ದುಬೈನಲ್ಲಿ ಮನಸೂರೆಗೊಂಡ 'ಅಷ್ಟಭುಜೆ ಆದಿಮಾಯೆ' ತಾಳಮದ್ದಳೆ
ಸಮಾನ ಯಕ್ಷಮನಸ್ಕರ ಒಗ್ಗೂಡುವಿಕೆಯಿಂದ ಶೇಖರ್ ಡಿ ಶೆಟ್ಟಿಗಾರ್ ಮಾರ್ಗದರ್ಶನದಲ್ಲಿ, ಸಂಯುಕ್ತ ಅರಬ್ ಸಂಸ್ಥಾನದ ಸ್ಥಳೀಯ ಯಕ್ಷಗಾನ ಕಲಾವಿದರು 'ಅಷ್ಟಭುಜೆ ಆದಿಮಾಯೆ' ಎಂಬ ಆಖ್ಯಾನವನ್ನು ತಾಳಮದ್ದಳೆ ರೂಪದಲ್ಲಿ ಶುಕ್ರವಾರ, ದಿನಾಂಕ 22 ಜೂನ್ 2018ರಂದು ದುಬೈಯಲ್ಲಿ ನಡೆಸಿಕೊಟ್ಟರು.
ಯಕ್ಷಗಾನಾಚಾರ್ಯ ದಿ। ನಿಡ್ಲೆ ನರಸಿಂಹಜ್ಜ ವೇದಿಕೆಯಲ್ಲಿ ಜರುಗಿದ ಕಾರ್ಯಕ್ರಮದ ಸಾಂಪ್ರದಾಯಿಕ ಚೌಕಿ ಪೂಜೆಯನ್ನು ವೆಂಕಟೇಶ್ ಶಾಸ್ತ್ರೀ ಪುತ್ತಿಗೆಯವರು ನೆರವೇರಿಸಿದರು.
ಅಮೆರಿಕಾದಲ್ಲಿ ಅದ್ದೂರಿ ಭಾರತ ವಸಂತೋತ್ಸವ 2018
ಸುಮಂಗಳೆಯರೊಡನೆ ದೀಪ ಬೆಳಗಿಸಿ, ಭಾಗ್ಯದ ಲಕ್ಷ್ಮಿ ಬಾರಮ್ಮ ಸ್ತುತಿಯೊಂದಿಗೆ ಮುಖ್ಯ ಅತಿಥಿ ಖ್ಯಾತ ಭರತನಾಟ್ಯ ಕಲಾವಿದೆ ಗುರು ವಿದುಷಿ ಸಪ್ನಾ ಕಿರಣ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
"ಯಕ್ಷಗಾನದ ಮತ್ತೊಂದು ಆಯಾಮವಾದ ತಾಳಮದ್ದಳೆ, ಯಕ್ಷಗಾನದಂತೆ ಆಂಗಿಕ, ವಾಚಿಕ, ಸಾತ್ವಿಕ, ಆಹಾರ್ಯಗಳನ್ನು ಕಾಣದೆ ತಮ್ಮ ವಾಚಿಕಾಭಿನಯನದಿಂದ ಪಾತ್ರವನ್ನು ಸೃಷ್ಟಿಸಿ, ಪ್ರೇಕ್ಷಕರನ್ನು ಹಿಡಿದಿರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಾವಿರ ಮೈಲು ದೂರವಿರುವ ಈ ಮರಳುಗಾಡಿನಲ್ಲಿ ಇದಕ್ಕೆ ಮುಂಗೈವಹಿಸಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸುಲಭ ಮಾತಲ್ಲ. ಈ ನಿಟ್ಟಿನಲ್ಲಿ ಸ್ಥಳೀಯ ಯಕ್ಷಗಾನ ಪ್ರೇಮಿಗಳ ಪ್ರಯತ್ನ ನಿಜಕ್ಕೂ ಶ್ಲಾಘನೀಯ " ಎಂದು ಸಪ್ನಾ ಕಿರಣ್ ಹೊಗಳಿದರು.
ನಂತರ ಯಕ್ಷಗಾನಾಚಾರ್ಯ ದಿ। ನಿಡ್ಲೆ ನರಸಿಂಹಜ್ಜ ವೇದಿಕೆಯಲ್ಲಿ ನಡೆದ 'ಅಷ್ಟಭುಜೆ ಆದಿಮಾಯೆ' ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಸಂಪನ್ನಗೊಂಡಿತು. ಮೂಲತಃ ಉಕ್ಷ ಬ್ರಹ್ಮ ಬಿರುದಾಂಕಿತ ಅಗರಿ ಶ್ರೀನಿವಾಸ ಭಾಗವತರ "ಶ್ರೀದೇವಿ ಮಹಾತ್ಮೆ" ಪ್ರಸಂಗವನ್ನು ತಾಂತ್ರಿಕ ಕಾರಣಗಳಿಂದ ಬದಲಾವಣೆ ಮಾಡಿಕೊಳ್ಳಲಾಗಿತ್ತು.
