ಎಸ್.ಪಿ.ಬಾಲಸುಬ್ರಹ್ಮಣ್ಯಂ - ವಿಶ್ವ ಕನ್ನಡ ಸಮ್ಮೇಳನದ ಪ್ರಮುಖ ಆಕರ್ಷಣೆ!
ಇನ್ನೇನು ಹೆಚ್ಚುಕಡಿಮೆ 60 ದಿನಗಳಷ್ಟೇ ಉಳಿದಿರುವುದು ಅಮೆರಿಕರಾಜಧಾನಿಯಲ್ಲಿ ಕನ್ನಡ ತೇರಿನ ಸಡಗರದ ತೆರೆ ಸರಿಯಲು; ಕರ್ನಾಟಕ ಸ್ವರ್ಣಸಂಭ್ರಮಕ್ಕೆ ಅಮೆರಿಕನ್ನಡಿಗರು ಆಯೋಜಿಸಿರುವ ನುಡಿಪೂಜೆಯ ವೈಭವ ಸಾಕಾರಗೊಳ್ಳಲು!
ಬಾಲ್ಟಿಮೊರ್ನ ಬೃಹತ್ ಸಭಾಂಗಣದಲ್ಲಿ ಸೆಪ್ಟೆಂಬರ್ 1, 2, 3ರಂದು ನಡೆಯುವ 4ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಸಕಲ ಸಿದ್ಧತೆಗಳೂ ಅತ್ಯಂತ ಅಚ್ಚುಕಟ್ಟಾಗಿ ನಡೆಯುತ್ತಿವೆ. ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲು ಕರ್ನಾಟಕದಿಂದ ಬರಲಿರುವ ಕಲಾವಿದರ, ಸಾಹಿತಿಗಳ, ಸಂಗೀತಗಾರರ ವಿವರಗಳು ಲಭ್ಯವಾಗತೊಡಗಿದ್ದು ಈ ಸಮ್ಮೇಳನವು ಎಲ್ಲ ದೃಷ್ಟಿಯಿಂದಲೂ ಒಂದು ಅಭೂತಪೂರ್ವ ರಸದೌತಣವಾಗುವ ಸ್ಪಷ್ಟ ಸೂಚನೆಗಳು ಕಾಣಬರುತ್ತಿವೆ.
ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ, ಕಳೆದ ನಾಲ್ಕೈದು ದಶಕಗಳಿಂದಲೂ ಕನ್ನಡ ಜನಕೋಟಿಯ ಕರ್ಣಾಮೃತವಾಗಿ ಬಂದಿರುವ ಪ್ರಖ್ಯಾತ ಹಿನ್ನೆಲೆಗಾಯಕ ಪದ್ಮಶ್ರೀ ಡಾ। ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ನೇತೃತ್ವದಲ್ಲಿನ 14 ಜನರ ತಂಡದಿಂದ ರಸಮಂಜರಿ ಕಾರ್ಯಕ್ರಮ ಸೇರ್ಪಡೆಗೊಂಡಿದೆ.
ಈ ಹಿಂದೆ 2004ರಲ್ಲಿ ಫ್ಲೊರಿಡಾದಲ್ಲಿ ನಡೆದ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲೂ ಎಸ್ಪಿಬಿ ಅವರ ರಸಮಂಜರಿ ಕಾರ್ಯಕ್ರಮವಿತ್ತು; ಚಂಡಮಾರುತದ ಆರ್ಭಟದ ನಡುವೆಯೂ ಸಮ್ಮೇಳನ ಸಭಾಂಗಣದಲ್ಲಿ ಬಾಲು ಗಾಯನ ಸಮ್ಮೇಳನಾರ್ಥಿಗಳನ್ನೆಲ್ಲ ಮೋಡಿಗೊಳಪಡಿಸಿತ್ತು. ಅಮೆರಿಕದ ಪೂರ್ವ/ಈಶಾನ್ಯ ಭಾಗದಲ್ಲಿ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ರಸಮಂಜರಿ ಕಾರ್ಯಕ್ರಮ ಏರ್ಪಾಡಾಗಿರುವುದು ಇದೇ ಮೊದಲು.
ಈಸಲದ ಕಾರ್ಯಕ್ರಮವನ್ನು ಇನ್ನೂ ಆಕರ್ಷಕವಾಗಿಸಲು, ಶ್ರೋತೃಗಳೂ ಸಕ್ರಿಯರಾಗಿ ಭಾಗವಹಿಸುವಂತಾಗಲು ಹಾಡುಗಳನ್ನು ಪ್ರಾಯೋಜಿಸುವ, ಹಾಡುಗಳನ್ನು ಇಷ್ಟಮಿತ್ರಬಂಧುಬಾಂಧವರಿಗೆ ಅರ್ಪಿಸುವ ಮತ್ತು ಹಾಡುಗಳಿಗೆ ವೈಯಕ್ತಿಕ ಕೋರಿಕೆ ಸಲ್ಲಿಸುವ ಅವಕಾಶವೂ ಇರುತ್ತದೆ. ಎಪ್ಪತ್ತು-ಎಂಬತ್ತರ ದಶಕದ ಸುಮಧುರ ಗೀತೆಗಳೊಂದಿಗೆ ಇತ್ತೀಚಿನ ಚಿತ್ರಗೀತೆಗಳನ್ನೂ ಕೇಳಿಸಲೆಂದೇ ಸಮ್ಮೇಳನಕ್ಕೆ ಬರ್ತಿದ್ದಾರೆ Singer Par-excellence ಬಾಲು.
ಗಾನಸುಧೆಯ ಅಮೃತಪಾನವ ಸವಿಯಲು ನೀವೂ ಬರ್ತಿದ್ದೀರಿ ತಾನೆ?
ಸಮ್ಮೇಳನದ ವಿವರಗಳಿಗೆ ಭೇಟಿಕೊಡಿ : www.akkaonline.org/2006