ದುಬೈಯಲ್ಲಿ ಮೆಚ್ಚುಗೆ ಗಳಿಸಿದ ಯಕ್ಷಗಾನ ಮುಖವರ್ಣಿಕೆ ಕಾರ್ಯಾಗಾರ
ತೆಂಕುತಿಟ್ಟು ಯಕ್ಷಗಾನದ ಮುಖವರ್ಣಿಕೆ ಮತ್ತು ವೇಷಭೂಷಣದ ಕಾರ್ಯಾಗಾರ ಸಂಯುಕ್ತ ಅರಬ್ ಸಂಸ್ಥಾನದ ಯಕ್ಷಗಾನಾಸಕ್ತರ ಸಂಯೋಜನೆಯಲ್ಲಿ ಜುಲೈ 13ರ ಶುಕ್ರವಾರ ದುಬೈ ನಗರದ ದೇರಾದುಬೈಯ ಟ್ವಿನ್-ಟವರ್ ನಲ್ಲಿ ಸಂಪನ್ನಗೊಂಡಿತು. ಸ್ಥಳೀಯ ಯಕ್ಷರಂಗದ ಹಿರಿಯ ಕಲಾವಿದ ಭವಾನಿಶಂಕರ ಶರ್ಮರ ನೇತೃತ್ವದಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ಬೆಳಿಗ್ಗೆ ಕಾರ್ಯಗಾರ ಪ್ರಾರಂಭವಾಯಿತು.
ಉದ್ಘಾಟನಾ ಸಮಾರಂಭದಲ್ಲಿ ಶಾರ್ಜಾ ಸಂಸ್ಕೃತ ತರಗತಿಗಳ ಸಂಯೋಜಕ ದಯಾನಂದ ಹೆಬ್ಬಾರ್, ಶಾರ್ಜಾ ಕರ್ನಾಟಕ ಸಂಘದ ಕಾರ್ಯದರ್ಶಿ ನೋವೆಲ್ ಡಿಸೋಜ, ಕಲಾಪೋಷಕ ಧನಂಜಯ ಶೆಟ್ಟಿಗಾರ್, ಬಹುಮುಖ ಪ್ರತಿಭೆ ರಾಜೇಶ್ ಕುತ್ತಾರು, ದುಬೈಯ ಉದ್ಯಮಿ ಕೃಷ್ಣಕುಮಾರ್ ಐಲ್ ಮುಂತಾದ ಅಭ್ಯಾಗತರು ಒಂದಾಗಿ ದೀಪ ಬೆಳಗಿಸಿದರು. ಕುಮಾರಿ ಪ್ರಾಪ್ತಿ ಜಯಾನಂದ ಪಕ್ಕಳರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕಾರ್ಯಾಗಾರದ ಸಂಚಾಲಕರಾದ ದಿನೇಶ ಶೆಟ್ಟಿ ಕೊಟ್ಟಿಂಜರು ಸರ್ವರನ್ನು ಸ್ವಾಗತಿಸಿದರು.
ದುಬೈಯಲ್ಲಿ ಯಕ್ಷಗಾನ ಅಭ್ಯಾಸ ತರಗತಿ 2018 ಪ್ರಾರಂಭ
ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿಯವರ ನಿರ್ದೇಶನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಗಿರೀಶ್ ನಾರಾಯಣ ಕಾಟಿಪಳ್ಳ, ಶರತ್ ಕುಮಾರ್ ಮತ್ತು ಬಾಲಕೃಷ್ಣ ಡಿ. ಶೆಟ್ಟಿಗಾರ್ ಕಿನ್ನಿಗೋಳಿಯವರು ಅಭ್ಯಾಸಿಗಳಿಗೆ ಉತ್ತಮವಾಗಿ ಮುಖವರ್ಣಿಕೆಗಳ ಸೂಕ್ಷ್ಮಗಳನ್ನು ವಿವರಿಸಿ, ಅವರಿಂದಲೆ ಸ್ವತಃ ಮುಖವರ್ಣಿಕೆ ಮಾಡಿಸಿದರು. ತಾವೇ ಮಾಡಿಕೊಂಡ ಮುಖವರ್ಣಿಕೆಯೊಂದಿಗೆ ಶಿಬಿರಾರ್ಥಿಗಳೆಲ್ಲಾ ಭಾವಚಿತ್ರಗಳಿಗೆ ಭಂಗಿ ನೀಡಿ ಸಂಭ್ರಮಿಸಿದರು.
