ಕೆನಡಾದ ಟೊರೊಂಟೊದಲ್ಲಿ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ
ಹೃದಯವಾಹಿನಿ ಮಂಗಳೂರು, ಕನ್ನಡ ಕಸ್ತೂರಿ ರೇಡಿಯೊ ಟೊರೊಂಟೊ ಮತ್ತು ಬಿ.ವಿ.ನಾಗ್ ಕಮ್ಯುನಿಕೇಷನ್ ಇಂಕ್. ಟೊರೆಂಟೊದ ಸಂಯುಕ್ತವಾಗಿ 2 ದಿನಗಳ 11ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಟೊರೊಂಟೊ ಒಂಟಾರಿಯೋದಲ್ಲಿರುವ ಗ್ರಾಂಡ್ ವಿಕ್ಟೋರಿಯನ್ ಕನ್ವೆಷನ್ ಸೆಂಟರ್ನಲ್ಲಿ ಜೂನ್ 27 ಮತ್ತು 28ರಂದು ಹಮ್ಮಿಕೊಳ್ಳಲಾಗಿದೆ.
ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಕವಿಗೋಷ್ಠಿ, ಹಾಸ್ಯ ಗೋಷ್ಠಿ, ಮಾಧ್ಯಮ ಗೋಷ್ಠಿ ಹಾಗೂ ಅನಿವಾಸಿ ಕನ್ನಡಿಗರ ಗೋಷ್ಠಿ ಜರುಗಲಿವೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತನಾಟ್ಯ, ಜಾನಪದ ನೃತ್ಯ, ನೃತ್ಯ ರೂಪಕ, ಯಕ್ಷಗಾನ ಮುಂತಾದ ಕಲೆಗಳು ಪ್ರದರ್ಶನಗೊಳ್ಳಲಿವೆ.
ಈ ಹಿಂದೆ 2004 ಮತ್ತು 2012ರಲ್ಲಿ ಅಬುಧಾಬಿ, 2005 ಮತ್ತು 2010ರಲ್ಲಿ ಸಿಂಗಪುರ, 2006 ಮತ್ತು 2011ರಲ್ಲಿ ಬಹರೇನ್, 2007ರಲ್ಲಿ ಕುವೈಟ್, 2008ರಲ್ಲಿ ಕತಾರ್, 2009ರಲ್ಲಿ ದುಬೈ, ಮತ್ತು 2013ರಲ್ಲಿ ಆಫ್ರಿಕಾದ ಕೀನ್ಯಾದಲ್ಲಿ ಅನುಕ್ರಮವಾಗಿ 10 ಸಮ್ಮೇಳನಗಳು ನಡೆದಿವೆ.
ಸಮ್ಮೇಳನ ನಡೆಯಲಿರುವ ಸಭಾಂಗಣದ ಹೊರವಲಯದಲ್ಲಿ ವಸ್ತು ಪ್ರದರ್ಶನ, ಪುಸ್ತಕಮೇಳವನ್ನು ಏರ್ಪಡಿಸಲಾಗುವುದು. ಕೆನಡಾದಲ್ಲಿ 1000ಕ್ಕೂ ಹೆಚ್ಚು ಕನ್ನಡಿಗರಿದ್ದಾರೆ. ಕೆನಡಾದ ಅಮೆರಿಕಾ ಗಡಿ ಪ್ರದೇಶಗಳಾದ, ಬಫೆಲೊ, ಕನೆಕ್ಟಿಕಟ್, ಮತ್ತು ಡೆಟ್ರಾಯಿಟ್ ನಲ್ಲಿ ನೆಲೆಸಿರುವ ಕನ್ನಡಿಗರು ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಜೂನ್ 27ರಂದು ಮಧ್ಯಾಹ್ನ ಉದ್ಘಾಟನೆ ನೆರವೇರಲಿದೆ.
ಕರ್ನಾಟಕ ಮತ್ತು ಭಾರತದ ಇತರ ಭಾಗಗಳಿಂದ ಸುಮಾರು 70ಕ್ಕೂ ಹೆಚ್ಚು ಸದಸ್ಯರ ಸಾಂಸ್ಕೃತಿಕ ನಿಯೋಗ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದೆ. ವಿವಿಧ ದೇಶಗಳ ಕನ್ನಡ ಸಂಘಗಳ ಪದಾಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸಲಿರುವರು.
ವಿಶೇಷ ಸಂಚಿಕೆ ಮತ್ತು ಪ್ರಶಸ್ತಿ : 11ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಅಂಗವಾಗಿ ವಿಶೇಷ ಸಂಚಿಕೆಯನ್ನು ಹೊರತರಲಾಗುತ್ತಿದೆ. ಪ್ರತಿ ವರ್ಷದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಕಲಾವಿದ, ಸಾಹಿತಿ, ವೈದ್ಯ, ತಂತ್ರಜ್ಞ ಹಾಗೂ ಸಮಾಜ ಸೇವಕರಿಗೆ ವಿಶ್ವ ಮಾನ್ಯರು-2014 ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಜೂ.28ರ ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಿ ಗೌರವಿಸಲಾಗುವುದು.