ಕನ್ನಡ ಸಂಘ (ಸಿಂಗಪುರ)ದ ನವ-ಯುವ ಕಾರ್ಯಕಾರೀ ಸಮಿತಿ
ಜೂನ್ ತಿಂಗಳು ಬಂತೆಂದರೆ ಕನ್ನಡ ಸಂಘ (ಸಿಂಗಪುರ)ದ ಕಾರ್ಯಕಾರಿ ಸಮಿತಿಗೆ ವಾರ್ಷಿಕ ಮಹಾಸಭೆಯ ಕಾರ್ಯಕಲಾಪಗಳನ್ನು ನಡೆಸುವ ತಯಾರಿ ಹಾಗೂ ಎರಡು ವರ್ಷಕ್ಕೊಮ್ಮೆ ಹೊಸ ಸಮಿತಿಯ ರಚನೆಯ ಪ್ರಕ್ರಿಯೆ. ಸಮಿತಿಯ ಸದಸ್ಯರಿಗೆ ಎರಡು ವರ್ಷಗಳಲ್ಲಿ ತಾವು ತೊಡಗಿಕೊಂಡು ನಡೆಸಿದ ಎಲ್ಲಾ ಕಾರ್ಯಕ್ರಮಗಳ ಸವಿನೆನಪುಗಳ ಮೆಲುಕು, ಲೆಕ್ಕ ಪರಿಶೋಧನೆ ಹಾಗೂ ಹಣಕಾಸಿನ ತುಲನೆ.
ಎಲ್ಲದಕ್ಕಿಂತಲೂ ಹೆಚ್ಚಾಗಿ ವರ್ಷಗಳು ಕ್ಷಣಗಳಂತೆ ಉರುಳಿ ಕನ್ನಡಕ್ಕಾಗಿ, ನಮ್ಮ ನಲ್ಮೆಯ ಸಂಘಕ್ಕಾಗಿ ಮಾಡಿದ ಸೇವೆಯಲ್ಲಿನ ಪರಕಾಷ್ಠೆಯ ತೃಪ್ತಿ. ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಇನ್ನೂ ಹಲವು ರೀತಿಯಲ್ಲಿ ಸಂಘದ ಅಭಿವೃದ್ಧಿಯನ್ನು ಕಾಣುವ ಮಹಾದಾಸೆ.
ಗಾಳಿನಗರಿ ಶಿಕಾಗೊದಲ್ಲಿ ವೈಭವದ ಹವ್ಯಕ ಸಮ್ಮೇಳನ
ಇದೇ ನಿಟ್ಟಿನಲ್ಲಿ ಕನ್ನಡ ಸಂಘ (ಸಿಂಗಪುರ)ದ 21ನೇ ವಾರ್ಷಿಕ ಮಹಾಸಭೆಯನ್ನು 25ನೇ ಜೂನ್ 2017ರಂದು ಏರ್ಪಡಿಸಲಾಗಿತ್ತು. ಸಭೆಯ ಕಾರ್ಯಕಲಾಪಗಳಿಗೆ ಬೇಕಾದ ನಿರ್ದಿಷ್ಟ ಸಂಖ್ಯೆಯ ಸದಸ್ಯರ ಹಾಜರಾತಿ ಸಭೆಗೆ ಮುಂಚಿತವಾಗಿಯೇ ಬಂದಿದ್ದರಿಂದ ಸಮಯಕ್ಕೆ ಸರಿಯಾಗಿ ಸಭೆಯು ಪ್ರಾರಂಭವಾಯಿತು.
ಸಭಾಧ್ಯಕ್ಷರಾದ ವಿಜಯ ರಂಗ ಪ್ರಸಾದ್ ಅವರು ಎಲ್ಲರಿಗೂ ಸ್ವಾಗತ ಕೋರುವುದರ ಮೂಲಕ ಸಭೆಗೆ ಚಾಲನೆಯನ್ನು ಕೊಟ್ಟರು. ಸದಸ್ಯರಿಗೆ ಮಿಂಚಂಚೆ ಮೂಲಕ ತಿಳಿಸಿದ ಕಾರ್ಯಕಲಾಪಗಳ ಪಟ್ಟಿಯ ಅನುಗುಣವಾಗಿ ಎಲ್ಲಾ ಕಾರ್ಯಕಲಾಪಗಳು ಸುಸೂತ್ರವಾಗಿ ನಡೆದವು.
