ಬ್ರಿಟನ್ನಿನಲ್ಲಿ ಕನ್ನಡದ ಕಂಪು ಹಬ್ಬುತ್ತಿರುವ ಹರೀಶ್ ರಾಮಯ್ಯ
ಬೆಂಗಳೂರಿನಿಂದ ಬಹುದೂರ ಸಾಗಿ ಪ್ರಸ್ತುತ ಬ್ರಿಟನ್ನಿನ ಡರ್ಬಿಯಲ್ಲಿ ನೆಲೆಸಿರುವ ಹಾಗೂ ಅಲ್ಲಿರುವ ಕನ್ನಡ ಹಾಗೂ ದಕ್ಷಿಣ ಭಾರತೀಯರನ್ನು ಒಂದು ಸೂರಿನಡಿ ಸೇರಿಸುವುದರ ಮೂಲಕ ಹಲವು ಹತ್ತು ಸಾಧನೆಗಳನ್ನು ಮಾಡುತ್ತಿರುವ ವ್ಯಕ್ತಿಯೇ ಹರೀಶ್ ರಾಮಯ್ಯ.
ಹರೀಶ್ ಅವರು 1996ರಲ್ಲಿ ತಮ್ಮ ಎಂಜಿನಿಯರಿಂಗ್ ಪದವಿಯನ್ನು ತುಮಕೂರಿನ ಪ್ರತಿಷ್ಠಿತ ಶ್ರೀ ಸಿದ್ಧಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮುಗಿಸಿ, ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದರು. ತಮ್ಮ ಬಹುವರ್ಷದ ಗೆಳತಿ ಶೈಲಜಾ ಅವರನ್ನು ವರಿಸಿದರು. ಆಸೆ ತುಂಬಿದ ಕಣ್ಣುಗಳೊಂದಿಗೆ ಬಹುದೊಡ್ಡ ಕನಸನ್ನು ಹೊತ್ತು 2002ರಲ್ಲಿ ಕೆಲಸಕ್ಕಾಗಿ ಬ್ರಿಟನ್ನಿಗೆ ಪ್ರಯಾಣ ಬೆಳೆಸಿದರು.
ನಿಜವಾದ ಕನ್ನಡ ಪ್ರೇಮಿ ಯಾರು, ಎನ್ನಾರೈ ಕನ್ನಡಿಗನ ಅನುಭವಾಮೃತ
2004ರಲ್ಲಿ ಡರ್ಬಿ ಪಟ್ಟಣಕ್ಕೆ ಬಂದಾಗ ಇವರದ್ದೊಂದೇ ಕನ್ನಡದ ಕುಟುಂಬ. ಅಲ್ಲಿರುವ ಬೇರೆ ದಕ್ಷಿಣ ಭಾರತೀಯರ ಜೊತೆಗೂಡಿ 2008ರಲ್ಲಿ ಮೊದಲ ಬಾರಿಗೆ South Indian Associationನ ಸ್ಥಾಪನೆ ಮಾಡಿದರು. ಇದರೊಂದಿಗೆ ಒಂದಿಷ್ಟು ದಕ್ಷಿಣ ಭಾರತೀಯ ಸಂಸ್ಕೃತಿ ಹಾಗೂ ಮನೋರಂಜನೆಯ ಅನಾವರಣವಾಗಲು ಆರಂಭಿಸಿತು.
