ಮಸ್ಕತ್ ಸಂಕ್ರಾಂತಿಗೆ ಶಿವರಾಜ್ ಕುಮಾರ್ ಎಳ್ಳುಬೆಲ್ಲ
ಒಮಾನ್ ರಾಷ್ಟ್ರದ ಮಸ್ಕತ್ ನ ಭಾರತೀಯ ಸಾಮಾಜಿಕ ವೇದಿಕೆ ಕರ್ನಾಟಕ ವಿಭಾಗದ ವತಿಯಿಂದ 2015 ಹೊಸವರ್ಷ ಹಾಗೂ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಂಕ್ರಾಂತಿ ಸಂಗೀತ ರಸ ಸಂಜೆ ಕಾರ್ಯಕ್ರಮ ವನ್ನು ಜ.16, ಶುಕ್ರವಾರದಂದು ಸಂಜೆ 5.30ಕ್ಕೆ ಮಸ್ಕತ್ ನ ಅಲ್ ಬುಸ್ತಾನ್ ಪ್ಯಾಲೇಸ್ ನಲ್ಲಿ ಆಯೋಜಿಸಲಾಗಿದೆ.
92.7 ಬಿಗ್ ಎಫೆ ಎಂನ ಪ್ರಸಿದ್ದ ಕಾರ್ಯಕ್ರಮ "ಅನ್ ಪ್ಲಗ್ಡ್ ವಿತ್ ಆರ್ ಜೆ ಮಯೂರ್" ರೂವಾರಿ ಆರ್ ಜೆ ಮಯೂರ್ ರಾಘವೇಂದ್ರರವರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು, ದೇಶ ವಿದೇಶಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ನೀಡಿ ಜನಪ್ರಿಯರಾಗಿರುವ ಗಾಯಕರಾದ ಚಿನ್ಮಯ್ ಆತ್ರೇಯ ಮತ್ತು ಸಿಂಚನ್ ದೀಕ್ಷಿತ್ ರವರು ಮಸ್ಕತ್ ಕನ್ನಡಿಗರಿಗೆ ಸಂಗೀತ ರಸದೌತಣವನ್ನು ಉಣ ಬಡಿಸಲಿದ್ದಾರೆ.
ಅವರಿಗೆ ಜತೆಯಾಗಿ ಪ್ರದ್ಯುಮ್ನ, ಸಂದೀಪ್, ಮಂಜುನಾಥ್, ಆಶ್ವಿನ್, ವೇಣು ಮತ್ತು ಸಂದೀಪ್ ರವರು ಸಂಗೀತ ವಾದ್ಯಗೋಷ್ಠಿಯನ್ನು ನಡೆಸಿಕೊಡಲಿದ್ದಾರೆ. ಹಾಸ್ಯನಟ, ನಿರ್ಮಾಪಕ ಮತ್ತು ನಿರ್ದೇಶಕ ಸಿಹಿಕಹಿ ಚಂದ್ರುರವರು 45 ನಿಮಿಷಗಳ ಕಾಲ ಹಾಸ್ಯ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಮೊದಲ ಬಾರಿಗೆ ಮಸ್ಕತ್ ಕನ್ನಡ ಸಂಘದ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಮತ್ತು ಚಿ. ಗುರುದತ್ ಉದಯ್ ಶಂಕರ್ ರವರು ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಸ್ಥಳೀಯ ಒಮಾನಿ ಪ್ರಜೆ ಹೈತಮ್ ರಫಿಯವರು ತಮ್ಮ ಮಾತೃಭಾಷೆ ಅರೇಬಿಕ್ ಆಗಿದ್ದರೂ ಸಹ ಸಂಗೀತ ರಸಸಂಜೆ ಕಾರ್ಯಕ್ರಮಕ್ಕೋಸ್ಕರ ಕನ್ನಡ ಹಾಡುಗಳನ್ನು ಕಲಿತುಕೊಂಡು ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳನ್ನು ಹಾಡಿ ಮಸ್ಕತ್ ಕನ್ನಡಿಗರನ್ನು ರಂಜಿಸಲು ಸಿದ್ಧತೆ ನಡೆಸಿದ್ದಾರೆ.
ಕಾರ್ಯಕ್ರಮಕ್ಕೆ ಬ್ಯಾಂಕ್ ಮಸ್ಕತ್, ಸರ್ವೀಸ್ ಽ ಟ್ರೇಡ್ ಮತ್ತು ಟಾವೆಲ್ ಇನ್ಫ್ರಾಸ್ಟ್ರಕ್ಛರ್ ರವರು ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದಾರೆ.