ಸಿಂಚನ ಸಾಹಿತ್ಯ ಸ್ಪರ್ಧೆ 2014ರ ಫಲಿತಾಂಶ
ಸಿಂಚನ ಸಾಹಿತ್ಯ ಸ್ಪರ್ಧೆ 2014ರ ಫಲಿತಾಂಶ ಈಗ ಪ್ರಕಟವಾಗಿದೆ. ಕನ್ನಡ ಸಂಘ (ಸಿಂಗಪುರ) ಪ್ರತಿ ತಿಂಗಳು ಹೊರತರುವ 'ಸಿಂಚನ' ಮಾಸ ಪತ್ರಿಕೆ ನಡೆಸಿದ ಮೂರನೇ ವರ್ಷದ ಸಾಹಿತ್ಯ ಸ್ಪರ್ಧೆಗೆ ಪ್ರಪಂಚದ ನಾನಾ ಮೂಲೆಗಳಿಂದ ವಿಶ್ವಕನ್ನಡಿಗರ ಸಣ್ಣ ಕಥೆ ಮತ್ತು ಕವನಗಳು ಹರಿದು ಬಂದಿದ್ದವು. ಸ್ಪರ್ಧೆಯಲ್ಲಿ ಹದಿಹರೆಯದ ಉತ್ಸಾಹಿ ಬರಹಗಾರರಲ್ಲದೇ ನುರಿತ ಮತ್ತು ಹಿರಿಯ ಸಾಹಿತಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಬೆಳಗಾವಿ ಜಿಲ್ಲೆಯ ಹಾರೋಗೇರಿಯ 45ರ ಹರೆಯದ ಲೇಖಕ ಕಲ್ಲೇಶ್ ಕುಂಬಾರ್ ಅವರು ಸಿಹಿಕಬ್ಬು ಬೆಳೆಯುವ ರೈತನ ಕಹಿ ಬದುಕನ್ನು ಯಥಾವತ್ತಾಗಿ ಚಿತ್ರಿಸಿದ ಕಥೆ 'ಒಳಗಣ ಜ್ಯೋತಿ' ಕಥಾ ಸ್ಪರ್ಧೆಯ ಮೊದಲನೇ ಬಹುಮಾನ ಪಡೆದು ಕೊಂಡಿದೆ. 2013ರ 'ಸಿಂಚನ ಸಾಹಿತ್ಯ ಸ್ಪರ್ಧೆ'ಯ ಕವನ ವಿಭಾಗದಲ್ಲಿ ಎರಡನೇ ಬಹುಮಾನ ಗಳಿಸಿದ್ದ ಅಣ್ಣಪ್ಪ ಆಚಾರ್ಯ ಅವರ 'ಭಿಕ್ಷೆ' ಕಥೆಗೆ ಎರಡನೇ ಬಹುಮಾನ ತೊರೆತಿದ್ದು, ಹೆಣ್ಣೊಬ್ಬಳ ಅಸಹಾಯಕತೆಯನ್ನು ವಿವರಿಸುವ ಸಂತೋಷಕುಮಾರ್ ಮೆಹೆಂದಾಳೆ ಅವರ ಕಥೆ 'ಹುತ್ತ'ಕ್ಕೆ ಮೂರನೆಯ ಬಹುಮಾನ ದೊರೆತಿದೆ.
ಕವನ ವಿಭಾಗದಲ್ಲಿ, ಯುವ ಬರಹಗಾರ, ಮೊಬೈಲ್ ನಲ್ಲಿ ಕನ್ನಡ ಕೀ ಬೋರ್ಡ್ ಬಳಸಿ ಪ್ರಾಯೋಗಿಕ ಕಿರು ಕಾದಂಬರಿ ಬರೆದಿರುವ ಮತ್ತು ಕನ್ನಡ ಕವಿತೆಗಳ ಆಂಡ್ರಾಯ್ಡ್ App ರೂಪಿಸಿ ಸಾಹಿತ್ಯ ವಲಯದಲ್ಲಿ ಸಾಕಷ್ಟು ಆಸಕ್ತಿ ಹುಟ್ಟಿಸಿರುವ ವಿದ್ಯಾಶಂಕರ ಹರಪನಹಳ್ಳಿ ಅವರ 'ಕವಿತೆ ಕೆಟ್ಟರೆ ಅಡ್ಡಿಯಿಲ್ಲ' ಕವನಕ್ಕೆ ಮೊದಲನೆಯ ಬಹುಮಾನ ದೊರೆತಿದೆ. 2013ರ ಕವನ ಸ್ಪರ್ಧೆಯಲ್ಲಿ ಮೊದಲನೆಯ ಬಹುಮಾನ ಗಳಿಸಿದ್ದ ವಿಜಯ್ ಹೂಗಾರ್ ಅವರ ಕವನ 'ಐ.ಟಿ. ಆಫೀಸ್'ಗೆ ಎರಡನೆ ಬಹುಮಾನ ಬಂದಿದೆ. ಲೇಖಕಿ ಮೆಹಬೂಬಿ ಎಂ ಶೇಖ್ ಅವರ 'ಆತ್ಮ ಸಂಗಾತಕ್ಕೆ ನೀ ಎನಗುಂಟು' ಕವನ ಮತ್ತು ರಘು ಮುಳಿಯ ಅವರ 'ಮಂಗಳಕ್ಕೆ ಹೋಗೋಣ' ಕವನ ಮೂರನೆಯ ಬಹುಮಾನ ಗಳಿಸಿವೆ. [ರೆಕ್ಕೆ ಬಡಿದುಕೊಂಡು ಬಂದ ಚಿಟ್ಟೆ ಸೃಷ್ಟಿಸಿದ ಸೋಜಿಗ]
ತೀರ್ಪುಗಾರರು : ಈ ಬಾರಿಯ ಸಿಂಚನ ಸಾಹಿತ್ಯ ಸ್ಪರ್ಧೆಯ ಕಥಾ ವಿಭಾಗದ ತೀರ್ಪುಗಾರರಾಗಿದ್ದವರು ದಂತವೈದ್ಯೆ ಮತ್ತು ಬರಹಗಾರ್ತಿ ಡಾ॥ ಕೆ.ಎಸ್.ಚೈತ್ರ ಮತ್ತು ಕವನ ವಿಭಾಗದ ತೀರ್ಪುಗಾರರಾಗಿದ್ದವರು ಇಂಡಿಯನ್ ಎಕ್ಸಪ್ರೆಸ್ ಗ್ರೂಪ್ ನ 'ಸಖಿ' ಪಾಕ್ಷಿಕದ ಸಂಪಾದಕರಾದ ಡಾ॥ವೆಂಕಟೇಶ್ವರ ರಾವ್.
ವಿಜೇತರೆಲ್ಲರಿಗೂ ಕನ್ನಡ ಸಂಘ(ಸಿಂಗಪುರ)ದ ಅಭಿನಂದನೆಗಳು.
ಗಿರೀಶ್ ಜಮದಗ್ನಿ, ಪ್ರಧಾನ ಸಂಪಾದಕ, ಸಿಂಚನ ಸಂಪಾದಕ ಸಮಿತಿ, ಕನ್ನಡ ಸಂಘ(ಸಿಂಗಪುರ)