SIA ವತಿಯಿಂದ ಮೊದಲ ಬಾರಿ ಅದ್ದೂರಿಯಾಗಿ ಯುಗಾದಿ ಹಾಗೂ ದೀವಾವಳಿ ಹಬ್ಬಗಳ ಆಚರಣೆಯಾಯಿತು ಹಾಗೂ ಇದು ಅಲ್ಲಿರುವ ಆಂಗ್ಲರನ್ನು ಕೂಡ ಬಹುವಾಗಿ ಆಕರ್ಷಿಸಿತು. 2018ಕ್ಕೆ SIAಗೆ ಬರೋಬ್ಬರಿ ಹತ್ತು ವರ್ಷ ತುಂಬಿತ್ತು ಹಾಗೂ ಈ ವೇಳೆ 'ದಿ ವಿಲನ್' ಚಿತ್ರೀಕರಣಕ್ಕೆಂದು ಲಂಡನ್ನಿಗೆ ಹೋಗಿದ್ದ ಕಿಚ್ಚ ಸುದೀಪ್ ಅವರು, ಸೌತ್ ಇಂಡಿಯನ್ ಅಸೋಸಿಯೇಷನ್ ಗೆ ಶುಭಾಶಯವನ್ನು ಕೋರಿದ್ದು ಅತ್ಯಂತ ವಿಶೇಷ ಹಾಗೂ ಅವಿಸ್ಮರಣೀಯ ನೆನಪು ಅಂದ್ರೆ ತಪ್ಪಾಗಲ್ಲ.
ಒಮಾನ್ ಸ್ಪಂದನ ಸಂಸ್ಥೆಯಿಂದ ಕನ್ನಡ ಪತ್ರಕರ್ತರ ಸನ್ಮಾನ
ಕನ್ನಡಿಗರ ಸಂಖ್ಯೆ ಹೆಚ್ಚುತ್ತಾ ಹೋದಂತೆ ಅವರನ್ನೆಲ್ಲ ಒಂದೆಡೆ ಸೇರಿಸಿ "ಡರ್ಬಿ ಕನ್ನಡಿಗರು" ಎನ್ನುವ ತಂಡವನ್ನು ಹುಟ್ಟುಹಾಕಿದರು ಹರೀಶ್ ರಾಮಯ್ಯ. ಇದೇ ಮುಂದಿನ ದಿನಗಳಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುನ್ನುಡಿಯನ್ನು ಬರೆಯಿತು. ಇಲ್ಲಿನ ಕನ್ನಡಿಗರ ಸಡಗರವನ್ನು ಆಗ ನೀವು ನೋಡಬೇಕು.
ಪ್ರತಿ ವರ್ಷವೂ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಈ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಬರೀ ಹೆಸರಿಗಷ್ಟೇ ಅಲ್ಲದೇ ಕರ್ನಾಟಕದ ವೈಭವವನ್ನು ಸಾರುವ ಹಲವು ಪ್ರಕಾರಗಳಾದ ಯಕ್ಷಗಾನ, ಗೀಗೀಪದ, ವಯೊಲಿನ್ ವಾದನ, ನಾಟಕಗಳು ಹೀಗೇ ಜನರನ್ನು ಮನರಂಜನೆಗೊಳಿಸುವುದರ ಜೊತೆಗೆ ನಮ್ಮದೇ ಶೈಲಿಯ ಅಡುಗೆ ತಿನಿಸುಗಳನ್ನು ತಯಾರಿಸಿ ಬಡಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಗುತ್ತದೆ.
ಯುರೋಪಿಗೂ ಲಗ್ಗೆ ಇಟ್ಟ ಕನ್ನಡದ ಏಕೈಕ ಆನ್ಲೈನ್ ರೇಡಿಯೋ!
