ಅಮೆರಿಕದಲ್ಲಿ ಎಸ್ಎಲ್ ಭೈರಪ್ಪನವರ ವಿಶೇಷ ಸಂದರ್ಶನ
ಕನ್ನಡ ಸಾರಸ್ವತ ಲೋಕ ಕಂಡ ಪ್ರಖರ ಕಾದಂಬರಿಕಾರ, ಭಾರತದ ಆಧುನಿಕ ಲೇಖಕರಲ್ಲಿ ಅಗ್ರಗಣ್ಯರಾಗಿರುವ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ (ಎಸ್ಎಲ್ ಭೈರಪ್ಪ) ಇಂಥದೇ ವಿಷಯ ಇಟ್ಟುಕೊಂಡು ಕಾದಂಬರಿ ಬರೆದವರಲ್ಲ. ಅವರೇ ಹೇಳುವಂತೆ, ಯಾವ ವಿಷಯ ಅವರನ್ನು ಅಮೂಲಾಗ್ರವಾಗಿ ಆವರಿಸಿಕೊಳ್ಳುತ್ತದೋ ಅದನ್ನೇ ಅವರು ಕಾದಂಬರಿಯ ವಸ್ತುವನ್ನಾಗಿ ಆಯ್ಕೆಮಾಡಿಕೊಂಡಿದ್ದಾರೆ.
ಕಳೆದ ಅರ್ಧ ಶತಮಾನದಲ್ಲಿ ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ, ನಾಯಿ ನೆರಳು, ದಾಟು, ಭಿತ್ತಿ, ಆವರಣ, ಯಾನ ಸೇರಿದಂತೆ ಇಪ್ಪತ್ನಾಲ್ಕಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿರುವ 83 ವರ್ಷದ ಬೈರಪ್ಪನವರ ಹಲವಾರು ಕಾದಂಬರಿಗಳು ಇಂಗ್ಲಿಷ್, ಸಂಸ್ಕೃತ, ಮರಾಠಿ, ಹಿಂದಿ, ಉರ್ದು, ತೆಲುಗು, ಗುಜರಾತಿ, ತಮಿಳು ಭಾಷೆಗಳಿಗೆ ಭಾಷಾಂತರವಾಗಿರುವುದು ಅವರ ಜನಪ್ರಿಯತೆಗೆ ಹಿಡಿದ ಕನ್ನಡಿ. ಹಾಗೆಯೆ, ವಂಶವೃಕ್ಷ, ಆವರಣ ಮುಂತಾದ ಕಾದಂಬರಿಗಳು ವಿವಾದಕ್ಕೂ ಸಿಲುಕಿದ್ದವು.
ಜನಪ್ರಿಯತೆ ಉತ್ತುಂಗಕ್ಕೆ ಏರುತ್ತಿದ್ದಂತೆ ಹಲವಾರು ದೇಶಗಳು ಭೈರಪ್ಪನವರನ್ನು ಕೈಬೀಸಿ ಕರೆದಿವೆ. ಜಪಾನ್ನಿಂದ ಆರಂಭಿಸಿದ ಅವರ ವಿದೇಶ ಯಾನ ಜಗತ್ತಿನ ಹಲವಾರು ದೇಶಗಳನ್ನು ಕ್ರಮಿಸಿದೆ. ಅದೇ ಅನುಭವದ ಮೂಸೆಯಲ್ಲಿ ಭೈರಪ್ಪನವರ ಲೇಖನಿಯಿಂದ ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ವೈಜ್ಞಾನಿಕ ವಿಷಯಾಧಾರಿತ ಹಲವಾರು ವೈವಿಧ್ಯಮಯ ಕಾದಂಬರಿಗಳು ಸಾರಸ್ವತ ಲೋಕಕ್ಕೆ ಅರ್ಪಣೆಯಾಗಿವೆ. [ಯಾನ ಕಾದಂಬರಿ ವಿಮರ್ಶೆ]
