ಕನ್ನಡ ಸಂಘ (ಸಿಂಗಪುರ)ದ 'ಸಿಂಗಾರ' ಪತ್ರಿಕೆಯ ಬಿಡುಗಡೆ
ಕನ್ನಡ ಸಂಘ (ಸಿಂಗಪುರ)ದ ಹೆಮ್ಮೆಯ ಪ್ರಕಟಣೆ 'ಸಿಂಗಾರ' ಪತ್ರಿಕೆಯ 12ನೆಯ ಆವೃತ್ತಿ, ಇದೇ ಮೇ ತಿಂಗಳ 20ನೆಯ ತಾರೀಖೀನಂದು ಬಿಡುಗಡೆಯಾಯಿತು.
ಮೇ 20ರ ಶನಿವಾರ ಸಂಜೆ ಸಿಂಗಪುರದ ಬಾರ್ಕರ್ ರೋಡ್ನ "ಆಂಗ್ಲೋ ಚೈನೀಸ್ ಸ್ಕೂಲ್ನಲ್ಲಿರುವ ಮಿಸ್. ಲೀ ಚೂನ್ ಗ್ವಾನ್ನ ಸಭಾಂಗಣದಲ್ಲಿ ಬೆಂಗಳೂರಿನ ಕಲಾಗಂಗೋತ್ರಿ ತಂಡದ 'ಮುಖ್ಯಮಂತ್ರಿ' ನಾಟಕದ 609ನೆಯ ಯಶಸ್ವೀ ಪ್ರದರ್ಶನ ನಡೆದ ನಂತರ ಪತ್ರಿಕೆಯನ್ನು ಲೋಕಾರ್ಪಣೆ ಮಾಡಲಾಯಿತು. [ಸರ್ವಕಾಲಕ್ಕೂ ಸಲ್ಲುವ 'ಮುಖ್ಯಮಂತ್ರಿ'ಗೊಂದು ಸಲಾಂ!]
ಕರ್ನಾಟಕದಿಂದ ಆಗಮಿಸಿದ್ದ ಹೆಸರಾಂತ ಕಲಾವಿದರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ.'ಮುಖ್ಯಮಂತ್ರಿ 'ಚಂದ್ರು; ಹೆಸರಾಂತ ಕಲಾವಿದರಾದ ಡಾ. ಬಿ. ವಿ. ರಾಜಾರಾಮ್ ಹಾಗೂ ಬೀದರ್ ಜಿಲ್ಲೆಯ ಭಾಲ್ಕಿ ಹಿರೇಮಠ ಸಂಸ್ಥಾನದ ಸಂಸ್ಥಾಪಕರಾದ ಡಾ. ಬಸವಲಿಂಗ ಪಟ್ಟದ್ದೇವರು ಅವರುಗಳು ಈ ಪತ್ರಿಕೆಯನ್ನು ಲೋಕಾರ್ಪಣೆ ಮಾಡಿದರು.
ವೇದಿಕೆಯ ಮೇಲೆ ಕನ್ನಡ ಸಂಘ ಸಿಂಗಪುರದ ಅಧ್ಯಕ್ಷರಾದ ವಿಜಯರಂಗ ಪ್ರಸಾದ್, ಉಪಾಧ್ಯಕ್ಷರಾದ ಸುರೇಶ ಭಟ್ಟ ಹಾಗೂ ಸಂಪಾದಕ ಮಂಡಳಿಯ ಮತ್ತು ಕಾರ್ಯಕಾರೀ ಸಮಿತಿಯ ಇತರ ಸದಸ್ಯರು ಉಪಸ್ಥಿತರಿದ್ದರು. [ಸಿಂಗನ್ನಡಿಗರೂ ಬಣ್ಣ ಹಚ್ಚುವಂತೆ ಮಾಡಿದ 'ಮುಖ್ಯಮಂತ್ರಿ']
ಸುಮಾರು 160 ಪುಟಗಳಷ್ಟು ಇರುವಂತಹ ಈ ಪತ್ರಿಕೆಯ ವಿಷಯವ್ಯಾಪ್ತಿಯು, ಓದುಗರಿಗೆ ರಸದೌತಣ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಸಿಂಗಪುರದಲ್ಲಿ ನೆಲೆಸಿರುವ ಸಿಂಗನ್ನಡಿಗರ ಬರಹಗಳ ಜೊತೆಯಲ್ಲಿಯೇ, ಕರ್ನಾಟಕದ ಕೆಲ ಹೆಸರಾಂತ ಲೇಖಕರ, ಕಲಾವಿದರ ಹಾಗೂ ಕವಿಗಳ ಬರಹಗಳು ಕೂಡ ಈ ಪತ್ರಿಕೆಯಲ್ಲಿ ಅಡಕವಾಗಿರುವುದು ವಿಶೇಷ.
