆಯ ರಕ್ಷಾಕವಚಕ್ಕೆ ಬಳಸಿಕೊಳ್ಳಲಾಗುವುದು. ಹಾಗೂ, ಆಯ್ಕೆಯಾದ ಅತ್ಯುತ್ತಮ ವಿನ್ಯಾಸ ರಚಿಸಿದ ಕಲಾವಿದರಿಗೆ ಆಕರ್ಷಕ ಬಹುಮಾನ ನೀಡಲಾಗುತ್ತದೆ ಎಂದೂ ಅಲೆವಾಣಿಯ ಸಂಪಾದಕರು ದಟ್ಸ್ ಕನ್ನಡಕ್ಕೆ ತಿಳಿಸಿದರು. ಮುಖಪುಟ ವಿನ್ಯಾಸ ಕಳುಹಿಸಲು ಕೊನೆಯ ದಿನ: 30 ಏಪ್ರಿಲ್ 2010. ವಿಳಾಸ : [email protected]
ಮುಖಪುಟದ ವಿನ್ಯಾಸವಲ್ಲದೆ ಸ್ಮರಣ ಸಂಚಿಕೆಗೆ ಕಥೆ, ಕವಿತೆ, ಲೇಖನ, ಪ್ರವಾಸ ಕಥನ, ಅನುಭವ ಕಥನ, ನಾಟಕ ಮತ್ತು ಮಕ್ಕಳ ಚಿತ್ರಕಲೆ ಮುಂತಾದ ಕನ್ನಡ ಸಾಮಗ್ರಿಗಳನ್ನು ಅಲೆವಾಣಿ ಅಪೇಕ್ಷಿಸಿದ್ದು ವಿವರಗಳಿಗೆ ಇಲ್ಲಿ ನೋಡಿ.