ಅನಿವಾಸಿ ಕನ್ನಡಿಗ ಶಂಕರ್ ಶಾಸ್ತ್ರೀ 'ಹಿಂದ್ ರತನ್'
ವಿಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಲ್ಲಿಸಿದ ಅಪಾರ ಸೇವೆ, ಸಾಧನೆಯನ್ನು ಪರಿಗಣಿಸಿ, ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿರುವ ಅಮೆರಿಕನ್ನಡಿಗ ಡಾ. ಶಂಕರ್ ಶಾಸ್ತ್ರೀ ಅವರಿಗೆ ಪ್ರತಿಷ್ಠಿತ 'ಹಿಂದ್ ರತನ್' ಪ್ರಶಸ್ತಿ ನೀಡಿ ಭಾರತ ಸರಕಾರ ಅವರನ್ನು ಗೌರವಿಸುತ್ತಿದೆ.
2015ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಡಾ. ಶಂಕರ್ ಶಾಸ್ತ್ರೀ ಅವರನ್ನು ನವದೆಹಲಿಯಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುತ್ತಿದೆ. ಶಂಕರ್ ಶಾಸ್ತ್ರೀ ಅವರು 1985ರಲ್ಲಿ ಸೇಂಟ್ ಲೂಯಿಯಲ್ಲಿ ಸ್ಥಾಪಿತವಾಗಿರುವ 'ಸಂಗಮ' ಕನ್ನಡ ಸಂಘದ ಸದಸ್ಯರಾಗಿದ್ದಾರೆ. [ಅಡ್ವಾಣಿ, ಅಮಿತಾಬ್ ಗೆ ಪದ್ಮ ವಿಭೂಷಣ ಪ್ರಶಸ್ತಿ]
ವಾಷಿಂಗ್ಟನ್ ವಿವಿಯಲ್ಲಿ ಪ್ರೊಫೆಸರ್ : ಅಮೆರಿಕದ ಸೇಂಟ್ ಲೂಯಿಯಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ 1991ರಿಂದ ಪ್ರೊಫೆಸರ್ ಆಗಿ ವಿದ್ಯಾರ್ಜನೆ ಮಾಡುರುತ್ತಿದ್ದು, ಹಲವಾರು ಪೇಟೆಂಟ್ ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ ಮತ್ತು ಅನೇಕ ಪುಸ್ತಕಗಳನ್ನು ಕೂಡ ಬರೆದಿದ್ದಾರೆ. ಅಮೆರಿಕನ್ ಸೊಸೈಟಿ ಫಾರ್ ಮೆಟಲ್ಸ್ ಮತ್ತು ದಿ ಮೆಟಲರ್ಜಿಕಲ್ ಸೊಸೈಟಿಯ ಸದಸ್ಯರಾಗಿರುವ ಅವರು, ವಾಯುದಳ, ನೌಕಾದಳ, ನಾಸಾ ಮುಂತಾದ ಸಂಸ್ಥೆಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ.
ಸಂಗಮದ ಸಕ್ರೀಯ ಸದಸ್ಯ : ಮೂರು ದಶಕಗಳ ಹಿಂದೆ ಸ್ಥಾಪಿತವಾಗಿರುವ ಸಂಗಮ ಕನ್ನಡ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಶಂಕರ್ ಶಾಸ್ತ್ರೀಯವರು ಸಂಸ್ಥೆಯ ಬೆನ್ನೆಲುಬಾಗಿ ನಿಂತಿದ್ದಾರೆ. 1995ರಲ್ಲಿ ಸಂಗಮದ ಅಧ್ಯಕ್ಷರಾಗಿದ್ದ ಅವರು, ಪ್ರತಿವರ್ಷ ನಡೆಸಲಾಗುವ ಗೌರಿ ಗಣೇಶ ಹಬ್ಬದ ಉಸ್ತುವಾರಿ ವಹಿಸುವುದೆಂದರೆ ಅವರಿಗೆ ಎಲ್ಲಿಲ್ಲದ ಖುಷಿ. ಅವರ ಕೊಡುಗೆ ಮತ್ತು ಭಾಗವಹಿಸುವಿಕೆಯಿಂದಾಗಿ ಹಲವಾರು ವರ್ಷಗಳಿಂದ ಅನೇಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗುತ್ತಿವೆ.
ಹಿಂದ್ ರತನ್ ಪ್ರಶಸ್ತಿಯ ಕುರಿತು : ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಅನಿವಾಸಿ ಭಾರತೀಯರಿಗೆ, ಕೇಂದ್ರ ಸರಕಾರದ ಅಂಗ ಸಂಸ್ಥೆಯಾಗಿರುವ ಭಾರತದ ಎನ್ಆರ್ಐ ಕಲ್ಯಾಣ ಸಮಿತಿ ಈ ಪ್ರಶಸ್ತಿಯನ್ನು ಪ್ರತಿವರ್ಷ ನೀಡುತ್ತಿದೆ. ರಾಷ್ಟ್ರೀಯ ಪ್ರವಾಸಿ ಭಾರತೀಯ ದಿವಸದ ದಿನ ಅನಿವಾಸಿ ಭಾರತೀಯರ ಕಲ್ಯಾಣ ಸಮಿತಿಯ ವಾರ್ಷಿಕ ಸಮಾವೇಶದಲ್ಲಿ, ಭಾರತ ಸರಕಾರದ ಗಣ್ಯರು, ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಸಮ್ಮುಖದಲ್ಲಿ ಪ್ರದಾನ ಮಾಡಲಾಗುತ್ತದೆ.
ಎನ್ಆರ್ಐ ಕಲ್ಯಾಣ ಸಮಿತಿ : ದಿ ಎನ್ಆರ್ಐ ವೆಲ್ಫೇರ್ ಸೊಸೈಟಿ ಆಫ್ ಇಂಡಿಯಾ 1981ರಲ್ಲಿ ಸ್ಥಾಪನೆಯಾಗಿದ್ದು, ಅನೇಕ ದೇಶಗಳಲ್ಲಿ ಕಚೇರಿಯನ್ನು ಹೊಂದಿದೆ. ಭಾರತ ಸರಕಾರ ಮತ್ತು ಅನಿವಾಸಿ ಭಾರತೀಯರ ನಡುವೆ ಸೇತುವೆಯಾಗಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಭಾರತ ಬಿಟ್ಟು ಹೋಗುವಾಗ ಬರಿಗೈಲಿ ಹೋಗಿದ್ದರೂ ತಮ್ಮ ಕಾರ್ಯಕ್ಷಮತೆಯಿಂದ ಹೊರದೇಶದಲ್ಲಿ ಅಪಾರ ಸಾಧನೆ ತೋರಿ ಭಾರತಕ್ಕೆ ಗೌರವ ತರುವ ಅನಿವಾಸಿ ಭಾರತೀಯರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.