ಯಕ್ಷಗಾನದ ಉಡುಗೆ ತೊಡುಗೆಯನ್ನು ಕ್ರಮಬದ್ಧವಾಗಿ ಧರಿಸಿಕೊಳ್ಳುವ ಪ್ರಾತ್ಯಕ್ಷಿತೆಯನ್ನು ಶೇಖರ್ ಡಿ ಶೆಟ್ಟಿಗಾರ್ ಅವರು ಸೂಕ್ಷ್ಮವಾಗಿ ವಿವರಿಸುತ್ತಾ, ಜೊತೆಗೆ ಅಭರಣಗಳನ್ನು ಸಮರ್ಪಕವಾದ ರೀತಿಯಲ್ಲಿ ದೇಹದ ವಿವಿಧ ಭಾಗಗಳಿಗೆ ತೊಡಿಸುವುದನ್ನು ಸಹ ತಿಳಿಸಿಕೊಟ್ಟರು. ಭವಾನಿಶಂಕರ ಶರ್ಮರ ಸಂಗ್ರಹದ ಯಕ್ಷಚಿತ್ರಗಳು ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದವು.
ಕಾರ್ಯಾಗಾರದ ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ಹಿರಿಯ ಶಿಲ್ಪಿ ಸಮಾಜಸೇವಕ ಬಿ.ಕೆ. ಗಣೇಶ ರೈ, ಯು.ಎ.ಇ. ಪದ್ಮಶಾಲಿ ಸಂಘದ ಅಧ್ಯಕ್ಷ ರವಿ ಶೆಟ್ಟಿಗಾರ್ ಕಾರ್ಕಳ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಆನಂದ ಬೈಲೂರು, ದುಬೈ ಉದ್ಯಮಿಗಳಾದ ಯಶ್ ಶೆಟ್ಟಿ, ಗುಣಪಾಲ ಶೆಟ್ಟಿ, ರಾಜೇಶ್ ಶೆಟ್ಟಿ ದೇವಸ್ಯ ಪಾಲ್ಗೊಂಡಿದ್ದರು.
30 ವರ್ಷಗಳಿಗೆ ಬುಕ್ಕಿಂಗ್, ಮಳೆಗಾಲದಲ್ಲೂ ಮಂದಾರ್ತಿ ಮೇಳದ ಯಕ್ಷಗಾನ
ಶಿಬಿರದ ಕುರಿತಾಗಿ ತಮ್ಮ ಚಿಂತನೆಗಳ ಜೊತೆ, ತಮ್ಮ ಬೆಂಬಲ ಮತ್ತು ಎಲ್ಲಾ ಸತ್ಕಾರ್ಯ ಪ್ರೇರಕ ಪ್ರಾಯೋಜಕರುಗಳ ಬೆಂಬಲ ದೊರಕಲೆಂದು ಅಭ್ಯಾಗತರುಗಳು ಹಾರೈಸಿದರು. ಅಭ್ಯಾಗತರ ಜೊತೆ ಕಾರ್ಯಾಗಾರದ ನಿರ್ದೇಶಕರಾದ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ಹಿರಿಯ ಕಲಾವಿದ ಭವಾನಿಶಂಕರ ಶರ್ಮರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಗಾರದ ಯಶಸ್ಸಿಗೆ ಕಾರಣರಾದ ಅಭ್ಯಾಗತರು, ಪ್ರಾಯೋಜಕರು, ಕಲಾವಿದರು, ವಿದ್ಯಾರ್ಥಿಗಳು, ಸ್ವಯಂಸೇವಕರು, ಪೋಷಕರು ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕಾರ್ಯಕ್ರಮಗಳನ್ನು ನಿರ್ವಹಿಸಿದ, ತಂಡದ ನೇತಾರರಾದ ದಿನೇಶ ಶೆಟ್ಟಿ ಕೊಟ್ಟಿಂಜ ವಂದನಾರ್ಪಣೆ ಮಾಡಿದರು.
