ಕ್ಯಾಲಿಫೋರ್ನಿಯಾ ನಾಟಕೋತ್ಸವದಲ್ಲಿ ಜಯಶ್ರೀ, ಭರಣ
ನಾಟಕ ಪ್ರೇಮಿಗಳಿಗೆ ಸುಗ್ಗಿಯ ಸಮಯ! ಅಮೆರಿಕದಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಇಂಥದೊಂದು ಪ್ರಯತ್ನಕ್ಕೆ "ಬಣ್ಣದ ವೇಷ" ತಂಡ ಕೈ ಹಾಕಿದೆ. ಈಗಾಗಲೇ ಹಲವು ರಂಗ ಪ್ರದರ್ಶನ ಹಾಗೂ ಬೀದಿ ನಾಟಕಗಳನ್ನು ಆಯೋಜಿಸಿ ಯಶಸ್ವಿಯಾಗಿರುವ ಪದ್ಮ ಅವರ ನೇತೃತ್ವದ 'ಬಣ್ಣದ ವೇಷ' ತಂಡ ಈ ಬಾರಿ ಅಮೆರಿಕದಲ್ಲಿ ನೆಲೆಸಿರುವ ಹಲವು ಭಾಷೆಗಳ ರಂಗಕರ್ಮಿಗಳನ್ನು ಒಂದೆಡೆ ಸೇರಿಸುತ್ತಿದೆ.
ಮೇ 29-30-31, 2015 (ಶುಕ್ರವಾರ, ಶನಿವಾರ ಮತ್ತು ಭಾನುವಾರ) ಕ್ಯಾಲಿಫೋರ್ನಿಯಾದ ಸ್ಯಾನ್ ಹೋಸೆಯಲ್ಲಿ ನಡೆಯಲಿರುವ ಬಹುಭಾಷಾ "ನಾಟಕೋತ್ಸವ" ಎಲ್ಲಾ ರಂಗಪ್ರೇಮಿಗಳಿಗೆ ಹಬ್ಬದ ವಾತಾವರಣ ನಿರ್ಮಿಸಲಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ನಾಟಕೋತ್ಸವದಲ್ಲಿ ಇಂಗ್ಲಿಷ್, ಕನ್ನಡ, ಬೆಂಗಾಲಿ, ಗುಜರಾತಿ, ಹಿಂದಿ, ಮರಾಠಿ, ತಮಿಳು ನಾಟಕಗಳು ಪ್ರದರ್ಶನಗೊಳ್ಳುತ್ತಿವೆ.
"ವಿವಿಧತೆಯಲ್ಲಿ ಏಕತೆ" ಎಂಬ ಭಾರತೀಯರ ಸಾಂಸ್ಕೃತಿಕ ಘೋಷ ವಾಕ್ಯ, ಅಮೆರಿಕದಲ್ಲಿ ರಂಗಪ್ರದರ್ಶನಗಳ ಮೂಲಕ ಅಭಿವ್ಯಕ್ತಗೊಳ್ಳುತ್ತಿವುದು ಈ ನಾಟಕೋತ್ಸವದ ಹೆಗ್ಗಳಿಕೆ. ಅಮೆರಿಕದಲ್ಲಿ ಬೆಳೆಯುತ್ತಿರುವ ಯುವ ಮನಸ್ಸುಗಳಿಗೂ ವೇದಿಕೆ ನಿರ್ಮಿಸುತ್ತಿರುವುದು ಈ ನಾಟಕೋತ್ಸವದ ಉದ್ದೇಶ. ಹಳೆಯ ಬೇರಿನ ಜೊತೆ ಹೊಸ ಚಿಗುರು ಕೂಡುತ್ತಿದೆ ಎಂದ ಮೇಲೆ ಮರ ಸೊಗಸಾಗಿರಲೇ ಬೇಕು! [ಮನ್ಮಥನ ಸ್ವಾಗತಿಸಲು ಕೆಕೆಎನ್ಸಿಯಲ್ಲಿ ಸಿದ್ಧತೆ]
ಖ್ಯಾತ ರಂಗಕರ್ಮಿ ಬಿ. ಜಯಶ್ರೀ ನಮ್ಮೊಡನೆ ನಾಟಕೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಹಲವು ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಖ್ಯಾತ ನಿರ್ದೇಶಕ ಟಿಎಸ್ ನಾಗಾಭರಣ ನಾಟಕವೊಂದನ್ನು ನಿರ್ದೇಶಿಸಲಿದ್ದಾರೆ. ಕನ್ನಡದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ತಮ್ಮ "ಮುಖ್ಯಮಂತ್ರಿ" ನಾಟಕವನ್ನು ಪ್ರದರ್ಶಿಸಲಿದ್ದಾರೆ. ಎಲ್ಲವೂ ನಾಟಕೋತ್ಸವದ ಮೆರುಗನ್ನು ಮತ್ತಷ್ಟು ಹೆಚ್ಚಿಸಲಿವೆ.
The Play's the Thing, wherein I'll catch the conscience of the King" - ಎಂದು ಷೇಕ್ಸ್ಪಿಯರ್ ತನ್ನ ಹ್ಯಾಮ್ಲೆಟ್ ನಾಟಕ ದಲ್ಲಿ ಹೇಳುತ್ತಾನೆ. ನಿಮ್ಮ ಅಭಿರುಚಿಗೊಂದು ಹೊಸ ರುಚಿ ತೋರಿಸಲು ನಾಟಕೋತ್ಸವಕ್ಕೆ ತಪ್ಪದೇ ಬನ್ನಿ. ನಿಮಗೆ ನಾಟಕ ನೋಡಿದ ಖುಷಿ, ನಮಗೆ ನಾಟಕ ತೋರಿಸಿದ ಖುಷಿ.
ಟಿಕೆಟ್ ಕೊಳ್ಳಲು ಹಾಗೂ ಇತರೆ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.