ಕುವೈತ್ ನಲ್ಲಿ ಬಿಡುಗಡೆಯಾದ ಮೇಷ್ಟ್ರ ಪ್ರವಾಸ ಕಥನ
ಉಡುಪಿಯ ಪತ್ರಿಕೋದ್ಯಮ ಕಾಲೇಜಿನ ಮೇಷ್ಟ್ರು ಮಂಜುನಾಥ್ ಕಾಮತ್ ಅವರು ಬರೆದಿರುವ 'ದಾರಿ ತಪ್ಪಿಸು ದೇವರೇ' ಎಂಬ ಪ್ರವಾಸ ಕಥನ ಕುವೈತ್ ನಲ್ಲಿ ವಿಧ್ಯುಕ್ತವಾಗಿ ಇತ್ತೀಚೆಗೆ ಬಿಡುಗಡೆಯಾಯಿತು.
ಉಡುಪಿಯ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು ಮಂಜುನಾಥ್ ಕಾಮತ್ ಅವರು. ಕರ್ನಾಟಕ ಕರಾವಳಿಯ ಲೇಖಕರೊಬ್ಬರು ರಚಿಸಿರುವ ಕೃತಿಯೊಂದು ಮೊದಲ ಬಾರಿಗೆ ಗಲ್ಫ್ ನಲ್ಲಿ ಬಿಡುಗಡೆಯಾಗಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕುವೈತ್ ಕನ್ನಡ ಸಂಘ, ಕುವೈತ್ ನ ಸಾಹಿತ್ಯ ಸಂಪದ, ಭಾರತೀಯ ಪ್ರವಾಸಿ ಪರಿಷತ್, ಕುವೈತ್ ನ ಜಿಎಸ್ಬಿ ಸಭಾ ಸಂಘಟನೆಗಳು ಜಂಟಿಯಾಗಿ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಜಗದ್ವಿಖ್ಯಾತ ಕುವೈತ್ ಟವರ್ ಬಳಿ ಈ ಪ್ರವಾಸಿ ಕಥನ ಪುಸ್ತಕ ಬಿಡುಗಡೆಯಾಯಿತು.
ಸಾಹಿತ್ಯ ಸಂಪದದ ಆಝಾದ್ ಅವರು, "ಕರಾವಳಿಯಾದ್ಯಂತ ಸುತ್ತಾಡಿದ ಅನುಭವ ಕಥೆಯುಳ್ಳ ಈ ಕೃತಿ, ತಾಯ್ನಾಡಿನಿಂದ ದೂರ ಇರುವ ನಮ್ಮನ್ನೆಲ್ಲ ಕನ್ನಡ ನಾಡಿಗೆ ಕರೆದೊಯ್ಯುತ್ತದೆ. ಕನ್ನಡ ನೆಲದಲ್ಲಿ ನಾವೂ ಲೇಖಕರ ಜೊತೆ ಸುತ್ತಾಡಿದ ಅನುಭವವಾಗುತ್ತದೆ. ಕನ್ನಡ ಲೋಕದ ಪ್ರವಾಸೀ ಸಾಹಿತ್ಯ ಮತ್ತಷ್ಟು ಬೆಳಗಲಿ" ಎಂದು ಪುಸ್ತಕ ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿ.ಎಸ್.ಬಿ ಸಭಾದ ಮಂಜೇಶ್ವರ ಮೋಹನದಾಸ ಕಾಮತ್ ಅವರು, "ಅರಬ್ ರಾಷ್ಟ್ರದಲ್ಲಿ ಮೊತ್ತಮೊದಲ ಬಾರಿಗೆ ಕನ್ನಡ ಪುಸ್ತಕ ಬಿಡುಗಡೆಯಾಗುತ್ತಿರುವುದು ಅತ್ಯಂತ ಸಂತೋಷ ಉಂಟುಮಾಡುತ್ತಿದೆ. ಕನ್ನಡ ಸಾಹಿತ್ಯ ಜಗತ್ತಿನಾದ್ಯಂತ ಪಸರಿಸಲಿ" ಎಂದು ಶುಭ ಹಾರೈಸಿದರು.
ಭಾರತೀಯ ಪ್ರವಾಸೀ ಪರಿಷತ್ತಿನ ರಾಜ್ ಭಂಡಾರಿ, "ಪ್ರವಾಸವೆಂದರೆ ಕೇವಲ ಪೋಲಿ ಅಲೆತವಲ್ಲ. ಅಲ್ಲೂ ಬೆರಗು ಹುಟ್ಟಿಸುವ ಕಥೆಗಳಿರುತ್ತವೆ. ಮಾನವೀಯ ಮುಖಗಳಿರುತ್ತವೆ. ಅವು ಈ ಕೃತಿಯಲ್ಲಿ ಅಮೋಘವಾಗಿ ದಾಖಲಾಗಿವೆ" ಎಂದು ನುಡಿದರು.
ಸಂತೋಷ್ ಶೆಟ್ಟಿ, ಶ್ರೀನಿವಾಸ ಪ್ರಭು, ಅಮೃತ್ ರಾಜ್ ಉಪಸ್ಥಿತರಿದ್ದರು. ದುಬೈ ಹಾಗೂ ಒಮಾನ್ ದೇಶಗಳಲ್ಲೂ ಈ ಕೃತಿಯು ಬಿಡುಗಡೆಗೊಳ್ಳಲಿದೆ ಎಂದು ಅವರು ತಿಳಿಸಿದರು.