ಉದರ ನಿಮಿತ್ತ ವಿದೇಶದಲ್ಲಿ ನೆಲೆಸಿ, ಈ ತಾಳಮದ್ದಳೆಯಲ್ಲಿ ಪಾಲ್ಗೊಂಡ ಹೆಚ್ಚಿನವರು ಹೊಸ ಕಲಾವಿದರು. ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ಈ ತಾಳಮದ್ದಳೆ ಸಾಕ್ಷಿಯಾಯಿತು. ಈ ಕಾರ್ಯಕ್ರಮಕ್ಕೆ ಪೂರ್ವಾಭ್ಯಾಸ ತಯಾರಿ, ತರಬೇತಿಗಳು ಇಲ್ಲದೆಯೂ ಕಲಾವಿದರು ಹೆಚ್ಚಿನ ಆತ್ಮವಿಶ್ವಾಸದಿಂದ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಗೊಳಿಸಿದರು.
ದುಬೈ : ಪದ್ಮಶ್ರೀ ಬಿ ಜಯಶ್ರೀ ಮುಡಿಗೇರಿದ 'ಬಸವ ಭೂಷಣ' ಪ್ರಶಸ್ತಿ
ಹಿಮ್ಮೇಳದಲ್ಲಿ ಶೇಖರ್ ಡಿ. ಶೆಟ್ಟಿಗಾರ್, ಕಿನ್ನಿಗೋಳಿ ಶರತ್, ಕುಮಾರ್, ಕೃಷ್ಣ ಪ್ರಸಾದ್ ರಾವ್ ಸುರತ್ಕಲ್, ಭವಾನಿ ಶಂಕರ್ ಶರ್ಮ, ವೆಂಕಟೇಶ್ ಶಾಸ್ತ್ರೀ ಪುತ್ತಿಗೆ, ಗಿರೀಶ್ ನಾರಾಯಣ್ ಕಾಟಿಪಳ್ಳ, ವಿಕ್ರಂ ಶೆಟ್ಟಿ ಕಡಂದಲೆ ಚಕ್ರತಾಳದಲ್ಲಿ ಆದಿತ್ಯ ದಿನೇಶ್ ಕೊಟ್ಟಿಂಜ ಪಾಲ್ಗೊಂಡಿದ್ದರು.
ಮುಮ್ಮೇಳದಲ್ಲಿ ಸ್ವಾತಿ ಸಂತೋಷ್ ಕಟೀಲು, ಕೃಷ್ಣಪ್ರಸಾದ್ ರಾವ್ ಸುರತ್ಕಲ್, ಕಿಶೋರ್ ಗಟ್ಟಿ ಉಚ್ಚಿಲ, ಲತಾ ಸುರೇಶ ಹೆಗ್ಡೆ, ಗಿರೀಶ್ ನಾರಾಯಣ್ ಕಾಟಿಪಳ್ಳ, ರವಿ ಕೋಟ್ಯಾನ್, ಸಮಂತಾ ಗಿರೀಶ್, ರಜನಿ ಭಟ್ ಕಲ್ಮಡ್ಕ, ಸ್ವಾತಿ ಶರತ್ ಸರಳಾಯ, ಭವಾನಿ ಶಂಕರ್ ಶರ್ಮ, ಸತೀಶ್ ಶೆಟ್ಟಿಗಾರ್ ವಿಟ್ಲ, ಅಶೋಕ್ ಶೆಟ್ಟಿ ಕಾರ್ಕಳ, ಶೇಖರ್ ಡಿ ಶೆಟ್ಟಿಗಾರ್ ಕಿನ್ನಿಗೋಳಿ, ಶರತ್ ಕುಮಾರ್, ಬಾಲಕೃಷ್ಣ ಡಿ ಶೆಟ್ಟಿಗಾರ್ ಕಿನ್ನಿಗೋಳಿ ಭಾಗವಹಿಸಿದ್ದರು.
ಫೋರ್ಚುನ್ ಗ್ರೂಪ್ ಹೋಟೆಲ್ ನ ಮಾಲೀಕರಾದ ಪ್ರವೀಣ್ ಶೆಟ್ಟಿಯವರು ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತ, "ನುರಿತ ಕಲಾವಿದರಂತೆ ಅರ್ಥವತ್ತಾಗಿ ತಾಳಮದ್ದಳೆ ಮೂಡಿಬಂತು. ಭಾಗವಹಿಸಿದ ಹವ್ಯಾಸಿ ಕಲಾವಿದವರಿಗೆ ಅಭಿನಂದನೆಗಳು. ಇದೊಂದು ಹೊಸ ಪ್ರಯೋಗ, ಹೊಸ ಪ್ರಯತ್ನ ಹಾಗು ಯಶಸ್ವಿಯಾದ ಕಾರ್ಯಕ್ರಮ" ಎಂದು ಹೊಸಬರ ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ದಿನೇಶ್ ಶೆಟ್ಟಿ ಕೊಟ್ಟಿಂಜ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಯೋಜಿಸಿ, ಸ್ವಾಗತಿಸಿ, ವಂದನಾರ್ಪಣೆಗೈದು ನಿರೂಪಿಸಿ, ನಿರ್ವಹಿಸಿದರು. ಕಟೀಲಮ್ಮನ ಆಶೀರ್ವಾದದಿಂದ ಮೂಡಿಬಂದ "ಅಷ್ಟಭುಜೆ ಆದಿಮಾಯೆ" ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮಕ್ಕೆ ದೇವಿಸ್ತುತಿಯೊಂದಿಗೆ ಮಂಗಳ ಹಾಡಲಾಯಿತು.
ವರದಿ : ಪದ್ಯಾಣ ರಾಮಚಂದ್ರ, ಅಬುಧಾಬಿ / ವರ್ಣಚಿತ್ರ : ಶರತ್ ಸರಳಾಯ, ದುಬೈ