ಗಲ್ಫ್ ರಾಷ್ಟ್ರಗಳಲ್ಲಿ ಆರ್ಥಿಕ ಕುಸಿತ : ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ!
ಆರ್ಥಿಕ ಕುಸಿತದ ಬಿಸಿ ಗಲ್ಫ್ ರಾಷ್ಟ್ರಗಳಿಗೆ ಬಲವಾಗಿ ತಟ್ಟಿದೆ. ಪೆಟ್ರೋಲ್, ಡೀಸೆಲ್ ನಿಂದ ಹಿಡಿದು ನೀರು, ವಿದ್ಯುತ್ ದರಗಳ ಏರಿಕೆ ಜನರಿಗೆ ಭಾರೀ ಹೊಡೆತ ಕೊಟ್ಟಿವೆ. ಎಲ್ಲಕ್ಕಿಂತ ಹೆಚ್ಚಾಗಿ ಕೆಲಸ ಕಳೆದುಕೊಳ್ಳುವ ಪೆಡಂಭೂತ ಹೆಚ್ಚಾಗಿ ಹೊರದೇಶಗಳಿಂದ ಬಂದ ಕೆಲಸಗಾರರನ್ನು ಕಾಡುತ್ತಿವೆ. ಇದಕ್ಕೆಲ್ಲ ಕಾರಣ ಕಚ್ಚಾ ತೈಲದರ ಕುಸಿತ. ಗಲ್ಫ್ ರಾಷ್ಟ್ರಗಳು ರಿಸೆಷನ್ ಮೆಟ್ಟಿ ನಿಲ್ಲುವವೆ? ಇದರ ದುಷ್ಪರಿಣಾಮ ಭಾರತದ ಮೇಲೆ ಆಗಲಿದೆಯಾ? ಒಮಾನ್ನ ಪಿಎಸ್ ರಂಗನಾಥ ಅವರು ಸಾಧ್ಯಾಸಾಧ್ಯತೆಗಳ ಬಗ್ಗೆ ಇಲ್ಲಿ ಚರ್ಚಿಸಿದ್ದಾರೆ.
***
ಜಾಗತಿಕ
ಮಾರುಕಟ್ಟೆಯಲ್ಲಿ
ಕಚ್ಚಾ
ತೈಲದರ
ಕುಸಿತ
ಕಂಡಿದ್ದರ
ಪರಿಣಾಮ,
ಆರ್ಥಿಕ
ಬಿಕ್ಕಟ್ಟು
ಸೃಷ್ಟಿಯಾಗಿದ್ದು
ಮಧ್ಯಪ್ರಾಚ್ಯ
ದೇಶಗಳು
ತಮ್ಮ
ದೇಶದ
ವಾರ್ಷಿಕ
ಆಯವ್ಯಯದ
ಬಜೆಟ್
ನಲ್ಲಿ
ಹಲವಾರು
ಮಾರ್ಪಾಡುಗಳನ್ನು
ತಂದುಕೊಂಡಿವೆ.
ತೈಲದ ಆದಾಯ ಶೇ.50ರಿಂದ 60ರಷ್ಟು ಕುಸಿತಗೊಂಡಿದ್ದರಿಂದ ಆದಾಯಕ್ಕಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ಪ್ರಯತ್ನ ನಡೆಸಿವೆ. ಇದರ ಪರಿಣಾಮ ಕಳೆದ 15-17 ವರ್ಷಗಳಲ್ಲಿ ಒಂದೇ ದರದಲ್ಲಿ ದೊರಕುತಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶೇ. 25ರಿಂದ 50ರಷ್ಟು ಏರಿಕೆ ಕಂಡಿದೆ. [ವೇಶ್ಯಾವಾಟಿಕೆ : ಅರಬ್ಬರ ನಾಡಿನಲ್ಲಿ ಯಶಸ್ವೀ ಆಪರೇಷನ್ ನೈಜೀರಿಯಾ]
ಇದು ಇಲ್ಲಿನ ಗ್ರಾಹಕರ ಕಿಸೆಗೆ ಮೊದಲ ಹೊರೆಯಾಗಿದೆ. ವಿದ್ಯುತ್ ಮತ್ತು ನೀರಿನ ದರಗಳಲ್ಲಿ ಸಹ ಏರಿಕೆ ಕಂಡಿದೆ. ಜನವರಿ 15ರಿಂದ ಒಮಾನ್ ನಲ್ಲಿ 120 ಬೈಸಕ್ಕೆ ಸಿಗುತ್ತಿದ್ದ ಸೂಪರ್ ಅನ್ ಲೆಡೆಡ್ ಪೆಟ್ರೋಲ್ (95 ಆಕ್ಟೇನ್) 120 ಬೈಸದಿಂದ 160 ಬೈಸಕ್ಕೆ ಜಿಗಿದಿದೆ. ಸೌದಿ ಅರೇಬಿಯಾದಲ್ಲಿ 0.90 ರಿಯಾಲ್ಸ್ (ಶೇ.50ರಷ್ಟು ಏರಿಕೆ). ಹಾಗೆಯೆ ಕತಾರ್ ನಲ್ಲಿ 1.30 ಕತಾರಿ ರಿಯಾಲ್ಸ್ (ಶೇ.30ರಷ್ಟು ಏರಿಕೆ). ಬಹರೈನ್ ನಲ್ಲಿ 160 ಫಿಲ್ಸ್ (ಶೇ. 50ರಷ್ಟು ಏರಿಕೆ) ಆಗಿದೆ. [ಕೇಂದ್ರ ಮನಸ್ಸು ಮಾಡಿದರೆ 30 ರು. ಗೆ ಪೆಟ್ರೋಲ್!]
