'ಶ್ರೀ. ಜಗನ್ನಾಥದಾಸರು': ನವೆಂಬರ್ 20, 2021 ಒಂದು ಮರೆಯಲಾಗದ ದಿನ
ನವೆಂಬರ್ 20, 2021 ಒಂದು ಮರೆಯಲಾಗದ ದಿನ. ಏಕೆಂದರೆ ಅಂದು ಬೇ ಏರಿಯಾ ಸನಾತನಧರ್ಮ ಸಂಘಗಳು, ಕೇವಲ ಸೀಮಿತ ಹನ್ನೊಂದು ದಿನಗಳಲ್ಲಿ ರೂಪುರೇಷೆಗಳನ್ನು ಸಿದ್ಧಪಡಿಸಿ, ಮೊತ್ತ ಮೊದಲಬಾರಿಗೆ, ಒಂದೇ ದಿನ 6 ಪ್ರದರ್ಶನಗಳು ಮತ್ತು 300ಕ್ಕೂ ಹೆಚ್ಚು ಪ್ರೇಕ್ಷಕರು ವೀಕ್ಷಿಸಿದ , ಮಹಾ ದೃಶ್ಯಕಾವ್ಯ 'ಶ್ರೀ ಜಗನ್ನಾಥದಾಸರು' ಎಂಬ ಚಲನಚಿತ್ರ.
ಕ್ಯಾಲಿಫೋರ್ನಿಯಾದ ಬೇ ಏರಿಯಾದ, ಫ್ರೆಮೊಂಟ್ ನ , ಸಿನಿಲೌಂಜ್ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ಈ ಚಿತ್ರ ತೆರೆಕಂಡಿತು. ಉದಾತ್ತ ಕಾರಣಕ್ಕಾಗಿ, ಸಣ್ಣ ಪ್ರಯತ್ನದಿಂದ ಒಂದೇ ಒಂದು ಪ್ರದರ್ಶನದಿಂದ ಶುರುವಾದ ಈ ಚಿತ್ರ ಎಲ್ಲರ ನಿರೀಕ್ಷೆಯನ್ನೂ ಮೀರಿ, ದಾಪುಗಾಲು ಇಡುತ್ತಾ, ಅಭೂತಪೂರ್ವ ಯಶಸ್ಸನ್ನು ಕಂಡಿತು.
ಇದಕ್ಕೆಲ್ಲ ಮೂಲ ಕಾರಣ, ಸಹೃದಯಿಗಳಾದ, ಸಮಾನಮನಸ್ಕರಾದ ಶ್ರೀವ್ಯಾಸ ಭಜನಾ ಮಂಡಳಿ (SVBM), ವಿಶ್ವ ಮಾಧ್ವ ಸಂಘ (VMS), ಬಾಲ ಮುಕುಂದ, ಶ್ರೀಕೃಷ್ಣ ವೃಂದಾವನ ( SKV), ಬೆಂಗಳೂರು ವಾಯ್ಸ್ , ಕಸ್ತೂರಿ ಮೀಡಿಯಾ, ಸಾಫಲ್ಯ ಮ್ಯೂಸಿಕ್ ಅಕಾಡೆಮಿ, ಸಿನಿ ಲೌಂಜ್ ಚಿತ್ರಮಂದಿರ ಮತ್ತು ಅನೇಕ ಸಂಘ-ಸಂಸ್ಥೆಗಳ ಬೆಂಬಲದಿಂದ ಎಂದು ಹೇಳಿದರೆ ತಪ್ಪಾಗಲಾರದು.
ಸೆಪ್ಟೆಂಬರ್ 11ರಂದು ಬೆಂಗಳೂರು ವಾಯ್ಸ್ ಎಂಬ ಕಾರ್ಯಕ್ರಮದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ 'ಶ್ರೀ ಜಗನ್ನಾಥದಾಸರು' ಚಿತ್ರದ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರದ ನಟರೊಂದಿಗೆ ಸಣ್ಣ ಚರ್ಚೆ ಪ್ರಾರಂಭವಾಯಿತು. ಇದರ ಫಲಶ್ರುತಿಯೇ ಸುಮಾರು 60 - 70 ಪ್ರೇಕ್ಷಕರನ್ನು ಒಳಗೊಂಡು , ದೊಡ್ಡ ಪರದೆಯ ಮೇಲೆ ಒಂದು ಪ್ರದರ್ಶನವನ್ನಾದರೂ ನೋಡಬೇಕೆಂಬ ಹಂಬಲ.
