ಆಕೆ ಕೊಟ್ಟ ಉತ್ತರ ಜೀವನದಲ್ಲಿ ಎಂದೂ ಮರೆಯಲಾಗದು
ಅಂದು, ಅದೊಂದು ಮುಸ್ಸಂಜೆ,,,,ಸೂರ್ಯ ವಿರಮಿಸಲು ಕಾತುರದಿಂದ ಧಾವಿಸುತ್ತಿರುವಾಗ ನಾವು ಗೆಳೆಯರೆಲ್ಲಾ ತಿಪಟೂರಿನ ಬಾಲಕಿಯರ ಪ್ರೌಢಶಾಲೆಯ ಮುಂದಿದ್ದ ಗೋಪಾಲಣ್ಣನ ಟೀ ಅಂಗಡಿಯಲ್ಲಿ ಕುಳಿತಿದ್ದೆವು. ಅದಾಗ ತಾನೇ ರೇಷ್ಮೆ ನೂಲು ಬಿಚ್ಚುವ ಕಾರ್ಖಾನೆಯೊಂದನ್ನು ಸ್ಥಾಪಿಸಿ, ಜೊತೆಗೊಂದು ಹಳೆಯ ಡಕೋಟಾ ಜಾವಾ ಬೈಕೊಂದನ್ನು ಕೊಂಡಿದ್ದ ನಾನಲ್ಲಿ ನಾಯಕನಾಗಿದ್ದೆ.
ಸಹಚರರೆಲ್ಲಾ ಮಾಮೂಲಿನಂತೆ ನಮ್ಮ ಯಶೋಗಾಥೆಯ ಬಗ್ಗೆ ಮಾತನಾಡುತ್ತಾ ಗೋಪಾಲಣ್ಣ ತಯಾರಿಸಿ ಕೊಟ್ಟ ಸ್ಟ್ರಾಂಗ್ ಟೀ ಕುಡಿಯುತ್ತಿದ್ದಾಗ ಬಂದಿದ್ದಳವಳು! ಮಾಸಲು ಬಟ್ಟೆಯನ್ನುಟ್ಟ, ಪ್ರೇತಕಳೆಯನ್ನೇ ಮುಖದ ತುಂಬಾ ಹೊತ್ತಿದ್ದ ಥೇಟ್ ಅಸ್ಥಿಪಂಜರದಂತಿದ್ದ ಕಪ್ಪು ಮಹಿಳೆಯೊಬ್ಬಳು ತನ್ನ ಎದೆಗವಚಿದ್ದ ಹಸುಗೂಸನ್ನು ತಣಿಸುತ್ತಾ ನಮ್ಮ ಮುಂದೆ ಬಂದಿದ್ದಳು. ಅವಳಿಗರಿವಿಲ್ಲದೆಯೇ ನಮಗೆ ಜೀವನದಲ್ಲಿ ಮರೆಯಲಾಗದ ಅನುಭವವೊಂದನ್ನು ಕಟ್ಟಿಕೊಡಲೆಂದೇ ಬಂದಿದ್ದಳು ಅವಳು! (ಅಮ್ಮನಿಗಾಗಿ ಬಾವಿಯನ್ನೇ ತೋಡಿದ ಸಾಗರದ ಬಾಹುಬಲಿ)
ಗೆಳೆಯನೊಬ್ಬ ಆತುರಾತುರವಾಗಿ ನಮ್ಮಲ್ಲಿಗೆ ಬಂದು ಚಿರಂಜೀವಿ ನರ್ಸಿಂಗ್ ಹೋಮಿನಲ್ಲಿ ಕೊಂಚ ಗಲಾಟೆ ನಡೆಯುತ್ತಿದೆ, ಅಸಹಾಯಕ ಹೆಣ್ಣೊಬ್ಬಳು ಅಲ್ಲಿ ಸಂಕಟದಲ್ಲಿದ್ದಾಳೆ, ಅವಳಿಗೆ ನಮ್ಮ ಸಹಾಯದ ಅವಶ್ಯಕತೆಯಿದೆಯೆಂದು ಅರುಹಿದ್ದ.
