ಲಂಡನ್ ನಲ್ಲಿ ರಾಘವೇಂದ್ರ ಸ್ವಾಮಿಯ 344ನೇ ಆರಾಧನೆ
ತೂಗಿರೆ
ರಾಯರ
ತೂಗಿರೆ
ಗುರುಗಳ
ತೂಗಿರೆ
ಯತಿಕುಲ
ತಿಲಕರ
|
ತೂಗಿರೆ
ಯೋಗೀಂದ್ರ
ಕರಕಮಲ
ಪೂಜ್ಯರ,
ತೂಗಿರೆ
ಗುರು
ರಾಘವೇಂದ್ರರ
||
ಲಂಡನ್ ಮಹಾನಗರದ ಸಮೀಪದ ಸ್ಲೌ (Slough) ನಗರದ ಹಿಂದೂ ದೇವಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 344ನೇ ಆರಾಧನೆ ಮಹೋತ್ಸವ ಬಹಳ ವಿಜೃಂಭಣೆಯಿಂದ ನೆರವೇರಿತು.
ಸುಮಾರು 500ಕ್ಕೂ ಹೆಚ್ಚು ಜನ ಸೇರಿದಂತಹ ಕಾರ್ಯಕ್ರಮವನ್ನ ಇಂಗ್ಲೆಂಡ್ ನಲ್ಲಿ, ಗುರು ರಾಘವೇಂದ್ರ ಸ್ವಾಮಿಯ ಭಕ್ತರಿಗೆ ಮಠ ನಿರ್ಮಾಣದ ಮಹಾ ಯೋಜನೆಯ ಜವಾಬ್ದಾರಿಯನ್ನು ಪ್ರಪ್ರಥಮ ಬಾರಿಗೆ ಕೈಗೆತ್ತಿಕೊಂಡ "ಗ್ರೇಟ್ ಬ್ರಿಟನ್ ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನ್ (GBSRS ಬೃಂದಾವನ್)" ಸಂಸ್ಥೆಯು ರಾಯರ ಆರಾಧನೆ ಮಹೋತ್ಸವ ಆಯೋಜಿಸಿತ್ತು.
ಇದು GBSRS ಬೃಂದಾವನ್ ಮಾಡುತ್ತಿರುವ 6ನೇ ವರ್ಷದ ಆರಾಧನೆ ಮಹೋತ್ಸವ. ಆದರೆ ಈ ಬಾರಿಯ ಮಹೋತ್ಸವದ ವಿಶೇಷತೆ, ಮಂತ್ರಾಲಯದಿಂದ ಬಂದ ರಾಯರ ಮೂಲ ಮೃತಿಕಾ ಬೃಂದಾವನದ ಪೂಜೆ, ಪರಿಮಳ ಪ್ರಸಾದ ಹಾಗು ಮಂತ್ರಾಕ್ಷತೆ ಲಂಡನ್ ರಾಯರ ಭಕ್ತರಲ್ಲಿ ಆಪಾರ ಸಂತಸವನ್ನು ತಂದು ಕೊಟ್ಟಿತು.
GBSRS ಬೃಂದಾವನ್ ಸಂಸ್ಥೆಯು ಇನ್ನು ಮ೦ದೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಲಂಡನ್ ಶಾಖೆ ಆಗಿ ಕಾರ್ಯ ರೂಪಕ್ಕೆ ಬರಲಿದ್ದು ಇಂಗ್ಲೆಂಡ್ ನಲ್ಲಿ ರಾಘವೇಂದ್ರ ಸ್ವಾಮಿಗಳ ಮಠವನ್ನು ಸ್ಥಾಪನೆ ಮಾಡುವ ಉದ್ದೇಶ ರಾಯರ ಅನುಗ್ರಹದಿಂದ ಅತಿ ಶೀಘ್ರದಲ್ಲಿ ನೆರವೇರಲಿ ಎನ್ನುವ ಆಶಯ ಇಂಗ್ಲೆಂಡ್ ನ ರಾಯರ ಭಕ್ತರಲ್ಲಿ ಆಪಾರ ಹರ್ಷ ತಂದು ಕೊಟ್ಟಿತು.
