ಸವಿಸವಿ ನೆನಪುಗಳೊಂದಿಗೆ ಸಿಂಗಾರ ಸಮ್ಮೇಳನಕ್ಕೆ ಮಂಗಳ
ಎರಡು ದಿನಗಳ ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆ ರಾಜೇಶ್ ಕೃಷ್ಣನ್ ಮತ್ತು ಶಮಿತಾ ಮಲ್ನಾಡ್ ಅವರ 'ಸವಿ ಸವಿ ನೆನಪು' ಸಂಗೀತ ಸಂಜೆಯೊಂದಿಗೆ ಮಂಗಳ ಹಾಡಲಾಯಿತು. ಸಮ್ಮೇಳನದ ವರದಿಯನ್ನು ಒನ್ಇಂಡಿಯಾ ಕನ್ನಡ ಸಿಂಗಪುರದಿಂದಲೇ ವರದಿ ಮಾಡಿದೆ.
ಸಿಂಗಪುರ, ಅಕ್ಟೋಬರ್ 31 : ಮೂಡಲ ಮನೆಯ ಮುತ್ತಿನ ನೀರಿನ ಎರಕವಾ ಹೊಯ್ದಾ.... ಬಾನಲ್ಲು ನೀನೇ ಭುವಿಯಲ್ಲು ನೀನೆ... ಕನ್ನಡ ನಾಡಿನ ಜೀವನದಿ ಕಾವೇರಿ... ಒಂದೇ ಒಂದು ಆಸೆಯು ತೋಳಲಿ ಬಳಸಲು... ಈ ಬಾಳು ಬಣ್ಣದ ಬುಗುರಿ ನೀನಿದರ ಚಾಟಿ ಕಣೋ... ಗೀತಾ ಸಂಗೀತ...
ಒಂದೊಂದು ಹಾಡುಗಳು, ಮಾಧುರ್ಯದ ಸಂಗೀತದೊಂದಿಗೆ, ಅಬ್ಬರದ ಬೀಟ್ಸ್ ನೊಂದಿಗೆ ಕಿವಿಗೆ ಬೀಳುತ್ತಿದ್ದರೆ, ಶ್ರೋತೃಗಳು ಕುರ್ಚಿಯ ಮೇಲೆ ಕುಳಿತಿರಲಿಲ್ಲ, ಕಾಲುಗಳು ನೆಲದ ಮೇಲೆ ನಿಂತಿರಲಿಲ್ಲ... ಕೈಗಳಿಂದ ಕರತಾಡನ ನಿರಂತರವಾಗಿತ್ತು, ಬಾಯಿಂದ ಶಿಳ್ಳೆಗಳು ಕನ್ವೆನ್ಷನ್ ಹಾಲ್ ದಾಟಿ ಕೇಳುತ್ತಿದ್ದವು.
ಸಾಹಸಸಿಂಹ ವಿಷ್ಣುವರ್ಷನ್, ಕರಾಟೆ ರಾಜ ಶಂಕರ್ ನಾಗ್ ಮತ್ತು ಮಿನುಗು ತಾರೆ ಕಲ್ಪನಾ ಅವರು ನಟಿಸಿದ ಚಿತ್ರದ, ಒಂದಕ್ಕಿಂತ ಒಂದು ಅದ್ಭುತವಾದ ಹಾಡುಗಳಿಂದ, ಸುಮಧುರ ಗಾಯಕ ರಾಜೇಶ್ ಕೃಷ್ಣನ್ ಮತ್ತು ಮಧುರಾ ಪಿಸುಮಾತಿಗೆ ಹಾಡಿಗೆ ರಾಜ್ಯ ಪ್ರಶಸ್ತಿ ಪಡೆದಿದ್ದ ಶಮಿತಾ ಮಲ್ನಾಡ್ ಪ್ರೇಕ್ಷಕರನ್ನು ಸಮ್ಮೋಹನಗೊಳಿಸಿದರು.