ಒಡನೆಯೇ ನಾವು ಗೆಳೆಯರೆಲ್ಲಾ ಅಲ್ಲಿಗೆ ಧಾವಿಸಿದ್ದೆವು. ಅಲ್ಲಿ ಗಂಡು ಮಗುವೊಂದಕ್ಕೆ ಜನ್ಮ ನೀಡಿದ ಹಸಿ ಬಾಣಂತಿಯೊಬ್ಬಳು ಆಸ್ಪತ್ರೆಯ ಬಿಲ್ ಕಟ್ಟಲಾಗದೆ ಕಣ್ಣೀರುಗರೆಯುತ್ತಾ ಕುಳಿತಿದ್ದಳು. ಅವಳ ಪುರ್ವಾಪರವನ್ನು ವಿಚಾರಿಸಿದ ನಾವುಗಳು ಆಸ್ಪತ್ರೆಯ ಬಿಲ್ ಕಟ್ಟಿ ಅವಳನ್ನು ನಮ್ಮೊಡನೆ ಹೊರಗೆ ಕರೆ ತಂದಿದ್ದೆವು. ಅಲ್ಲಿಂದ ಮತ್ತೆ ಸೀದಾ ಗೋಪಾಲಣ್ಣನ ಟೀ ಅಂಗಡಿಯ ಬಳಿಗೆ ಬಂದು ಅವಳಿಗೂ ಟೀ ಕುಡಿಯಲು ಹೇಳಿ ಕುಳಿತೆವು.
ಕೊಂಚ ಸಂಕೋಚದಿಂದಲೇ ಬಂದ ಅವಳು ನಿಧಾನವಾಗಿ ಮೆಲುದನಿಯಲ್ಲಿ ಉಸುರಿದ್ದಳು, ಅಣ್ಣಂದಿರಾ, ನನಗೆ ನಿಮ್ಮ ಸಹಾಯ ಬೇಕಾಗಿದೆ, ನೀವು ನನಗೆ ಸಹಾಯ ಮಾಡಬಹುದೆ? ಆಗ ನನ್ನ ಸ್ನೇಹಿತರ ಗುಂಪಿನಲ್ಲಿ ಬಲಾಢ್ಯನಾಗಿದ್ದ ನಾನು ಅದೇನೋ ಅಪ್ರತಿಮ ಆತ್ಮವಿಶ್ವಾಸದಿಂದ ಅವಳನ್ನು ಕೇಳಿದ್ದೆ, 'ನಿನಗೇನಾಗಬೇಕು ಹೇಳಮ್ಮಾ,,,ನಮ್ಮ ಕೈಲಾದರೆ ಖಂಡಿತಾ ಸಹಾಯ ಮಾಡುತ್ತೇವೆ'
ಆ ಮಾತಿಗಾಗಿಯೇ ಕಾದಿದ್ದ ಅವಳು ನಾನು ಅವಳಿಗಾಗಿ ತರಿಸಿದ ಸ್ಟ್ರಾಂಗ್ ಟೀಯನ್ನು ಮೆಲ್ಲಗೆ ಚಪ್ಪರಿಸುತ್ತಾ, ನನಗೆ ಈ ಮಗುವನ್ನು ಸಾಕಲು ಸಾಧ್ಯವಿಲ್ಲವಣ್ಣಾ..,ನನ್ನ ಗಂಡ ಅನ್ನಿಸಿಕೊಂಡವನು ನನ್ನನ್ನು ಬಿಟ್ಟು ಹೋಗಿದ್ದಾನೆ, ನನಗೆ ಬೇರೆ ಯಾರೂ ಗತಿಯಿಲ್ಲ, ನಿಮ್ಮಲ್ಲಿ ಯಾರಾದರೂ ಒಬ್ಬರು ನನ್ನ ಮಗುವನ್ನು ಸಾಕಿಕೊಳ್ಳಲು ಸಾಧ್ಯವೇ?
ನನಗೆ ಈ ಮಗುವನ್ನು ಕೊಲ್ಲಲು ಮನಸ್ಸಿಲ್ಲ, ಹಾಗಾಗಿ ನಾನು ನಿಮ್ಮಲ್ಲಿ ಯಾರಾದರೊಬ್ಬರಿಗೆ ಈ ಮಗುವನ್ನು ಕೊಟ್ಟು ಬಿಡುವೆ, ದಯವಿಟ್ಟು ಸಾಕಿಕೊಳ್ಳಿ ಎಂದವಳ ಮಾತುಗಳನ್ನು ಕೇಳಿ ಅಲ್ಲಿ ಅಸಹನೀಯ ಮೌನ ನೆಲೆಯಾಗಿತ್ತು. ಯಾರೂ ಮಾತನಾಡುತ್ತಿರಲಿಲ್ಲ, ಬಹುಶಃ ನನ್ನನ್ನೂ ಸೇರಿಸಿ ಎಲ್ಲರ ಎದೆಬಡಿತ ಹೆಚ್ಚಾಗಿತ್ತು. (ಮಕ್ಕಳ ಕಳೆದುಕೊಂಡ ಅಮ್ಮಂದಿರ ಗೋಳು)
ಕೆಲಕ್ಷಣಗಳು ಚಿಂತಿಸಿದ ನಾನು ಆಕೆಗೆ ಅಭಯ ನೀಡಿಯೇ ಬಿಟ್ಟಿದ್ದೆ! ಆಯಿತು ತಂಗಿ, ನಿನ್ನ ಮಗುವನ್ನು ನಾನು ಸಾಕುವೆ, ನನ್ನ ಮಗುವಂತೆ! ನಿನ್ನ ಪರಿಸ್ಥಿತಿ ಎಂದಾದರೊಮ್ಮೆ ಸರಿಯಾದಾಗ ಬಂದು ನಿನ್ನ ಮಗುವನ್ನು ನೀನು ವಾಪಸ್ ತೆಗೆದುಕೊಂಡು ಹೋಗಬಹುದು ಎಂದಿದ್ದೆ.
ಅದಕ್ಕೊಪ್ಪಿದ ಆಕೆಯನ್ನು ನನ್ನ ಜಾವಾ ಬೈಕಿನ ಮೇಲೆ ಕೂರಿಸಿಕೊಂಡು ಗೊರಗೊಂಡನಹಳ್ಳಿಯಲ್ಲಿದ್ದ ನನ್ನ ಮನೆಗೆ ಕರೆತಂದಿದ್ದೆ. ಎಳೆಯ ಮಗುವಿನೊಡನೆ ಬಂದ ಅಪರಿಚಿತ ಸ್ತ್ರೀಯನ್ನು ಕಂಡ ನನ್ನಾಕೆ ಗಾಬರಿಯಾಗಿದ್ದಳು. ಅವಳಿಗೆ ಎಲ್ಲಾ ಕಥೆಯನ್ನೂ ವಿವರಿಸಿದಾಗ ನೆಮ್ಮದಿಯಾದಳು.
ಆಕೆಗಾಗಿ ವಿಶೇಷ ಅಡಿಗೆಯನ್ನು ಮಾಡಿ ಊಟಕ್ಕಿಟ್ಟು, ಅವಳಿಗೆ ತನ್ನದೇ ಶೈಲಿಯಲ್ಲಿ ಧೈರ್ಯ ತುಂಬಿದ ನನ್ನವಳ ಬಗ್ಗೆ ನನಗೆ ಹೆಮ್ಮೆ ಎನ್ನಿಸಿತ್ತು. ಊಟ ಮುಗಿಸಿ ಹಸುಗೂಸನ್ನು ನನ್ನವಳ ಕೈಗಿತ್ತು ಹೊರಟವಳ ಕೈಗೊಂದಿಷ್ಟು ಹಣವನ್ನಿತ್ತು ಬಸ್ ನಿಲ್ದಾಣದವರೆಗೂ ಹೋಗಿ ಬಸ್ ಹತ್ತಿಸಿ ಬಂದಿದ್ದೆ!
ಇದಾವುದರ ಅರಿವಿಲ್ಲದ ಆ ಎಳೆಗೂಸು ಮುದ್ದುಮುದ್ದಾಗಿ ನಗುತ್ತಾ ಒಮ್ಮೆ ನಿದ್ದೆ, ಮಗದೊಮ್ಮೆ ಎಚ್ಚರದ ಸ್ಥಿತಿಯನ್ನು ಅನುಭವಿಸುತ್ತಾ ಮುಲುಗಾಡುತ್ತಿತ್ತು. ಅದರ ಮೊಗವನ್ನೇ ನೋಡುತ್ತಾ ನನ್ನ ಆರು ತಿಂಗಳ ಮಗಳಿಗೆ ಎದೆಯೂಡಿಸುತ್ತಾ ಕುಳಿತಿದ್ದಳು ನನ್ನ ಅರ್ಧಾಂಗಿ. ಅನಿರೀಕ್ಷಿತವಾಗಿ ಮನೆಗೆ ಬಂದ ಪುಟ್ಟ ಕಂದನನ್ನು ನನ್ನ ಅರ್ಧಾಂಗಿ ತನ್ನ ಸ್ವಂತ ಮಗುವಿನಂತೆಯೇ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಳು. ಮುಂದಿನ ಪುಟ ಕ್ಲಿಕ್ಕಿಸಿ..