ದೇವಸ್ಥಾನದ ಸಭಾಂಗಣದ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಎದುರಿಗೆ ಕಾಣಿಸುತ್ತಿದ್ದದ್ದು ಹೂವಿನಿಂದ ಅಲಂಕೃತಗೊಂಡಂತಹ ಬೃಂದಾವನ, ಅದರ ಸುತ್ತಲೂ ಇದ್ದ ದೇವರ ಪಟಗಳು, ಮಂಚಿಕೆಯನ್ನು ನೋಡುತ್ತಿದ್ದರೆ ಮಂತ್ರಾಲಾಯಕ್ಕೆ ಬಂದವೇನೋ ಎಂಬ ಒಂದು ಭಾವನೆ ಮನಸ್ಸಿನಲ್ಲಿ ಮೂಡಿಸುತ್ತಿತ್ತು. ದೇವರ ಪೂಜೆ, ಪಲ್ಲಕ್ಕಿ ಉತ್ಸವ, ಭಜನೆಗಳು ನಮ್ಮನ್ನೆಲ್ಲ ಭಕ್ತಿ-ಭಾವದಲ್ಲಿ ಮುಳುಗಿಸಿದ್ದವು.
ಮಂತ್ರಾಲಯ ಮಠದ ಸ್ವಾಮಿಗಳಾದ ಶ್ರೀ ಸುಭುದೇಂದ್ರತೀರ್ಥ ಶ್ರಿಪಾದ೦ಗಳವರ ಆಶೀರ್ವಚನ, ವಿಡಿಯೋ ಮೂಲಕ ಲಭ್ಯವಾದದ್ದು ನಮ್ಮೆಲ್ಲರ ಸೌಭಾಗ್ಯ ಹಾಗು ಪುಣ್ಯವೇ ಸರಿ. ಮಹಾ ಮಂಗಳಾರತಿಯ ನಂತರ ಭಕ್ತಾದಿಗಳಿಗೆ ಫಲ ಪಂಚಾಮೃತ ಹಾಗೂ ಮಂತ್ರಾಲಯದಿಂದ ಬಂದ ಮಂತ್ರಾಕ್ಷತೆ ಪ್ರಸಾದ ವಿನಿಯೋಗವಾಯಿತು.
ಪೂಜೆಯ ನಂತರ ಅಭಿಗಾರ ಪಾಯಸ, ಕೋಸಂಬರಿ, ಪಲ್ಯ, ಕೂಟು, ಸಾರು, ಗೊಜ್ಜು, ಹಯಗ್ರೀವ, ಒಬ್ಬಟ್ಟು, ಬೇಸನ್ ಲಡ್ಡು ಮುಂತಾದ ಭಕ್ಷ್ಯಗಳು ಕೂಡಿದಂತಹಾ ಭರ್ಜರಿ ಭೋಜನ ಏರ್ಪಾಟಾಗಿತ್ತು. ಇಂತಹ ಒಂದು ಕಾರ್ಯಕ್ರಮಕ್ಕೆ ಬಂದಂತಹ ಜನರು "ಪರದೇಶದಲ್ಲಿದ್ದರೂ ಭಾರತಕ್ಕೆ, ಕರ್ನಾಟಕಕ್ಕೆ ಬಂದವೇನೊ ಅನ್ನೋ ಭಾಸವಾಯಿತು", "ಕಾರ್ಯಕ್ರಮ ಅದ್ಭುತವಾಗಿತ್ತು" ಎಂದೆಲ್ಲ ಹೊಗಳಿ, ಇಂತಹ ಒಂದು ಪುಣ್ಯಕಾರ್ಯ ಮತ್ತೆ ಮತ್ತೆ ಜರುಗಲಿ ಎಂದು ಹಾರೈಸುತ್ತಾ, ಆನಂದದಿಂದ ತಮ್ಮ ತಮ್ಮ ಮನೆಗಳಿಗೆ ತೆರಳಿದರು.
ಒಟ್ಟಿನಲ್ಲಿ ಹೊರನಾಡು ರಾಯರ ಭಕ್ತರಿಗೆ ಆರಾಧನೆ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸೋ ಒಂದು ಅವಕಾಶ ದೊರಕಿ, ಆರಾಧನೆಯಲ್ಲಿ ಮನಃಪೂರ್ವಕವಾಗಿ ಪಾಲ್ಗೊಂಡು, ಗುರುಗಳ ಆಶೀರ್ವಾದ ಪಡೆಯುವಂತಾಯಿತು.
ಶ್ರೀ ರಾಘವೇಂದ್ರ ಸ್ವಾಮಿಗಳ ಭಕ್ತರು ವೆಬ್ ಸೈಟ್ www.gb-srsbrundavn.org ನಲ್ಲಿ ಮುಂದೆ ಬರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಬಹುದು ಹಾಗು ಇಮೇಲ್ [email protected] ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು.