ಅಕ್ಕ ಸಮ್ಮೇಳನಗಳ ನಾಯಕ ಶಿಖಾಮಣಿಗಳು
ಅಲ್ಲಿಂದ ಅಕ್ಕದ ಎಸ್ ಕ್ಲಾಸ್ ಸೆವೆನ್ ಸೀಟರ್ ಮರ್ಸಿಡಿಸ್ ಬೆಂಜ್ ಕಾರು ಬಂದದ್ದು ಡೆಟ್ರಾಯಿಟಿಗೆ. ಇಲ್ಲೂ ಕೆಲವು ಪ್ರಥಮಗಳನ್ನು ಸಾಧಿಸಿದ ಹೆಗ್ಗಳಿಗೆ ಪವರ್ ಸ್ಟಾರ್ ಅಮರ್ ನಾಥ್ ಗೌಡರ ಪಾಲಾಯಿತು. ಅದು ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಸ್ಯಾಟಲೈಟ್ ಮೂಲಕ ಸಮ್ಮೇಳನ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾಡಿದ ಹೈಟೆಕ್ ಭಾಷಣ (2002)ಎಂಬ ಕೀರ್ತಿಗೆ ಭಾಜನವಾಯಿತು.
ಕಾರುಗಳ ರಾಜಧಾನಿಯಿಂದ ಕನ್ನಡದ ತೇರು ಸೀದಾ ಶ್ರೀಗಂಧದ ನಾಡು ಫ್ಲಾರಿಡಾಗೆ ಬಂದಿತು. ಆರ್ಲಾಂಡೋದಲ್ಲಿ (2004) ಚಂಡಮಾರುತದ ಹಾವಳಿ ನಡುವೆಯೂ ಚೆಂದದ ಕನ್ನಡ ಹಬ್ಬ ಮಾಡಿದವರು ರೇಣುಕಾ ರಾಮಪ್ಪ ಮತ್ತು ಅವರ ಪತಿ ಚಾಲೆಂಜಿಂಗ್ ಸ್ಟಾರ್ ಡಾ.ರಾಮಪ್ಪನವರು. ಅವರು ಅಕ್ಕ ಬಳಗದಲ್ಲಿ ಈಗ ಇರುವುದಿಲ್ಲ ಎನ್ನುವ ಸಂಗತಿ ಬೇರೆಯದೇ ವಿಚಾರ.
ಅತ್ತ ವಾಷಿಂಗ್ ಟನ್ ಡಿಸಿ ವಾಸಿಗಳಾದ ಕಾವೇರಿ ಕನ್ನಡಿಗರಿಗೆ ಅಕ್ಕ ಸಮ್ಮೇಳನದ ಭಾರೀ ಡಾಲರ್ ಹೊರೆ ಹೊರುವುದಕ್ಕೆ ಅಷ್ಟಾಗಿ ಧೈರ್ಯ ಇರಲಿಲ್ಲ. ಆದರೂ ಚಂಡಮಾರುತದದಿಂದ ಕನ್ನಡಮ್ಮನನ್ನು ಬಿಡಿಸಿಕೊಂಡು ಪೊಟೊಮ್ಯಾಕ್ ನದಿ ತೀರಕ್ಕೆ ಕರೆತಂದು ಬಾಲ್ಟಿಮೋರ್ ಸಮ್ಮೇಳನವನ್ನು (2006)ಸಾಂಗವಾಗಿಸಿ ಸೈ ಎನಿಸಿಕೊಂಡವರು ಅರುಂಧತಿ ನಕ್ಷತ್ರ ಸುರೇಶ್ ರಾಮಚಂದ್ರ ಮತ್ತು ಡೈನಾಮಿಕ್ ಸ್ಟಾರ್ ರವಿ ಡೆಂಕನಿಕೋಟೆ.
ಇಷ್ಟಾಗಿಯೂ ಅತ್ಯಂತ ಹಳೆಯ ಕನ್ನಡ ಸಂಘವಾದ ತಮ್ಮ ವಿದ್ಯಾರಣ್ಯ ಕನ್ನಡ ಸಂಘದ ಆಶ್ರಯದಲ್ಲಿ ಸಮ್ಮೇಳನ ನಡೆಯಲೇಬೇಕೆನ್ನುವುದು ಶಿಕಾಗೋ ಕನ್ನಡಿಗರ ಬಹುದಿನಗಳ ಮಹದಾಸೆ ಆಗಿತ್ತು. ಉತ್ತರ ಕ್ಯಾಲಿಫೋರ್ನಿಯಾದ ಕೆಕೆಎನ್ ಸಿ ಕನ್ನಡ ಸಂಘದವರು ಅಳೆದು ಸುರಿದು ಮಾಡುವುದು ಜಾಸ್ತಿ ಆದುದರಿಂದ ನೋಡನೋಡುತ್ತಲೇ ಕಾವೇರಿಮಾತೆಯ ಮಡಿಲಿನಿಂದ ಕನ್ನಡದ ತೇರು ಪ್ರಾಚೀನ ಶಿಕಾಗೋಗೆ ಬಂದು ನಿಂತಿತು(2008).
ಶತಾಯಗತಾಯ ವಿದ್ಯಾರಣ್ಯದಲ್ಲೇ ಸಮ್ಮೇಳನ ನಡೆದು ತೀರಬೇಕೆಂದು ಯದ್ವಾತದ್ವಾ ಪ್ರೀತಿಯಿಂದ ಸ್ಕೆಚ್ ಹಾಕಲಾಗಿತ್ತು. ಕೆಲವರು ಮಾತು ಜಾಸ್ತಿ ಕೆಲಸ ಕಡಿಮೆ ಎಂಬಂತಾದುದರಿಂದ, ಹಾಗೂ ಕೆಲವರು ಇಂದು ನಾಳೆ ಎನ್ನುತ್ತಿದ್ದರಿಂದಾಗಿ ನಿಧಾನವಾಗಿಯಾದರೂ ಸಮ್ಮೇಳನ ಸಿದ್ಧತೆಗಳು ಏರ್ಪಾಟಾಗಿ ಅಂತಿಮವಾಗಿ ಸಾಂಗವಾಯಿತು.
ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮುಮಂ ಚಂದ್ರ ಸೇರಿದಂತೆ ಅವರ ಅನೇಕ ರಾಜಕಾರಣಿ ಸ್ನೇಹಿತರು ಮುದ್ದಾಂ ಭಾಗವಹಿಸಿದ್ದರು. ಹಾಗೂ ಹೀಗೂ ಕಿರಣ್ ಬೇಡಿ ವಾಸಂತಿ ಗೌಡ ಮತ್ತು ಚೋಟಾ ಚೇತನ್ ಶಿವಮೂರ್ತಿ ಕೀಲಾರ ಮತ್ತು ಮೋಕ್ಷಗುಂಡಂ ಜಯರಾಮ್, Sir ಅವರ ನೇತೃತ್ವದಲ್ಲಿ ಸಮ್ಮೇಳನ ಮುಕ್ತಾಯವಾಗಿ ಶಿಕಾಗೋ ಬಿಟ್ಟು ಎಲ್ಲಿಗೆ ಹೋಯಿತು?