ಎಲ್ಲೆಲ್ಲೂ ರಾಜಕೀಯ ಭ್ರಷ್ಟತೆ ಹಾಗು ಕೊರಗುವ ನಾಗರಿಕ
ಒಬ್ಬ ಸಮಾಜವಾದಿ ನಾಯಕ ತನ್ನದೇ ಆದ ಅರಮನೆ(castle)ನಲ್ಲಿ ವಾಸಿಸುತ್ತಿರುವುದಷ್ಟೇ ಅಲ್ಲದೆ, ಕೇವಲ ತನ್ನ ಅರಮನೆಗೆ ಹೋಗಲೆಂದೇ ಒಂದು ರಸ್ತೆ ಕೂಡ ನಿರ್ಮಿಸಿಕೊಂಡಿದ್ದಾನೆ. ಹೇಗಿದೆ ನೋಡು ಇವನ ಸಮಾಜವಾದ?
ಈ ಮಾಯಾಲೋಕದಲ್ಲಿ ವ್ಯಕ್ತವು ಎಷ್ಟಿದೆಯೋ ಅದರ ಮುಕ್ಕಾಲುಪಟ್ಟು ಹೆಚ್ಚಿನದು ಅವ್ಯಕ್ತವಾದುದು ಎನ್ನುತ್ತದೆ ನಮ್ಮ ಸನಾತನ ಧರ್ಮದ ಶಾಸ್ತ್ರ ಸಂಹಿತೆಗಳು. ಭಷ್ಟಾಚಾರದ ಕಬಂಧ ಬಾಹುಗಳು ಅಷ್ಟೇ, ಅವುಗಳ ಆಳ ಅಗಲ ವ್ಯಾಪ್ತಿ ನಮ್ಮಂಥವರಿಗೆ ದೃಗ್ಗೋಚರವಾಗುವಂಥದಲ್ಲ. ಇದನ್ನು ದೃಢೀಕರಿಸಿದ್ದು ನನ್ನೊಡನೆ ಮಾತಿಗಿಳಿದ ಟ್ಯಾಕ್ಸಿ ಚಾಲಕ ಚಾರ್ಲಿಯ ಮಾತುಗಳು.
ನಮ್ಮ ದೇಶದ ರಾಜಕೀಯ, ಅಲ್ಲಿನ ಕೊಳಕು ವ್ಯವಸ್ಥೆಯಲ್ಲಿ ದೋಚುವುದೊಂದೇ ಧಂದೆ ಮಾಡಿಕೊಂಡಿರುವ ಭ್ರಷ್ಟ ರಾಜಕಾರಣಿಗಳು, ಅವರ ಕುಲಗೆಟ್ಟ ನಡತೆ, ಮಾನಗೆಟ್ಟ ಹಗರಣಗಳು ಕೂಡಿಟ್ಟ ರಾಶಿ ರಾಶಿ ಧನ ಕನಕಗಳು... ಎಲ್ಲ ಒಂದೊಂದಾಗಿ ಪೊರೆ ಕಳಚಿ ಹೊರಬರುತ್ತಿರುವ ಈ ಸಂದರ್ಭದಲ್ಲೇ ನಾನು ಸ್ಕಾಟ್ ಲ್ಯಾಂಡಿಗೆ ಬಂದಿದ್ದೇನೆ.
ಏರ್ಪೋರ್ಟ್ನಿಂದ ಟ್ಯಾಕ್ಸಿಯಲ್ಲಿ ಬರುವಾಗ ಚಾರ್ಲಿ ಎಂಬ ಕ್ಯಾಬ್ ಡ್ರೈವರ್ ನನಗೆ ಇಲ್ಲಿನ ರಾಜಕೀಯ ನಾಯಕರು ಅವರ ಭಷ್ಟಾಚಾರಗಳ ಬಗ್ಗೆ ದಾರಿಯುದ್ದಕ್ಕೂ ಹೇಳತೊಡಗಿದಾಗ "ಎಲ್ಲೆಲ್ಲಿ ನೋಡಲಿ, ನಿನ್ನನ್ನೇ ಕಾಣುವೆ ..." ಎಂಬ ಗೀತೆ ನೆನಪಾಯಿತು. [ನಿಮ್ಮಿಂದಾಗಿ ಇದ್ದೇನೆ, ಇಲ್ಲದಿದ್ದರೆ ನನ್ನನ್ನು ಏನು ಮಾಡುತ್ತಿದ್ರೋ? : ಮೋದಿ]
ಒಬ್ಬ ಸಮಾಜವಾದಿ ನಾಯಕ ತನ್ನದೇ ಆದ ಅರಮನೆ(castle)ನಲ್ಲಿ ವಾಸಿಸುತ್ತಿರುವುದಷ್ಟೇ ಅಲ್ಲದೆ, ಕೇವಲ ತನ್ನ ಅರಮನೆಗೆ ಹೋಗಲೆಂದೇ ಒಂದು ರಸ್ತೆ ಕೂಡ ನಿರ್ಮಿಸಿಕೊಂಡಿದ್ದಾನೆ. ಹೇಗಿದೆ ನೋಡು ಇವನ ಸಮಾಜವಾದ ಎಂದು ಪ್ರಶ್ನಿಸಿದ ಚಾರ್ಲಿಯ ಮಾತಿನಲ್ಲಿ ವಿಷಾದವಿತ್ತು. ನನಗೇಕೋ ಅರವಿಂದ್ ಕೇಜ್ರಿವಾಲ್, ಅಖಿಲೇಶ್ ಯಾದವ್ ಮುಂತಾದವರ ನೆನಪಾಯಿತು.