ಸಭಾಧ್ಯಕ್ಷರು 2015-2017ರ ಕಾರ್ಯ ಸಾಧನೆಗಳ ಬಗ್ಗೆ ತಿಳಿಸುತ್ತಾ, ಪ್ರಸ್ತುತ ಕಾರ್ಯಕಾರಿ ಸಮಿತಿಯ ಸದಸ್ಯರ ಕಾರ್ಯ ವೈಖರಿಯನ್ನು ಪ್ರಶಂಶಿಸಿ, ಸಮ್ಮೇಳನದಂತಹ ಬೃಹತ್ ಕಾರ್ಯಕ್ರಮವನ್ನು ಮಾಡಲು ಒಂದಾದ ಎಲ್ಲಾ ಸ್ವಯಂ ಸೇವಕರ ಬೆಂಬಲ ಹಾಗೂ ಸಹಾಯವನ್ನು ಹೊಗಳಿದರು.
ಅಲೆನ್ ಸ್ಕೂಲ್ ಮಂಡಳಿಗೆ ಕನ್ನಡಿಗ ವತ್ಸ ಆಯ್ಕೆ
2016-2017ರ ಅವಧಿಯಲ್ಲಿ ನಡೆದ ಕಾರ್ಯಕ್ರಮಗಳ ಕಿರುನೋಟ, ಲೆಕ್ಕಪರಿಶೋಧಕ ವರದಿಯ ಮೇಲಿನ ಚರ್ಚೆ, ಸಂಘದ ಸಂವಿಧಾನದ ತಿದ್ದುಪಡಿಗಾಗಿ ಬಂದಂತಹ ಕೋರಿಕೆಗಳ ಮೇಲಿನ ಪರಸ್ಪರ ಚರ್ಚೆ ಹಾಗೂ ಮಹಾಸಭೆಯ ನಿರ್ಧಾರಗಳನ್ನೊಳಗೊಂಡಂತಹ ಕಲಾಪಗಳ ನಂತರ ಇತರೆ ವಿಷಯಗಳ ಪ್ರಶ್ನೋತ್ತರ ಚಟುವಟಿಕೆಗಳು ನಡೆದವು.
ಸಂಘದ ಚಟುವಟಿಕೆಗಳು ಸಮಿತಿಯ ವ್ಯಾಪ್ತಿಯನ್ನು ಮೀರಿ ಎಲ್ಲರೂ ಒಂದುಗೂಡಿ ಸೇರಿ ಮಾಡುವುದರಲ್ಲಿದೆ ಎಂದು ಸಭೆಯು ಅಭಿಪ್ರಾಯ ಪಟ್ಟಿತು. ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವುದು ಹಾಗೂ ಹೆಚ್ಚು ಸದಸ್ಯರು ಕಾರ್ಯಕ್ರಮಗಳಿಗೆ ಬರುವಂತೆ ಪ್ರೇರೇಪಿಸುವಲ್ಲಿನ ಸಂಘದ ಸವಾಲುಗಳ ಬಗ್ಗೆ ನೆರೆದ ಸದಸ್ಯರ ನಡುವೆ ಚರ್ಚೆ ನಡೆಯಿತು. ಎಲ್ಲಾ ಸದಸ್ಯರ ಪ್ರಸ್ತುತ ಸಾಲಿನ ಸಮಿತಿಯನ್ನು ಪ್ರಶಂಸಿಸಿ ನೂತನ ಸಮಿತಿಗೆ ಸ್ವಾಗತ ಕೋರಿದರು.
ಈ ಬಾರಿ ಆಯ್ಕೆಯಾದ ಎಲ್ಲಾ 14 ಸಮಿತಿಯ ಸದಸ್ಯರು ತಮ್ಮ ಪರಿಚಯ ಮಾಡಿಕೊಂಡು, ಕನ್ನಡ ಸೇವೆಯನ್ನು ಮಾಡುವ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು. ಈ ಬಾರಿಯ ಸಮಿತಿಯಲ್ಲಿ ಅನೇಕ ಹೊಸ ಉತ್ಸಾಹಿ ಸದಸ್ಯರು ಹಾಗೂ ಯುವಜನರು ಸಂಘಕ್ಕೆ ಸೇರುವ ಅಭಿಲಾಷೆಯನ್ನು ತೋರಿ ಮುಂದೆ ಬಂದಿರುವುದು ಸಂಘದ ಹಿತಾಸಕ್ತಿ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಂತ ಹೆಮ್ಮೆಯ ಬೆಳವಣಿಗೆ ಎಂದು ಹೇಳಬಹುದು.
ಈ ನವ ಹಾಗೂ ಯುವ ತಂಡವು ಅನೇಕ ಸೃಜನಾತ್ಮಕವಾದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸಿಂಗನ್ನಡಿಗರಿಗೆ ಕನ್ನಡದ ಕಂಪನ್ನು ಹರಡುವಲ್ಲಿ ಯಶಸ್ವಿಯಾಗಲಿ ಎಂದು ಎಲ್ಲಾ ಸಿಂಗನ್ನಡಿಗರ ಪರವಾಗಿ ಹಾರೈಸುತ್ತೇನೆ. ಎಲ್ಲಾ ಸಿಂಗನ್ನಡಿಗರು ಕನ್ನಡಮ್ಮನ ತೇರನ್ನು ಸಿಂಗಪುರದಲ್ಲಿ ಎಳೆಯಲು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಒಟ್ಟುಗೂಡಬೇಕೆಂದು ಆಶಿಸುತ್ತೇನೆ.
ಅಧೀಕೃತವಾಗಿ ಮಹಾಸಭೆಯು ಮುಕ್ತಾಯವಾದ ನಂತರ "ಸಿಂಗಾರ" ಪತ್ರಿಕೆಯ ಸಂಪಾದಕೀಯ ಸಮಿತಿ ಹಾಗೂ ಸಿಂಚನ ಮಾಸ ಪತ್ರಿಕೆಯ ಸಂಪಾದಕೀಯ ಸದಸ್ಯರಿಗೆ ಅವರ ಸೇವೆಯನ್ನು ಗುರುತಿಸಿ ಸಂಘದ ಪರವಾಗಿ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಇತ್ತೀಚಿಗೆ ಬಿಡುಗಡೆಯಾದ ಸಿಂಗಾರ ಪತ್ರಿಕೆಯನ್ನು ವಿತರಣೆ ಮಾಡಲಾಯಿತು.
2017-2019ನೆಯ ಸಾಲಿಗೆ ಆಯ್ಕೆಯಾದ ಕಾರ್ಯಕಾರಿ ಸಮಿತಿಯ ಸದಸ್ಯರ ವಿವರ ಹೀಗಿದೆ:
ವಿಜಯ ರಂಗ ಪ್ರಸಾದ (ಅಧ್ಯಕ್ಷರು), ಅರ್ಚನಾ ಪ್ರಕಾಶ್ (ಉಪಾಧ್ಯಕ್ಷರು), ಎಮ್.ಜಿ. ರಮೇಶ್ (ಕಾರ್ಯದರ್ಶಿ), ಶೃತಿ ಪ್ರಕಾಶ್ (ಸಾಂಸ್ಕೃತಿಕ ಕಾರ್ಯದರ್ಶಿ), ಶ್ರೀನಿವಾಸ್ ಕೆ.ಜೆ (ಖಜಾಂಚಿ) ಹಾಗೂ ಸಮಿತಿಯ ಸದಸ್ಯರು ಡಾ. ಸತೀಶ್ ಆರ್.ಎಲ್, ಪವನ್ ಜೋಷಿ, ಯಶಸ್ವಿನಿ ಮುರಳಿ, ಸತೀಶ್ ದೊರೆಸ್ವಾಮಿ, ನರೇಂದ್ರ ಮಧುಗಿರಿ, ಭಾಗ್ಯಲಕ್ಷ್ಮಿ ಭಾವಿ, ಶುಭಾ ಎಚ್.ಎನ್, ಗಿರೀಶ್ ವಿಜಾಪುರ್, ಚಿನ್ಮಯಿ ನಾಡಿಗೇರ.