ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕನ್ನಡದ ಮೇಲಿನ ಭಕ್ತಿಯಿಂದ ಹುಟ್ಟಿಕೊಂಡಿತು ನಾವಿಕ'

By ಅಶ್ವಿನಿ ಅನೀಶ್
|
Google Oneindia Kannada News

ಹಾಸನ ಜಿಲ್ಲೆಯ ಮತ್ತಿಗೋಡು ಗ್ರಾಮದಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ ಸೌದಿ ಅರೇಬಿಯಾ, ದುಬೈ, ಇಟಲಿ, ಇಂಗ್ಲೆಂಡ್, ಫ್ರಾನ್ಸ್, ಸಿಂಗಪುರ ದೇಶಗಳನ್ನು ಸುತ್ತಿ, ಪ್ರಸ್ತುತ ಅಮೆರಿಕದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ವಲ್ಲೀಶ ಶಾಸ್ತ್ರಿ ಅವರಿಗೆ ಕನ್ನಡದ ಮೇಲೆ ಅಪಾರವಾದ ಅಭಿಮಾನ, ಪ್ರೀತಿ. ಇದಕ್ಕೆ ಅವರು ಅಮೆರಿಕದಲ್ಲಿದುಕೊಂಡು ಕನ್ನಡ ಕಾರ್ಯಕ್ರಮಗಳನ್ನು ಮಾಡುತ್ತಾ ನಾರ್ತ್ ಅಮೆರಿಕ ವಿಶ್ವ ಕನ್ನಡ ಆಗರ (ನಾವಿಕ) ಎನ್ನುವ ಸಂಸ್ಥೆಯ ಸಂಸ್ಥಾಪಕರಾಗಿ, ಉಪಾಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿರುವುದೇ ಇದಕ್ಕೆ ಸಾಕ್ಷಿ.

ಕನ್ನಡ ಸಾಹಿತ್ಯ ರಂಗ (ಯು.ಎಸ್.ಎ) ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಹಲವಾರು ನಾಟಕಗಳನ್ನು, ಕಿರು ಕಥೆಗಳನ್ನು, ಲೇಖನಗಳನ್ನು ಬರೆದು ಬರಹಗಾರನೆಂಬ ಛಾಪನ್ನೂ ಒತ್ತಿದ್ದಾರೆ. ಈಗಾಗಲೇ ಸುಮಾರು ನಾಟಕಗಳಲ್ಲಿ ಅಭಿನಯಿಸಿರುವ ವಲ್ಲೀಶ ಅವರು ಬೆಂಗಳೂರಿನ 'ಬೆನಕ' ತಂಡದಲ್ಲಿದ್ದುಕೊಂಡು ಹಲವಾರು ನಾಟಕಗಳನ್ನು ಬರೆದು ನಿರ್ದೇಶಿಸಿ ಇತ್ತೀಚೆಗಷ್ಟೇ 'ಕರ್ನಾಟಕ ನಾಟಕ ಅಕಾಡೆಮಿಯ ವತಿಯಿಂದ ಪುರಸ್ಕಾರ ಪಡೆದಿದ್ದಾರೆ. ಇತೀಚೆಗೆ 'ರಂಗಧ್ವನಿ' ಎಂಬ ನಾಟಕ ತಂಡವೊಂದನ್ನು ರೂಪಿಸಿ, ಆ ತಂಡವನ್ನು ಅಮೆರಿಕದಿಂದ ಬೆಂಗಳೂರು ಹಾಗು ಮೈಸೂರಿಗೆ ಕರೆದುಕೊಂಡು ಹೋಗಿ ಯಶಸ್ವಿ ಪ್ರದರ್ಶನಗಳನ್ನು ಮಾಡಿಸಿದ್ದಾರೆ.

Vallisha Shatry, the force behind Navika

1997ರಲ್ಲಿ ಅಮೆರಿಕಾದ ನ್ಯೂ ಜೆರ್ಸಿಗೆ ವರ್ಗಾವಣೆಗೊಂಡ ವಲ್ಲೀಶ ಅವರು, ಅಲ್ಲಿದ್ದ ಕನ್ನಡ ಸಂಘಗಳಲ್ಲಿ ನಾಟಕ ಪ್ರದರ್ಶನಗಳನ್ನು ಮಾಡುತ್ತ, ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಳ್ಳಲು ಆರಂಭಿಸಿದರು. ನಂತರ ಅಮೆರಿಕಾದಲ್ಲೇ ಬೇರೆ ಬೇರೆ ಊರುಗಳಿಗೆ ವರ್ಗಾವಣೆ ಆದ ಹಾಗೆ ಅಲ್ಲಲ್ಲಿ ಕನ್ನಡ ಸಂಘಗಳ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಲಾಸ್ ಏಂಜಲಿಸ್ ಗೆ ವರ್ಗಾವಣೆ ಆದಾಗ ಅವರು ಸಮಾನ ಮನಸ್ಕರೊಡನೆ ಅಂದರೆ ಕೇಶವ್ ಬಾಬು, ರಾಜೂರ್, ಡಾ. ರೇಣುಕ ರಾಮಪ್ಪ (ಹಾಲಿ ಅಧ್ಯಕ್ಷರು), ಡಾ. ರಾಮಪ್ಪ, ಕೃಷ್ಣಮೂರ್ತಿ, ಸುರೇಶ್ ರಾಮಚಂದ್ರ ಮುಂತಾದವರೊಂದಿಗೆ ಸೇರಿ ನಾವಿಕೆಯ ನೀಲ ನಕ್ಷೆಯನ್ನು ರೂಪಿಸಿ ಅದನ್ನು 2009ರಲ್ಲಿ ನಾವಿಕ ಸಂಸ್ಥೆಗೆ ಚಾಲನೆ ನೀಡಿದರು.