ದುಬೈನಲ್ಲಿ ಮನಸೂರೆಗೊಂಡ 'ಅಷ್ಟಭುಜೆ ಆದಿಮಾಯೆ' ತಾಳಮದ್ದಳೆ
ಉದ್ಗಾಟನೆ- ಕಾರ್ಯಾಗಾರ- ಸಮಾರೋಪ ಹೀಗೆ ಕ್ರಮಬದ್ಧವಾಗಿ ನಡೆದು ಸಂಯೋಜಕರ ಶಿಸ್ತುಬದ್ಧ ಸಂಘಟನೆಗೆ ಸಾಕ್ಷಿಯಾಯಿತು. ತಂಡವನ್ನು ತನ್ನ ಸಮರ್ಥ ನಾಯಕತ್ವದಿಂದ ಮುನ್ನಡೆಸುತ್ತಿರುವ ದಿನೇಶ ಶೆಟ್ಟಿ ಕೊಟ್ಟಿಂಜರ ಮುಂದಾಳುತ್ವದಲ್ಲಿ ಶಿಬಿರದ ಯಶಸ್ವಿಗೆ ದುಡಿದ ಹಿರಿಯ-ಕಿರಿಯ ಅಭ್ಯಾಸಿ ಕಲಾವಿದರೆಲ್ಲಾ ಅಭಿನಂದನಾರ್ಹರು. ಮುಖವರ್ಣಿಕೆ ಕಾರ್ಯಾಗಾರದ ಸಭಾಂಗಣ ಮತ್ತು ಊಟ ಉಪಹಾರಗಳ ಪ್ರಾಯೋಜಕತ್ವವನ್ನು ಧನಂಜಯ ಶೆಟ್ಟಿಗಾರ್ ಮತ್ತು ರವಿ ಶೆಟ್ಟಿಗಾರ್ ವಹಿಸಿಕೊಂಡಿದ್ದರು.
ಸಮಾರಂಭದಲ್ಲಿ ಕೇಳಿಸಿದ್ದು
ಯಕ್ಷಗಾನ ನಮ್ಮ ಹುಟ್ಟೂರ ಸಂಸ್ಕೃತಿ - ಸದ್ವಿಚಾರಗಳ ಅರ್ಥೈಸುವಿಕೆ, ಸಭೆ-ವಾರ್ತಾಲಾಪಗಳಲ್ಲಿ ವಿದ್ಯಾರ್ಥಿಗಳನ್ನು ಸದೃಢವಾಗಿಸಲು ಯಕ್ಷಗಾನ ಅತ್ಯಂತ ಪೂರಕ - ದಯಾನಂದ ಹೆಬ್ಬಾರ್.
ಮುಖವರ್ಣಿಕೆ- ಅತಿ ಆಳ-ಹರವುಗಳುಳ್ಳ ವ್ಯಾಸಂಗದ ವಿಷಯ. ವೃತ್ತಿಯಾಗಿ-ಪ್ರವೃತ್ತಿಯಾಗಿ ಇದನ್ನು ಆರಿಸಿಕೊಂಡವರು ವಿವಿಧ ರಂಗಗಳಲ್ಲಿ ಮಿಂಚಿ ಬದುಕನ್ನು ಗಟ್ಟಿಗೊಳಿಸಿಕೊಂಡಿದ್ದಾರೆ - ಬಿ.ಕೆ.ಗಣೇಶ ರೈ.
ಕರಾವಳಿಗರಾದ ನಮ್ಮ ನೆತ್ತರಲ್ಲೇ ಅಡಕವಾಗಿರುವ ಯಕ್ಷಗಾನದ ಪ್ರಮುಖ ಅಂಗವಾದ ಮುಖವರ್ಣಿಕೆಯ ಶಿಬಿರ ಈ ಅರಬ್ ನಾಡಿನಲ್ಲಿಯೂ ಮಾಡುವ ಸಾದ್ಯತೆಯನ್ನು ತೆರೆದಿಟ್ಟ ಯಕ್ಷಗಾನಾಸಕ್ತರ ಸಂಯೋಜನೆ ಸಂತೋಷಕೊಟ್ಟಿತು. ಸತತ ನಮ್ಮ ಬೆಂಬಲ ಇವರ ಹಿಂದಿದೆ - ರವಿ ಶೆಟ್ಟಿಗಾರ್ ಕಾರ್ಕಳ.
