ಕಾಫಿ ತೋಟಕ್ಕೆ ಕತಾರ್ ಕನ್ನಡಿಗರಿಂದ ಭಾರೀ ಪ್ರಶಂಸೆ
ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ನಿರ್ದೇಶನದ 'ಕಾಫಿ ತೋಟ ' ಚಲನಚಿತ್ರವನ್ನು ಇದೇ ಅಕ್ಟೋಬರ್ 13ರಂದು, ದೋಹಾದಲ್ಲಿ ಕತಾರ್ ಕನ್ನಡಿಗರಿಗೆ ಪ್ರದರ್ಶಿಸಲಾಯಿತು. ಚಿತ್ರ ಮಂದಿರ ಸಂಪೂರ್ಣವಾಗಿ ಕನ್ನಡಿಗರಿಂದ ತುಂಬಿ ತುಳುಕುತ್ತಿತ್ತು.
ವಿಮರ್ಶೆ: ಕುತೂಹಲಭರಿತ 'ಕಾಫಿತೋಟ'ದಲ್ಲಿ ಥ್ರಿಲ್ಲಿಂಗ್ ಜರ್ನಿ
ಇದೇ ಪ್ರಥಮ ಬಾರಿಗೆ ಚಿತ್ರದ ನಾಯಕ ರಘು ಮುಖರ್ಜಿ ಮತ್ತು ನಾಯಕಿಯರಾದ ರಾಧಿಕಾ ಚೇತನ್, ನವ ನಟಿ ಅಪೇಕ್ಷಾ ಪುರೋಹಿತ್ ಮತ್ತು ಚಿತ್ರದ ನಿರ್ಮಾಪಕ ಅವರುಗಳು ಕತಾರ್ ಗೆ ಆಗಮಿಸಿದ್ದರು. ಚಿತ್ರವನ್ನು ಪ್ರೇಕ್ಷಕರೊಂದಿಗೆ ಕುಳಿತು ವೀಕ್ಷಿಸಿದ ಇವರು, ಕತಾರ್ ನಲ್ಲಿ ತಮ್ಮ ಚಿತ್ರ ಯಶಸ್ವಿ ಪ್ರದರ್ಶನಗೊಂಡ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ, ಕತಾರ್ ಕನ್ನಡಿಗರಿಗೆ ಧನ್ಯವಾದ ಅರ್ಪಿಸಿದರು.
ಕೇವಲ ಒಂದು ವರ್ಷದ ಅವಧಿಯಲ್ಲಿ 8 ಕನ್ನಡ ಚಿತ್ರಗಳು ಯಶಸ್ವಿ ಪ್ರದರ್ಶನಗೊಂಡ ಬಗ್ಗೆ ಆಯೋಜಕರು ಸಂತಸ ವ್ಯಕ್ತಪಡಿಸಿದರು. ಮುಂದೆಯೂ ಕನ್ನಡ ಚಿತ್ರಗಳಿಗೆ ಇದೇ ರೀತಿಯ ಸಹಕಾರ ತೋರುವಂತೆ ಮನವಿ ಮಾಡಿದರು ಹಾಗು ಇದಕ್ಕೆ ಕಾರಣಕರ್ತರಾದ ಚಿತ್ರಪ್ರದರ್ಶನದ ಮುಖ್ಯ ಆಯೋಜಕರಾದ ಸುಬ್ರಮ್ಮಣ್ಯ ಹೆಬ್ಬಾಗಿಲು ಅವರನ್ನು ಬಹುವಾಗಿ ಪ್ರಶಂಸಿಸಿದರು.
ಇದೇ ಸಂದರ್ಭದಲ್ಲಿ ಸುಬ್ರಮ್ಮಣ್ಯ ಹೆಬ್ಬಾಗಿಲು ಹಾಗು ಗೆಳೆಯರ ಬಳಗವು ಅವರೆಲ್ಲರನ್ನೂ ಆತ್ಮೀಯವಾಗಿ ಸನ್ಮಾನಿಸಿದರು. ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ ಅರವಿಂದ ಪಾಟೀಲ್, ಐ.ಸಿ.ಬಿ.ಎಫ್ ನ ಕಾರ್ಯದರ್ಶಿ ಮಹೇಶ್ ಗೌಡ, ಐ.ಸಿ.ಸಿ ಯ(ಭಾರತೀಯ ಸಾಂಸ್ಕೃತಿಕ ಕೇಂದ್ರ) ಪದಾಧಿಕಾರಿ ನಿಯಾಜ್ ಅಹಮದ್ ಮತ್ತು ಕರ್ನಾಟಕ ಸಂಘ ಹಾಗು ಸೋದರ ಸಂಸ್ಥೆಗಳ ಮುಖ್ಯಸ್ಥರುಗಳೆಲ್ಲರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸೀತಾರಾಮ್ ನಿರ್ದೇಶನದ ಕಾಫಿ ತೋಟ, ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿದ್ದು, ಬಾಕ್ಸಾಫೀಸಿನಲ್ಲಿ ಬಾರೀ ಸದ್ದು ಮಾಡದಿದ್ದರೂ, ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಪ್ರಶಂಸೆಗೆ ಪಾತ್ರವಾಗಿದೆ. ಹಲವಾರು ವರ್ಷಗಳ ನಂತರ ಸೀತಾರಾಮ್ ಅವರು ಮತ್ತೆ ನಿರ್ದೇಶನಕ್ಕಿಳಿದಿದ್ದಾರೆ.