"ನಾವಿಕ ಸಂಸ್ಥೆಯನ್ನು ಆರಂಭಿಸಿದಾಗ ನಾವು ಆರ್ಥಿಕವಾದ ಕಷ್ಟಗಳಿಂದ ಹಿಡಿದು ಕಾರ್ಯಕ್ರಮಗಳನ್ನು ಆಯೋಜಿಸುವವರೆಗೆ ಎದುರಿಸುವ ಕಷ್ಟಗಳನ್ನು ಹಾಗು ಸವಾಲುಗಳನ್ನು ಎದುರಿಸಿದೆವು. ಆದರೆ ನಮ್ಮಲ್ಲಿ ಎಲ್ಲರಿಗೂ ಕನ್ನಡ ಸೇವೆ ಮಾಡಬೇಕೆಂಬ ದೃಢ ನಿರ್ಧಾರ ಹಾಗು ಆಸೆ ಇದ್ದಿದ್ದರಿಂದ ನಾವೆಲ್ಲರೂ ಸಹ ಬಹಳ ಪ್ರಾಮಾಣಿಕವಾಗಿ ಎಲ್ಲಾ ನಾವಿಕ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಾ ಬಂದೆವು" ಎನ್ನುತ್ತಾರೆ ವಲ್ಲೀಶ ಅವರು. ಆರಂಭದ ದಿನಗಳಲ್ಲಿ ಕನ್ನಡ ಪ್ರಾಧಿಕಾರ ಮಂಡಲಿ ಅವರು 40 ಜನರ ತಂಡವೊಂದನ್ನು ಸರ್ಕಾರದ ವತಿಯಿಂದ ಕಳುಹಿಸಿದ್ದರು. ಆ ಕಲಾವಿದರಲ್ಲಿ ಮನು ಬಾಳಿಗಾರ್ (ತಂಡದ ನೇತೃತ್ವವನ್ನು ತೆಗೆದುಕೊಂಡಿದ್ದರು) ಹಾಗು ಮುಖ್ಯಮಂತ್ರಿ ಚಂದ್ರು ಅವರೂ ಬಂದು ಇಲ್ಲಿ ಭಾಗವಿಹಿಸಿದ್ದರು.

Vallisha Shatry, the force behind Navika

ಈಗಾಗಲೇ ಮೂರು ಅಮೆರಿಕನ್ನಡ ಸಮಾವೇಶಗಳನ್ನು ಬೆಂಗಳೂರಿನಲ್ಲಿ ಹಾಗು ಮೂರು ಸಮಾವೇಶಗಳನ್ನು ಅಮೆರಿಕಾದಲ್ಲಿ ನಡೆಸಿರುವ ನಾವಿಕ ಈ ವರ್ಷದ, ಅಂದರೆ ನಾಲ್ಕನೆಯ ವಿಶ್ವ ಕನ್ನಡ ಸಮಾವೇಶವನ್ನು ಅಮೆರಿಕಾದ ಡಲ್ಲಾಸ್ ನಲ್ಲಿ ಸೆಪ್ಟೆಂಬರ್ 1ರಿಂದ 3ರವರೆಗೆ ಆಯೋಜಿಸಿದ್ದರು. ಅದು ಯಶಸ್ವಿಯಾಗಿ ಮೂಡಿ ಬಂದಿದೆ. ಬಹಳಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ವಾಣಿಜ್ಯ ಸಮಾವೇಶಗಳನ್ನು ಹಾಗು ಇತರ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ನಾವಿಕ ಬಹಳಷ್ಟು ಕನ್ನಡ ಕಲಾವಿದರಿಗೆ ಈ ಸಮಾವೇಶದಲ್ಲಿ ಅವಕಾಶಗಳನ್ನು ನೀಡುತ್ತಿದೆ. ಇದಲ್ಲದೆ ಅನಿವಾಸಿ ಕನ್ನಡ ವಿದ್ಯಾರ್ಥಿಗಳಿಗೆ ಸಹಾಯ ಆಗುವ ಹಾಗೆ ಅಮೆರಿಕಾದ ಬಹಳಷ್ಟು ಸಮಾಲೋಚನೆ ಕೋಶಗಳನ್ನು ತೆರೆದಿರುವ ನಾವಿಕ ಅದಕ್ಕೆ 'ಯುವ ಸೂಚಿ' ಎಂಬ ಅಂಕಿತವನ್ನಿಟ್ಟು ಅದನ್ನು 2016ರಲ್ಲಿ ಉದ್ಘಾಟಿಸಿತು. ಅಂದಿನಿಂದ ನಾವಿಕ ಬಹಳಷ್ಟು ವಿದ್ಯಾರ್ಥಿಗಳಿಗೆ ನೆರವನ್ನು ನೀಡಿದೆ.
Vallisha Shatry, the force behind Navika