ಮೊದಲ ಬಾರಿಗೆ ತೆರಿಗೆ ಹೇರಿಕೆ
ಗಲ್ಫ್ ರಾಷ್ಟ್ರಗಳಲ್ಲಿ ಇದುವರೆವಿಗೂ ಸಾರ್ವಜನಿಕರಿಗೆ ಯಾವುದೇ ರೀತಿಯ ತೆರಿಗೆಗಳನ್ನು ವಿಧಿಸಲಾಗಿರಲಿಲ್ಲ. ಕಾರ್ಪೋರೇಟ್ ವಲಯಕ್ಕೆ ಮೊದಲ ಬಾರಿಗೆ ತೆರಿಗೆ ವಿಧಿಸುವ ಲೆಕ್ಕಾಚಾರಗಳು ನಡೆದಿವೆ. ಭಾರತದಲ್ಲಿ ಸಂಬಳದ ಸ್ವಲ್ಪ ಪಾಲು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಸಂದಾಯವಾಗುತ್ತದೆ. ಆದರೆ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗಿಗಳು ಪಡೆದ ಸಂಬಳದಲ್ಲಿ ಯಾವುದೇ ತೆರಿಗೆ ಸಂದಾಯವಾಗುತ್ತಿರಲಿಲ್ಲ. ಈ ಬಾರಿ ಆ ಒತ್ತಡ ಹೆಚ್ಚಿದೆ.
ಸುಂಕವಿಲ್ಲದೆ ಹಣ ರವಾನೆಯಾಗದು
ಅದಲ್ಲದೆ ಇಲ್ಲಿ ಗಳಿಸಿದ ಹಣವನ್ನು ಯಾವುದೇ ಸುಂಕವಿಲ್ಲದೆ ತಮ್ಮ ತಮ್ಮ ದೇಶಕ್ಕೆ ರವಾನಿಸುತಿದ್ದ ಜನರಿಗೆ ಬಹುತೇಕ ಮಧ್ಯಪ್ರಾಚ್ಯ ಸರ್ಕಾರಗಳು ತೆರಿಗೆ ವಿಧಿಸಬಹುದೆನ್ನುವ ಭಯ ಕಾಡಿದೆ. ಒಮಾನ್ ನ ವೀಸಾ ದರಗಳಲ್ಲಿ ಮಾರ್ಪಾಡು ಮಾಡಲಾಗಿದೆ. ಇದರಿಂದ ಲಕ್ಷಾಂತರ ರಿಯಾಲ್ಸ್ ಬೊಕ್ಕಸಕ್ಕೆ ಸೇರಲಿದೆ.