ಇದಕ್ಕೆ ಕಾರಣ OTT ವೇದಿಕೆಯಲ್ಲಿ ಚಿತ್ರ ಬಿಡುಗಡೆಯಾದರೆ ಮನೆಮಂದಿಯಲ್ಲ ಒಟ್ಟಿಗೆ ಕುಳಿತು ಸಿನಿಮಾ ನೋಡುತ್ತಾರೆ ಎಂಬ ಭಾವನೆ ಜೊತೆಗೆ ಯಾರು ಕೂಡ ಚಿತ್ರಮಂದಿರದ ಕಡೆಗೆ ಮುಖ ಮಾಡುವುದಿಲ್ಲ ಎಂಬ ಅಳುಕು. ಆದರೆ svbm ಸದಸ್ಯರೆಲ್ಲರಿಗೂ ಕೂಡ ಒಂದೇ ಒಂದು ಆಸೆ- ಅದು ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ ನಮ್ಮ ಅಳಿಲುಸೇವೆಯನ್ನು ದಾಸರ ಪಾದಾರವಿಂದಗಳಿಗೆ ಅರ್ಪಿಸಬೇಕೆನ್ನುವುದು.
ಎರಡು ತಿಂಗಳಾದ ನಂತರ ಚಿತ್ರವು ಬಿಡುಗಡೆಗೆ ಸಿದ್ಧವಿದೆ
ಬೆಂಗಳೂರು ವಾಯ್ಸ್ ಕಾರ್ಯಕ್ರಮ ಮುಗಿದು ಸರಿಸುಮಾರು ಎರಡು ತಿಂಗಳಾದ ನಂತರ ಚಿತ್ರವು ಬಿಡುಗಡೆಗೆ ಸಿದ್ಧವಿದೆ ಎಂದು ಚಿತ್ರತಂಡದವರು ತಿಳಿಸಿದಾಗ ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ. ಸ್ವಯಂಪ್ರೇರಿತರಾಗಿ, ಕೆಲವು ಆಸಕ್ತರು, ಬೆಂಗಳೂರು ವಾಯ್ಸ್ ಮತ್ತು ಕಸ್ತೂರಿ ಮೀಡಿಯಾದ ಸುರೇಶ್ ಬಾಬು ಮತ್ತು ಗೋಪಿ ಗೋವರ್ಧನ್ ಗೌಡ ಅವರೊಂದಿಗೆ ಕೈಜೋಡಿಸಿ ಕಾರ್ಯರೂಪಕ್ಕೆ ತಂದರು. ಕೇವಲ 72 ಗಂಟೆಗಳಲ್ಲಿ ಸಿಗಬಹುದಾದ ಎಲ್ಲ ಮಾಧ್ಯಮಗಳನ್ನು ಉಪಯೋಗಿಸಿಕೊಂಡು, ಬೇ ಏರಿಯಾದ ಕನ್ನಡ ಬಂಧುಗಳು ಮತ್ತು ಹರಿದಾಸ ಹಾಗೂ ಸನಾತನ ಧರ್ಮದ ಆಸಕ್ತರು ಇವರೆಲ್ಲರನ್ನು ಸಂಪರ್ಕಿಸಿ ಚರಿತ್ರೆಯನ್ನು ಬರೆಯಲು ಕಾರ್ಯೋನ್ಮುಖರಾದರು. ಎಣಿಕೆ ಸುಳ್ಳಾಗಲಿಲ್ಲ
ಚಿತ್ರಮಂದಿರವು , ಹಬ್ಬದ ವಾತಾವರಣದಿಂದ ಕಂಗೊಳಿಸುತ್ತಿತ್ತು