ಈ ಹಾಡುಗಳಿಗೆ ಮತ್ತಷ್ಟು ಮೆರುಗು ನೀಡಿದ್ದು ನರ್ತನ ದಂಪತಿಗಳಾದ, ಪಾಪ ಪಾಂಡು ಖ್ಯಾತಿಯ ವಿಕ್ರಂ ಸೂರಿ ಮತ್ತು ಸಿಲ್ಲಿಲಲ್ಲಿ ಖ್ಯಾತಿಯ ನಮಿತಾ ಸೂರಿ ಮತ್ತು ಕರ್ನಾಟಕದ ಕರಾವಳಿಯಿಂದ ರಂಜಿಸಲು ಬಂದಿದ್ದ ಓಷನ್ ಕಿಡ್ಸ್ ನರ್ತನ ತಂಡ.
ಎರಡು ದಿನಗಳ ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆ ಗಾಯಕರಾದ ರಾಜೇಶ್ ಕೃಷ್ಣನ್ ಮತ್ತು ಶಮಿತಾ ಮಲ್ನಾಡ್ ಅವರ 'ಸವಿ ಸವಿ ನೆನಪು' ಸಂಗೀತ ಸಂಜೆಯೊಂದಿಗೆ ಮಂಗಳ ಹಾಡಲಾಯಿತು. ಈ ಎರಡು ದಿನಗಳ ಸಮ್ಮೇಳನದ ವರದಿಯನ್ನು ಒನ್ಇಂಡಿಯಾ ಕನ್ನಡ ಸಿಂಗಪುರದಿಂದಲೇ ವರದಿ ಮಾಡಿದೆ.
ಫ್ಲ್ಯಾಶ್ ಮಾಬ್
ಭಾನುವಾರ ಮಧ್ಯಾಹ್ನದ ಊಟದ ಸಮಯದಲ್ಲಿ ಸಾಲಿನಲ್ಲಿ ಕಾಯುತ್ತಿದ್ದ ಹಸಿದ ಜನರಿಗೆ ಅಚ್ಚರಿಯಲ್ಲಿ ಕೆಡವಿದ್ದು ಕರ್ನಾಟಕದಿಂದ ಬಂದ ಜನಪದ ಕಲಾವಿದರ ವಿಶೇಷ ತಂಡ. ಹಸಿವನ್ನು ಮರೆಸುವಂತೆ ಸಮೃದ್ಧ ಪ್ರದರ್ಶನ ಕೊಟ್ಟರು. ಅದರ ಹಿಂದೆಯೇ ಯಾರೂ ಊಹಿಸಿರದ ರೀತಿಯಲ್ಲಿ 'ಫ್ಲ್ಯಾಶ್ ಮಾಬ್ ' ಎಂಬ ಚಿಕ್ಕ ನೃತ್ಯ ಕಾರ್ಯಕ್ರಮವನ್ನು ಕಾರ್ಯಕರ್ತರು ಪ್ರೇಕ್ಷಕರೂ ಜತೆಗೂಡಿ ಪ್ರದರ್ಶಿಸಿ ಹರ್ಷೋಲ್ಲಾಸವನ್ನು ಸೇರಿದ್ದವರೆಲ್ಲ ಹಂಚಿಕೊಂಡರು. ಕನ್ನಡದ ಜನಪ್ರಿಯ ಆಯ್ದ ಗೀತೆಗಳಿಗೆ ಸೇರಿದ ಹಿರಿಕಿರಿಯರೆಲ್ಲರೂ ಹಾಡಿ, ಕುಣಿದು ಕುಪ್ಪಳಿಸಿದರು. ಹಬ್ಬದ ಕಳೆ ಎಲ್ಲೆಲ್ಲೂ ತುಂಬಿ ತುಳುಕಿತ್ತು.
ಸಾಯೋ ಆಟ ನಾಟಕ
ಸಿಂಗಾರ ಸಮ್ಮೇಳನದಲ್ಲಿ ನಟನ ತಂಡದ ಎರಡನೇ ಪ್ರಸ್ತುತಿ ನಾಟಕ 'ಸಾಯೋ ಆಟ'. ನಗುವಿನ ಮೂಲಕ ನೋವನ್ನೂ, ಬದುಕನ್ನೂ, ಗೆಲುವನ್ನೂ ಪರಿಚಯಿಸುತ್ತಾ ಹೋಗುವ ತಮಾಷೆ ಎನಿಸಿದರೂ ಸೀರಿಯಸ್ ಮೆಸೇಜ್ ಇರುವ ಬಲು ವಿಶಿಷ್ಟ ನಾಟಕ. ವರಕವಿ ಬೇಂದ್ರೆಯವರಿಂದ ರಚಿತವಾದ 'ಸಾಯೋ ಆಟ' ನಾಟಕ ಹಲವಾರು ದಶಕಗಳ ನಂತರವೂ ಇಂದಿಗೂ ಪ್ರಸ್ತುತವೆನಿಸುತ್ತದೆ.