ಬೋನಸ್, ಸಂಬಳ, ಇನ್ಸೆಂಟಿವ್ ನಲ್ಲಿಯೂ ಕಡಿತ
ಪೆಟ್ರೋಲ್ ಬೆಲೆ ಏರಿದ್ದರಿಂದ ಹಾಗೂ ಆರ್ಥಿಕ ಹಿಂಜರಿತದ ಪರಿಣಾಮ ಒಮಾನ್ ನ ಬಹುತೇಕ ಖಾಸಗಿ ಕಂಪನಿಗಳಲ್ಲಿ ಈ ವರ್ಷ ಬೋನಸ್, ಸಂಬಳದಲ್ಲಿ ಏರಿಕೆ ಹಾಗೂ ಇನ್ಸೆಂಟಿವ್ ಗಳ ನೀಡಿಕೆಯಲ್ಲಿ ಗಣನೀಯವಾಗಿ ಕಡಿಮೆಯಾಗಲಿದೆ. ಒಮಾನ್ ನಲ್ಲಿ ಪೆಟ್ರೋಲ್ ಉಳಿತಾಯದ ಬಗ್ಗೆ ಹಾಗು ದೈನಂದಿನ ಖರ್ಚು ವೆಚ್ಚಗಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳಲು ಸಾರ್ವಜನಿಕರಿಗೋಸ್ಕರ ಹಲವಾರು ಮಾರ್ಗೋಪಾಯಗಳನ್ನು ಇಲ್ಲಿನ ಪತ್ರಿಕೆಗಳು ಪ್ರಕಟಿಸಿವೆ.
ಆರ್ಥಿಕ ಹಿಂಜರಿತ 2017ರತನಕ ಮುಂದುವರಿಕೆ
ಮಧ್ಯಪ್ರಾಚ್ಯದಲ್ಲಿ ಈಗಾಗಲೆ ಚಾಲ್ತಿಯಲ್ಲಿರುವ ರಿಸೆಷನ್ (ಆರ್ಥಿಕ ಹಿಂಜರಿತ) 2017ರತನಕ ಮುಂದುವರಿಯುವ ಸೂಚನೆಯನ್ನು ಹಲವಾರು ವಾಣಿಜ್ಯ ತಜ್ಞರು ನೀಡಿದ್ದು, ತೈಲ ಆದಾಯದ ಹೊರತಾಗಿ ಬೇರೆ ಮಾರ್ಗಗಳನ್ನು ಕಂಡುಕೊಳ್ಳುವ ಅನಿವಾರ್ಯತೆಗೆ ಸಿಲುಕಿವೆ.
ಕಾರ್ಮಿಕರಿಗೆ ಕೆಲಸ ಕಳೆದುಕೊಳ್ಳುವ ಭೀತಿ
ಈ ವರ್ಷ ತೈಲ ಕ್ಷೇತ್ರದಲ್ಲಿ ಹೂಡಿಕೆ ಕಡಿಮೆಯಾಗಲಿದೆ. ಈ ಬಾರಿ ಹಲವಾರು ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣಹಾಕಲಾಗಿದೆ. ಹೆಚ್ಚು ಹೊಸ ಪ್ರಾಜೆಕ್ಟ್ಗಳಿಗೆ ಅನುಮತಿ ನೀಡಲಾಗಿಲ್ಲ. ಇದೆಲ್ಲದರ ಪರಿಣಾಮ ಲಕ್ಷಾಂತರ ಉದ್ಯೋಗಿಗಳು, ಅದರಲ್ಲೂ ವಲಸೆ ಬಂದಿರುವ ಕಾರ್ಮಿಕರೂ ಸೇರಿದಂತೆ ನುರಿತ ತಂತ್ರಜ್ಞರು ಕೆಲಸ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತಿದ್ದಾರೆ.
ಪ್ರಗತಿಯ ಪಥವನ್ನು ಬದಲಿಸದ ಒಮಾನ್
ಇಂತಹ ಕಠಿಣ ಪರಿಸ್ಥಿತಿಯಲ್ಲಿ ಒಮಾನ್ ರಾಷ್ಟ್ರ ಎದೆಗುಂದದೆ ತನ್ನ ಆರ್ಥಿಕ ವ್ಯವಸ್ಥೆಯಲ್ಲಿ ಸಮತೋಲನ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಈ ಬಾರಿ ಮಂಡಿಸಿರುವ ಬಜೆಟ್ ನಲ್ಲಿ ಕಾಣಬಹುದಾಗಿದೆ. ಹಿಂದೆಯೂ ಹಲವಾರು ಬಾರಿ ಜಾಗತಿಕವಾಗಿ ಆರ್ಥಿಕ ಹಿಂಜರಿತ ಕಂಡಿದ್ದರೂ ಒಮಾನ್ ರಾಷ್ಟ್ರ ತನ್ನ ಪ್ರಗತಿಯ ಪಥವನ್ನು ಬದಲಿಸಿಲ್ಲ. ಸ್ಥಿಮಿತ ಗತಿಯಲ್ಲಿ ತನ್ನ ಪ್ರಗತಿಯನ್ನು ಕಾಯ್ದುಕೊಂಡಿದೆ.