ಸಿನಿಮಾ ನಾಲ್ಕು ಪ್ರದರ್ಶನಗಳ ಅಭೂತಪೂರ್ವ ಯಶಸ್ಸನ್ನು ಕಂಡಿತು. ಸಾಲದೆಂಬಂತೆ, ಮತ್ತೆರಡು ಪ್ರದರ್ಶನಗಳನ್ನು ಕಂಡಿತು. ಇವೆಲ್ಲವೂ ಸಾಧ್ಯವಾಗಿದ್ದು ನಿಮ್ಮಂತಹವರ ಬೆಂಬಲದಿಂದ. 20ನೇ ನವಂಬರ್ 2021 ಪ್ರದರ್ಶನಗೊಂಡ ದಿನ, ಸಿನಿಮಾ ಆಸಕ್ತರೆಲ್ಲರೂ ಒಂದು ಗಂಟೆಗೇ ಚಿತ್ರಮಂದಿರಕ್ಕೆ ಅತ್ಯುತ್ಸಾಹದಿಂದ ಬಂದರು. ಚಿತ್ರಮಂದಿರವು , ಹಬ್ಬದ ವಾತಾವರಣದಿಂದ ಕಂಗೊಳಿಸುತ್ತಿತ್ತು ಅಷ್ಟೇ ಅಲ್ಲದೆ, ದೈವಿಕತೆಯ ವಾತಾವರಣ ಎದ್ದು ಕಾಣುತ್ತಿತ್ತು. ಪ್ರೇಕ್ಷಕರಲ್ಲಿ ಅನೇಕರು ನೃತ್ಯ ಸೇವೆಗೆ ಅಣಿಯಾಗಿ ಬಂದಿದ್ದರು. ಮತ್ತು ಶ್ರೀ ಜಗನ್ನಾಥದಾಸರ ಹಾಡಿಗೆ ಮರೆತು ನರ್ತನ ಮಾಡಿದರು.
ಶ್ರೀ ಜಗನ್ನಾಥದಾಸರ ಮೇರುಕೃತಿ ಶ್ರೀ ಹರಿಕಥಾಮೃತಸಾರ
ಚಿತ್ರಮಂದಿರದಲ್ಲಿ ಸುಮಾರು ಮಧ್ಯಾಹ್ನ 1.25 ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವು, ಶ್ರೀಕೃಷ್ಣ ವೃಂದಾವನದ ಶಂಕರನಾರಾಯಣ ಭಟ್ ಅವರ ವೇದಘೋಷ ದೊಂದಿಗೆ ಪ್ರಾರಂಭವಾಯಿತು.
ಸರಸ್ವತಿ ವಟ್ಟಂ, ಶ್ರೀ ಜಗನ್ನಾಥದಾಸರ ಮೇರುಕೃತಿ ಶ್ರೀ ಹರಿಕಥಾಮೃತಸಾರದ, ಆದಿ ಹಾಗೂ ಅಂತ್ಯದ ಪದ್ಯಗಳನ್ನು ಹಾಡಿದರೆ, ಬಾಲಚಂದ್ರ(ಬಾಲು), ಹಿಂದೂ ಸ್ವಯಂ ಸೇವಕ ಸಂಘದ ಶ್ರೀವಿಜಯ ಸಿಂಹ ಅವರನ್ನು,ವಿಶ್ವಹಿಂದೂ ಪರಿಷತ್ತಿನ ಬೇ ಏರಿಯಾದ ಸಂಘಟಕರಾದ ಶ್ರೀ ಹಿತೇಶ್ ಜೋಷಿ ಹಾಗೂ ಸ್ಥಳೀಯ ಲಿವರ್ಮೋರ್ , ಹಿಂದೂ ಟೆಂಪಲ್, ಮತ್ತು ಬೇ ಏರಿಯಾದ ಕೃಷ್ಣ ವೃಂದಾವನ ಸಂಸ್ಥಾಪಕರಲ್ಲಿ ಒಬ್ಬರಾದ ಶ್ರೀ ಸುಧೀನ್ ವಿಠ್ಠಲ್ ಮುಂತಾದ ಗೌರವಾನ್ವಿತರನ್ನು ವೇದಿಕೆಗೆ ಆಹ್ವಾನಿಸಿದರು.