ತಮ್ಮ ಬಿಡುವಿಲ್ಲದ ಸಾಫ್ಟ್ವೇರ್ ಕೆಲಸದ ನಡುವೆಯೂ ವಲ್ಲೀಶ ಅವರು ಕನ್ನಡ ಸೇವೆಯಲ್ಲಿ ತೊಡಗಿದ್ದಾರೆ. ಇದಕ್ಕೆ ಬೆಂಬಲವಾಗಿ ಹೆಂಡತಿ ವಿದ್ಯಾ ಶಾಸ್ತ್ರಿ ಹಾಗು ಮಗಳು ವೀವ್ಹಾನಿ ಶಾಸ್ತ್ರಿ ಕೂಡ ನಿಂತಿದ್ದಾರೆ. ಅಮೆರಿಕಾಗೆ ಹೋಗುವ ಬಹಳಷ್ಟು ಕಲಾವಿದರನ್ನು ತಮ್ಮ ಮನೆಯಲ್ಲೇ ಇರಿಸಿಕೊಂಡು ಬಹಳ ಸೌಜನ್ಯದಿಂದ ಆತಿಥ್ಯವನ್ನು ನೀಡುತ್ತಾರೆ. ಪ್ರಸ್ತುತ ನಾವಿಕಾದ ಉಪಾಧ್ಯಕ್ಷರಾಗಿ ಹಾಗು ಬೋರ್ಡ್ ಆಫ್ ಟ್ರಸ್ಟೀ ಆಗಿರುವ ಇವರು ಈ ವರ್ಷದ ನಾವಿಕ ಸಮ್ಮೇಳನದಲ್ಲಿ ಜಡಭರತರು ರಚಿಸಿರುವ, ಬಿವಿ ಕಾರಂತ್ ಅವರು ನಿರ್ದೇಶಿಸಿದ್ದ 'ಸತ್ತವರ ನೆರಳು' ನಾಟಕವನ್ನು ಅಮೆರಿಕದ ಕಲಾವಿದರ ಮೂಲಕ ಪ್ರಸ್ತುತ ಪಡಿಸಿದರು. ಖ್ಯಾತ ನಟರಾದ ಸುಂದರ್ ರಾಜ್ ಹಾಗು ನಿರ್ದೇಶಕರಾದ ಟಿ.ಎಸ್.ನಾಗಾಭರಣ ಅವರು ನಾಟಕದಲ್ಲಿ ನಟಿಸಿದ ನಾಟಕ ಜನರ ಮೆಚ್ಚುಗೆಗೆ ಪಾತ್ರವಾಯಿತು.

Vallisha Shatry, the force behind Navika

ವಲ್ಲೀಶ ಹಾಗು ಅವರೊಡನೆ ನಾವಿಕಾಗಾಗಿ ದುಡಿದಿರುವವರಿಗೆ ನೆರವಾಗುವ ಹಾಗೆ ಕರ್ನಾಟಕ ಸರ್ಕಾರ ಎಲ್ಲಾ ರೀತಿಯಿಂದಲೂ ಬೆಂಬಲವನ್ನು ನೀಡುತ್ತಿದೆ.

"ಹಲವಾರು ಕನ್ನಡಿಗರಿಗೆ ನಮ್ಮಲ್ಲಿ ಅವಕಾಶ ನೀಡಿ ಹಾಗೆ ಇಲ್ಲಿರುವ ಬಹಳಷ್ಟು ಪ್ರತಿಭಾವಂತ ಕಲಾವಿದರಿಗೆ ಬೆಂಗಳೂರಿನ ಸಮಾವೇಶಗಳಲ್ಲಿ ಅವಕಾಶ ನೀಡಿ ಒಂದು ಒಳ್ಳೆಯ ಕನ್ನಡ ಕಾರ್ಯಕ್ರಮಗಳನ್ನು ಕೂಡಿರುವ ಸಮಾವೇಶವನ್ನು ಮಾಡುವ ನಮ್ಮ ನಾವಿಕಾದ ಧ್ಯೇಯ. ಹಿಂದಿನ ಸಮಾವೇಶಗಳ ಹಾಗೆ ಈ ಸಮಾವೇಶ ಕೂಡ ಯಶಸ್ವಿಯಾಗಿ ಮೂಡಿ ಬಂದಿದೆ" ಎನ್ನುತ್ತಾರೆ ವಲ್ಲೀಶ ಅವರು.

English summary
Vallisha Shatry is undoubtedly the force behind Navika (North America Vishwa Kannada Association). Though he has traveled all parts of the world due to his professional commitments, he his priority has always been serving Kannada. A write up by Ashwini Anish.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X