ಹಳೆಯ ನೂರೈವತ್ತು ವರ್ಷದ ಬ್ರಿಡ್ಜ್ ಕುಸಿದು ಬಿದ್ದಿತೆಂದು ನಿರ್ಮಿಸುತ್ತಿರುವ ಹೊಸ ಬ್ರಿಜ್ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿತ್ತು. ಎಲ್ಲರೂ ಅವರಿಗಿಂತ ನಾವು ಕಡಿಮೆ ವೆಚ್ಚದಲ್ಲಿ ಬೇಗ ಕಟ್ಟಿ ಮುಗಿಸಿ ಕೊಡುತ್ತೇವೆ ಎಂಬ ಆಶ್ವಾಸನೆ ಕೊಟ್ಟವರೇ. ಆದರೀಗ ಚುನಾವಣೆ ಮುಗಿದಿದೆ. ಕಟ್ಟಲು ಎಸ್ಟಿಮೇಟ್ ಹಾಕಿದ್ದ ಹಣದ ದುಪ್ಪಟ್ಟು ಖರ್ಚಾಗಿದೆ, ಕಾಮಗಾರಿ ಸದ್ಯಕ್ಕೆ ಮುಗಿಯುವ ತರಹ ಕಾಣುತ್ತಿಲ್ಲ, ಉದ್ಘಾಟನೆ ಮಾಡುವ ಮೊದಲು ಮುಂದಿನ ಚುನಾವಣೆಯೇ ಬಂದುಬಿಡುವುದೇನೋ ಎಂದ ಕ್ಯಾಬಿ. ನನಗೆ ಇದು ಹೊಸ ಕತೆ ಅಂತೇನು ಅನ್ನಿಸಲಿಲ್ಲ.
ನಾಯಿಕೊಡೆಗಳಂತೆ ಬೇಕಾಬಿಟ್ಟಿ ಎದ್ದುನಿಂತಿರುವ ಶಿಕ್ಷಣ ಸಂಸ್ಥೆಗಳು, ಅವು ಪರವಾನಗಿ ಪಡೆಯಲು ಕೊಡಮಾಡುವ ಲಂಚದ ಆಮಿಷ, ಅದಕ್ಕೆ ಬಲಿಯಾಗುವ ಅಮಾಯಕ ವಿದ್ಯಾರ್ಥಿಗಳು, ಅವಕಾಶ ವಂಚಿತರಾಗುವ ಯೋಗ್ಯ ವಿದ್ಯಾರ್ಥಿಗಳು... ಎಲ್ಲವನ್ನೂ ಚಾರ್ಲಿ ವಿವರಿಸುತ್ತಲೇ ಇದ್ದರೆ ನನಗೇನೋ ದಾರಿ ತಪ್ಪಿ ಭಾರತಕ್ಕೆ ಬಂದುಬಿಟ್ಟಿದ್ದೆನಾ ಅನ್ನಿಸಿತು. [ಭ್ರಷ್ಟ ಅಧಿಕಾರಿಗಳ ಹಿಂದೆ ಮಹಿಳಾ ಬ್ಯಾಂಕರ್ ಕೈವಾಡ?]
ಸ್ಕಾಟ್ಲ್ಯಾಂಡನ್ನು ಯುನೈಟೆಡ್ ಕಿಂಗ್ಡಮ್ಮಿನಿಂದ ಬೇರ್ಪಡಿಸಲು ಹೂಡಿದ್ದ ಷಡ್ಯಂತ್ರ, ಅದಕ್ಕೆ ಪರಸ್ಪರ ಮಿತ್ರರಾಗಿದ್ದವರು ಶತ್ರುಗಳಾದ ಈ ಶತಮಾನದ ಪರಮ ಮೂರ್ಖತನ, ಹೇಗೆ ತನ್ನ ಮಗ ರಾಜಕೀಯ ದಾಳವಾಗಿ ತನ್ನ ಗೆಳೆಯರನ್ನೇ ಎದುರು ಹಾಕಿಕೊಳ್ಳುವಂತೆ ಆಯ್ತೆಂದು ವಿವರವಾಗಿ ಹೇಳುತ್ತಿದ್ದ ಚಾರ್ಲಿಯಲ್ಲಿ ಅಸಹಾಯಕ ನಾಗರಿಕ ಭ್ರಷ್ಟ ವ್ಯವಸ್ಥೆಯಲ್ಲಿ ತೊಳಲಾಡುತ್ತಿರುವ ಚಿತ್ರ ಕಣ್ಣಿಗೆ ಕಟ್ಟಿದಂತಿತ್ತು. You too UK? ಅಂದುಕೊಂಡೆ.
ಎಲ್ಲೆಲ್ಲೂ ತಾಂಡವವಾಡುತ್ತಿರುವ ಭ್ರಷ್ಟತೆಗೆ ನಾವಿರುವ ಕಾಲಘಟ್ಟವನ್ನೇ ದೂಷಿಸುವುದಾ? ಮಾನವನ ಅತಿಯಾದ ಸ್ವಾರ್ಥ ಬುದ್ದಿಯನ್ನಾ? ಏನೊಂದು ತಿಳಿಯದೆ ಮಂಕಾಗಿ ಕುಳಿತುಬಿಟ್ಟೆ.