ಕನ್ನಡ ಸಂಘ (ಸಿಂಗಪುರದ) ಇಪ್ಪತ್ತನೆಯ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ, ಸಂಘದ 20 ವರ್ಷದ ಪಯಣದ ಸವಿನೆನಪುಗಳನ್ನು ಹಾಗೂ ಅಕ್ಟೊಬರ್ 2016ರಲ್ಲಿ ಜರುಗಿದ ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನದ ಸವಿನೆನಪುಗಳನ್ನು ಕೂಡ ಈ ಆವೃತ್ತಿಯು ಹೊತ್ತು ತಂದಿದೆ. [ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನದ ಯಶೋಗಾಥೆ]
ಕನ್ನಡ ಸಂಘವು ಕಳೆದ ಹಲವು ವರ್ಷಗಳಿಂದ ಈ ಪತ್ರಿಕೆಯನ್ನು ಹೊರತರುತ್ತಿದ್ದು, ಈ ಸಂಘದ ಹೆಮ್ಮೆಯ 12ನೆಯ ಆವೃತ್ತಿ ಇದಾಗಿದೆ. ದ್ವೈವಾರ್ಷಿಕವಾಗಿ ಪ್ರಕಟವವಾಗುವ ಈ ಸಂಚಿಕೆಗಳು, ಪ್ರತಿಬಾರಿಯೂ ಓದುಗರ ಮನಸ್ಸನ್ನು ಸೂರೆಗೊಂಡಿದ್ದು, ಮುಂದಿನ ಪ್ರಕಟಣೆಯನ್ನು ಕಾತುರದಿಂದ ಎದುರುನೋಡುವಂತೆ ಮಾಡಿದೆ. ಹಲವಾರು ಹೊಸ ಲೇಖಕರ ಜನನಕ್ಕೆ ನಾಂದಿ ಹಾಡಿಯುವ ಅಗ್ಗಳಿಕೆಯೂ ಈ ಪತ್ರಿಕೆಯದು. ಇದರಲ್ಲಿ ಅಡಕವಾಗಿರುವ ಮಕ್ಕಳ ವಿಭಾಗವನ್ನು ಗಮನಿಸಿದರೆ, ಮುಂದೊಂದು ದಿನ ಈ ಮಕ್ಕಳು ಸಾರಸ್ವತ ಲೋಕದಲ್ಲಿ ಮಿಂಚುವ ಭರವಸೆ ಎದ್ದು ಕಾಣಿಸುತ್ತದೆ.
ಪ್ರಧಾನ ಸಂಪಾದಕರಾಗಿ ಸುರೇಶ ಭಟ್ಟ, ಸಹಸಂಪಾದಕಿಯಾಗಿ ಮಾಲಾ ನಾಗರಾಜ್ ಹಾಗೂ ಸಂಪಾದಕೀಯ ಮಂಡಳಿಯ ಸದಸ್ಯರಾಗಿ ಆರತಿ ನಾಗೇಶ್, ಸ್ನೇಹಲತ ಹಾಗೂ ವಸಂತ ಕುಲಕರ್ಣಿ ಅವರ ಸಾರಥ್ಯದಲ್ಲಿ ಈ ಬಾರಿಯ ಸಿಂಗಾರ ಪತ್ರಿಕೆ ಅನಾವರಣಗೊಂಡಿದೆ.
ಸುಮನಾ ಹೆಬ್ಬಾರ್ ಹಾಗೂ ಸುಷ್ಮಾ ನಾಯಕ್ ದಾಶರಥಿ ಅವರ ಮುಖಪುಟ ವಿನ್ಯಾಸದ ಕಲ್ಪನೆಗೆ, ರೇಖಾ ಚಿತ್ರದ ರೂಪ ಕೊಟ್ಟವರು ಕು. ರಶ್ಮಿ ವಾಲಂಕಿಕರ್. ಪ್ರತಿಯೊಂದು ಲೇಖನದ ಮೆರಗನ್ನು ಇಮ್ಮಡಿಗೊಳಿಸಿರುವುದು ನಾಗೇಂದ್ರ ಬಾಬು ಅವರ ವ್ಯಂಗಚಿತ್ರಗಳು. ಅಂತೆಯೇ, ಈ ಪತ್ರಿಕೆ ಹೊರಬರಲು ಪ್ರಮುಖ ಪಾತ್ರ ವಹಿಸಿ, ಜಾಹೀರಾತು ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದವರು ರಶ್ಮಿ ಉದಯ್ ಕುಮಾರ್, ಸುಮನಾ ಹೆಬ್ಬಾರ್, ಸುರೇಶ ಭಟ್ಟ ಹಾಗೂ ಸ್ನೇಹಲತ.
ಕನ್ನಡ ಸಂಘದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಿಂಗಾರ ಪತ್ರಿಕೆಯು ಸಂಪೂರ್ಣ ವರ್ಣರಂಜಿತ ಮುದ್ರಣ ಕಂಡಿರುವುದು ಈ ಬಾರಿಯ ವಿಶೇಷ. ಈ ಪತ್ರಿಕೆಯು, ಎಲ್ಲ ಕನ್ನಡ ಸಾಹಿತ್ಯಾಭಿಮಾನಿಗಳ ಮನೆ ಮನಗಳಲ್ಲಿ ನೆಲೆಸುತ್ತದೆ ಎಂಬ ಬಲವಾದ ನಂಬಿಕೆ-ಆಶಯ ಸಿಂಗಪುರ ಕನ್ನಡ ಸಂಘ ಹೊಂದಿದೆ. ಜೂನ್ 25ರಂದು ನಡೆಯಲಿರುವ ಕನ್ನಡ ಸಂಘ (ಸಿಂಗಪುರ)ದ 21ನೇ ವಾರ್ಷಿಕ ಮಹಾಸಭೆಯಲ್ಲಿ ಈ ಪತ್ರಿಕೆಯನ್ನು ಸಂಘದ ಸದಸ್ಯರಿಗೆ ವಿತರಿಸಲಾಗುವುದು.