ವಂದನಾರ್ಪಣೆ ಸಲ್ಲಿಸಿ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರೆ ಎಳೆದರು
ಇದಾದ ನಂತರ ಸಾಪಲ್ಯ ಮ್ಯೂಸಿಕ್ ಅಕಾಡೆಮಿಯ ಸಂಸ್ಥಾಪಕರಾದಂತಹ ದಿವ್ಯ ರಮೇಶ್ ಅವರು, ತಮ್ಮ ಶಿಷ್ಯ ವೃಂದದೊಂದಿಗೆ , ಶ್ರೀ ಜಗನ್ನಾಥ ದಾಸರನ್ನು ಕುರಿತು ಸುಶ್ರಾವ್ಯವಾಗಿ ಹಾಡಿದರು. SVBM ಸದಸ್ಯರಾದಂತಹ ಸುರೇಶ್ ಬಾಬು ಹಾಗೂ ಪ್ರಸನ್ನ ಕೃಷ್ಣ, ಶ್ರೀ ಜಗನ್ನಾಥದಾಸರ ಬಗ್ಗೆ ಒಂದೆರಡು ಮಾತುಗಳನ್ನು ಹಂಚಿಕೊಂಡರು . ಶ್ರೀ ಜಗನ್ನಾಥದಾಸರು ಚಿತ್ರದ ವಿಶ್ವಮಟ್ಟದ ವಿತರಕರಾದಂತಹ ಫಣಿರಾಜ್ ಅವರು ಚಿತ್ರದ ಸುದೀರ್ಘ ಪಯಣದ ಬಗ್ಗೆ ಹಾಗೂ ಮುಂದಿನ ಯೋಜನೆಗಳ ಬಗ್ಗೆ ವಿಸ್ತೃತವಾಗಿ ವಿವರಿಸಿದರು. ಮಾಧ್ಯಮ ಮಿತ್ರರು, ಸನಾತನ ಧರ್ಮ ಸಂಸ್ಥೆಗಳು, ಪೋಷಕರು ಮುಂತಾದವರಿಗೆ ಧನ್ಯವಾದಗಳನ್ನು ಅರ್ಪಿಸುವುದರ ಮೂಲಕ ಶ್ರೀ ಬಾಲಚಂದ್ರ ಅವರು ವಂದನಾರ್ಪಣೆ ಸಲ್ಲಿಸಿ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರೆ ಎಳೆದರು.
ಚಿತ್ರವು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ
ಈ ಕಾರ್ಯಕ್ರಮದ ನಂತರ, ಚಿತ್ರವು ಮೂರು ಪ್ರದರ್ಶನಗಳನ್ನು ಸಮರೋಪಾದಿಯಲ್ಲಿ ತೆರೆ ಕಂಡಿತು. ಪ್ರೇಕ್ಷಕರ ಕಣ್ಣಲ್ಲಿ ಆನಂದಭಾಷ್ಪ ಸುರಿಯುತ್ತಿತ್ತು. ಚಿತ್ರದ ಕೆಲವು ಸನ್ನಿವೇಶಗಳು ಹೃದಯಕ್ಕೆ ಹತ್ತಿರವಾದುದ್ದರಲ್ಲಿ ಯಾವುದೇ ಸಂದೇಹವಿಲ್ಲ. ಚಿತ್ರದ ಮಧ್ಯಂತರದಲ್ಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರಲು ಪ್ರಾರಂಭವಾಯಿತು. ಇಂತಹ ಸಮಯದಲ್ಲಿ ನಮ್ಮ ಸಂದರ್ಶನಕಾರರ ತಂಡವು ಪ್ರೇಕ್ಷಕರನ್ನು ಹಾಗೂ ಕೆಲವು ಗೌರವಾನ್ವಿತರನ್ನು ಸಂದರ್ಶಿಸಿ, ಚಿತ್ರವು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ ಎಂಬುದನ್ನು ಖಾತರಿಪಡಿಸಿಕೊಂಡರು .