ಕೃಷಿ, ಮೀನುಗಾರಿಕೆ, ಗಣಿಗಾರಿಕೆಗೆ ಆದ್ಯತೆ
ಆರ್ಥಿಕ ತಜ್ಞರ ಪ್ರಕಾರ, ಒಮಾನ್ ರಾಷ್ಟ್ರವು ತೈಲ ಅಥವ ಅನಿಲ ಉತ್ಪಾದನೆಯತ್ತ ಅತಿಹೆಚ್ಚು ಅವಲಂಬಿಸದೆ, ಇನ್ನಿತರ ಕ್ಷೇತ್ರಗಳಾದ ಕೃಷಿ, ಮೀನುಗಾರಿಕೆ, ಗಣಿಗಾರಿಕೆ ಮತ್ತು ಪ್ರವಾಸೀ ಕ್ಷೇತ್ರಗಳಿಗೆ ಅತಿ ಹೆಚ್ಚು ಆದ್ಯತೆ ಕೊಟ್ಟಲ್ಲಿ, ಇಂದಿನ ಆರ್ಥಿಕ ಹಿಂಜರಿತದ ಹೊಡೆತದಿಂದ ತಪ್ಪಿಸಿಕೊಳ್ಳಬಹುದು. ಉದಾಹರಣೆಗೆ ದಶಕಗಳ ಕಾಲ ಆರ್ಥಿಕ ನಿರ್ಬಂಧಕ್ಕೆ ಒಳಗಾಗಿದ್ದ ಇರಾನ್ ದೇಶ ತನ್ನ ಸ್ವಾವಲಂಬನೆಯತ್ತ ಪ್ರಯತ್ನಿಸಿ ಯಶಕಂಡಿರುವುದು ಎಲ್ಲರ ಮುಂದಿದೆ.
ಒಮಾನ್ ನಿಂದ ಕೆಲಸಗಾರರು ವಾಪಸ್
ಒಮಾನೈಸೇಶನ್ ಫಲವಾಗಿ ಹಲವಾರು ವಲಸೆ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ತೈಲ ದರ ಕುಸಿತದಿಂದ ಇನ್ನೂ ಹಲವಾರು ಜನ ಉದ್ಯೋಗ ಕಳೆದುಕೊಳ್ಳುವ ಅನಿಶ್ಚಿತತೆಯನ್ನು ಎದುರಿಸಲಿದ್ದಾರೆ. ಒಮಾನ್ ನಲ್ಲಿ ಸುಮಾರು 18 ಲಕ್ಷ ವಲಸೆ ಉದ್ಯೋಗಿಗಳು ಕೆಲಸ ಮಾಡುತಿದ್ದಾರೆ. ಮುಂದಿನ ಮಾರ್ಚ್ - ಏಪ್ರಿಲ್ ರ ಒಳಗಾಗಿ ಶೇ.30ರಷ್ಟು ಜನ ಒಮಾನ್ ನಿಂದ ವಾಪಸ್ ತಮ್ಮ ತಮ್ಮ ರಾಷ್ಟ್ರಗಳಿಗೆ ವಾಪಸ್ ಹೋಗಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಸ್ಥಳೀಯರಿಗೆ ಉದ್ಯೋಗಾವಕಾಶ
ಈ ವರ್ಷ ಕೆಲ ಪ್ರಮುಖ ಪ್ರಾಜೆಕ್ಟ್ ಗಳು ಮುಗಿಯುವ ಹಂತ ತಲುಪಿದ್ದು, ಅದರಲ್ಲಿ ಕೆಲಸ ಮಾಡುತ್ತಿರುವ ಕೆಲವರಿಗೆ ವೀಸಾ ನವೀಕರಿಸದಿರಲು ತೀರ್ಮಾನ ಕೈಗೊಂಡಿದೆ ಎಂದು ಹೇಳಲಾಗಿದೆ. ಇದೆಲ್ಲದರ ಫಲ ಸ್ಥಳೀಯರಿಗೆ ಹೆಚ್ಚು ಉದ್ಯೋಗಾವಕಾಶ ಲಭಿಸಲಿ ಎನ್ನುವ ಆಶಯ ಇಲ್ಲಿದೆ. ಒಟ್ಟಾರೆ, ಕಚ್ಚಾ ತೈಲದರದಲ್ಲಿನ ಕುಸಿತ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಪರ್ಯಾಯ ಮಾರ್ಗಗಳಿಗೆ ಮುನ್ನುಡಿ ಬರೆದಿದೆ.