ಯಕ್ಷಗಾನದ ಸತ್ವ- ವೇಷಭೂಷಣಗಳಿಂದ ಈ ಕಲೆ ವಿದೇಶಿಯರನ್ನೂ ಆಕರ್ಷಿಸಿದೆ. ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡ ಜಪಾನಿನ ಪ್ರೊ| ಸುಮಿಯೋ ಮೊರಿಜಿರಿ ವಿದ್ವಾಂಸರಂತವರನ್ನು ದುಬೈಗೆ ಪರಿಚಯಿಸಬೇಕಾಗಿದೆ - ರಾಜೇಶ್ ಕುತ್ತಾರ್, ಪ್ರತಿಭಾನ್ವಿತ ಕಲಾವಿದ.
ಅತ್ಯಂತ ಸಮಾಧಾನ, ಸಂತೋಷ ಕೊಟ್ಟ ಕಾರ್ಯಗಾರ ಕಲಿಯುವ ಹಸಿವಿಗೆ ಮೇವಾಗಿ, ಬೌದ್ಧಿಕ ಮಟ್ಟವನ್ನೇ ಎತ್ತರಕ್ಕೇರಿಸಿದ ಶಿಬಿರ ಗಣನೀಯವೂ-ಫಲಪ್ರದವೂ ಆಗಿ ಮುಖವರ್ಣಿಕೆ-ವೇಷಭೂಷಣ ಧಾರಣೆಯ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳನ್ನು ಶೇಖರ ಶೆಟ್ಟಿಗಾರರು ತಮ್ಮದೇ ಶೈಲಿಯಲ್ಲಿ ವಿವರಿಸಿ- ಕಲಿಕೆಗೆ ದಾರಿ ಸ್ಪಷ್ಟಗೊಳಿಸಿದರು. - -ಭವಾನಿಶಂಕರ ಶರ್ಮ -ತಂಡದ ಹಿರಿಯ ಕಲಾವಿದ.
ಬಣ್ಣಗಾರಿಕೆಯ ಶಿಬಿರವು ಬಹಳ ಉತ್ತಮವಾಗಿತ್ತು ಹಾಗೂ ಉಪಯೋಗವೂ ಆಯಿತು. ಈ ಅವಕಾಶ ಕಲ್ಪಿಸಿಕೊಟ್ಟ ಗುರುಗಳಿಗೂ, ದಿನೇಶಣ್ಣನಿಗೂ ಹಾಗೂ ನಮ್ಮ ಯಕ್ಷಕುಟುಂಬಕ್ಕೂ ವಂದನೆಗಳು. ಇದು ಕೇವಲ ಇಂದಿಗೆ ಸೀಮಿತವಾಗದೆ ಇನ್ನೂ ಮುಂದುವರಿಯಬೇಕು ಎಂಬುವುದು ನನ್ನ ಅಭಿಪ್ರಾಯ. ಇದರಲ್ಲಿ ನಾವು ಸಕ್ರಿಯವಾಗಿ ತೊಡಗಿಸಿಕೊಂಡಲ್ಲಿ ನಾವು ಸ್ವಯಂ ಬಣ್ಣಗಾರಿಕೆ ಮಾಡಿಕೊಂಡು ತಂಡಕ್ಕೆ ಹೆಮ್ಮೆ ತರುವ ಕಲಾವಿದರಾಗಿ ಬೆಳೆಯಬಹುದು - ಶರತ್ ಕುಮಾರ್, ತಂಡದ ಯಕ್ಷಗಾನ ನಾಟ್ಯ ಗುರು.
ಯಕ್ಷಗಾನದ ಪ್ರಮುಖವಾದ ಮುಖವರ್ಣಿಕೆಯ ಪಾಠವಿಲ್ಲದಿದ್ದರೆ ಕಲಿಕೆ ಅಪೂರ್ಣ, ಈ ದಿನ ನಮ್ಮ ತಂಡದವರಿಗೆ ಅವಕಾಶ ಒದಗಿತು - ದಿನೇಶ ಶೆಟ್ಟಿ ಕೊಟ್ಟಿಂಜ, ತಂಡದ ಮುಂದಾಳು.
ವರ್ಣಚಿತ್ರ : ಗಿರೀಶ್ ಕುಮಾರ್ ಕಾಟಿಪಳ್ಳ