ಶ್ರೀನಿವಾಸಾಚಾರ್ಯರು ಹೇಗೆ ಜಗನ್ನಾಥ ದಾಸರಾಗುತ್ತಾರೆ ಎಂಬ ಕಥೆ
ಚಿತ್ರದ ಉತ್ತರಾರ್ಧದಲ್ಲಿ ಶ್ರೀನಿವಾಸಾಚಾರ್ಯರು ಹೇಗೆ ಜಗನ್ನಾಥ ದಾಸರಾಗುತ್ತಾರೆ ಎಂಬ ಕಥೆ ಸಾಗುವುದರಿಂದ ಜನಗಳಿಗೆ ಹೆಚ್ಚು ಆಸಕ್ತಿ ಹುಟ್ಟಿತು. ಈ ಸಂದರ್ಭಕ್ಕೆ ಕಳಶವಿಟ್ಟಂತೆ svbm ತಂಡದ ಸದಸ್ಯರೆಲ್ಲರೂ ಚಿತ್ರವು ಪ್ರದರ್ಶಿತವಾಗುತ್ತಿದ್ದ ಪ್ರತಿಯೊಂದು ಪ್ರದರ್ಶನಕ್ಕೆ ಹೋಗಿ "ವಿಠಲಯ್ಯ ವಿಠಲಯ್ಯ ವಿಠಲಯ್ಯ" ಎಂಬ ಹಾಡಿಗೆ ಮೈಮರೆತು ನೃತ್ಯ ಸೇವೆ ಮಾಡಿದರು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಉದ್ಘಾಟನೆಗೆ ಆಗಮಿಸಿದ ಎಲ್ಲರಿಗೂ ಕೂಡ ದೈವಿಕ ಅನುಭವ. ಖಂಡಿತವಾಗಿಯೂ ಸಾಗರದಾಚೆಗೆ ಇಂತಹ ಚಲನಚಿತ್ರಕ್ಕೆ ಪ್ರಶಂಸನೀಯ ಮಾತುಗಳು ಬರುತ್ತಿರುವುದು ಮೊತ್ತ ಮೊದಲ ಬಾರಿಗೆ ಎಂದರೆ ತಪ್ಪಾಗಲಾರದು.
ಬೇ ಏರಿಯಾದ ಸ್ವಯಂಸೇವಕರ ಪರವಾಗಿ ಎಲ್ಲರಿಗೂ ಧನ್ಯವಾದ
ಮುಂದೆ ಮಧುಸೂದನ ಹವಾಲ್ದಾರ್, ತಿವಿಕ್ರಮ ಜೋಶಿ ಅವರ ತಂಡದವರು ಹೊರತರುವ ಅನೇಕದಾಸಸಾಹಿತ್ಯದ ಚಿತ್ರಗಳಿಗೆ ಇದೇ ರೀತಿ ಅನುಭವ ಆಗುವುದರಲ್ಲಿ ಸಂಶಯವೇ ಇಲ್ಲ. ಚಿತ್ರತಂಡಕ್ಕೆ ನಮ್ಮೆಲ್ಲರ ಹಾರ್ದಿಕ ಶುಭಾಶಯಗಳು. ಎಲ್ಲಾ ಸನಾತನ ಧರ್ಮಾಸಕ್ತರಿಗೆ ಇಂತಹ ಚಿತ್ರಗಳು ಎಂದೆಂದಿಗೂ ಖುಷಿಯನ್ನು ಕೊಡುವುದರಲ್ಲಿ ಸಂದೇಹವಿಲ್ಲ. ಸರಸ್ವತಿ ವಟ್ಟಂ, ಶ್ರೀ ಜಗನ್ನಾಥದಾಸರು ಚಲನಚಿತ್ರದ ಬೇ ಏರಿಯಾದ ಸ್ವಯಂಸೇವಕರ ಪರವಾಗಿ ಎಲ್ಲರಿಗೂ ಧನ್ಯವಾದಗಳು.