ರಂಗದ ಮೇಲೆ ಮೈಸೂರಿನ ರಂಗಕರ್ಮಿ ಮಂಡ್ಯ ರಮೇಶ್ ಅವರ ತಂಡದವರು ಮನರಂಜಿಸುವ ಅಭಿನಯ, ಹಾಸ್ಯ, ಬಗೆ ಬಗೆಯ ರಂಗ ತಂತ್ರಗಳ ಮೂಲಕ ಮನಮುಟ್ಟುವಂತೆ ಪ್ರದರ್ಶಿಸಿ ಇಲ್ಲಿನ ಕನ್ನಡಿಗರ ಮನಸೂರೆಗೊಂಡರು.
ರಸಮಯ ಕರ್ನಾಟಕ
'ಶಿವಪ್ರಿಯ' ನೃತ್ಯ ತಂಡ ಡಾ. ಸಂಜಯ್ ಶಾಂತಾರಾಂ ಅವರ ಕನಸಿನ ಕೂಸು. ಈ ತಂಡದ ಅದ್ಭುತ ನೃತ್ಯ ಪ್ರದರ್ಶನ 'ಗಂ ಗಣಪತಯೇ' ಅತ್ಯಂತ ಮೋಹಕವಾಗಿ ಮೂಡಿಬಂತು. ಏಕದಂತನನ್ನು ನರ್ತಕರು ನಾನಾ ವಿಧವಾಗಿ ಭಜಿಸಿ, ಪೂಜಿಸಿ ಅವನ ಪ್ರೀತಿಯೊಂದೇ ಅಲ್ಲದೇ ಪ್ರೇಕ್ಷಕರ ಮನವನ್ನೂ ಗೆದ್ದರು. ನಂತರ ಈ ತಂಡದ ಪ್ರತಿಯೊಬ್ಬ ಕಲಾವಿದರನ್ನೂ ಕನ್ನಡ ಸಂಘದ ಉಪಾಧ್ಯಕ್ಷರಾದ ಸುರೇಶ ಭಟ್ಟ ಅವರು ಕಿರುಕಾಣಿಕೆಯಿತ್ತು ಸನ್ಮಾನಿಸಿದರು.
ಮೌನ ಸಂದೇಶ
ಮೌನ ಸಂದೇಶ ನೀರನ್ನು ಉಳಿಸಿ ಎಂದು ತಿಳಿಸಲು ಒಂದು ಪರಿಣಾಮಕಾರಿ ಮಾಧ್ಯಮ. ಇದೊಂದು ಅದ್ಭುತ ಪ್ರದರ್ಶನವಾಗಿತ್ತು. ಇದನ್ನು ಪವನ್ ಜೋಶಿ ಮತ್ತು ತಂಡದವರು ಪ್ರಸ್ತುತ ಪಡಿಸಿದರು. ಈ ತಂಡದ ಕ್ರಿಯಾಶೀಲತೆಯನ್ನು ಒರೆಗೆ ಹಚ್ಚುವಂತೆ ಇದ್ದ ಅಭಿನಯವು ಸುಪ್ತ ಸಂದೇಶವನ್ನು ಸಮರ್ಪಕವಾಗಿ ಪ್ರೇಕ್ಷಕನಿಗೆ ಮುಟ್ಟಿಸುವಲ್ಲಿ ಸಫಲವಾಯಿತು. ಚೂರೂ ತಪ್ಪದ ಅದ್ಭುತ ಹೊಂದಾಣಿಕೆಯಿಂದ ಕೂಡಿದ ಪ್ರತೀ ನಡೆಯು ನೋಡುಗರನ್ನು ಚಕಿತಗೊಳಿಸುವಂತಿತ್ತು.