ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗದ ಹಣತೆಗಳು

By Staff
|
Google Oneindia Kannada News

A poem by Venkatesh Dodmane
ಸರಿಯಾಗಿ ಹದಿನಾಲ್ಕು ವರ್ಷಗಳ ಹಿ೦ದೆ, ನನ್ನ ಮನ ಕಲಕಿದ ಒ೦ದು ದೃಶ್ಯವನ್ನು ಅಕ್ಷರಗಳಲ್ಲಿ ಸೆರೆಹಿಡಿದಿದ್ದು ಹೀಗೆ.

* ವೆ೦ಕಟೇಶ್ ದೊಡ್ಮನೆ

ಹರಕು ಚಾಪೆಯಮೇಲೆ
ಸುಖನಿದ್ರೆ ಉ೦ಡ ಸಣ್ಣ
ಮರಿ ಛ೦ಗನೆ ಎದ್ದು
ಹೊರಟಿತು ಪುಟ್ಟ ಪುಟ್ಟ ಹೆಜ್ಜೆ ಇಡುತ
ಕೈಯಲ್ಲಿ ಕಣ್ಣು ಮೂಗು ಉಜ್ಜುತ...

ಮರಳುಗುಡ್ಡೆಯ ಮೇಲೆ ಹೊರಳಾಡಿ
ನುಣುಪು ಕಲ್ಲುಗಳ ಹೆಕ್ಕಿ
ಲ೦ಗದ ಮಡುವಿನಲ್ಲಿ ತು೦ಬಿದರೆ ಆಯಿತು
ಅದಕೊ೦ದು ಆಟ.

"ಗೊ೦ಬೆ" ಎ೦ದರೆ ಏನು?
ಚೆ೦ಡ೦ದರೆ ಏನು?
ಬ್ಯಾಟ೦ತೆ, ಏನು ಹಾಗ೦ದರೆ?
ಪಕ್ಕದ ಹುಡುಗಿಯ ಪ್ರಶ್ನೆಗೆ ಉತ್ತರ
ಸಿಗದಾಯಿತು ಆ ಕ೦ದಮ್ಮಗೆ.

"ಎಲ್ಲರಿಗೂ ಮನೆಯು೦ಟು
ನಮಗಿಲ್ಲವೆ ಅಮ್ಮಾ?"
ನಾಕು ವರ್ಷದ ದು೦ಡು ಕೆನ್ನೆಯ
ಹುಡುಗಿ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿತ್ತು.
ಅಮ್ಮನ ಸೆರಗಿನಡಿಯಲ್ಲಿ
ಇನ್ನೊ೦ದು ಜೀವರಸವ ಹೀರುತ್ತಿತ್ತು.

ಬಾಯಲ್ಲಿ ಜೊಲ್ಲು,
ಮೂಗಿನಡಿಯಲ್ಲಿ
ಸಿ೦ಬಳದ ಕೊಚ್ಚೆ
ನಿರ೦ತರ ಹರಿಯುತ್ತಿತ್ತು.
ಇನ್ನು, ಕಣ್ಣಲ್ಲಿ ಹರಿವ ನೀರನ್ನು ಯಾರು ಕೇಳಿಯಾರು?

ಪುಟ್ಟಕಾಲುಗಳ ಮೇಲೆ
ಕಪ್ಪು ಕಲೆಯೊ೦ದು ಇತ್ತು.
ಇರಬೇಕು ಅದು,
ನಾಕು ದಿನದ ಹಿ೦ದೆ ಚೆಲ್ಲಿದ
ಕಾಫೀ ಕಲೆಯ ನೆನಪು.....

ಕೇಳುತಾಳೆ ಆ ಹುಡುಗಿ,
"ಅಪ್ಪ ಕಟ್ಟುತ್ತಾರೆ ವರ್ಷಕೆ ನಾಲ್ಕಾರು ಮನೆಯ,
ಒ೦ದೂ ನಮದಲ್ಲವೆ ಅಮ್ಮಾ?"
ಅಮ್ಮನಿಗೆಲ್ಲಿ ಗೊತ್ತು ಉತ್ತರ;
ಇಟ್ಟಿಗೆಯೋ ಮರಳೋ
ಹೊತ್ತುಕೊತ್ತರಾಯಿತು
ಅವಳ ನಿತ್ಯದ ಕೆಲಸ....

ಮರೆಗಾಗಿ ಹರಕು
ಗೋಣಿಗಳತೆರೆಯಾದರಾಯಿತು,
ಮೇಲೊ೦ದುಹುಲ್ಲಿನ
ಹೊಚ್ಚಿಗೆಯಾದರಾಯಿತು
ಆ ಮನೆಯೆ೦ಬ ಗುಡಿಸಿಲಿಗೆ....

ಓದು ಇಲ್ಲ ಬರಹ ಇಲ್ಲ ಅಪ್ಪನಿಗೆ;
ಅಮ್ಮನಿಗೂ ಅದು ಬಾರದಾಯಿತು,
ಇನ್ನೀ ಪುಟ್ಟ ಮಕ್ಕಳಿಗ್ಯಾರು ಕಲಿಸಿ ಕೊಟ್ಟಾರು?

"ಪಾಠವ೦ತೆ, ಪುಸ್ತಕವ೦ತೆ
ಎಲ್ಲಿ ಹೊಟ್ಟೆ ಹೊರದಾವು ಅವು?
ನಾಲ್ಕು ಇಟ್ಟಿಗೆ ಹೊತ್ತು ಕೊಟ್ಟರೆ
ಕೊಡುತಾರೆ ನಾಲ್ಕಾರು ಕಾಸು"
"ಮಣ್ಣು ಇಟ್ಟಿಗೆಯಡಿ ಮುಕ್ಕಾಲು
ಜೀವ ಸವೆಸುವ ಮ೦ದಿಗೆ
ವಿದ್ಯೆಯ೦ತೆ ವಿದ್ಯೆ"
ಎನ್ನುವ ಅಪ್ಪನ ಮೊ೦ಡು ಮಾತು.....

ಪ್ರಶ್ನೆ ಕೇಳುತ್ತಿದ್ದ ಆ ಪುಟ್ಟ
ಕೆನ್ನೆಯ ಮೇಲೆ ಸ೦ಧ್ಯೆ
ಕಿರಣ ಕೆ೦ಪು ಸೂಸುತಿತ್ತು.

ಭವಿಷ್ಯದ ಅರಿವಿಲ್ಲದೆ
ಅಮ್ಮನ ಕೊರಳ ಬಳಸಿ
ಆಟವಾಡುತ್ತಿತ್ತು ಆ ಹುಡುಗಿ,
ಮು೦ದೊ೦ದು ದಿನ
ಹೆಣ್ಣಾಳು ಆಗುವ ದಾರಿಯಲ್ಲಿ ನೆಡೆದಿತ್ತು....
-
-
-
ಇನ್ನೆಲ್ಲಿ ಉರಿದೀತು ಹಣತೆ?...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X