ಹರೀಶ್ ಅವರು ಇವುಗಳ ಜೊತೆಗೆ ಕನ್ನಡದವರು ಹಾಗೂ ಇತರೇ ದಕ್ಷಿಣ ಭಾರತೀಯರಿಗೆಂದೇ ಕೆಲವು ಆಟಗಳಾದ ಕ್ರಿಕೆಟ್, ಬ್ಯಾಡ್ಮಿಂಟನ್, ಚೆಸ್, ರನ್ನಿಂಗ್ ಈ ರೀತಿ ಹಲವಾರು ಕ್ರೀಡೆಗಳನ್ನು ದೊಡ್ಡಮಟ್ಟದಲ್ಲಿ ಪ್ರತೀ ವರ್ಷವೂ ಆಯೋಜನೆ ಮಾಡುತ್ತಾರೆ. ಮತ್ತೊಂದು ವಿಶೇಷವೆಂದರೆ, ಕನ್ನಡ ಚಿತ್ರರಂಗದ ಬಗ್ಗೆ ಅವರಿಗಿರುವ ಕಾಳಜಿಯೂ ಡೊಡ್ಡಮಟ್ಟದ್ದು , U.K. Sandalwood ಅವರ ಜೊತೆಗೂಡಿ 'ಕೆಂಡಸಂಪಿಗೆ'ಯಿಂದ ಹಿಡಿದು ಇತ್ತೀಚಿನ ಸೂಪರ್ ಹಿಟ್ ಚಿತ್ರ 'ಕೆ.ಜಿ.ಎಫ್.' ನಂತಹ ಕನ್ನಡ ಚಿತ್ರಗಳನ್ನು ಹಂಚಿಕೆ ಮಾಡಿದ್ದಾರೆ.
ಹಲವಾರು ವ್ಯವಹಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಹರೀಶ್ ಅವರು, ತಮ್ಮದೇ ಆದ ಅಬ್ಬೇ ನಿವಾಸ ಹಾಗೂ ರಿಟೇಲ್ ವ್ಯವಹಾರಗಳನ್ನು ಹುಟ್ಟು ಹಾಕಿದ್ದಾರೆ. ಬ್ರಿಟನ್ನಿನ ಹಲವಾರು ಸಂಘ ಸಂಸ್ಥೆಗಳು ಅವರನ್ನು ಗುರುತಿಸಿದ್ದು ಹಾಗೂ ವಿಶೇಷವಾಗಿ B.B.C.(British Broadcasting Corporation) ಸಮೂಹ ಕೂಡ ಒಂದು ಸಂದರ್ಶನವನ್ನು ಮಾಡಿದೆ.
ಅತ್ಯಂತ ಶಾಂತಸ್ವರೂಪಿ ಹಾಗೂ ಎಲ್ಲವನ್ನೂ ಯೋಜನಾಬದ್ಧವಾಗಿ ಮಾಡುವ ನೈಪುಣ್ಯತೆ ಇರುವುದರಿಂದ ಅವರ ಅನೇಕ ಸ್ನೇಹಿತರು ಅಲ್ಲಿನ, ಕೌನ್ಸಿಲ್ ಎಲೆಕ್ಷನ್ ಗೆ ಸ್ಪರ್ಧಿಸುವಂತೆ ಅಪೇಕ್ಷೆ ವ್ಯಕ್ತಪಡಿಸಿದ್ದು, ಅವರು ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ.
ಇತ್ತೀಚೆಗೆ ಅವರು ಬೆಂಗಳೂರಿಗೆ ರಜೆಗೆಂದು ಬಂದಾಗ, ನಡೆದಾಡುವ ದೇವರು ದೈವಾಧೀನರಾದಾಗ ಅವರ ಅಂತಿಮದರ್ಶನ ಮಾಡಿದ್ದು ಅವರ ಪಾಲಿಗೆ ಸಿಕ್ಕ ಅದೃಷ್ಟ ಎನ್ನುತ್ತಾರೆ. ಈ ರೀತಿ ಹೊರದೇಶದಲ್ಲಿದ್ದರೂ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಅಲ್ಲಿರುವ ಇಂದಿನ ಪೀಳಿಗೆಯ ಮಕ್ಕಳಲ್ಲಿ ಮೂಡಿಸುತ್ತಿರುವುದು ಅತ್ಯಂತ ಕಳಕಳಿಯ ವಿಚಾರ. ಇವರ ಇನ್ನಷ್ಟು ಕೆಲಸಗಳಿಗೆ ಹಾಗೂ ಭವಿಷ್ಯಕ್ಕೆ ಶುಭವಾಗಲಿ ಎಂದು ನಮ್ಮ ತಂಡ ಹಾರೈಸುತ್ತದೆ.