ಕಳೆದ ವರ್ಷ 2014ರ ಆಗಸ್ಟ್ ನಲ್ಲಿ ಅಮೆರಿಕದ ಸ್ಯಾನ್ ಹೋಸೆಯಲ್ಲಿ ನಡೆದ 8ನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿ ತಮ್ಮ ಅನುಭವವನ್ನು ಅಮೆರಿಕನ್ನಡಿಗರೊಂದಿಗೆ ಭೈರಪ್ಪನವರು ಹಂಚಿಕೊಂಡಿದ್ದರು, ಬರವಣಿಗೆಯ ಕುರಿತು ಅಲ್ಲಿನ ಬರಹಗಾರರಿಗೆ ಕಿವಿಮಾತು ಹೇಳಿದ್ದರು. ಆ ಪ್ರವಾಸದ ಸಂದರ್ಭದಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ರವಿ ಗೋಪಾಲರಾವ್ ಮತ್ತು ಪ್ರಕಾಶ್ ನಾಯಕ್ ಅವರು ಭೈರಪ್ಪನವರ ಸುದೀರ್ಘ ಸಂದರ್ಶನ ಮಾಡಿದ್ದರು. ಆ ಸಂದರ್ಶನದ ಪೂರ್ಣಪಾಠ ಇಲ್ಲಿದೆ ಓದಿರಿ.
ಸಂದರ್ಶನದಲ್ಲಿ ಭೈರಪ್ಪನವರು, ತಾವು ನಡೆದುಬಂದ ದಾರಿ, ಕನ್ನಡ ಸಾಹಿತ್ಯ ಸಾಗುತ್ತಿರುವ ಹಾದಿ, ಭಾರತದ ಇತಿಹಾಸ, ಅಂದಿನ ರಾಜಕಾರಣಿಗಳ ಸೋಗಲಾಡಿತನ, ತಮ್ಮ ಮೇಲೆ ಪ್ರಭಾವ ಬೀರಿದ ಲೇಖಕರು, ಟಿವಿಯಿಂದಾಗಿ ಓದುಗರ ಮೇಲಾಗುತ್ತಿರುವ ಪರಿಣಾಮ, ಕಾದಂಬರಿ ಬರೆಯುವ ಮುನ್ನ ತಾವು ನಡೆಸುವ ತಯಾರಿ.... ಮುಂತಾದ ಹಲವಾರು ವಿಷಯಗಳ ಬಗ್ಗೆ ವಿಸ್ತೃತವಾಗಿ ಮಾತಿನ ಲಹರಿ ಹರಿಸಿದ್ದಾರೆ.
ಸಾಕಷ್ಟು ಸುದೀರ್ಘವಾಗಿರುವ ಸಂದರ್ಶನವನ್ನು, ಸಾಕಷ್ಟು ಸಮಯ ಮಾಡಿಕೊಂಡು, ಮುಕ್ತ ಮನಸ್ಸಿನಿಂದ ಓದುತ್ತ ಹೋಗಿ. ಭೈರಪ್ಪನವರ ಬಗ್ಗೆ ತಿಳಿದಿರದ ಹಲವಾರು ಸಂಗತಿಗಳು ಇಲ್ಲಿ ಅನಾವರಣಗೊಂಡಿವೆ. ಭೈರಪ್ಪನವರ ಜೀವನವೇ ಒಂದು ಕಾದಂಬರಿಯಂತೆ ನಿಮಗೆ ಕಂಡರೂ ಅಚ್ಚರಿಯಿಲ್ಲ. ಅಂದ ಹಾಗೆ, ಇತ್ತೀಚೆಗೆ ಓದಿದ ಭೈರಪ್ಪ ಅವರ ಕಾದಂಬರಿ ಯಾವುದು? ಇಷ್ಟವಾಯಿತಾ ಇಲ್ಲವಾ? ಯಾವುದು ನಿಮ್ಮ ಫೆವರಿಟ್ ಕಾದಂಬರಿ? ಮುಂತಾದ ವಿಷಯಗಳನ್ನು ಇಲ್ಲಿ ಹಂಚಿಕೊಳ್ಳಿ.